ದಿನದ ಸುದ್ದಿ
ಪ್ಲೀಸ್ ಸಿದ್ದರಾಮೋತ್ಸವ ಅನ್ನಬೇಡಿ : ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ಇದು
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಆಗಸ್ಟ್ 3ರಂದು ಏರ್ಪಡಿಸಿರುವುದು ಸಿದ್ದರಾಮೋತ್ಸವ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75 ನೇ ಜನುಮದಿನದ ಅಮೃತ ಮಹೋತ್ಸವ. ನಾವು ಯಾರೂ ಸಿದ್ದರಾಮೋತ್ಸವವೆಂದು ಎಲ್ಲಿಯೂ ಹೇಳಿಲ್ಲ. ಇಂಥ ಐತಿಹಾಸಿಕ ಸಮಾರಂಭದ ಬಗ್ಗೆ ಏನೆನೆಲ್ಲಾ ಬರುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದು, ಅಮೃತ ಮಹೋತ್ಸವದ ಸಮಯ. ಸಿದ್ದರಾಮಯ್ಯರು ಈ ನಾಡು ಕಂಡ ಶ್ರೇಷ್ಠ ರಾಜಕಾರಣಿ. ಇಲ್ಲಸಲ್ಲದ ವದಂತಿ ಹಬ್ಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ನಾಯಕರಾದ ಹೆಚ್. ಸಿ. ಮಹಾದೇವಪ್ಪ, ಬಸವರಾಜ ರಾಯರೆಡ್ಡಿ, ಬಿ. ಎಲ್. ಶಂಕರ್, ಕೆ. ಎನ್. ರಾಜಣ್ಣ, ಎಸ್. ಎಸ್.
ಮಲ್ಲಿಕಾರ್ಜುನ್, ಹನುಮಂತರಾಯ ಸೇರಿದಂತೆ ಬಹುತೇಕ ನಾಯಕರು ಇದು ಪಕ್ಷದ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮ ಅಲ್ವೇ ಅಲ್ಲ. ಆಗಸ್ಟ್ 3 ರಂದು ದಾವಣಗೆರೆ – ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ
ಶಾಮನೂರು ಶಿವಶಂಕರಪ್ಪರ ಒಡೆತನದ ಸುಮಾರು 50 ಎಕರೆ ಜಾಗವಾದ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉದ್ಘಾಟನೆ
ನೆರವೇರಿಸಲಿದ್ದಾರೆ. ಸುಮಾರು ಆರರಿಂದ ಏಳು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬಿ. ಎಲ್. ಶಂಕರ್ ಮಾತನಾಡಿ ಸಿದ್ದರಾಮಯ್ಯರ ಹುಟ್ಟು ಹಬ್ಬ ನೆಪವಾಗಿದ್ದರೂ, ಕಾಂಗ್ರೆಸ್ ಪಕ್ಷವು ದೇಶಕ್ಕೆ ನೀಡಿರುವ ಕೊಡುಗೆ, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ನೀಡಿರುವ ಕೊಡುಗೆಗೆಳು, ಜಾತ್ಯಾತೀತತೆಗೆ ಬಂದ
ಅಪಾಯ, ಸಂವಿಧಾನ ಅಡಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ, ಸಂವಿಧಾನಕ್ಕೆ ಆಗುತ್ತಿರುವ ಅಪಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಬೃಹತ್ ಸಮಾವೇಶದಲ್ಲಿ ಚಿಂಥನ ಮಂಥನ ನಡೆಯಲಿದೆ. ಪಕ್ಷದ ಬಾವುಟ ಇರುವುದಿಲ್ಲ. ಆದ್ರೆ, ಶೇಕಡಾ 90 ರಷ್ಟು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಯಾವುದೇ
ಗೊಂದಲ ಇಲ್ಲ. ಇನ್ನೆರಡು ದಿನಗಳಲ್ಲಿ ನಾವೆಲ್ಲರೂ ಸೇರಿ ಶಿವಕುಮಾರ್ ಅವರಿಗೆ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯರ 75 ನೇ ಅಮೃತ ಮಹೋತ್ಸವ ಬೇರೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವುದಿಲ್ಲ. ವ್ಯಕ್ತಿ ವೈಭವೀಕರಣ, ವಿಜೃಂಭಣೆ ಮಾಡುವ ಉದ್ದೇಶ ಇಲ್ಲ. ಸುಮಾರು 40 ವರ್ಷಗಳ ಕಾಲ ರಾಜಕಾರಣದಲ್ಲಿ
ಅನುಭವ ಹೊಂದಿರುವ ಸಿದ್ದರಾಮಯ್ಯರು ನೀಡಿರುವ ಕೊಡುಗೆ ಅಪಾರ. ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಜನಪರ ಕಾರ್ಯಕ್ರಮಗಳು, ಸಾಧನೆಗಳು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ
ವರ್ಗದವರಿಗೆ ನ್ಯಾಯ ನೀಡಿದ ಶ್ರೇಯ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇನ್ನು ಸಮಿತಿಯ ಅಧ್ಯಕ್ಷ ಕೆ. ಎನ್. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯರು ಎಂದಿಗೂ ಅದ್ಧೂರಿಯಾಗಿ ಜನುಮದಿನ ಆಚರಿಸಿಕೊಂಡವರಲ್ಲ. ಶುಭ ಸಂದರ್ಭದಲ್ಲಿ ಪಕ್ಷದ ಯಶಸ್ಸು, ಅವರ ಯಶಸ್ಸಿಗಾಗಿ ಕಾರ್ಯಕ್ರಮ
ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಹರಿಪ್ರಸಾದ್ ಅವರು ಭಾಗವಹಿಸಲಿದ್ದಾರೆ ಎಂದು
ಹೇಳಿದರು.
ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕಿಂಗ್ಸ್ ಕೋರ್ಟ್ ನಲ್ಲಿ ಸಮಿತಿಯ ಗೌರವಾಧ್ಯಕ್ಷ ಆರ್. ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದೇವೆ. ಈ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರನ್ನು ಆಹ್ವಾನ ಮಾಡಿದ್ದೇವೆ. ಈ ಸಭೆಯಲ್ಲಿ ಸಿದ್ದರಾಮಯ್ಯ, ಬಿ. ಕೆ. ಹರಿಪ್ರಸಾದ್, ಶಿವಕುಮಾರ್ ಸೇರಿದಂತೆ ಎಲ್ಲರೂ ಉಪಸ್ಥಿತರಿರಲಿದ್ದಾರೆ. ಯಶಸ್ಸಿಗೆ ಮತ್ತು ಯಾವ ರೀತಿ ಇರಬೇಕು ಎಂಬ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವ ಎಂಬುದು ಮಾಧ್ಯಮದ, ಇನ್ನೊಬ್ಬರು ಮಾಡಿರುವುದು ಎಂದರು.
ಬಸವರಾಜ ರಾಯರೆಡ್ಡಿ ಮಾತನಾಡಿ, ಇದು ವ್ಯಕ್ತಿ ಪೂಜೆ ಅಲ್ಲ, ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದರೆ ಅದನ್ನು ಯಾರೂ ನಂಬಬಾರದು. 60 ವರ್ಷ ಆದರೆ ಷಷ್ಠಾಬ್ದಿ ಅಂತಾ ಕರೆಯುತ್ತಾರೆ. ಸಿದ್ದರಾಮಯ್ಯರ
ಆತ್ಮೀಯ ಸ್ನೇಹಿತರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನಪರವಾದ ನಾಯಕ. ಎಲ್ಲಾ ವರ್ಗದವರು ಅಭಿಮಾನಿಗಳಿದ್ದಾರೆ. ಕೆಲ ವರ್ಗದವರು, ಜನರು ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ನಾವೇ ಬೇಡ ಎಂದೆವು. ಎಲ್ಲಾ ವರ್ಗದ ಜನನಾಯಕ ಆದ ಕಾರಣ ಎಲ್ಲಾ ಸಮುದಾಯದವರೂ ಸೇರಿಕೊಂಡಿದ್ದೇವೆ. ಅಭಿಮಾನದಿಂದ ಮಾಡುತ್ತಿದ್ದೇವೆ. ಆರ್. ವಿ. ದೇಶಪಾಂಡೆ ಅವರು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಮಹಾದೇವಪ್ಪ ಅವರು ಸ್ವಾಗತ ಸಮಿತಿ ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವರು ಇದ್ದಾರೆ ಎಂದು ವಿವರಿಸಿದರು.
ಹೆಚ್. ಸಿ. ಮಹಾದೇವಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಒಬ್ಬ ನಾಯಕನ ಹುಟ್ಟುಹಬ್ಬ ಆಚರಣೆ ಮಾಡಿದ ನಿದರ್ಶನ ಇಲ್ಲ. ಸಾರ್ವಜನಿಕ ಜೀವನಕ್ಕೆ ಬರುವ ಮೊದಲೇ ಯುವಜನ ಸಮಾಜವಾದಿ ಸಮಾಜದ ರಾಜ್ಯ
ಮುಖಂಡರಾಗಿ, ಸಮಾಜವಾದದ ಸಿದ್ಧಾಂತವನ್ನು ಜನರಲ್ಲಿ ಬಿತ್ತಲು ಶ್ರಮಿಸಿದರು. ಪ್ರೊ. ನಂಜುಂಡಸ್ವಾಮಿ ಅವರ ಜೊತೆ ರೈತ ಚಳವಳಿಯಲ್ಲಿ ಪಾಲ್ಗೊಂಡವರು. ಸಮಗ್ರ ಬದಲಾವಣೆಗೆ ಕರೆಕೊಟ್ಟ ಜಯಪ್ರಕಾಶ್ ನಾರಾಯಣ್ ರ
ಜೊತೆ ಸಕ್ರಿಯವಾಗಿ ಭಾಗಿಯಾದವರು. ಸಮಸಮಾಜದ ನಿರ್ಮಾಣ ಮಾಡಿ ಸಮೃದ್ಧ ಕರ್ನಾಟಕ ಕಟ್ಟಲು ಹೋರಾಡಿದವರು. ಸಾಮಾಜಿಕ ಕಾಳಜಿ ಮೂಲಕ ಎಲ್ಲರ ಜನಪ್ರಿಯ ನಾಯಕರಾದವರು ಸಿದ್ದರಾಮಯ್ಯ ಅವರು ಎಂದು ಹೇಳಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವದ ಯಶಸ್ಸಿಗೆ ಮಾಜಿ ಸಚಿವರು, ರಾಜ್ಯಮಟ್ಟದ ನಾಯಕರೆಲ್ಲರೂ ಸೇರಿ ಈ ಸಮಾರಂಭ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಅವರಿಗೆ ಸಲ್ಲಬೇಕಾದ ನಮ್ಮ ಕಡೆಯ ಸಣ್ಣದಾದ ಕೆಲಸ. ಸಿಎಂ ಆದಾಗ ಮತ್ತು ಇದಕ್ಕಿಂತ ಮುಂಚೆ ಯಾವ ರೀತಿಯ ರಾಜಕೀಯ ಮಾಡಬೇಕೆಂದು ತೋರಿಸಿಕೊಟ್ಟವರು. ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸಿದ ನಾಯಕ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243