ಬಹಿರಂಗ

ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯ..!

Published

on

ಭಾರತದ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಮಾನವೀಯ ಅಸ್ಪೃಶ್ಯತೆಯಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯಗಳು ಸಮಾನ ದುಃಖಿಗಳು. ಇಂದಿಗೂ ಶೂದ್ರ ಮತ್ತು ಹಿಂದೂ ಮೇಲ್ಜಾತಿಗಳು ಈ ಎರಡು ಸಮುದಾಯಗಳಿಗೆ ಸೇರಿದ ಜನರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಪಶ್ಚಿಮದ ದೇಶಗಳಲ್ಲಿ ಜನಾಂಗೀಯ ಬೇಧಕ್ಕೆ ಕಪ್ಪು ಜನರು ಹೇಗೆ ಗುರಿಯಾಗುತ್ತಿದ್ದಾರೆಯೋ ಅದೇ ರೀತಿ ನಮ್ಮಲ್ಲಿ ದಲಿತ ಜಾತಿಗಳಿಗೆ ಸೇರಿದ ಜನರು ದಿನ ನಿತ್ಯ ನಾನಾ ರೀತಿಯಲ್ಲಿ ಗುರಿಯಾಗುತ್ತಿದ್ದಾರೆ.

ಆದರೆ ಕೆಲವು ಸಂದರ್ಭಗಳಲ್ಲಿ ಈ ಎರಡು ದಲಿತ ಸಮುದಾಯಗಳು ಪರಸ್ಪರ ಸಂಘರ್ಷ ನಡೆಸುತ್ತವೆ. ಬ್ರಾಹ್ಮಣೀಯ ಜಾತಿ ವ್ಯವಸ್ಥೆಯ ಸಮರ್ಥನೆಗಾಗಿ ಕೆಲವರು ಈ ಸಮುದಾಯಗಳ ಸಂಘರ್ಷವನ್ನು ಉದಾಹರಣೆ ನೀಡುವುದೂ ಇದೆ. “ಬರೀ ಬ್ರಾಹ್ಮಣರು ತಾರತಮ್ಯ ಮಾಡುವುದಲ್ಲ, ಹೊಲೆಯರು ಮಾದಿಗರೂ ಸಹ ಕಿತ್ತಾಡುತ್ತಾರೆ ನೋಡಿ, ಜಾತಿ ತಾರತಮ್ಯ ಬಹಳ ಬಲವಾಗಿ ದಲಿತರಲ್ಲಿಯೇ ಇದೆ” ಎಂದು ಅವರು ವಾದಿಸುತ್ತಾರೆ.

ಮೊನ್ನೆ ಮೈಸೂರಿನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯದ ಕುರಿತು ಮಾಜಿ ಸಚಿವ, ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಈ ಎಡಗೈ-ಬಲಗೈ ಸಮುದಾಯಗಳಿಗೆ ಸೇರಿದ ಕೆಲವರು ಪರಸ್ಪರ ಕಿತ್ತಾಡುತ್ತಿದ್ದಾರೆ. ಇದನ್ನು ವಿವೇಕ ಕಳೆದುಕೊಂಡ ನಡೆ ಎನ್ನದೇ ವಿಧಿಯಿಲ್ಲ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದ ಕುರಿತು ನ್ಯಾಯಮೂರ್ತಿ ಸದಾಶಿವ ವರದಿಯನ್ನು ಬಹಿರಂಗಪಡಿಸಿ, ಅದರ ಕುರಿತು ಮುಕ್ತ ಚರ್ಚೆಗೆ ಅವಕಾಶವಾಗಿ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಎಡಗೈ ಬಲಗೈ ದಲಿತರು, ದಲಿತೇತರರು ಎಲ್ಲರೂ ಸಮಾಜದ ಹಿತದೃಷ್ಟಿಯಿಂದ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಇದು ಕೇವಲ ಪರಿಶಿಷ್ಟ ಜಾತಿಯ ಸಮಸ್ಯೆ ಅಲ್ಲ. ಇದು ಇಡೀ ಸಮಾಜಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಆಗಿರುವುದರಿಂದ ಈ ಬಗ್ಗೆ ಎಲ್ಲಾ ಪ್ರಜ್ಞಾವಂತರೂ ಆಲೋಚಿಸಬೇಕಾಗಿದೆ.

ಇಲ್ಲಿ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿರುವ ಒಂದು ವಿಷಯವೆಂದರೆ ದಲಿತ ಸಮುದಾಯ ಎಡಗೈ ಬಲಗೈ ಎಂದು ವಿಭಜನೆಗೊಂಡಿದ್ದು ಯಾಕೆ ಎಂದು. ‘ಅವರವರೇ ಕಚ್ಚಾಡುತ್ತಾರೆ’ ಎಂದು ದೂರದಲ್ಲಿ ನಿಂತು ಬೊಟ್ಟು ಮಾಡುವ ಸಮಾಜದ ಪಾತ್ರ ಇದರಲ್ಲಿ ಇಲ್ಲವೇ? ಖಂಡಿತಾ ಇದೆ. ವಾಸ್ತವದಲ್ಲಿ ಹೊಲೆಯರು ಮತ್ತು ಮಾದಿಗರು ಎಡಗೈ ಮತ್ತು ಬಲಗೈ ಎಂದು ವಿಂಗಡಣೆಯಾದ್ದು ಆ ಜಾತಿಗಳ ಸ್ವಂತ ಇಚ್ಛೆಯಿಂದ ಆಗಿರಲಿಲ್ಲ. ಈ ಎಡಗೈ-ಬಲಗೈ ಜಾತಿ ವಿಭಜನೆಗೆ ದೊಡ್ಡ ಇತಿಹಾಸವೇ ಇದೆ. ಇದು ಕೇವಲ ಕರ್ನಾಟಕದಲ್ಲಿ ನಡೆದ ವಿದ್ಯಮಾನವಲ್ಲ ಹಾಗೂ ಕೇವಲ ಹೊಲೆಯ- ಮಾದಿಗರಿಗೆ ಮಾತ್ರ ಸಂಬಂಧಿಸಿದ ವಿದ್ಯಮಾನವೂ ಆಗಿರಲಿಲ್ಲ. ಚರಿತ್ರೆಯ ಗತಿಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಸಂಭವಿಸಿದ ಜಾತಿ ವಿಂಗಡಣೆ ಇದಾಗಿತ್ತು. ಈ ವಿಂಗಡಣೆ ಮೂಲದಲ್ಲಿ ಯಾವಾಗ ಮತ್ತು ಹೇಗಾಯಿತು, ಏಕಾಯಿತು ಎಂಬ ಬಗ್ಗೆ ಖಚಿತ ಆಧಾರಗಳು ಸಿಕ್ಕಿಲ್ಲವಾದರೂ 11ನೇ ಶತಮಾನದಲ್ಲಿ ದಕ್ಷಿಣ ಭಾರತ ಆಳುತ್ತಿದ್ದ ಚೋಳರ ಕಾಲದಿಂದಲೂ ಎಡಗೈ-ಬಲಗೈ ವಿಭಜನೆಯ ಕುರಿತು ದಾಖಲೆಗಳು ಲಭ್ಯ ಇವೆ.

ಒಂದು ಅಧ್ಯಯನದ ಪ್ರಕಾರ ಕೃಷಿ ಆಧಾರಿತ ಜಾತಿಗಳು ಬಲಗೈ ಸಮೂಹದಲ್ಲಿಯೂ ಕರಕುಶಲ ಕರ್ಮಿ- ವ್ಯಾಪಾರಿ ಸಮುದಾಯಗಳು ಎಡಗೈ ಸಮೂಹದಲ್ಲಿಯೂ ಇದ್ದವು. ಇವುಗಳಿಗೆ ಕರ್ನಾಟಕದಲ್ಲಿ ಪಣಕಟ್ಟುಗಳು ಎಂದು ಕರೆಯಲಾಗುತ್ತಿತ್ತು. ಮೈಸೂರು ಗೆಝೆಟಿಯರ್ನಲ್ಲಿ ದಾಖಲಾಗಿರುವ ಪ್ರಕಾರ ಬಲಗೈ ಪಣಕಟ್ಟಿನಲ್ಲಿ 18 ಜಾತಿಗಳಿದ್ದು ಬಣಜಿಗ, ಒಕ್ಕಲಿಗ, ಗಾಣಿಗ, ಕುರುಬ ಮುಂತಾದ ಜಾತಿಗಳಿದ್ದವು. ಹಾಗೆಯೇ ಪಾಂಚಾಳ/ವಿಶ್ವಕರ್ಮ, ಅಕ್ಕಸಾಲಿಗ, ದೇವಾಂಗ, ಬೇಡ ಮೊದಲಾದ 14 ಜಾತಿಗಳು ಎಡಗೈ ಪಣಕಟ್ಟಿನಲ್ಲಿದ್ದವು. ಈ ಜಾತಿಗಳ ಉಪಜಾತಿಗಳೆಲ್ಲ ಸೇರಿ 98 ಜಾತಿಗಳಿದ್ದವು ಎನ್ನಲಾಗುತ್ತದೆ. ಪ್ರಮುಖ ವ್ಯಾಪಾರಿ ಸಮುದಾಯವಾಗಿದ್ದ ಜೈನ ಸಮುದಾಯ 13ನೇ ಶತಮಾನದವರೆಗೂ ಬಲಗೈ ಭಾಗವಾಗಿದ್ದು ನಂತರ ವಿಜಯನಗರದ ಅರಸರ ಕಾಲದಲ್ಲಿ ಎಡಗೈಗೆ ವರ್ಗಾವಣೆಯಾಯಿತು. ಈ ಪಣಕಟ್ಟುಗಳ ಇತಿಹಾಸ ನೋಡಿದರೆ ಮೊದಲಿನಿಂದಲೂ ಎರಡೂ ಪಣಕಟ್ಟುಗಳು ಪ್ರತ್ಯೇಕ ಚಿನ್ಹೆಗಳು, ಪ್ರತ್ಯೇಕ ನಡಾವಳಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡಿವೆ. ಪರಸ್ಪರ ಪಣಕಟ್ಟುಗಳ ನಡುವೆ ತೀವ್ರತರದ ಸಂಘರ್ಷಗಳು ನಡೆದಿವೆ. 19ನೆಯ ಶತಮಾನದಲ್ಲಿ ಈ ಸಂಘರ್ಷಗಳು ನಡೆದಾಗ ಬ್ರಿಟಿಷರು ಹಳ್ಳಿಗಳನ್ನೇ ಎರಡು ಗುಂಪುಗಳಿಗೆ ವಿಭಜನೆ ಮಾಡಿದ್ದೂ ಇದೆ.

ಈ ಎಡಗೈ-ಬಲಗೈ ಪಣಕಟ್ಟುಗಳು ನಮ್ಮ ಸಮಾಜದ ಜಾತಿ ವ್ಯವಸ್ಥೆಯ ತಳಹದಿಯ ಮೇಲೆ ರೂಪುಗೊಂಡಿದ್ದ ವೃತ್ತಿ ಆಧಾರಿತ ವಿಭಜಿತ ಕೂಟಗಳಾಗಿದ್ದವು. ಈ ವಿಭಜನೆಯಲ್ಲಿ “ಅಸ್ಪೃಶ್ಯ ಸಮುದಾಯಗಳು” ಎಂದು ಪರಿಗಣಿಸಲಾಗಿದ್ದ ಹೊಲೆಯ ಸಮುದಾಯ ಬಲಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಮಾದಿಗ ಸಮುದಾಯ ಎಡಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಇಡಲ್ಪಟ್ಟಿದ್ದವು. ಮುಖ್ಯವಾಗಿ ಇಡೀ ಪಣಕಟ್ಟಿನ ನಿರ್ದೇಶನ ಮುಂದುವರಿದ ಜಾತಿಗಳಿಂದಲೇ ನಡೆಯುತ್ತಿತ್ತು. ಹೊಲೆಯ ಸಮುದಾಯಕ್ಕೆ ಬಲಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಮಾದಿಗ ಸಮುದಾಯಕ್ಕೆ ಎಡಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಹೊರಿಸಲಾಗಿತ್ತು. ಎರಡೂ ಪಣಕಟ್ಟುಗಳ ನಡುವೆ ಸಂಘರ್ಷ ಎದುರಾದರೆ ಹೊಡೆದಾಟ ಮಾತ್ರ ಹೊಲೆಯ ಮಾದಿಗರ ನಡುವೆ ನಡೆಯುತ್ತಿತ್ತು. ಇವೆರಡೂ ಜಾತಿಗಳ ನಡುವೆ ದ್ವೇಷವನ್ನು ಶಾಶ್ವತಗೊಳಿಸಲು ಹೊಲೆಯನ ಪತ್ನಿಯಾದವಳು ಎಡಗೈ ಗುಂಪಿನಲ್ಲಿಯೂ ಮಾದಿಗನ ಪತ್ನಿಯಾದವಳು ಬಲಗೈ ಗುಂಪಿನಲ್ಲಿಯೂ ಸೇರಿಸಲಾಗಿದ್ದ ಬಗ್ಗೆ ಸಿಂದ್ ಮಾದಿಗರ ಸಂಸ್ಕೃತಿ ಕೃತಿಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.

ಈ ಪಣಕಟ್ಟುಗಳ ಭಾಗವಾಗಿ ಬ್ರಾಹ್ಮಣ ಜಾತಿ ಇರಲಿಲ್ಲ. ಆದರೆ ಬಹುತೇಕ ರಾಜಮನೆತನಗಳನ್ನು ಬ್ರಾಹ್ಮಣ ಪುರೋಹಿತರೇ ನಿಯಂತ್ರಿಸುತ್ತಿದ್ದುದರಿಂದ ಈ ಪಣಕಟ್ಟುಗಳ ನಡಾವಳಿಗಳನ್ನು ಬ್ರಾಹ್ಮಣರು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದುದಾಗಿ ಕಂಡು ಬರುತ್ತದೆ.
ರಾಜಶಾಹಿ ವ್ಯವಸ್ಥೆಯ ಅವಸಾನದೊಂದಿಗೆ 20ನೆ ಶತಮಾನದಲ್ಲಿ ಸೊ ಕಾಲ್ಡ್ ಮೇಲ್ಜಾತಿಗಳ ನಡುವೆ ಪಣಕಟ್ಟು ಬೇಧ ಕೊನೆಗೊಂಡಿತು. ಆದರೆ ಶತಮಾನಗಳವರೆಗೆ ಈ ಪಣಕಟ್ಟುಗಳ ಭಾಗವಾಗಿ ಕಾಲಾಳುಗಳಾಗಿ ಪರಸ್ಪರ ಹೊಡೆದಾಡಿಕೊಂಡು ಬಂದಿದ್ದ ಹೊಲೆಯ-ಮಾದಿಗ ಸಮುದಾಯಗಳು ಶಾಶ್ವತ ದ್ವೇಶ ಸಾಧಿಸುವಂತಾಯಿತು.

ಹೀಗಾಗಿ ನಾವಿಂದು ಕಾಣುತ್ತಿರುವ ಹೊಲೆಯ-ಮಾದಿಗರ ನಡುವಿನ ಎಡಗೈ-ಬಲಗೈ ದ್ವೇಷ ಆ ಜಾತಿಗಳೇ ಸೃಷ್ಟಿಸಿಕೊಂಡಿರುವುದಲ್ಲ. ಸಮಾಜದ ಗತಿಯಲ್ಲಿ ಆ ಜಾತಿಗಳ ಮೇಲೆ ಒಂದರ್ಥದಲ್ಲಿ ಹೇರಲಾದ ದ್ವೇಶ ಇದು.
ಇಂದು ನಾವು ಬಾಬಾಸಾಹೇಬ್ ಅಂಬೇಡ್ಕರ್ ಜಾತಿ ತಾರತಮ್ಯ ಅಳಿಯಬೇಕು ಎಂದು ಬಯಸಿ ಬದುಕಿನುದ್ದಕ್ಕೂ ಪಡಬಾರದ ಪಾಡು ಪಟ್ಟು ನಡೆಸಿದ ಹೋರಾಟ, ಸಾಂವಿಧಾನಿಕ ಪ್ರಯತ್ನಗಳು, ಸಮತೆಯ ಬದುಕಿಗೆ ದಾರಿದೀಪವಾಗುವ ಅವರ ಚಿಂತನೆಗಳ ಬೆಳಕಿನಿಂದ ಒಂದಷ್ಟು ಪಡೆದುಕೊಂಡಿದ್ದೇವೆ. ದಲಿತರು ಮಾತ್ರವಲ್ಲ ಇಡೀ ಬಾಬಾಸಾಹೇಬರ ಜೀವನ ಹೋರಾಟದಿಂದ ಪ್ರಯೋಜನ ದೇಶವೇ ಪಡೆದುಕೊಂಡಿದೆ. ಸಮಾನತೆ ಆಶಯ ಹೊಂದಿರುವ ಸಂವಿಧಾನದ ಮೂಲಕ ಭಾರತೀಯರು ಬದುಕು ರೂಪಿಸಿಕೊಳ್ಳುತ್ತಿದ್ದೇವೆ.

ಹೀಗಿರುವಾಗ ಅಸಮಾನತೆಯ ಸಮಾಜದಲ್ಲಿ ಸೃಷ್ಟಿಯಾದ ಈ ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳನ್ನು ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ ನಿವಾರಿಸಿಕೊಳ್ಳಬೇಕಿದೆ. ಇದಾಗಬೇಕೆಂದರೆ ಮೊದಲು ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳು ಇವೆ ಹಾಗೂ ಬಲಗೈನಿಂದ ಎಡಗೈನವರೂ, ಸ್ಪೃಶ್ಯ ಜಾತಿಗಳಿಂದ ಅಸ್ಪೃಶ್ಯ ಜಾತಿಗಳು ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಂತರ ಇದನ್ನು ಪರಿಹರಿಸಲು ಸದಾಶಿವ ವರದಿ ಯೋಗ್ಯವೇ ಎಂದು ಯೋಚಿಸಬಹುದು.

ಹರ್ಷ ಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version