ದಿನದ ಸುದ್ದಿ

ದಾವಣಗೆರೆ | ವಲಸಿಗರಿಗೆ ಉಚಿತವಾಗಿ 2 ತಿಂಗಳ ಪಡಿತರ ವಿತರಣೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇ ಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತು ಜೂನ್ ಮಾಹೆಯ 2 ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಮೇ 18 ರಂದು ಆಹಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಕಡಲೇಕಾಳನ್ನು ವಿತರಣೆ ಮಾಡುವಂತೆ ಸೂಚಿಸಿರುವಂತೆ ಜಿಲ್ಲೆಯಲ್ಲಿರುವ ವಲಸಿಗರು ಹೋಟೆಲ್‍ಗಳಲ್ಲಿ, ಕೈಗಾರಿಕೆಗಳಲ್ಲಿ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ಇವರುಗಳು ಯಾವುದೇ ಪಡಿತರ ಚೀಟಿಯನ್ನು ಹೊಂದದೇ ಇದ್ದರೂ ಈ ವಲಸೆ ಕಾರ್ಮಿಕರು ಪಡಿತರ ಪಡೆಯಲು ಅರ್ಹರಿರುತ್ತಾರೆ. ಇವರು ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್‍ನ ದಾಖಲೆಗಳನ್ನು ನೀಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಬಹುದಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಮೇ 26 ರಿಂದ 31 ರವರೆಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಜೂನ್ 1 ರಿಂದ 10 ರವರೆಗೆ 1 ಕೆ.ಜಿ. ಕಡಲೆಕಾಳನ್ನು ಹಾಗೂ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಮೇ ಮಾಹೆಯ ಪಡಿತರವನ್ನು ಪಡೆಯದಿದ್ದಲ್ಲಿ ಜೂನ್ ಮಾಹೆಯಲ್ಲಿ 2 ತಿಂಗಳ 10 ಕೆ.ಜಿ ಅಕ್ಕಿಯನ್ನು ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ 27388 ವಲಸಿಗ ಫಲಾನುಭವಿಗಳಿಗೆ 2738.82 ಕ್ವಿಂಟಾಲ್ ಅಕ್ಕಿಯನ್ನು ಹಂಚಿಕೆ ಮಾಡಲು ಬಿಡುಗಡೆ ಮಾಡಲಾಗಿದೆ. ಆಹಾರ ಧಾನ್ಯ ಪಡೆಯಲು ಫಲಾನುಭವಿಯು ತನ್ನ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಯವರಿಗೆ ನೀಡಬೇಕು. ಇದರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯವರು ಎನ್.ಐ.ಸಿ ತಂತ್ರಾಂಶದಲ್ಲಿ ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಅಕ್ಕಿ ಮತ್ತು ಕಡಲೆಕಾಳನ್ನು ನೀಡಬಹುದಾಗಿರುತ್ತದೆ. ಇದರ ಪ್ರಯೋಜನವನ್ನು ಅರ್ಹ ಫಲಾನುಭವಿಗಳು ಪಡೆಯಬಹುದಾಗಿರುತ್ತದೆ.

ದೇಶಾದ್ಯಂತ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ವಲಸಿಗರಿಗೆ ಒದಗಿಸುವ ಈ ಸೌಲಭ್ಯವನ್ನು ತಪ್ಪು ಮಾಹಿತಿ ನೀಡಿ ಆಹಾರ ಧಾನ್ಯ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ರ ಸೆಕ್ಷನ್ 25ರ ಅಡಿಯಲ್ಲಿ ಅಂತಹವರಿಗೆ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version