ಲೈಫ್ ಸ್ಟೈಲ್

ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಒಂದು ತಿಂಗಳ ವ್ರತಾಚರಣೆಯೇ ರಂಜಾನ್

Published

on

  • ಕೆ.ಶ್ರೀಧರ್ (ಕೆ.ಸಿರಿ)

ರಂಜಾನ್ ಮುಸ್ಲಿಂ ಸಮುದಾಯದ ಒಂದು ಪವಿತ್ರವಾದ ಧಾರ್ಮಿಕ ಹಬ್ಬವಾಗಿದೆ. ರಮದಾನ್ ಅಂತಲೂ ಈದ್-ಉಲ್-ಫಿತರ್(ಧಾನ್ಯ ದಾನದ ಹಬ್ಬ) ಎಂತಲೂ ಕರೆಯುತ್ತಾರೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್ ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಉದ್ಭವಗೊಂಡಿತು ಇದರ ಪೂಜ್ಯಭಾವಾರ್ಥವಾಗಿ ಪ್ರತೀ ವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಈ ಒಂದು ತಿಂಗಳು ಪ್ರಭಾತ ಕಾಲದಿಂದ ಸೂರ್ಯಾಸ್ತಮದವರೆಗೂ ಧರ್ಮಸಮ್ಮತವಾದ ಯಾವುದೇ ರೀತಿಯ ಊಟ ಉಪಚಾರಗಳನ್ನು ಒಂದು ತೊಟ್ಟು ನೀರನ್ನೂ ಕುಡಿಯದೆ ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಂನಲ್ಲಿ ‘ರೋಜ಼ಾ”ಉಪವಾಸ’ ಅಥವಾ ‘ವ್ರತಾಚರಣೆ’ ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮಾನವರೆಲ್ಲರೂ ಸಮಾನರು. ಅಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವ್ರತಾಚರಣೆಯಲ್ಲಿ ತೊಡಗಿ ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬರುತ್ತದೆ ಇದು ದಾನದ ಹಬ್ಬ.

ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತು ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಝಕಾತ್-ಝಕಾತ್(ದಾನ) ಮೂಲಕ ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚಿಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯವಾಗಿ ದಾನ ನೀಡ ತಕ್ಕದ್ದು.

ಆ ದಿನ ಏನೂ ಇಲ್ಲವಾದರೂ ಮನೆಯಲ್ಲಿರುವ ಪಾತ್ರೆಯನ್ನಾದರೂ ಮಾರಿ ದಾನ ನೀಡಬೇಕೆಂಬುದು ಈ ಹಬ್ಬದ ಉದ್ದೇಶ. ರಂಜಾನ್ ಈ ಹಬ್ಬದ ಬಗ್ಗೆ ನನಗೆ ಪ್ರಮುಖ ಆಕರ್ಷಣೆಯಾಗಿದ್ದು ನನ್ನ ಕರ್ತವ್ಯದ ಅವಧಿಯಲ್ಲಿ ದಿನದಿಂದ ದಿನಕ್ಕೆ ಈ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಇಲ್ಲಿಗೆ ಹಾಸಿಗೆಯನ್ನು ಮುನ್ನ ಎಂಬ ಒಬ್ಬ ವ್ಯಕ್ತಿ ಹಾಸಿಗೆಗಳನ್ನು ತಮ್ಮ ಅಂಗಡಿಯಿಂದ ನೀಡುತ್ತಿದ್ದರು ಆ ಒಂದು ದಿನ ಮಧ್ಯಾಹ್ನ 30 ಹಾಸಿಗೆಯುಳ್ಳ ಆಟೋ ರಿಕ್ಷಾವನ್ನು ತೆಗೆದುಕೊಂಡು ಬಂದು ಹಾಸಿಗೆಯನ್ನು ಹಾಕುತ್ತಿದ್ದಾಗ ನಾನು ಸಾಮಾನ್ಯವಾಗಿ ಈ ರೀತಿಯಾಗಿ ಕೇಳಿದೆ.

“ಇನ್ನೂ ಎಷ್ಟು ಬೆಡ್ ಬರಬೇಕು ಸ್ವಲ್ಪ ಬೇಗ ಬೇಗ ವ್ಯವಸ್ಥೆ ಮಾಡಿ” “ಆಯ್ತು ಸರ್ ಈಗ 40 ಬೆಡ್ ಗೆ ಬಂದಿವೆ ಇನ್ನೂ 40 ಬೆಡ್ ಆನ್ದೀ ವೇ ಜಭೀ ಆಟೋದಲ್ಲಿ ಹಾಕೊಂಡು ಬರ್ತಿದ್ದಾನೆ.” “ಹೂಂ ಆಯ್ತು ಇವತ್ತೆ ಎಲ್ಲಾ ವ್ಯವಸ್ಥೆ ಮಾಡಿ.”ಆ ವ್ಯಕ್ತಿ ಮುಗುಳ್ನಗುತ್ತಾ ಒಂದು ಸಾಧಾರಣ ಲುಂಗಿ ಟೀಂ ಶರ್ಟ್ ಧರಿಸಿದ್ದ ಆ ವ್ಯಕ್ತಿ ಮುಗುಳ್ನಗುತ್ತಾ ಈ ರೀತಿ ಹೇಳಿದರು.

“ಆಯ್ತು ಬಿಡಿ ಸರ್ ನಮ್ಗೆ ಎಷ್ಟು ಸಾಧ್ಯ ಆಗ್ತದೋ ಅಷ್ಟು ಜಲ್ದೀ ನಿಮ್ಮ ಕೆಲಸ ಮುಗಿಸಿಕೊಡ್ತೀವಿ” ಎಂದು ತಲೆಯ ಮೇಲೆ ಮಣಭಾರದ ಬೆಡ್ ಹೊತ್ತು ಮುಗುಳ್ನಗೆ ಬೀರುತ್ತಾ ಮೆಟ್ಟಿಲೇರಿ ಒಂದನೆಯ ಮಹಡಿಗೆ ಹೊರಟರು ಅಷ್ಟರಲ್ಲಿಯೇ ಜಭೀರವರು ಆಟೋ ಇಂದ ಇಳಿದರು ಮುನ್ನ ಮತ್ತು ಜಬೀರವರು ಹಿಂದಿಯಲ್ಲಿ ಏನೋ ಕೆಲಸದ ಬಗ್ಗೆ ಮಾತನಾಡುತ್ತಿದ್ದರು ನನಗೆ ಅರ್ಥವಾಗಲಿಲ್ಲ ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು ಊಟಕ್ಕೆ ಹೋಗೋಣವೆಂದು ನಿರ್ಧರಿಸಿ ಹೊರಟೆ.

” ಮುನ್ನ ಅವರೇ ನಿಮ್ದು ಊಟ ಆಯ್ತಾ ಆಗಿಲ್ಲ ಅಂದ್ರೆ ಇಲ್ಲೇ ಊಟ ಮಾಡಿ”. ಸ್ವಲ್ಪ ಹೊತ್ತು ಸುಮ್ಮನಿದ್ದು ಆಟೋದ ಮೇಲಿದ್ದ ಜಭೀರವರು ಪ್ರತ್ಯುತ್ತರಿಸಿದರು.

” ಪರವಾಗಿಲ್ಲ ಸರ್ ನಮ್ದುಕೇ ರೋಜ್ ಗೆ ಇದೀವಿ ನೀವು ಮಾಡಿ” “ಅಯ್ಯೋ ಸಾರಿ ಕೇಳಬಾರದಿತ್ತೇನು” “ಹೇ ಹಾಗೆನಿಲ್ಲ ಸರ್ ಪರವಾಗಿಲ್ಲ ತಪ್ಪೇನಿಲ್ಲ ಬಿಡಿ” ಆ ಕ್ಷಣಕ್ಕೆ ನನಗೆ ಬೇಜಾರಾದಂತೆನಿಸಿತು ಹಾಗೆಯೇ ರಂಜಾನ್ ಹಬ್ಬದ ಬಗ್ಗೆ ತಿಳಿದುಕೊಳ್ಳೋಣವೆಂದಿನಿಸಿ ಮಾತಿಗಿಳಿದೆ.

“ಬಯ್ಯ ಈ ರಂಜಾನ್ ಹಬ್ಬದ ವಿಶೇಷತೆ ಏನು”?
“ಸರ್ ಒಂದು ವರ್ಷದಲ್ಲಿ 11 ತಿಂಗಳು ನಮಗೆ ಇನ್ನೂ 1 ತಿಂಗಳು ನಮ್ಮ ದೇವರಾದ ಅಲ್ಲಾಹು ಗೆ.” “ಅಂದ್ರೆ ಯಾವ ರೀತಿ.?”

“ನಮ್ಗೆ ಈ ಒಂದು ತಿಂಗಳು ಸೂರ್ಯೋದಯ ಆದ್ಮೇಲೆ ಸೂರ್ಯ ಮುಳುಗುವರೆಗೂ ಒಂದನಿ ನೀರು ಕುಡಿದೆ,ಕೆಟ್ಟ ಮಾತನಾಡದೆ, ಕೆಟ್ಟದು ಯೋಚನೆ ಮಾಡದೆ, ಯಾವುದೇ ರೀತಿ ಊಟ ಮಾಡದೇ ಉಪವಾಸ ಇರಬೇಕು ಮಸೀದಿಲೀ ಹೇಳಿದ ಮೇಲೆ ಉಪವಾಸ ಬಿಟ್ಟಿ ನಮಾಝ್ ಮಾಡಬೇಕು.”

“ಇಷ್ಟೇನಾ ಇನ್ನೂ ಏನಾದರೂ ಇದೆಯಾ”?
“ಇನ್ನೂ ಇದೆ ಸರ್ ಈ ಹಬ್ಬ ಅಂದ್ರೆ ಯಾವುದೇ ಜಾತಿ ಧರ್ಮ ನೋಡದೆ ನಮ್ಮ ಕೈಲಾದ ಧಾನ ಧರ್ಮ ಮಾಡಬೇಕು”
“ಯಾಕೆ ಈ ಒಂದು ತಿಂಗಳು ಉಪವಾಸ ಮಾಡಬೇಕು”?

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( ವಿ.ಐ.ಎಸ್.ಎಲ್)

“ಸರ್ ಮನುಷ್ಯ ಒಂದ್ವರ್ಷದಲ್ಲಿ 1 ತಿಂಗಳು ಉಪವಾಸ ಇದ್ದು ಹಸಿವಿನ ಬಗ್ಗೆ ಬಡತನದ ಬಗ್ಗೆ ನಮಗೆ ಅರಿವಾಗಬೇಕು ಅಂತ ನಿಮ್ಮಲ್ಲಿ ಮಾಲೆ ಹಾಕಿದವರು ಹೇಗೆ ಸ್ವಾಮಿ ಅಂತ ಮಾತಾಡಿಸ್ತಾರೋ ನಾವು ಕೂಡ ಕಟ್ಟು ನಿಟ್ಟಾಗಿ ಇರಬೇಕು”
“ಧಾನ ಅಂದ್ರೆ ಏನ್ ಮಾಡ್ತೀರಾ?” “ನಮ್ಮ ಮನೆಯಲ್ಲಿ ಇವಾಗ 50 ಸಾವಿರ ಚಿನ್ನ ಇದೆ ಅಂತಿಟ್ಕೋಳಿ ಅದರಲ್ಲಿ 2.5% ಯಾರಿಗಾದ್ರೂ ಸಹಾಯ ಮಾಡಬೇಕು ನಮ್ಗೆ ಯಾವುದೇ ಜಾತಿ ಧರ್ಮ ಅಂತಿಲ್ಲ ಸರ್ ಇತ್ತೀಚೆಗೆ ಧರ್ಮಕ್ಕೆ ರಾಜಕಾರಣ ಸೇರಿ ಹಾಳಾಗಿದೆ ಸರ್ ಅವರವರ ಧರ್ಮ ಅವರವರ ಇಷ್ಟ ಸುಮ್ಮನೆ ಜಗಳ ಮಾಡೋದ್ರಲ್ಲೇನಿದೆ ಹೇಳಿ”

“ಸರಿ ದಿನ ಪೂರ್ತಿ ಉಪವಾಸ ಇದ್ದು ಒಂದನಿ ನೀರು ಕುಡಿದೆ ಇಷ್ಟು ಕಠಿಣ ಕೆಲಸ ಮಾಡ್ತೀರಲ್ಲ ನಿಮಗೆ ಆಯಾಸ ಆಗೋದಿಲ್ವ?” “ಸರ್ ಈ ಹಬ್ಬದಲ್ಲಿ ನಾವು ಕೆಲಸ ಮಾಡೋ ಹಾಗಿಲ್ಲ ಆದರೆ ಈ ಕೋರೋನ ಇಂದಾಗಿ ಎಷ್ಟೆಲ್ಲ ಕಷ್ಟ ಇದೆ ಅಲ್ವಾ ಇಂತ ಟೈಂ ಲಿ ಕೆಲಸ ಮಾಡ್ಬೇಕು ನಮಗೆ ಯಾವುದೇ ರೀತಿಯ ಸುಸ್ತಾಗೋಲ್ಲ ಹಂಗ ನೋಡಿದ್ರೆ ಈ ರಂಜಾನ್ ದಿನಗಳಿಗಿಂತ ಬೇರೆ ಟೈಂ ಲೇ ನಮಗೆ ಆಯಾಸ ಆಗುತ್ತದೆ ಈ ರಂಜಾನ್ ಟೈಂ ಲಿ ನಮಗೆ ಎಂತದ್ದೇ ಊಟ ಇದ್ರು ಊಟ ಮಾಡಬೇಕು ಅನಿಸೊಲ್ಲ ನೀರು ಕುಡಿಯಬೇಕು ಅನಿಸೋಲ್ಲ ನಿಮ್ಮಲ್ಲೂ ಕೂಡ ಒಂದತ್ತು(ಉಪವಾಸ) ಮಾಡ್ತೀರಲ್ಲಾ ನಮ್ದು ಕೂಡ ಹಾಗೆ”

ಎಂದು ಮಾತನಾಡುತ್ತಾ ಮಾತನಾಡುತ್ತಾ ಎಲ್ಲಾ ಹಾಸಿಗೆಗಳನ್ನು ಕಾಟದ ಮೇಲಿರಿಸಿ ಒಂದು ಘಳಿಗೆ ಸುಮ್ಮನೆ ಕೂತು ರಂಜಾನ್ ಹಬ್ಬದ ಬಗ್ಗೆ ತಿಳಿಸಿದರು. ಈ ಭೂಮಿ ಮೇಲಿರುವ ಎಲ್ಲಾ ಧರ್ಮಗಳು ಕೂಡ ಹೇಳುವುದು ಧಾನ ಧರ್ಮ ಮಾಡಿ ಅಂತಲೇ ಎಲ್ಲಾ ಧರ್ಮಗಳಿಗಿಂತಲೂ ಈ ಮಾನವ ಧರ್ಮ ಮುಖ್ಯ “ಒಬ್ಬರ ನೋವಿಗೆ ಇನ್ನೊಬ್ಬರ ಹೃದಯ ಮಿಡಿಯುವುದೇ ನಿಜವಾದ ಮನುಷ್ಯ ಧರ್ಮ” ವ್ಯಕ್ತಿ ಯಾವುದೇ ಧರ್ಮವಾಗಿರಲಿ ನೋವಿಗೆ ಮಿಡಿಯುವ, ಭಾವನೆಗಳಿಗೆ ಸ್ಪಂದಿಸುವ ಧರ್ಮವೇ ನಿಜವಾದ ಮನುಕುಲದ ಧರ್ಮ ಎಂಬುದು ನನ್ನ ಒಲವ ಅಭಿಮತ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version