ರಾಜಕೀಯ
ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಕುರಿತ ವಾಸ್ತವ ನೆಲೆಯ ವಿಶ್ಲೇಷಣೆ
ದೀರ್ಘಕಾಲಿಕ ರಾಜಕೀಯ ವಿದ್ಯಮಾನದ ಅನಾವರಣ
ಹಿಂದೂ ಬಹುಸಂಖ್ಯಾವಾದಕ್ಕೆ ರಾಜಕೀಯ ಭೂಮಿಕೆಯಾಗಿ ಉತ್ತರಪ್ರದೇಶ ಸಿದ್ಧ
- ಮೂಲ : ಅಸೀಮ್ ಅಲಿ (ದ ಹಿಂದೂ 11 ಮಾರ್ಚ್ 22), ಅನುವಾದ : ನಾ ದಿವಾಕರ
ಉತ್ತರಪ್ರದೇಶ ಒಂದು ಹೊಸ ರಾಜಕೀಯ ಶಕೆಯನ್ನು ಪ್ರವೇಶಿಸಿದೆ. ಮೂರನೆ ಎರಡರಷ್ಟು ಬಹುಮತ ಪಡೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಕಳೆದ ಮೂರು ದಶಕಗಳಲ್ಲಿ ಮರಳಿ ಅಧಿಕಾರ ಪಡೆದ ಪ್ರಪ್ರಥಮ ಪಕ್ಷವಾಗಿ ಹೊರಹೊಮ್ಮಿದೆ. ತನ್ನ ಮುಸ್ಲಿಂ-ಯಾದವ ಮತಬ್ಯಾಂಕನ್ನು ದಾಟಿ ತನ್ನದೇ ಆದ ಮತದಾರ ವಲಯವನ್ನು ಸೃಷ್ಟಿಸಿಕೊಳ್ಳುವ ಸಮಾಜವಾದಿ ಪಕ್ಷದ ಪ್ರಯತ್ನ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ ಸಂಪೂರ್ಣ ಅವನತಿಯತ್ತ ಸಾಗಿವೆ.
ಪ್ರಧಾನ ನಿರೂಪಣೆಯ ಜನಾದೇಶ
ಬಿಜೆಪಿ ಗಳಿಸಿರುವ ಸ್ಥಾನಗಳ ಸಂಖ್ಯೆ ನಿರೀಕ್ಷೆಯನ್ನು ಮೀರಿದ್ದರೂ ಪಕ್ಷದ ಗೆಲುವು ಅನಿರೀಕ್ಷಿತವೇನೂ ಆಗಿರಲಿಲ್ಲ. ಯಾವುದೇ ಅಲೆಯ ಪ್ರಭಾವ ಇಲ್ಲದೆಯೇ ಈ ಚುನಾವಣೆಗಳು ನಡೆದಿದ್ದವು. ಮಾಧ್ಯಮಗಳ ಚುನಾವಣಾ ವರದಿಗಳಲ್ಲೂ ಸಹ ಆಡಳಿತ ವಿರೋಧಿ ಧೋರಣೆಯಾಗಲೀ, ಸರ್ಕಾರದ ಪರವಾದ ಧೋರಣೆಯಾಗಲೀ ಕಂಡುಬಂದಿರಲಿಲ್ಲ. ಆದರೂ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವಿಗೆ ಕಾರಣಗಳೇನು ಎನ್ನುವುದು ಚರ್ಚೆಗೊಳಗಾಗಬೇಕಿದೆ.
ಯಾವುದೇ ರಾಜಕೀಯ ಜನಾದೇಶವನ್ನು ಆಳಕ್ಕಿಳಿದು ವಿಸಂಕೇತಿಸುವುದು ಸಂಕೀರ್ಣವಾದ ಕೆಲಸ. ಒಂದು ಕೆಲವು ರಾಜಕೀಯ ತಜ್ಞರು ಈ ಚುನಾವಣೆಗಳ ಫಲಿತಾಂಶವನ್ನು ಯೋಗಿ ಆದಿತ್ಯನಾಥ್ ಆಳ್ವಿಕೆಯ ಸಾಧನೆಗಳ ಫಲ ಎಂದೇ ವ್ಯಾಖ್ಯಾನಿಸಿದ್ದಾರೆ. ಜನಕಲ್ಯಾಣ ಯೋಜನೆಗಳ ಅನುಷ್ಟಾನ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿರುವುದೇ ಕಾರಣ ಎಂದೂ ಹೇಳಲಾಗುತ್ತದೆ.
ಇನ್ನು ಕೆಲವು ವಿಶ್ಲೇಷಕರು, ಬಿಜೆಪಿಯ ಸಂಘಟನಾತ್ಮಕ ರಚನೆ ಮತ್ತು ಮಾಧ್ಯಮಗಳ ನಿರ್ವಹಣೆಯೇ ಈ ಗೆಲುವಿಗೆ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಸತ್ಯಾಂಶವಿದೆ. ಆದರೂ ಈ ವಿಶ್ಲೇಷಣೆಗಳಲ್ಲಿ , ಉತ್ತರಪ್ರದೇಶದ ಜನಾದೇಶದ ಹಿಂದಿರುವ ಸೈದ್ಧಾಂತಿಕ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಈ ಸೈದ್ಧಾಂತಿಕ ಶಕ್ತಿಯೇ ಹಿಂದೂ ಬಹುಸಂಖ್ಯಾವಾದ. ಹಿಂದೂ ಬಹುಸಂಖ್ಯಾವಾದವೇ ಬಿಜೆಪಿಯ ಚುನಾವಣಾ ಪ್ರಚಾರದ ಪ್ರಧಾನ ನಿರೂಪಣೆ ಎಂದು ಹೇಳಬಹುದು. ಉಳಿದೆಲ್ಲಾ ನಿರೂಪಣೆಗಳೂ ಸಹ ಈ ಪ್ರಧಾನ ನಿರೂಪಣೆಗೆ ಪೂರಕವಾಗಿಯೇ ಕಂಡುಬರುತ್ತದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಬಿಜೆಪಿ ಕ್ರೋಢೀಕರಿಸಿದ್ದ, ಧೃವೀಕರಿಸಿದ್ದ ಹಿಂದೂ ಮತದಾರರ ಸಾಮಾಜಿಕ ಮೈತ್ರಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಬಿಜೆಪಿಯ ಪಾಲಿಗೆ ಸವಾಲಿನ ಪ್ರಶ್ನೆಯಾಗಿತ್ತು. ಮೇಲ್ಜಾತಿ ಸಮುದಾಯಗಳು, ಯಾದವರನ್ನು ಹೊರತುಪಡಿಸಿದ ಹಿಂದುಳಿದ ಜಾತಿಗಳು, ಜಾಟವರನ್ನು ಹೊರತುಪಡಿಸಿದ ದಲಿತ ಸಮುದಾಯ ಈ ಮೈತ್ರಿಕೂಟದಲ್ಲಿ ಪ್ರಮುಖವಾಗಿದ್ದವು.
ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟುಮಾಡಿದ್ದ ಅನೇಕ ರೀತಿಯ ಸಾರ್ವಜನಿಕರ ಅಸಮಾಧಾನಗಳು ಹೊಗೆಯಾಡುತ್ತಿದ್ದುದು ಪಕ್ಷಕ್ಕೆ ಪ್ರಮುಖ ಸವಾಲಾಗಿತ್ತು. ಇವುಗಳಲ್ಲಿ ಪ್ರಧಾನವಾಗಿ ನಿರುದ್ಯೋಗದ ಬವಣೆ, ಬೆಲೆ ಏರಿಕೆ, ಸ್ಥಗಿತಗೊಂಡಿದ್ದ ಆದಾಯದ ಮೂಲಗಳು, ಗ್ರಾಮೀಣ ಬಿಕ್ಕಟ್ಟು, ಕೋವಿದ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾಗಿದ್ದ ಹಲವು ದುರಂತಗಳು, ಲಾಕ್ ಡೌನ್ ದುಷ್ಪರಿಣಾಮಗಳು ಯೋಗಿ ಸರ್ಕಾರದ ಸುಗಮ ಹಾದಿಗೆ ಅಡ್ಡಿಯಾಗುವ ಸಾಧ್ಯತೆಗಳಿದ್ದವು.
ಸರ್ಕಾರದ ಈ ಎಲ್ಲ ವೈಫಲ್ಯಗಳನ್ನೂ ಮೀರಿ ಯೋಗಿ ಸರ್ಕಾರದ ಉಚಿತ ಪಡಿತರ ನೀಡುವ ಯೋಜನೆ ಫಲಕಾರಿಯಾಗಿದೆ ಎಂದು ಹೇಳುವುದು ಬಹುಶಃ ಭೋಳೆತನದ ಮಾತಾಗುತ್ತದೆ. ಉಚಿತವಾಗಿ ನೀಡಲಾಗುವ ಆಹಾರ ಧಾನ್ಯಗಳನ್ನು ಒದಗಿಸುವ ಪದ್ಧತಿಗೆ ಭಾರತದ ಮತದಾರರು ಕಳೆದ ಐವತ್ತು ವರ್ಷಗಳಿಂದಲೂ ಒಗ್ಗಿಹೋಗಿರುವುದರಿಂದ, 21ನೆಯ ಶತಮಾನದ ಮೂರನೆಯ ದಶಕದಲ್ಲಿ ಮತದಾರರು ಈ ಯೋಜನೆಗಳಿಂದ ಭ್ರಮಾಧೀನರಾಗುತ್ತಾರೆ ಎಂದು ನಂಬುವುದು ಕಷ್ಟವಾದೀತು.
ಜನಕಲ್ಯಾಣಯೋಜನೆಯನ್ನೂ ಮೀರಿದ ಸಂಗತಿ
ಅನೇಕ ಜನಪರ ಕಲ್ಯಾಣ ಯೋಜನೆಗಳಡಿ ನೇರ ನಗದು ಪಾವತಿ ಮಾಡುವ ಪದ್ಧತಿ, ಉದಾಹರಣೆಗೆ ರೈತರ ಆದಾಯ ಬೆಂಬಲ, ಶೌಚಾಲಯ ನಿರ್ಮಾಣ, ವಸತಿ ಯೋಜನೆ, ಶಾಲಾ ಬ್ಯಾಗುಗಳು ಇತ್ಯಾದಿ,, ಒಂದು ಪ್ರಬಲ ಅಸ್ತ್ರವಾಗಿಯೇ ಕಾಣುತ್ತದೆ. ಆದರೆ ಚುನಾವಣೆಯ ಮತದಾನದ ಏರುಪೇರುಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಇಲ್ಲಿಯೂ ಸಹ ವಿಶ್ಲೇಷಕರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ.
ಏಕೆಂದರೆ ಇತ್ತೀಚೆಗೆ ನಡೆದ ಹರಿಯಾಣ, ಮಹಾರಾಷ್ಟ್ರ ಮತ್ತ್ ಜಾರ್ಖಂಡ್ ಚುನಾವಣೆಗಳಲ್ಲಿ ಈ ಕಲ್ಯಾಣ ಯೋಜನೆಗಳ ನೇರ ನಗದು ಪಾವತಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲ. ಅಲ್ಲಿ ಬಿಜೆಪಿ ಮತದಾರರ ಅವಕೃಪೆಯನ್ನು ಎದುರಿಸಬೇಕಾಯಿತು. ಎರಡನೆಯದಾಗಿ, ಚುನಾವಣಾ ಸಮೀಕ್ಷೆಗಳಾಗಲೀ, ಮಾಧ್ಯಮಗಳ ವರದಿಗಳಾಗಲೀ ಈ ರೀತಿಯ ಬೃಹತ್ ಪ್ರಮಾಣದ ಜನಾದೇಶಕ್ಕೆ ಪೂರಕವಾದ ಜನೋತ್ಸಾಹವನ್ನು ಬಿಂಬಿಸಿರಲಿಲ್ಲ. ಚುನಾವಣೆಗಳಿಗೆ ಎರಡು ತಿಂಗಳ ಮುಂಚೆ ನಡೆಸಲಾದ ಸಮೀಕ್ಷೆಗಳಲ್ಲೂ ಸಹ ಸಾರ್ವಜನಿಕ ಅಭಿಪ್ರಾಯಗಳು ಅಸ್ಪಷ್ಟತೆಯಿಂದಲೇ ಕೂಡಿದ್ದವು.
ಸಮೀಕ್ಷೆಗೊಳಪಟ್ಟ ಮೂರನೆ ಎರಡರಷ್ಟು ಮತದಾರರು ಸರ್ಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೆಲವೇ ಸಂಖ್ಯೆಯ ಜನ ಯೋಗಿ ಸರ್ಕಾರ ಮರಳಿ ಅಧಿಕಾರಕ್ಕೆ ಬರುವಂತೆ ಆಶಿಸಿದ್ದರು. ಹಾಗಾಗಿಯೇ ಇಲ್ಲಿ ಮತ್ತಾವುದೋ ಅಂಶ ಪ್ರಧಾನವಾಗಿರುವುದನ್ನು ಗುರುತಿಸಬೇಕಿದೆ. ಇಲ್ಲಿ ನಿರ್ಣಾಯಕವಾಗಿ ಕಾಣುವುದು ಹಿಂದುತ್ವ ಬಹುಸಂಖ್ಯಾವಾದ. ಈ ಬಹುಸಂಖ್ಯಾವಾದವೇ, ಯಾದವರು ಮತ್ತು ಜಾಟವರನ್ನು ಹೊರತುಪಡಿಸಿ, ಬಿಜೆಪಿ ಮತ್ತು ಹಿಂದೂ ಮತದಾರರ, ನಡುವೆ ಭಾವನಾತ್ಮಕವಾದ ಸೇತುವೆಯನ್ನು ನಿರ್ಮಿಸಿದೆ.
ಉತ್ತರ ಪ್ರದೇಶದ ಹಿಂದೂ ಮತದಾರರಲ್ಲಿ ಒಂದು ಸಮಾನ ಪ್ರಜ್ಞೆಯನ್ನು ಗುರುತಿಸಬಹುದು ಎಂದು ಯೋಗೇಂದ್ರ ಯಾದವ್ ತಮ್ಮ ಸಮೀಕ್ಷೆಯಲ್ಲಿ ಹೇಳಿದ್ದುದನ್ನು ಸ್ಮರಿಸಬಹುದು. ಈ ಸಮಾನ ಪ್ರಜ್ಞೆಯ ಮೂಲವನ್ನು ಯಾದವ್ ಅವರು ಹಿಂದೂ-ಮುಸ್ಲಿಂ ವಿಭಜನೆಯಲ್ಲಿ ಗುರುತಿಸುತ್ತಾರೆ. ಈ ಪ್ರಜ್ಞೆಯ ಪ್ರಭಾವದಿಂದಲೇ ಜನರು ತಮ್ಮ ಭೌತಿಕ ಸಂಕಷ್ಟಗಳನ್ನೂ ಬದಿಗೆ ಸರಿಸಿ , ರಾಜ್ಯ ಸರ್ಕಾರದ ದುರಾಡಳಿತವನ್ನೂ ಲೆಕ್ಕಿಸದೆ “ ತಮ್ಮವರ” ಪರ ವಹಿಸಿ ಮತ ಚಲಾಯಿಸಿದ್ದಾರೆ.
ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸಂಘರ್ಷ
ಉತ್ತರಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಏರ್ಪಟ್ಟಿದ್ದ ಸೈದ್ಧಾಂತಿಕ ಸಂಘರ್ಷ ಮೂಲತಃ ಯಾದವೇತರ ಹಿಂದುಳಿದ ವರ್ಗಗಳ ಮತದಾರರ ಸುತ್ತಲೂ ಹೆಣೆಯಲ್ಪಟ್ಟಿತ್ತು. ಉಳಿದ ಮತದಾರರಾದ ಮೇಲ್ಜಾತಿಗಳು, ಮುಸ್ಲಿಮರು, ಯಾದವರು ಮತ್ತು ಜಾಟರು ತಮ್ಮದೇ ಆದ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿದ್ದರಿಂದ, ಹಿಂದುಳಿದ ವರ್ಗಗಳ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದರು.
ಕೊಂಚ ಮಟ್ಟಿಗೆ ಜಾಟವರನ್ನು ಹೊರತುಪಡಿಸಿದ ದಲಿತ ಮತದಾರರೂ ನಿರ್ಣಾಯಕರಾಗಿದ್ದರು. ಈ ಮತದಾರ ವಲಯವನ್ನೇ ಅಖಿಲೇಶ್ ಯಾದವ್ ಹೆಚ್ಚಾಗಿ ಅವಲಂಬಿಸಿದ್ದರು. ಹಕ್ಕು ಮತ್ತು ಸಮಾನ ಪ್ರಾತಿನಿಧ್ಯ ಈ ಎರಡು ಮಂಡಲ್ ರಾಜಕಾರಣದ ಮೂಲ ಧಾತುಗಳನ್ನು ಅವಲಂಬಿಸಿದ್ದ ಅಖಿಲೇಶ್ ಯಾದವ್ ಹಿಂದುಳಿದ ವರ್ಗಗಳ ಕ್ರಾಂತಿಯ ಭರವಸೆಯನ್ನೂ ನೀಡಿದ್ದರು.
ಆದರೆ ಸಮಾಜವಾದಿ ಪಕ್ಷದ ಮಂಡಲ್ ರಾಜಕಾರಣದ ಪ್ರಭಾವಕ್ಕೆ ಹಿಂದುಳಿದ ವರ್ಗಗಳ ಮತದಾರರು ಬಲಿಯಾಗದಂತೆ ಬಿಜೆಪಿ ತಡೆಗಟ್ಟಿದ್ದಾದರೂ ಹೇಗೆ ? ಅಥವಾ ಹಿಂದುಳಿದ ವರ್ಗಗಳ ಮತದಾರರು ತಮ್ಮ ಮಂಡಲ್ ರಾಜಕಾರಣಕ್ಕೂ ವಿಮುಖರಾಗಿ, ಹಿಂದೂ ರಾಜಕೀಯ ಅಸ್ಮಿತೆಯನ್ನು ಅಪ್ಪಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹಿಂದೂ ಬಹುಸಂಖ್ಯಾವಾದ ಯಶಸ್ವಿಯಾದದ್ದಾದರೂ ಹೇಗೆ ? ಇಲ್ಲಿ ಎರಡು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ.
ಮೊದಲನೆಯದಾಗಿ, ಹಿಂದುಳಿದ ವರ್ಗಗಳಲ್ಲಿ ಭೌತಿಕ ಸುರಕ್ಷತೆಯ ಭರವಸೆಯನ್ನು ಉಂಟುಮಾಡಿದ್ದು. ಬುಲ್ಡೋಜರ್ಗಳು ಮತ್ತು ಎನ್ಕೌಂಟರ್ಗಳ ಸಂಕೇತಗಳ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದು. ಹಿಂದೂ ಪ್ರಭಾವಳಿಯಲ್ಲಿರುವ ಹಿಂದುಳಿದ ವರ್ಗಗಳಲ್ಲಿ ತಾವು ಯಾದವ್ ಮತ್ತು ಮುಸ್ಲಿಂ ಕ್ರಿಮಿನಲ್ಗಳಿಂದ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿಸಿದ್ದು.
ಕೋಮುವಾದಿ ಪೂರ್ವಗ್ರಹಗಳಿಗೆ ಸುರಕ್ಷತೆಯ ಹೊದಿಕೆಯನ್ನು ನೀಡುವ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ಪರಾಕಾಷ್ಠೆ ತಲುಪಿತ್ತು. ಮುಖ್ತಾರ್ ಅನ್ಸಾರಿ ಮತ್ತು ಅತೀಕ್ ಅಹಮದ್ ಅವರಂತಹ ಮುಸ್ಲಿಂ ಬಲಾಢ್ಯರನ್ನು ಮಾಫಿಯಾದೊಡನೆ ಬೆಸೆಯುವ ಪ್ರಕ್ರಿಯೆ ಒಂದೆಡೆಯಾದರೆ ಮತ್ತೊಂದೆಡೆ ಸಿಎಎ ವಿರೋಧಿ ಹೋರಾಟಗಾರರನ್ನು ದಂಗೆಕೋರರೊಂದಿಗೂ, ಲವ್ ಜಿಹಾದ್ ಆರೋಪಿಗಳು ಮತ್ತು ಗೋವು ಕಳ್ಳಸಾಗಾಣಿಕೆದಾರರನ್ನು ಸಮಾಜಘಾತುಕ ಶಕ್ತಿಗಳೊಂದಿಗೂ ಬೆಸೆಯುವುದರಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿತ್ತು.
ಉದಾಹರಣೆಗೆ 2018-20ರ ಅವಧಿಯಲ್ಲಿ ಉತ್ತರಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಮೂರನೆ ಒಂದರಷ್ಟು ಆರೋಪಿಗಳು ಗೋವು ಕಳ್ಳಸಾಗಾಣಿಕೆಯ ಆರೋಪವನ್ನೇ ಎದುರಿಸುತ್ತಿದ್ದಾರೆ. ಈ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಎಂದರೆ ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಮುಸ್ಲಿಮರೇ ಅಪಾಯಕಾರಿ ಎಂದು ಬಿಂಬಿಸುವುದರಲ್ಲಿ , ಹಾಗೆಯೇ ಈ ಅಪಾಯವನ್ನು ಮಟ್ಟಹಾಕುವ ನಿಟ್ಟಿನಲ್ಲೂ ಸರ್ಕಾರ ಸಕ್ರಿಯವಾಗಿದೆ ಎಂದು ಪ್ರದರ್ಶಿಸುವಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿದೆ. ಮೇಲ್ನೋಟಕ್ಕೆ ಹಿಂದೂ ಮುಸ್ಲಿಂ ಘರ್ಷಣೆಯು ಕಾಣುತ್ತಿಲ್ಲ ಎಂದು ಹಲವು ಪತ್ರಿಕಾ ವರದಿಗಾರರು ವರದಿ ಮಾಡಿದ್ದರೂ, ಆಂತರಿಕವಾಗಿ ಮತದಾರರ ನಡುವೆ ಆಳವಾಗಿ ಬೇರೂರಿರುವ ಕೋಮು ಭಾವನೆಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಆರ್ಥಿಕ ಸುಭದ್ರತೆ
ಇಲ್ಲಿ ಗಮನಿಸಬೇಕಾದ ಎರಡನೆಯ ಅಂಶವೆಂದರೆ, ಹಿಂದುಳಿದ ಜಾತಿಗಳಿಗೆ ಒಂದು ರೀತಿಯ ಆರ್ಥಿಕ ಸುರಕ್ಷತೆಯನ್ನು, ಯಾವುದೇ ಜಾತಿ ಅಸ್ಮಿತೆಗಳನ್ನು ಸೂಚಿಸದೆಯೇ ಒದಗಿಸಿರುವುದು. ಆರ್ಥಿಕ ಸುರಕ್ಷತೆಯನ್ನು ಒದಗಿಸುವ ತಂತ್ರಗಾರಿಕೆಯು ರಾಜಕೀಯವಾಗಿ ನಿರ್ಣಾಯಕವಾಗುವಷ್ಟೇ ಅದನ್ನು ಜನರಿಗೆ ತಲುಪಿಸುವ ವಿಧಾನಗಳೂ ನಿರ್ಣಾಯಕವಾಗುತ್ತವೆ.
ಉತ್ತರಪ್ರದೇಶದ ರಾಜಕಾರಣದಲ್ಲಿ ಮಂಡಲ್ ಮತ್ತು ದಲಿತ ರಾಜಕಾರಣವು ಹೆಚ್ಚು ಪ್ರಬಲವಾಗುತ್ತಿದ್ದರೂ ಮೂಲತಃ ಸಾರ್ವಜನಿಕ ಸವಲತ್ತುಗಳನ್ನು ಜನರಿಗೆ ತಲುಪುವಂತೆ ಮಾಡಲು ಜಾತಿ ಧೃವೀಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಯೋಜನೆಗಳು ಯೋಜನಾಬದ್ಧವಾಗಿದ್ದುದೇ ಅಲ್ಲದೆ ಸಾರ್ವತ್ರಿಕತೆಯನ್ನು ಪಡೆದುಕೊಂಡಿದ್ದವು.
ನೇರ ನಗದು ವರ್ಗಾವಣೆಯ ಮಾರ್ಗವನ್ನು ಅನುಸರಿಸುವ ಮೂಲಕ ಮಧ್ಯವರ್ತಿಗಳ ಕಾಟದಿಂದ ಫಲಾನುಭವಿಗಳು ಮುಕ್ತರಾಗಿದ್ದರು. ಇದು ಸಹಜವಾಗಿಯೇ ಜಾತಿ ಅಸ್ಮಿತೆಗಳ ರಾಜಕೀಯ ಲಕ್ಷಣಗಳನ್ನು ಶಿಥಿಲವಾಗಿಸುತ್ತದೆ. ಈ ರೀತಿಯ ಜನೋಪಯೋಗಿ ರಾಜಕಾರಣ ಹಿಂದೂ ಬಹುಸಂಖ್ಯಾವಾದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದರಿಂದ ದಲಿತರು ಮತ್ತು ಹಿಂದುಳಿದ ಜಾತಿಗಳು ಕ್ರಮೇಣ ರಾಜಕೀಯವಾಗಿ ಹಿಂದೂಗಳಾಗಿಯೇ ಗುರುತಿಸಿಕೊಳ್ಳುವಂತಾಗುತ್ತದೆ.
ಈ ಹಿಂದೂ ಬಹುಸಂಖ್ಯಾವಾದವನ್ನು ಸೋಲಿಸುವಲ್ಲಿ ಸಮಾಜವಾದಿ ಪಕ್ಷದ ಮಂಡಲ್ ತಂತ್ರಗಾರಿಕೆ ಏಕೆ ವಿಫಲವಾಯಿತು ಎಂದೂ ಯೋಚಿಸಬೇಕಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಂಡಲ್ ರಾಜಕಾರಣವನ್ನು ಪುನರುಜ್ಜೀವನಗೊಳಿಸುವುದು ಬೃಹತ್ ಸವಾಲಾಗಿ ಪರಿಣಮಿಸುತ್ತದೆ.
ಚುನಾವಣೆಗಳಿಗೂ ಮುನ್ನ ಸಮಾಜವಾದಿ ಪಕ್ಷವು ಬಿಜೆಪಿಯ ಪ್ರಮುಖ ಹಿಂದುಳಿದ ಜಾತಿಯ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಮುಂತಾದ ನಾಯಕರನ್ನು ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿತ್ತು. ಯೋಗಿ ಆಡಳಿತದಲ್ಲಿ ಹಿಂದುಳಿದ ಜಾತಿಗಳು ಅಸಮಧಾನವನ್ನು ಹೊಂದಿವೆ ಎಂದು ನಿರೂಪಿಸುವ ತಂತ್ರ ಇದಾಗಿತ್ತು, ತನ್ಮೂಲಕ ಹಿಂದುಳಿದ ಜಾತಿಗಳ ಹಕ್ಕೊತ್ತಾಯಗಳನ್ನೇ ಚುನಾವಣೆಯ ಕೇಂದ್ರ ವಸ್ತುವನ್ನಾಗಿಸಲು ಸಮಾಜವಾದಿ ಪಕ್ಷ ಪ್ರಯತ್ನಿಸಿತ್ತು.
ಆದರೆ ಈ ಬಹುತೇಕ ನಾಯಕರು ತಮ್ಮ ಸಮುದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ನಾಯಕರ ಅವಕಾಶವಾದಿತನ ಮತ್ತು ವ್ಯಾವಹಾರಿಕ ಧೋರಣೆಯ ಪರಿಣಾಮ, ಸೈದ್ಧಾಂತಿಕ ನೆಲೆಗಳು ಲೆಕ್ಕಕ್ಕೆ ಬರದಂತಾಯಿತು. ಸಮಾಜವಾದಿ ಪಕ್ಷದ ಈ ಪ್ರಯತ್ನಗಳು ಬಹಳ ತಡವಾಗಿ ನಡೆಯಿತು ಎನ್ನುವುದನ್ನೂ ಗಮನಿಸಬೇಕು.
ಒಂದು ಪರ್ಯಾಯದ ರಚನೆಯತ್ತ
ಮಂಡಲ್ ರಾಜಕಾರಣವನ್ನು ಪುನಶ್ಚೇತನಗೊಳಿಸಿ, ಪುನರುಜ್ಜೀವನಗೊಳಿಸುವುದೆಂದರೆ ಅದಕ್ಕೆ ದೀರ್ಘ ಕಾಲಿಕ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ಪುನರ್ ನಿರ್ಮಾಣದ ಅವಶ್ಯಕತೆ ಇದೆ. ಈ ಮಾರ್ಗದಲ್ಲೇ ಹಿಂದುತ್ವದ ನಮ್ಯ ಸ್ವರೂಪವನ್ನು ಎದುರಿಸಲು ಸಾಧ್ಯವಾದೀತು.
ಬಿಜೆಪಿ ತನ್ನ ಹಿಂದೂ ಬಹುಸಂಖ್ಯಾವಾದದ ಪ್ರಚಾರವನ್ನು ವರ್ಷದುದ್ದಕ್ಕೂ ನಡೆಸುತ್ತಿರುತ್ತದೆ. ಪ್ರತಿ ವರ್ಷವೂ ನವೀಕರಿಸುತ್ತಿರುತ್ತದೆ. ಇದಕ್ಕೆ ಪೂರಕವಾದ ಸಂಘಟನಾತ್ಮಕ ಶಕ್ತಿಯೊಂದಿಗೇ ಸ್ನೇಹಪರ ಮಾಧ್ಯಮಗಳೂ ಸಹ ಇರುತ್ತವೆ. ಕೇವಲ ಮೂರು ತಿಂಗಳ ಕಾಲ ಬದುಕುಳಿಯುವ ಯಾವುದೇ ಪರ್ಯಾಯ ಸೈದ್ಧಾಂತಿಕ ನೆಲೆಗಳು ಈ ಸವಾಲನ್ನು ಎದುರಿಸಲು ಸಾಧ್ಯವಾಗುವುದಿಲ್ಲ.
ಯೋಗಿ ಆದಿತ್ಯನಾಥ್ ಕಳೆದ ಚುನಾವಣೆಗಳನ್ನು 80:20 ಅನುಪಾತದಲ್ಲಿ ಎದುರಿಸಿ ಗೆಲುವು ಸಾಧಿಸಿದ್ದಾರೆ. ಇದು ನೇರವಾಗಿಯೇ ಹಿಂದೂ:ಮುಸ್ಲಿಂ ರಾಜಕಾರಣವನ್ನು ಪ್ರತಿನಿಧಿಸುತ್ತದೆ. ಹಿಂದಿರುಗಿ ನೋಡಿದಾಗ ಈ ತಾತ್ವಿಕ ಚೌಕಟ್ಟು ವಾಸ್ತವ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಮುಸಲ್ಮಾನರು ಎಂದಿನಂತೆ ಸಮಾಜವಾದಿ ಪಕ್ಷದ ಬೆನ್ನೆಲುಬಾಗಿದ್ದರು.
ಆದರೆ ಬಿಜೆಪಿ ಬಹುಸಂಖ್ಯೆಯ ಹಿಂದೂಗಳನ್ನು ತನ್ನೆಡೆಗೆ ಸೆಳೆದಿತ್ತು. ಕಳೆದ ಮೂರು ಚುನಾವಣೆಗಳಿಂದಲೂ ಬಿಜೆಪಿ ರಚಿಸುತ್ತಿರುವ ಹಿಂದೂ ರಾಜಕೀಯ ಬಹುಸಂಖ್ಯೆ ಈ ಚುನಾವಣೆಗಳ ಮೂಲಕ ದೀರ್ಘ ಕಾಲ ಉಳಿಯುವ ಒಂದು ವಿದ್ಯಮಾನವಾಗಿ ಗೋಚರಿಸಿದೆ. ಗುಜರಾತ್ನಂತೆಯೇ ಉತ್ತರಪ್ರದೇಶವೂ ಈಗ ಬಿಜೆಪಿ ಪ್ರಭಾವಕ್ಕೊಳಗಾದ ರಾಜ್ಯವಾಗಿದೆ. ಇಲ್ಲಿನ ರಾಜಕೀಯ ಸಾಮಾನ್ಯ ಪ್ರಜ್ಞೆಯಲ್ಲಿ ಹಿಂದೂ ಬಹುಸಂಖ್ಯಾವಾದ ಆಳವಾಗಿ ಬೇರೂರಿದೆ.
(ಲೇಖಕರು ರಾಜಕೀಯ ಸಂಶೋಧಕ ಹಾಗೂ ಅಂಕಣಕಾರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

