ದಿನದ ಸುದ್ದಿ

ಮೊಳಗಿತು ಕನ್ನಡದ ಕಹಳೆ : ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ

Published

on

ಸುದ್ದಿದಿನ,ಧಾರವಾಡ : ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.

ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಹಾಗೂ ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ,ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಕಸಾಪ ಅಧ್ಯಕ್ಷ ಮನು ಬಳಿಗಾರ,ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ,ಶಾಸಕರಾದ ಶ್ರೀನಿವಾಸ ಮಾನೆ,ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ನಂತರ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿಗಳು ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಗೌರವಪೂರ್ವಕವಾಗಿ ಆಸೀನರನ್ನಾಗಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರೋಮಾಂಚನಗೊಳಿಸಿದ ಕಹಳೆಗಳ ನಾದ

ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ ೨೫ ಕ್ಕೂ ಹೆಚ್ಚು ಕಹಳೆಗಳ ನಾದ ನೆರದ ಸಹಸ್ರಾರು ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಿತು.
ಬಾನೆತ್ತರದಲ್ಲಿ ಹಾರಾಡಿದ ಕನ್ನಡ ಧ್ವಜ ಸಂಕೇತಿಸುವ ಬಲೂನುಗಳು ಚಿತ್ತಾರ ಮೂಡಿಸಿದವು.ಪೂರ್ಣ ಕುಂಭಹೊತ್ತ ಮಹಿಳೆಯರು, ಡೊಳ್ಳು, ಸೋಮನ ಕುಣಿತ,ವೀರಗಾಸೆ,ಜಗ್ಗಲಿಗೆ,ಕೋಲಾಡ,ಗೊಂಬೆ ಕುಣಿತ,ನಗಾರಿ ಮತ್ತಿತರ 60 ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣ ವಿದ್ಯಾನಗರಿಯ ರಸ್ತೆಗಳಲ್ಲಿ ಕನ್ನಡದ ಘೋಷವನ್ನು ಸಾರುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version