ಬಹಿರಂಗ
ದ್ರಾವಿಡರ ಮಹಾ ಹಿರೀಕ ಈ ‘ಶಿವ’..!
- ಹರ್ಷಕುಮಾರ್ ಕುಗ್ವೆ
ಭಾರತದ ಶ್ರೀಮಂತ ಸಂಸ್ಕೃತಿಯ ಒಡಲಿನಲ್ಲಿ ಹುದುಗಿರುವ ಈ ಪ್ರತಿಪುರಾಣದ ಕತೆಯನ್ನು ಓದಿ.
ದೇಶದಾದ್ಯಂತ ಜನಸಮುದಾಯಗಳಿಂದ ಅದರಲ್ಲೂ ವಿಶೇಷವಾಗಿ ದ್ರಾವಿಡ ಸಮುದಾಯಗಳಿಂದ ಪೂಜಿಸಲ್ಪಡುವ ಶಿವ ದ್ರಾವಿಡರ ಮಹಾ ಹಿರೀಕ ಅಥವಾ ಪೂರ್ವಿಕ ಪಿತೃ. ಮೂರೂವರೆ ಸಾವಿರ ವರ್ಷಗಳ ಹಿಂದೆ ಈ ನೆಲಕ್ಕೆ ವೈದಿಕ ಆರ್ಯರು ಎಂಟ್ರಿ ಕೊಡುವಷ್ಟರಲ್ಲಿ ಇಲ್ಲಿನ ನೆಲದ ಸಂಸ್ಕೃತಿ ಪರಂಪರೆಯಲ್ಲಿ, ಜನರ ಬದುಕಿನಲ್ಲಿ ‘ಶಿವ’ ಹಾಸುಹೊಕ್ಕಾಗಿಬಿಟ್ಟಿದ್ದ. ಆರ್ಯರು ಬರುವ ಮೊದಲಿನ ಸುಮಾರು 7000 ವರ್ಷಗಳ ಸಮೃದ್ಧ ದ್ರಾವಿಡ ಸಂಸ್ಕೃತಿಯಲ್ಲಿ ಶಿವ ಅಜರಾಮರನಾಗಿದ್ದ.
ಜಗತ್ತಿನ ಪ್ರಾಚೀನ ಮತ್ತು ಅತಿದೊಡ್ಡ ನಾಗರಿಕತೆಯಾದ ಹರಪ್ಪ ನಾಗರಿಕತೆಯಲ್ಲೇ ಶಿವನ ಗುರುತುಗಳನ್ನು ಕಾಣಬಹುದು. ವೈದಿಕರು ಇಲ್ಲಿಗೆ ಬರುವ ಹೊತ್ತಿಗಾಗಲೇ ಕಾಕಸಸ್ ಪರ್ವತ ತಪ್ಪಲಿನಲ್ಲಿ ಮತ್ತು ಅಫ್ಘಾನಿಸ್ತಾನದ ದಾರಿಯಲ್ಲಿ ಋಗ್ವೇದದ ಕೆಲವು ಭಾಗಗಳನ್ನು ಬರೆದುಕೊಂಡು ಬಂದಿದ್ದರು. ಇಲ್ಲಿಗೆ ಬಂದ ನಂತರ ಕೆಲವು ಭಾಗಗಳನ್ನು ಬರೆದರು. ಮತ್ತಷ್ಟು ವೇದಗಳನ್ನು ಬರೆದರು. ಅತ್ಯಂತ ಪ್ರಾಚೀನ ವೈದಿಕ ಪಠ್ಯವಾದ ಋಗ್ವೇದದಲ್ಲಿ ಎಲ್ಲೂ ‘ಶಿವ’ ಎಂಬ ಎರಡಕ್ಷರ ಇರಲಿಲ್ಲ.
ಕೊನೆಗೆ ಇಲ್ಲಿನ ನೆಲದ ಶಿವಸಂಸ್ಕೃತಿಯ ಮೇಲೆ ಹತೋಟಿ ಸಾಧಿಸಲೆಂದೇ ಋಗ್ವೇದದ ರುದ್ರನನ್ನು ಶಿವನೊಂದಿಗೆ ಸಮೀಕರಿಸುವ ಪ್ರಯತ್ನ ನಡೆಯಿತು. ಭಾಷಿಕವಾಗಿ ಸಹ ‘ಶಿವ’ ಎಂಬ ಪದ ದ್ರಾವಿಡ ಮೂಲದ ಪದವೇ ಹೊರತು ಇಂಡೋ ಯೂರೋಪಿಯನ್ ಭಾಷೆಯಯಾದ ಸಂಸ್ಕೃತ ಮೂಲದ ಪದವಲ್ಲ ಎಂದು ಭಾಷಾ ವಿದ್ವಾಂಸರು ನಿರೂಪಿಸಿದ್ದಾರೆ.ಇದು ನಮ್ಮ ಸಂಸ್ಕೃತಿ ಇತಿಹಾಸದ ಒಂದು ಭಾಗ. ಈಗ ಮತ್ತೊಂದು ವಿಷಯಕ್ಕೆ ಬರೋಣ.
ವೈದಿಕರು ತಮ್ಮ ವೈದಿಕ ಸಂಸ್ಕೃತಿಯನ್ನು ಭಾರತೀಯರ ಮೇಲೆ ಹೇರಲು ಪುರಾಣಗಳನ್ನು ರಚಿಸಿದರು. ಇಲ್ಲಿನ ವೈದಿಕ ಪೂರ್ವ ‘ಮುಂಡಾ’ ಆದಿವಾಸಿಗಳಲ್ಲಿದ್ದ ದಶಾವತಾರದ ಪರಿಕಲ್ಪನೆಯನ್ನು ಅನಾಮತ್ತಾಗಿ ಹೈಜಾಕ್ ಮಾಡಿ ತಮ್ಮ ಹಿತಾಸಕ್ತಿಯ ದಶಾವತಾರಗಳನ್ನು ಸೃಷ್ಟಿಸಿದರು. ದ್ರಾವಿಡ ಶಿವನ ಪ್ರಭಾವವನ್ನು ಕುಗ್ಗಿಸುವ ದುರುದ್ದೇಶದಿಂದ ವಿಷ್ಣುವನ್ನು ಅವತಾರಿಯಾಗಿಸಿದರು. ಶಿವಭಕ್ತರನ್ನು ಅಸುರರು ಎಂದು ಕರೆದು ಅವರನ್ನೆಲ್ಲ ಕೊಲೆ ಮಾಡುವ ಕತೆಗಳನ್ನೇ ಪುರಾಣಗಳಾಗಿಸಿದರು. ದಶಾವತಾರಗಳಲ್ಲಿ ಬಹಳ ಪ್ರಸಿದ್ದವಾದ ಒಂದು ಪುರಾಣ ನರಸಿಂಹಾವತಾರ.
ನಿಮಗೆಲ್ಲಾ ಹರಿಭಕ್ತ ಪ್ರಹ್ಲಾದ ಮತ್ತು ಅವನಪ್ಪ ಶಿವಭಕ್ತ ಹಿರಣ್ಯಕಶಿಪುವಿನ ಕತೆ ತಿಳಿದಿರುವುದೇ. ಹಿರಣ್ಯ ಕಶಿಪು ಘೋರ ತಪಸ್ಸಿನಿಂದ ಪಡೆದುಕೊಂಡ ವರವನ್ನು ನಿಸ್ತೇಜಗೊಳಿಸಿ ಅವನನ್ನು ಕೊಲೆ ಮಾಡಲು ಹರಿ ಅಂದರೆ ವಿಷ್ಣು ನರಸಿಂಹನ ಅವತಾರ ತಳೆದು ಅವನ ಕರುಳು ಬಗೆದು ಹೀನಸ್ ಮರ್ಡರ್ ಮಾಡುತ್ತಾನೆ.
ತಮಾಷೆ ಇರೋದೇ ಇಲ್ಲಿ. ಅತ್ತ ನರನೂ ಅಲ್ಲದ ಸಿಂಹನೂ ಅಲ್ಲದ ಈ ನರಸಿಂಹನ ಕಲ್ಪನೆ ಎಲ್ಲಿಯದು? ವೈದಿಕ ಪುರಾಣ ಬರೆದವರಿಗೆ ಈ ನರಸಿಂಹನ ಕಲ್ಪನೆ ಸಿಕ್ಕಿದ್ದೇ ರೋಮ್ ಮತ್ತು ಯೂರೋಪಿನ ಬಹುಭಾಗಗಳಲ್ಲಿ ಕ್ರಿಸ್ತಪೂರ್ವದಲ್ಲಿ ಪ್ರಚಲಿತದಲ್ಲಿದ್ದ ಮಿತ್ರ ಪಂಥದ ನಂಬಿಕೆ ಆಚರಣೆಗಳಿಂದ.
ರಹಸ್ಯ ಮಿತ್ರ ಪಂಥದಲ್ಲಿ ಆರಾಧಿಸಲ್ಪಡುತ್ತಿದ್ದ ಒಂದು ದೇವತೆ ಈ ನರಸಿಂಹ. ಅರಿಯಾನಿಸ್, ಅಯಾನ್, ಅಹ್ರಿಮನ್ ಮೊದಲಾದ ಹೆಸರುಗಳಿಂದ ‘ನರಸಿಂಹ’ನ ಖ್ಯಾತಿ ಪಡೆದಿದ್ದ. ಯೂರೋಪಿನ ಹಲವು ಕಡೆಗಳಲ್ಲಿ ಈ ಮಿತ್ರಪಂಥದ ನರಸಿಂಹನ ಸಾವಿರಾರು ಅತಿ ಪ್ರಾಚೀನ ವಿಗ್ರಹಗಳು ದೊರೆತಿರುವುದೇ ಇದಕ್ಕೆ ಸಾಕ್ಷಿ. ಕೊನೆಗೆ ಇದನ್ನೇ ಭಾರತದ ವೈದಿಕರು ಕಾಪಿ ಮಾಡಿಕೊಂಡು ತಮ್ಮ ಪುರಾಣ ಕತೆಗೆ ಒಗ್ಗಿಸಿಕೊಂಡರು.
ಅದಿರಲಿ ನಂತರ ಈ ವೈದಿಕರ ನರಸಿಂಹನಿಗೆ ಏನಾಗುತ್ತದೆ ಎಂದು ಬಹಳ ಜನಕ್ಕೆ ತಿಳಿದೇ ಇಲ್ಲ. ಯಾಕೆಂದರೆ ಅದನ್ನು ಪ್ರಧಾನ ಪುರಾಣಗಳು ಹೇಳುವುದಿಲ್ಲ. ಇದರ ಕುರಿತಾಗಿ ನಂತರದಲ್ಲಿ ಮತ್ತೊಂದು ಪ್ರತಿಪುರಾಣ ಸೃಷ್ಟಿಯಾಯಿತು.
ಅದರ ಪ್ರಕಾರ….
ಹಿರಣ್ಯ ಕಶಿಪುವನ್ನು ಮರ್ಡರ್ ಮಾಡಿದ ‘ನರಸಿಂಹ’ ಸಿಕ್ಕಾಪಟ್ಟೆ ಉಪಟಳ ನೀಡತೊಡಗುತ್ತಾನೆ. ಇಡೀ ಬ್ರಹ್ಮಾಂಡವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯತೊಡಗುತ್ತಾನೆ.
ಇವನ ಕಾಟ ತಡೆಯದ ದೇವತೆಗಳೆಲ್ಲಾ ಶಿವನ ಮೊರೆ ಹೋಗುತ್ತಾರೆ. ಇಲ್ನೋಡು ಶಿವಾ ನಿನ್ನ ಭಕ್ತನನ್ನು ಮರ್ಡರ್ ಮಾಡಿದ್ದೇ ಅಲ್ಲದೇ ಈ ವೈದಿಕರ ನರಸಿಂಹ ಈಗ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡುತ್ತಿದ್ದಾನೆ. ಹೋಗಿ ಅವನನ್ನು ಕತಂ ಮಾಡು ಎಂದು ಅಲವತ್ತುಕೊಳ್ಳುತ್ತಾರೆ. ಆಗ ಶಿವ ವೀರಭದ್ರನ ಅವತಾರದಲ್ಲಿ ಬಂದು ನರಸಿಂಹನ ಬಳಿ ಕುಳಿತು ಬುದ್ದಿ ಹೇಳುತ್ತಾನೆ. “ನೋಡಪ್ಪ ಹರಿ ಆಲಿಯಾಸ್ ನರಸಿಂಹ, ಹಿರಣ್ಯ ಕಶಿಪುವನ್ನ ಕೊಲೆ ಮಾಡಿ ನಿನ್ನಾಸೆ ತೀರಿಸಿಕೊಂಡಿದ್ದೀಯ ಈಗ ಸೈಲೆಂಟಾಗಿರು” ಎಂದರೆ ಅದಕ್ಕೆ ನರಸಿಂಹ ಸೊಪ್ಪು ಹಾಕೋದಿಲ್ಲ. ವೀರಭದ್ರನಿಗೇ ಆವಾಜ್ ಹಾಕುತ್ತಾನೆ.
ಮೊದಲೇ ಕೋಪಗೊಂಡು ಕುಳಿತಿದ್ದ ಶಿವ ಆಗ ಒಂದು ಭಯಾನಕ ಅವತಾರ ತಳೆಯುತ್ತಾನೆ. ಅದೇ ಶರಭಾವತಾರ. ಇದು ಸ್ವರೂಪದಲ್ಲಿ ನರಮಿಕಹಕ್ಕಿಯ ಸ್ವರೂಪ ಅಂದರೆ ಮನುಷ್ಯ, ಮೃಗ ಮತ್ತು ಪಕ್ಷಿಯ ವಿಚಿತ್ರ ಸ್ವರೂಪ. . ಹತ್ತಾರು ಕೈಗಳು, ಚೂಪಾದ ಪಂಜಾಗಳು, ನಾಲ್ಕೋ ಐದೋ ಕಾಲುಗಳು …ಅಬ್ಬಬ್ಬ ನೆನೆಸಿಕೊಂಡರೇ ಭಯವಾಗುತ್ತದೆ ಅಂತಹ ಉಗ್ರಸ್ವರೂಪ ಶರಭಾವತಾರದ ಶಿವನದು. ಅದಕ್ಕೆ ರೆಕ್ಕೆಗಳೂ ಇರುತ್ತವೆ. ಅದರ ಧ್ವನಿ ಕೇಳಿದರೇನೇ ನಡುಕ ಹುಟ್ಟಬೇಕು. ಅದಕ್ಕೆ ಕೆಂಡದುಂಡೆಗಳಂತ ಮೂರು ಕಣ್ಣುಗಳು.
ಹೀಗೆ ಶರಭಾವತಾರವನ್ನೆತ್ತಿದ ಶಿವ ಹಿಮವತ್ ಪರ್ವತದಲ್ಲಿ ನರಸಿಂಹನನ್ನು ತಡವಿಕೊಳ್ಳುತ್ತಾನೆ. ನರಸಿಂಹನೇ ಉಗ್ರ ಸ್ವರೂಪಿಯಾದರೆ ಈಗ ಶರಭ ಅದರಪ್ಪನಂತ ಅತ್ಯುಗ್ರ ಸ್ವರೂಪಿ. ತನ್ನ ಬಾಲದಿಂದಲೇ ಅನಾಮತ್ತಾಗಿ ನರಸಿಂಹನನ್ನು ಎತ್ತಿ ಹಿಡಿದು ಕೆಡವಿ ತನ್ನ ಪಂಜಾದಲ್ಲಿ ನರಸಿಂಹನ ಹೊಟ್ಟೆ ಬಗೆಯುದು ಕೊಲ್ಲುತ್ತಾನೆ. ಕೊನೆಗೆ ನರಸಿಂಹನಿಗೆ ‘ಬಿಡುಗಡೆ’ಯ ಭಾಗ್ಯ ಸಿಗುವಂತೆ ಮಾಡುತ್ತಾನೆ.
ಯಾವಾಗ ವೈದಿಕರು ದ್ರಾವಿಡ ಶಿವನ ಸಂಸ್ಕೃತಿಯನ್ನು ವಿನಾಶ ಮಾಡಲು ಸಂಚು ಹೂಡಿ ಪುರಾಣಗಳನ್ನು ರಚಿಸಿದರೋ ಆಗಲೇ ದ್ರಾವಿಡರೂ ಪ್ರತಿಪುರಾಣಗಳನ್ನೂ ರಚಿಸಿದರು. ಇದರಲ್ಲಿ ಪ್ರಸಿದ್ಧ ಶಿವಪುರಾಣವೂ ಒಂದು. ಶಿವಪುರಾಣದಲ್ಲಿ ಬರುವ ಶಿವನ 18 ಅವತಾರಗಳಲ್ಲಿ ಶರಭಾವತಾರವೂ ಒಂದು. ವೈದಿಕರ ದಶಾವತಾರದ ಹೀರೋನನ್ನೇ ವಿಲನ್ ಆಗಿಸಿ ಶಿವನನ್ನು ಹೀರೋ ಮಾಡಿದ ಶ್ರೇಯಸ್ಸು ಈ ಶಿವಪುರಾಣಕ್ಕೆ ಸಲ್ಲುತ್ತದೆ. ಅಂದಹಾಗೆ ಶಿವಪುರಾಣ ರಚಿಸಿದ ಪುರಾಣಕರ್ತ ಸೂತ ಜಾತಿಯಲ್ಲಿ ಜನಿಸಿದ ರೋಮಹರ್ಶಣ ಋಷಿ ಎಂದು ಹೇಳಲಾಗಿದೆ.
ಈ ಮಹಾಋಷಿ ರೋಮಹರ್ಶಣ ದಲಿತನಾಗಿದ್ದೂ ವೇದಪಾರಂಗತನಾಗಿದ್ದ. ಯಾವ ಬ್ರಾಹ್ಮಣ ಪಂಡಿತರಿಗೂ ಸವಾಲು ಹಾಕಿ ಬಾಯಿ ಮುಚ್ಚಿಸಬಲ್ಲ ಪಾಂಡಿತ್ಯ ಇವನಾದಿತ್ತು.. ದ್ವಿಜರಾದವರಿಗೆ ಇದು ಬಹಳ ಹೊಟ್ಟೆ ಉರಿ ತರಿಸಿತ್ತು. ತಮ್ಮಂತೆ ಹುಟ್ಟಿನಿಂದ ಬ್ರಾಹ್ಮಣನಲ್ಲದವನು ನಮ್ಮೆದುರು ಸರಿಸಾಟಿಯಾಗಿ ನಿಲ್ಲುವುದೇ? ಛೇ ಛೇ ಇದು ಸಲ್ಲದು ಎಂಬುದು ಅವರ ವಾದ. ಕೊನೆಗೆ ಈ ರೋಮರ್ಶಣ ಮಹಾರುಶಿಯನ್ನು ಬ್ರಾಹ್ಮಣರು ಸಂಚು ನಡೆಸಿ ಕೊಲೆ ಮಾಡುತ್ತಾರೆ. ಈ ಕೊಲೆಗೆ ದೈವಿಕ ಸಮರ್ಥನೆ ನೀಡಲು ಮಾರ್ಕಂಡೇಯ ಪುರಾಣದಲ್ಲಿ ಸಾಕ್ಷಾತ್ ಬಲರಾಮನೇ ಬಂದು ರೋಮಹರ್ಶಣನನ್ನು ಕೊಲೆ ಮಾಡುವಂತೆ ಮತ್ತೊಂದು ಪುರಾಣ ಕಟ್ಟಿದ್ದಾರೆ.
ಶಿವಪುರಾಣವು ನಂತರದ ಕಾಲಘಟ್ಟದಲ್ಲಿ ಹಲವಾರು ಪರಿಷ್ಕರಣೆಗಳನ್ನು ಕಂಡಿದೆ. ಶಿವಪುರಾಣವನ್ನು ವೈದಿಕರು ತಮಗೆ ಬೇಕಾದಂತೆ ತಿರುಚಿಕೊಂಡಿದ್ದು ಸಹ ಒಂದು ರಾಜಕಾರಣವೇ.
ಹಿಂದೂ ಧರ್ಮವನ್ನು ‘ಹಿಂದುತ್ವ’ದ ಹೆಸರಿನಲ್ಲಿ ಏಕರೂಪಿಯಾಗಿ ಬಿಂಬಿಸಲು ಹೊರಟವರಿಗೆ ಭಾರತದ ಮಹಾನ್ ಸಂಸ್ಕೃತಿಯನ್ನು, ಇಲ್ಲಿನ ಶ್ರೇಷ್ಟ ಪರಂಪರೆಯನ್ನು ಮುಖಕ್ಕೆ ಹಿಡಿಯಬೇಕಾದ ತುರ್ತು ಇಂದು ನಮಗಿದೆ.
ಎಲ್ಲರಿಗೂ ಮತ್ತೊಮ್ಮೆ ಮಹಾಶಿವರಾತ್ರಿಯ ಶುಭಾಶಯಗಳು.
(ಶಿವ ಮತ್ತು ಶರಭಾವತಾರದ ವಿಗ್ರಹಗಳ ಚಿತ್ರಗಳನ್ನು ಅಂತರ್ಜಾಲದಿಂದ ಪಡೆಯಲಾಗಿದೆ. ಈ ಬರೆಹಕ್ಕೆ ‘ಹರಪ್ಪ: ಡಿ ಎನ್ ಎ ನುಡಿದ ಸತ್ಯಗಳು’ ಎಂಬ ಪುಸ್ತಕದಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಬರೆದ ಲೇಖನದದಲ್ಲಿ ತಿಳಿಸಲಾಗಿರುವ ಕೆಲವು ಹೊಳಹುಗಳನ್ನು ಬಳಸಿಕೊಳ್ಳಲಾಗಿದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243