ರಾಜಕೀಯ

ಬಿಜೆಪಿ ಮತ ಕೇಳಲು ಬಂದಾಗ, ಜನತೆ ಅಚ್ಚೇದಿನ್ಎಲ್ಲಿ ? ಎಂದು ಕೇಳಿ : ಸಿದ್ದರಾಮಯ್ಯ

Published

on

ಸುದ್ದಿದಿನ, ಮೈಸೂರು : ಭಯೋತ್ಪಾದಕರ ಮೇಲೆ ನಮ್ಮ ಸೈನ್ಯ ನಡೆಸುವ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವ ಅಮಿತ್ ಶಾ, ಯಡಿಯೂರಪ್ಪನವರ ಬಗ್ಗೆ ದೇಶದಲ್ಲಿ ಎಲ್ಲಿಯೂ ಚರ್ಚೆಗಳು ನಡೆಯುವುದಿಲ್ಲ.

ದೇಶ ಪ್ರೇಮದ ಸೋಗಿನಲ್ಲಿ ಬಿಜೆಪಿ ಮಾಡುತ್ತಿರುವ ಸ್ವಾರ್ಥ ರಾಜಕಾರಣವನ್ನು ಪ್ರಶ್ನಿಸುವವರನ್ನು ಮಾತ್ರ ದೇಶ ದ್ರೋಹಿಗಳು ಎಂದು ಜರಿಯುತ್ತಾರೆ‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಆದಾಯವನ್ನು ದ್ವಿಗುಣಗೊಳಿಸುವ, ವಿದೇಶದಿಂದ ಕಪ್ಪುಹಣವನ್ನು ತರುವ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ, ಭಯೋತ್ಪಾದನೆಯನ್ನು ಸಂಪೂರ್ಣ ನಿಯಂತ್ರಿಸುವ ಭರವಸೆಗಳನ್ನು ಈಡೇರಿಸಲಾಗದೆ ಕೇಂದ್ರ ಸರ್ಕಾರ ವಿಫಲವಾಗಿದೆ. ಬಿಜೆಪಿಯವರು ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಜನರು ಅವರ ಬಳಿ ಎಲ್ಲಿ ಅಚ್ಚೇ ದಿನ್? ಎಂದು ಪ್ರಶ್ನಿಸಬೇಕು ಎಂದು ಕಿಡಿಕಾರಿದರು.

ದೇಶದ ಭದ್ರತೆ, ಸೈನ್ಯ, ಧರ್ಮ ಇವುಗಳಲ್ಲಿ ರಾಜಕೀಯ ಮಾಡಬಾರದು. ದೇಶವನ್ನು ಪ್ರೀತಿಸಬೇಕು, ಧರ್ಮವನ್ನು ಪಾಲಿಸಬೇಕು, ಸೈನ್ಯವನ್ನು ಬೆಂಬಲಿಸಬೇಕು, ಇವು ನಿಜವಾದ ಭಾರತೀಯನಾದವನ ಕೆಲಸ.
ಆದರೆ ಬಿಜೆಪಿ ಇವುಗಳನ್ನೇ ಚುನಾವಣಾ ಸರಕಾಗಿಸಿಕೊಂಡು ಜನರನ್ನು ಭಾವನಾತ್ಮಕವಾಗಿ ತನ್ನತ್ತ ಹಿಡಿದಿಟ್ಟುಕೊಳ್ಳುತ್ತಿದೆ. ಇದು ದೇಶಕ್ಕೆ ಮಾರಕವಾದುದ್ದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version