ದಿನದ ಸುದ್ದಿ
ಹಳೇಬಿಸಲೇರಿ ಎನ್ ಎಸ್ ಎಸ್ ಶಿಬಿರ | ಅಗ್ನಿಶಾಮಕದಳದಿಂದ ಅಣಕು ಪ್ರದರ್ಶನ
ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಹಳೇಬಿಸಲೇರಿ ಗ್ರಾಮದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಬುಧವಾರ ಅಗ್ನಿ ಅವಘಡ ತಡೆಗಟ್ಟುವಿಕೆಯಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಕುರಿತು ಅಣಕು ಪ್ರದರ್ಶನ ನೀಡಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಮುದಹದಡಿ ಗ್ರಾಮ ಪಂಚಾಯಿತಿ ಮತ್ತು ಹಳೆಬಿಸಲೇರಿ ಹಾಗೂ ದುರ್ಗಾಂಬಿಕ ಕ್ಯಾಂಪ್ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ಶಿಬಿರದಲ್ಲಿ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಮುನಿಸ್ವಾಮಿ ಅವರು ಮಾತನಾಡಿದರು.
ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಮುನಿಸ್ವಾಮಿ ಮಾತನಾಡಿ, ರಾಸಾಯನಿಕ ಪ್ರಕ್ರಿಯೆಗಳಿಂದ ಹುಟ್ಟಿಕೊಳ್ಳುವುದನ್ನು ಬೆಂಕಿ ಎನ್ನಲಾಗುವುದು. ನಾನಾ ವಸ್ತುಗಳಿಗೆ ತಗಲುವ ಬೆಂಕಿಯನ್ನು ಬೇರೆ ಬೇರೆ ವಿಧಗಳಲ್ಲಿ ನಂದಿಸಲಾಗುತ್ತದೆ ಎಂದರು.
ಎಲ್ಲದಕ್ಕೂ ನೀರು ಬಳಕೆ ಮಾಡುವುದು ಯೋಗ್ಯವಲ್ಲ. ಕೆಲ ಬಾರಿ ನೀರಿನಿಂದ ಕೂಡ ಅಗ್ನಿ ಹೆಚ್ಚಾಗುವ ಸಂಭವ ಇರುತ್ತವೆ. ಸಾರ್ವಜನಿಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ 108ಗೆ ಕರೆ ಮಾಡಬಹುದು, ಅಲ್ಲಿಂದ ಅಗ್ನಿ ಶಾಮಕದಳಕ್ಕೆ ಮಾಹಿತಿ ದೊರೆಯುತ್ತದೆ ಎಂದರು. ಅಗ್ನಿ ಶಾಮಕ ಸಿಬ್ಬಂದಿ, ಅಣಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತು.
ಸಹ ಪ್ರಾಧ್ಯಾಪಕ ಡಾ.ಕೆ ನಾರಾಯಣ ಸ್ವಾಮಿ ಅವರು ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕುಂದೂರುಮುರಿಗೆಪ್ಪ ಸ.ಹಿ. ಪ್ರಾ. ಶಾಲಾ ಕಟ್ಟಡದ ಮೊದಲ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು ಮತ್ತು ಲೇಖನಸಾಮಾಗ್ರಿಗಳ ವಿತರಿಸಲಾಯಿತು. ಎನ್ ಎಸ್ ಎಸ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಸವಿತಾ ಮೇಗಳಮನಿ, ಸಹಾಯಕ ಪ್ರಾಧ್ಯಾಪಕಿ ವಿಶಾಲಾಕ್ಷಿ ಸಿ.ಎಸ್, ಡಾ.ಪ್ರಭು ಹಾಗೂ ಬಿಸಲೇರಿ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243