ದಿನದ ಸುದ್ದಿ
ಜಾಹಿರಾತು ಪ್ರಚಾರ ; ಚುನಾವಣಾ ಕಣ್ಗಾವಲು ಸಮಿತಿ ಅನುಮತಿ ಕಡ್ಡಾಯ
ಸುದ್ದಿದಿನ, ಬೆಂಗಳೂರು : ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಇದೇ 10 ರಂದು ನಡೆಯಲಿದ್ದು, 48 ಗಂಟೆಗಳ ಮೊದಲು ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಮಾಧ್ಯಮ, ಮುದ್ರಣ ಮಾಧ್ಯಮ ಸೇರಿದಂತೆ ಎಲ್ಲ ವಾಹಿನಿ ಮತ್ತು ಇತರ ಯುಟ್ಯೂಬ್ಗಳಲ್ಲಿ ಬರುವ ಜಾಹಿರಾತಿಗೆ ಪೂರ್ವ ಅನುಮತಿ ಕಡ್ಡಾಯ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಮತದಾನದ 48 ಗಂಟೆಗಳ ಮೊದಲು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವ ಜಾಹಿರಾತಿಗೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ನಿಯಮ 126ರ ಅನ್ವಯ ಚುನಾವಣಾ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅನುಮತಿ ಇಲ್ಲದೇ ಪ್ರಚುರ ಪಡಿಸುವ ಜಾಹಿರಾತುದಾರರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
ಇದೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಂಜೆ 6 ಗಂಟೆ 30 ನಿಮಿಷದ ವರೆಗೆ ಯಾವುದೇ ರೀತಿಯ ಎಕ್ಸಿಟ್ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ. ಹಾಗೂ ಚರ್ಚೆ ವಿಶ್ಲೇಷಣೆಗೆ ಅವಕಾಶವಿರುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಇದೇ 8 ರಂದು ಸಂಜೆ 6 ಗಂಟೆಯಿಂದ ಇದೇ 10 ರಂದು ಸಂಜೆ 6.30ರವರೆಗೆ ಅಥವಾ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ನಿರ್ಬಂಧ ಮುಂದುವರೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕಣ್ಗಾವಲು ಸಮಿತಿಯಿಂದ ಜಾಹಿರಾತಿನ ಅನುಮತಿ ಪಡೆಯಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243