ರಾಜಕೀಯ
ಬಾಬಾ ಸಾಹೇಬರು ಕೊಟ್ಟ ಸಂವಿಧಾನವೇ ನನಗೆ ಪರಮಧರ್ಮ : ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ಚಾಮರಾಜನಗರದಲ್ಲಿ ಶನಿವಾರ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ಬೌದ್ಧ ವಿಶ್ವವಿದ್ಯಾಲಯದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು ಮಾಜಿ ಸಿಎಂ ಸಿದ್ದರಾಮಯ್ಯ.
ನಂತರ ಮಾತನಾಡಿದ ಅವರು ದಾಸ್ಯ ಮನೋಭಾವದಿಂದ ಹೊರಬಂದರೆ ಮಾತ್ರ ಬುದ್ಧ, ಅಂಬೇಡ್ಕರರಿಗೆ ಗೌರವ ಸಲ್ಲಿಸಲು ಸಾಧ್ಯ.ಯಾರು ಏನಾದರೂ ಅಂದುಕೊಳ್ಳಲಿ, ನನ್ನ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿ ಕೆಲಸ ಮಾಡಿದ್ದೇನೆ. ಬಾಬಾ ಸಾಹೇಬರು ಕೊಟ್ಟ ಸಂವಿಧಾನವೇ ನನಗೆ ಪರಮಧರ್ಮ. ಸಂವಿಧಾನಕ್ಕೆ ಬದ್ಧನಾಗಿ ನಡೆದ ಸಂತೃಪ್ತಿ ನನ್ನಲ್ಲಿದೆ ಎಂದರು.
ಖಾವಿ ಹಾಕಿಕೊಂಡವರೆಲ್ಲರೂ ಸನ್ಯಾಸಿಗಳಾಗುವುದಿಲ್ಲ. ಎಲ್ಲವನ್ನೂ ತ್ಯಜಿಸಿದವರು ಸನ್ಯಾಸಿಗಳಾಗುತ್ತಾರೆ.
ಈ ಹಿಂದೆ ಲಿಂಗಾಯತ ಧರ್ಮ ಮಾಡಿ ಎಂದು ನನಗೆ ಮನವಿ ಮಾಡಿದರು. ನಾನು ಪರಿಶೀಲನೆಗೆ ಕಳಿಸಿಕೊಟ್ಟೆ. ಲಿಂಗಾಯತ ಮತ್ತು ಬಸವ ತತ್ವ ಅನುಸರಿಸುವವರು ಲಿಂಗಾಯತ ಧರ್ಮೀಯರು ಅಂತ ವಾದಿಸಿದವರು ಅವರು. ಆದರೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಹೇಳಿದರು.
ನಾವು ನಮ್ಮ ಸಮಾಜದಲ್ಲಿ ಮನುಷ್ಯರಾಗಿ ಬದುಕುತ್ತಾ ಇರಲಿಲ್ಲ. ಭಾರತದಲ್ಲಿ ಬೇರೆ ಬೇರೆ ಧರ್ಮ ಹುಟ್ಟಿಕೊಂಡಿದ್ದು ಅದಕ್ಕಾಗಿಯೇ. ಸಮಾಜದಲ್ಲಿ ಅಸಮಾನತೆ ಹಾಗೂ ತಾರತಮ್ಯ ಇತ್ತು. ಅದನ್ನು ಸರಿಪಡಿಸಲು ಬೌದ್ಧ ಧರ್ಮ ಸೇರಿದಂತೆ ಹಲವು ಧರ್ಮಗಳು ಭಾರತದಲ್ಲಿ ಹುಟ್ಟಿಕೊಂಡವು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401