ದಿನದ ಸುದ್ದಿ

ಟ್ರೋಲ್ ಹೆಸರಲ್ಲಿ ಎಲ್ಲವೂ “ತಮಾಷಾ” ಆಗಿ ಮುಗಿಯಬಾರದು..!

Published

on

  • ರಾಜಾರಾಂ ತಲ್ಲೂರು

ಡುಪಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ರಚಿಸಲಾಗಿರುವ ಖಾಸಗಿ ತೇಲು ಮಂಚವೊಂದು (ಅದು ಬ್ರಿಜ್ ಅಲ್ಲ; ಎಲ್ಲಿಗೂ ಸಂಪರ್ಕ ಕಲ್ಪಿಸುವುದಿಲ್ಲ!!) ಕಳಚಿಕೊಂಡಿದೆ ಮತ್ತು ಈಗ ನಡೆದಿರುವ 40% ಕಮಿಷನ್ ಹೆಸರಲ್ಲಿ ಎರ್ರಾಬಿರ್ರಿ ಟ್ರೋಲ್ ಆಗುತ್ತಿದೆ.

ನಾನು ಅರ್ಥ ಮಾಡಿಕೊಂಡಿರುವಂತೆ ಇದೊಂದು ಖಾಸಗಿ ಪ್ರಯತ್ನವಾಗಿದ್ದು, ಅಲ್ಲಿ ಆ ಚಟುವಟಿಕೆಗೆ ಅವಕಾಶವನ್ನು ಲೀಸ್ ಪಡೆದು ನಿರ್ಮಿಸಲಾಗಿರುವ ತೇಲುಮಂಚ. ಕರ್ನಾಟಕದ ಕರಾವಳಿಯ ಮಟ್ಟಿಗೆ ಅದು ಹೊಸಬಗೆಯ ಪ್ರಯತ್ನ ಆಗಿರುವುದರಿಂದ ಅದು ಅಲ್ಲಿ ಬರಲು ಕಾರಣರಾದವರೆಲ್ಲ ಅದರ ಉದ್ಘಾಟನೆಯ ವೇಳೆ ಕ್ರೆಡಿಟ್ ತೆಗೆದುಕೊಂಡದ್ದು ಸತ್ಯ. ಇದರಲ್ಲಿ ಸ್ಥಳೀಯ ಬೀಚ್ ಅಭಿವೃದ್ಧಿ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಮಾಧ್ಯಮ ಎಲ್ಲರದೂ ಪಾಲಿದೆ. ಇದರಲ್ಲಿ ತಪ್ಪೇನಿಲ್ಲ.

ಈಗ ಆ ತೇಲುಮಂಚ ಎಲ್ಲೋ ದೂರದಲ್ಲಿ ಬೀಸುತ್ತಿರುವ ತೂಪಾನಿನ ಪ್ರಭಾವದಿಂದಾಗಿ ಎದ್ದ ಅಲೆಗಳಿಗೆ ಬಲಿಯಾಗಿದೆ ಅಥವಾ ಅದರ ಲೀಸ್ ಹೋಲ್ಡರ್ ಮಾಧ್ಯಮಗಳಿಗೆ ತಿಳಿಸಿರುವಂತೆ ಅದನ್ನು ಡಿಸ್‌ಮ್ಯಾಂಟಲ್ ಮಾಡಲಾಗಿದೆ.

ಅದೇನೇ ಇರಲಿ. ಈ ಸಂಗತಿಯನ್ನು ರಾಜಕೀಯವಾಗಿ ಟ್ರೋಲ್ ಮಾಡಲು ಹೊರಟಾಗ, ಸಹಜವಾಗಿಯೇ ಪಕ್ಷರಾಜಕೀಯ, ಟ್ರೋಲ್ ಸೇನೆ, ಭಕ್ತಸೇನೆಗಳೆಲ್ಲ ಜಮಾಯಿಸಿ, ಕೇಳಲೇ ಬೇಕಾದ ಮೂಲ ಸಂಗತಿಗಳು ಅಡಿ ಬೀಳುತ್ತವೆ. ನಮ್ಮ ಮಾಧ್ಯಮಗಳು ಕೂಡ ತಳಕ್ಕಿಳಿದು ನೋಡುವ ಬದಲು ಟ್ರೋಲ್‌ಗಳನ್ನಾಧರಿಸಿ ಸುದ್ದಿ ಮಾಡುತ್ತಿರುವುದರಿಂದಾಗಿ ಈ “ಪ್ರಕರಣ”ದ ಮಹತ್ವವೇ ಮುಕ್ಕಾದಂತಾಗಿದೆ. ಈ ಪ್ರಕರಣದಲ್ಲಿ ಕೇಳಬೇಕಾಗಿರುವ ಪ್ರಶ್ನೆಗಳಿವು. ಜಿಲ್ಲಾಡಳಿತ, ಬೀಚ್ ಸಮಿತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಉತ್ತರ ನೀಡಲು ಬಾಧ್ಯಸ್ಥರು.

  1. ಈ ತೇಲುಮಂಚವನ್ನು ಸಾರ್ವಜನಿಕರಿಗೆ ಬಳಕೆಗೆ ತೆರೆಯುವ ಮುನ್ನ ಎಷ್ಟು ಸಮಯ ಪ್ರಾಯೋಗಿಕವಾಗಿ ಬಳಸಿ, ಅದರ ಅಪಾಯ ಸಾಧ್ಯತೆಗಳನ್ನು ಪರೀಕ್ಷಿಸಲಾಗಿದೆ?
  2. ತೇಲುಮಂಚ ಉದ್ಘಾಟನೆಯ ವೇಳೆಯಲ್ಲಿ, ಅಲ್ಲಿ ಹತ್ತಾರು ಮಂದಿ ಜೀವರಕ್ಷಕರಿರುತ್ತಾ, ಸ್ಥಳೀಯ ಶಾಸಕರು ಅಕಸ್ಮಾತ್ ಉರುಳಿಬಿದ್ದ ವೀಡಿಯೊ ಒಂದು ವೈರಲ್ ಆಗಿತ್ತು. ಈ ಘಟನೆ ಆದ ಬಳಿಕವೂ ಸೂಕ್ತ ಮುಂಜಾಗ್ರತೆಗಳಿಲ್ಲದೆ ಆ ತೇಲುಮಂಚವನ್ನು ಯಾಕೆ ಸಾರ್ವಜನಿಕರಿಗೆ ತೆರೆಯಲಾಯಿತು?
  3. ಈ ತೇಲುಮಂಚ ನಿರ್ಮಾಣಕ್ಕೆ ಮಾಡಿಕೊಳ್ಳಲಾಗಿರುವ ಲೀಸ್ ಒಪ್ಪಂದದಲ್ಲಿ ಅಪಾಯ ಸಂಭಾವ್ಯತೆಗಳ ಬಗ್ಗೆ ಏನು ಷರತ್ತುಗಳಿವೆ?
  4. ಸ್ಥಳೀಯ ಸಮುದ್ರದ ಗುಣ, ಹವಾಮಾನಗಳನ್ನಾಧರಿಸಿ ಇಲ್ಲಿ ಆ ರೀತಿಯ ತೇಲುಮಂಚ ನಿರ್ಮಾಣ ಸಾಧುವೇ? ಎಂಬ ಬಗ್ಗೆ ಅಧ್ಯಯನವೇನಾದರೂ ನಡೆದಿದೆಯೆ? ಅದರ ವಿವರಗಳಿದ್ದರೆ ಕೊಡಿ.
  5. ಹಣ ತೆತ್ತು ತೇಲುಮಂಚಕ್ಕೆ ತೆರಳುವ ಪ್ರವಾಸಿಗರಿಗೆ ಸುರಕ್ಷಾ ಕವಚಗಳಿವೆಯೆ (ಕೆಲವು ವೀಡೀಯೊಗಳಲ್ಲಿ ಕವಚಗಳಿಲ್ಲದ ಪ್ರವಾಸಿಗರನ್ನು ಕಂಡಿದ್ದೇನೆ)? ವಿಮೆ ಅಥವಾ ಬೇರೆ ರಕ್ಷಣೆಗಳಿವೆಯೆ?
  6. ಈ ರೀತಿಯ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆಗಳಿಗೆ ಅಲ್ಲಿ ಯಾರು ಕೂಡಾ ಲೀಸ್ ಪಡೆಯಬಹುದೆ? ಅದಕ್ಕೆ ಮಾನದಂಡಗಳೇನು? ಅರ್ಹತೆಗಳೇನು? ಅವರ ಜವಾಬ್ದಾರಿಗಳೇನು? ಲೀಸ್ ಕೊಡುವವರು ಯಾರು? ಇಲ್ಲಿ ಜಿಲ್ಲಾಡಳಿತದ ಹೊಣೆ ಏನು?

ಸಂಬಂಧಿತರು ಸಾರ್ವಜನಿಕರಿಗೆ ಉತ್ತರ ನೀಡುತ್ತಾರೆಂದು ಭಾವಿಸೋಣವೆ?

(ರಾಜಾರಾಂ ತಲ್ಲೂರು ಅವರ ಫೇಸ್‌ಬುಕ್‌ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version