ಸಿನಿ ಸುದ್ದಿ

‘Article 15’ ಒಂದು ಅಪರೂಪದ ಚಿತ್ರ

Published

on

ನುಭವ ಸಿನ್ಹಾ ನಿರ್ದೇಶನದ ಆರ್ಟಿಕಲ್15 ಹಿಂದಿ ಚಲನಚಿತ್ರ ಇಂದಿನ ಸಮಾಜೋ-ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿದ ಕಹಿವಾಸ್ತವದ ಚಿತ್ರ. ಮೊಬ್ ಲಿಂಚಿಂಗ್ ,ದಲಿತ ಯುವಕರನ್ನು ತುಂಬಿದ ಬಾಜಾರಿನಲ್ಲಿ ವಾಹನದ ಹಿಂಬದಿಗೆ ಕಟ್ಟಿ ಥಳಿಸುವ, ಇಬ್ಬರು ದಲಿತ ಅಲ್ಪವಯಸ್ಸಿನ ಯುವತಿಯರನ್ನು ಎಳೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಿ ಜೀವಂತ ಮರಕ್ಕೆ ನೇತು ಹಾಕಿದ ಸತ್ಯ ಘಟನೆಯ ಆಧರಿಸಿದ ಸಮಕಾಲೀನ ವ್ಯಂಗ್ಯಾತ್ಮಕ ಚಿತ್ರ. ಕೆಲವು ಕಡೆ ಈ ಚಿತ್ರವನ್ನು ಕಾನೂನು,ಸುವ್ಯವಸ್ಥೆ ಹೆಸರಡಿ ನಿಷೇಧಿಸಲಾಗಿದೆ ಎಂಬ ವರದಿಯಿದೆ.

ಬಿಗಿಯಾದ ಚಿತ್ರಪಟಕಥೆಯ ನಿರೂಪಣೆ, ಚುರುಕಾದ ಎದೆಗಿಳಿವ ಕತ್ತಿಅಲಗಿನ ಸಂಭಾಷಣೆ, ದೃಶ್ಯ ಕಾವ್ಯದಂತಿರುವ ಛಾಯಾಗ್ರಹಣ-ಇವು ಇಡೀ ಚಿತ್ರವನ್ನು ಕುತೂಹಲದಿಂದ ವೀಕ್ಷಿಸುವಂತೆ ಪ್ರೇರೇಪಿಸುತ್ತವೆ. ದಟ್ಟ ಪರಿಣಾಮವನ್ನೂ ಉಂಟು ಮಾಡುತ್ತದೆ.ಚಿತ್ರ ಆರಂಭವಾಗುವುದು ಒಂದು ಕ್ರಾಂತಿ ಗೀತೆಯ ಹಾಡಿನ ಮೂಲಕ ಮತ್ತು ಅಂತ್ಯವಾಗುವುದು ಒಂದು ರ್ಯಾಪ್ ಹಾಡಿನಿಂದ. ಇದರ ಮಧ್ಯ ನಡೆವ ಪ್ರಸಂಗಗಳು ಮಾತ್ರ ಬೆಚ್ಚಿಬೀಳುಸುತ್ತ ಸಾಗುತ್ತವೆ.

ಉತ್ತರಪ್ರದೇಶದ ಒಂದು ಠಾಣೆಗೆ ಒಬ್ಬ ಯುವ ಅಡಿಷನಲ್ ದಕ್ಷ ಪೋಲಿಸ್ ಆಫೀಸರ್ ಸೇವೆಗೆ ನಿಯುಕ್ತನಾಗುತ್ತಾನೆ. ಆಗತಾನೆ ಸವರ್ಣಿಯವರಿಂದ ದೌರ್ಜನ್ಯಗಳು ನಡೆದಿರುತ್ತದೆ. ಜನವೂ ಸಹ ಇದು ಸರ್ವೇ ಸಾಮಾನ್ಯ ಎಂದು ಕುಂಡಿ ಹೊಸೆಯುತ್ತ ಬದುಕುತ್ತಿರುತ್ತಾರೆ. 25 ರೂಪೈಗೆ ದುಡಿಯುತ್ತಿದ್ದ ಮೂರು ಯುವತಿಯರು ಕೇವಲ3 ರೂಪೈ ಹೆಚ್ಚಿಗೆ ಕೇಳಿದ್ದಕ್ಕೆ ಅವರನ್ನು ಹೊತ್ತೊಯ್ದು ಸತತ ಆರುದಿನ ಗ್ಯಾಂಗ್ ರೇಪಿನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಸಿ ಅವರ ಸಮುದಾಯದ ಜನರಲ್ಲಿ ಭಯ ಹುಟ್ಟಿಸಲು ಮೂವರಲ್ಲಿ ಇಬ್ಬರನ್ನು ಊರಗಸಿಯ ಮರಕ್ಕೆ ಜೀವಂತ ನೇಣಿಗೆ ಹಾಕುತ್ತಾರೆ ಮತ್ತು ಅವರು ಖುಲ್ಲಮ್ ಖುಲ್ಲಾ ಯಾವ ಕಾನೂನಿನ ಭಯವಿಲ್ಲದೆ ಅಲೆಯುತ್ತಿರುತ್ತಾರೆ. ಒಬ್ಬಳು ಮಾತ್ರ ನಿಗೂಢವಾಗಿ ಕಣ್ಮರೆಯಾಗಿರುತ್ತಾಳೆ.
ಆ ದಲಿತ ತಂದೆಯರನ್ನು ಠಾಣೆಯಲ್ಲಿ ಕೇಳುವವರೇ ಇಲ್ಲ. ಇಡೀ ಕಾನೂನು ವ್ಯವಸ್ಥೆ ಉಚ್ಚಕುಲದವರ ಪರವಾಗಿ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ದಲಿತ,ಒಬಿಸಿ ಮುಂತಾದವರು ಇಲ್ಲಿ ಪ್ರಾಣಿ ಸಮ. ಅದಕ್ಕೆ ಆ ಊರ ಪಕ್ಕದ ” ಸುವ್ವರ್ ಕೀ ತಾಲಾಬ್” (ಹಂದಿಗಳನ್ನು ತೊಳೆಯುವವರ ಕೆರೆ) ಒಂದು ರೂಪಕವಾಗಿದೆ.

ಇಂಥ ಬೆಚ್ಚಿಸುವ ಸಾಮಾಜಿಕ,ರಾಜಕೀಯ ವರ್ತಮಾನದಲ್ಲಿ ಯುವ ಅಧಿಕಾರಿಗೆ ಇಲ್ಲಿಯ ರೇಪ್ ಘಟನೆ ಸವಾಲಾಗಿ ಕಾಣುತ್ತದೆ.ಆಗ ಒಟ್ಟು ವ್ಯವಸ್ಥೆಯ ಒಂದೊಂದು ಪದರುಗಳು ಬಿಚ್ಚತೊಡಗುತ್ತವೆ. ಸರಕಾರಿ ವ್ಯವಸ್ಥೆಯ ಅಂಗವಾದ ಕಾನೂನು ರಕ್ಷಕರು ಸಹ ತಮ್ಮ ಕಚೇರಿಯೊಳಗೆ ಜಾಠ್,ಯಾದವ,ಠಾಕೂರ್, ಚಮ್ಮಾರ್,ಒಬಿಸಿ,ಎಸ್.ಸಿ; ಎಸ್.ಟಿ ಎಂದು ಶ್ರೇಣೀಕೃತ ಮಾನಸಿಕತೆಯಲ್ಲಿ ಕುಂಡಿ ಹೊಸೆಯುತ್ತ ಒಣಪ್ರತಿಷ್ಠೆಯ ಹುಸಿ ಬದುಕು ಅರಸಿರುತ್ತಾರೆ.ಇಂಥವರ ಮೇಲಧಿಕಾರಿಯಾಗಿ ಬಂದ ಆ ಯುವ ಅಧಿಕಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುತ್ತಾನೆ. ಅವನು ಶಹರಲಿ ಕನಸಿದ ನ್ಯೂಇಂಡಿಯಾ ಒಂದು ಅಣಕು ಆಗಿ ಇಲ್ಲಿ ಭಾಸವಾಗುತ್ತದೆ.ಇನ್ನೂ ಫ್ಯುಡಲ್ ಭ್ರಷ್ಟ ತೆಯ ಸಾಂಪ್ರದಾಯಿಕ ಒಲ್ಡ್ ಇಂಡಿಯಾದ ಭಯಾನಕ ಪಳೆಯುಳಿಕೆಗಳು ದಿಗಿಲುಗೊಳುಸುತ್ತಿರುತ್ತವೆ.

ದಲಿತರ ಪರ ಹೋರಾಡುವ,ನ್ಯಾಯ ಕೊಡಿಸಲು ಧಡಪಡಿಸುವ ದಲಿತ ಮಹಿಳೆ ಗೌರವ ಮತ್ತು ಆಕೆಯ ಪ್ರಿಯಕರರ ಹೋರಾಟಗಳು, ದಲಿತ ಮತ್ತು ಬ್ರಾಹ್ಮಣ ರಾಜಕೀಯ ನಾಯಕರು ಒಂದಾಗಿ “ಹಿಂದು ಏಕ” ಘೋಷಣೆಯ ಪರಿಕಲ್ಪನೆಯ ರಾಜಕೀಯ ತಂತ್ರ, ಪ್ರತಿತಂತ್ರಗಳ ಸಂಘರ್ಷ, ನ್ಯಾಯ ದೊರೆಕಿಸುವಲ್ಲಿ ನಿರ್ಣಾಯಕ ಹಂತ ತಲುಪಿದಾಗ ರಾಜಕೀಯ ಒತ್ತಡದಿಂದ ಸಿಬಿಐ ತನಿಖೆ ಎದುರಿಸುವ ದಕ್ಷ ಯುವ ಅಧಿಕಾರಿಯ ತಳಮಳ, ತಲ್ಲಣಗಳು.ಹೀಗೆ ಚಿತ್ರವು ಒಂದು ಆಳವಾದ ವಿಷಾದ ಗೀತೆಯಾಗಿ ಹೊರಹೊಮ್ಮಿದೆ. ಕೊನೆಗೂ ಅಪರಾಧಿಗಳ ಪತ್ತೆಹಚ್ಚುವಲ್ಲಿ ಯಶಸ್ಸು ಕಂಡು ತಲೆಮರೆಸಿಕೊಂಡಿದ್ದ ಮೂರನೆಯವಳನ್ನು ಶೋಧಿಸಿ ಜೀವ ಸುಧಾರಕನಾಗಿ ಕಾಣುವ ನಾಯಕನಿಗೆ ಅಚ್ಚರಿ ಕಾದಿತ್ತು. ಅಪರಾಧ ಎಸಗಿದವರಲ್ಲಿ ಪೋಲಿಸ್ ಇಲಾಖೆಯ ಹೆಸರುಗಳು ಇವೆ ಎಂಬುದು.ಇದು ಬೆಳಕಿಗೆ ಬಂದಾಗ ಇಡೀ ಚಿತ್ರವು ವ್ಯವಸ್ಥೆಯ ದರುಶನವಾಗಿ ಸ್ಫೋಟಗೊಳ್ಳುತ್ತದೆ.ಬಹುಜನ ಸಮುದಾಯದವರ ಕಣ್ತೆರೆಸಲು ಒಬ್ಬ ಬ್ರಾಹ್ಮಣ ಅಧಿಕಾರಿಯೇ ರಿಫಾರ್ಮರ್ ಆಗಿ ಬರಬೇಕಾಯಿತೆ! ಎನ್ನುವ ಒಂದು ಪ್ರಶ್ನೆ ಎದ್ದೇಳುತ್ತದೆ. ಆದರೆ ಇದು ವಾಸ್ತವವೂ ಹೌದು ಎಂದು ಒಪ್ಪಲೂಬೇಕಾಗುತ್ತದೆ.

ಡಿ.ಎಸ್.ಚೌಗಲೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version