ಅಸಾಮಾನ್ಯಳು

ಅನಾಥ ಮಕ್ಕಳ ಸ್ವಾವಲಂಬಿ ಬದುಕಿನ ಆಶ್ರಯದಾತೆ ಪ್ರೇಮಾ ನಾಗರಾಜ್

Published

on

ತಾವೇ ಹೆತ್ತ ಒಂದೋ – ಎರಡೋ ಮಕ್ಕಳನ್ನು ಸಹ ಸಾಕಲಾಗದೆ ಬೀದಿಗೆ ಬಿಡುವ ಅದೆಷ್ಟೋ ತಂದೆ ತಾಯಿಯರಿರುವ ಈ ಸಮಾಜದಲ್ಲಿ, ಹಲವು ಮಕ್ಕಳಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡಲು ಮುಂದೆ ಬರುವವರಿದ್ದಾರೆಯೇ ಎಂದು ಊಹಿಸಲು ಸಹ ಅಸಾಧ್ಯವಾದ ಕಾಲವಿದು. ಅದರಲ್ಲೂ ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಸ್ವತಂತ್ರವಾಗಿ ಯೋಚಿಸಲು ಸಹ ಭಯಪಡುವ ಮಹಿಳೆಯರ ನಡುವೆ ಪರರ ಮಕ್ಕಳ ಪೋಷಣೆಯ ಜವಬ್ದಾರಿ ಹೊತ್ತು ಕೃತಿಗಿಳಿವ ಹೃದಯ ವೈಶಾಲ್ಯತೆ ಅದೆಷ್ಟು ಸ್ತ್ರಿಯರಿಗಿರಲು ಸಾಧ್ಯ…!?

ನಮ್ಮ ಇಂತಹ ಅದೆಷ್ಟೋ ಸಂದೇಹ ಮತ್ತು ಪ್ರಶ್ನೆಗಳಿಗೆ ಉತ್ತರವೆಂಬಂತೆ ಹಾಗೂ ಊಹೆಗೂ ನಿಲುಕದ ಮಾನವೀಯ ಮೌಲ್ಯವುಳ್ಳ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ದಾವಣಗೆರೆ ರಶ್ಮಿ ವಸತಿ ಶಾಲೆಯ ಶ್ರೀಮತಿ ಪ್ರೇಮಾ ನಾಗರಾಜ್. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರೇಮಾ ಅವರು, ಇಂಜಿನಿಯರ್ ಮುದೇಗೌಡ್ರು ಬಸವರಾಜಪ್ಪ ಹಾಗೂ ಸುಶೀಲಮ್ಮ ದಂಪತಿಗಳ ಸುಪುತ್ರಿ ಹಾಗೂ ದಾವಣಗೆರೆಯ ವೈದ್ಯರಾದ ಡಾ.ನಾಗರಾಜ ಅವರ ಧರ್ಮಪತ್ನಿ.

ಓದಿದ್ದು ಬಿ.ಎ ಬಿ.ಇಡಿ ಮತ್ತು ಡಿಪ್ಲೋಮಾ ಇನ್ ಮಾಂಟೇಸರಿ.ಅನಾಥ ಮಕ್ಕಳ ಆಶಾ ಕಿರಣವಾದ ಶ್ರೀಮತಿ ಪ್ರೇಮಾ ಡಾ .ನಾಗರಾಜ್ ಅವರು, ಎಸ್.ಎಸ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 2 ವರ್ಷಗಳ ಹಿಂದೆ ನಿವೃತ್ತಿ ಹೊಂದಿರುವ ಪ್ರೇಮಾ ಅವರ ಪತಿ ಡಾ.ನಾಗರಾಜ್ ಅವರ ಸಹೋದರ ಡಾ.ಪಿ.ಸುರೇಂದ್ರ ಅವರು ಇಂಗ್ಲೆಂಡ್‍ನಲ್ಲಿ ನೆಲೆಸಿದ್ದಾರೆ. 1999 ನೇ ಇಸ್ವಿಯ ಆ ಒಂದು ದಿನ ಅವರ ಬದುಕಿನಲ್ಲಿ ಕರಾಳ ಛಾಯೆ ಮೂಡಿಸಿ ಮಾಯವಾಯಿತು. ಡಾ.ಸುರೇಂದ್ರರ ಮಗಳು ರಶ್ಮಿಯನ್ನು ಕಾರ್ ಅಪಘಾತದ ನೆಪದಲ್ಲಿ ಆ ವಿಧಿ ಎಳೆದೊಯ್ದಿತ್ತು. ಮಗಳನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದರೂ ಸುರೇಂದ್ರರ ಹೃದಯದಲ್ಲಿ ತಮ್ಮ ಮಗಳ ಹೆಸರಿನಲ್ಲಿ ತನ್ನ ದೇಶಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂಬ ಸಾಮಾಜಿಕ ಸೇವೆಯ ಕನಸೊಂದು ಚಿಗುರೊಡೆದಿತ್ತು. ಈ ಬಯಕೆಯನ್ನು ಅವರು ತಮ್ಮ ಸಹೋದರನ ಬಳಿ ಹಂಚಿಕೊಂಡರು. ಅಣ್ಣನ ಆ ಕನಸನ್ನು ನನಸು ಮಾಡುವ ಸಲುವಾಗಿ ದಾವಣಗೆರೆಯಲ್ಲಿ ರಶ್ಮಿ ಹೆಣ್ಣು ಮಕ್ಕಳ ವಸತಿಯುತ ಶಾಲೆಗೆ ಅಡಿಪಾಯ ಹಾಕಿದರು ಡಾ.ನಾಗರಾಜ್. ಆ ಅಡಿಪಾಯಕ್ಕೆ ಬುನಾದಿಯಾಗಿದ್ದಲ್ಲದೆ, ಅದರ ಮುನ್ನೆಡೆಗೂ ಸೇತು ಆದರು ಪ್ರೇಮಾ ಅವರು.

1999ರಲ್ಲಿ ಬಾಡಿಗೆ ಕಟ್ಟಡ ಒಂದರಲ್ಲಿ ಆರಂಭವಾದ ರಶ್ಮಿ ಶಾಲೆ ಇಂದು ದಾವಣಗೆರೆ ಹೊರವಲಯದಲ್ಲಿ ಪಿ.ಬಿ ರಸ್ತೆಯ ಜಿಲ್ಲಾಡಳಿತ ಭವನದ ಹತ್ತಿರ, ಜಿಎಂಐಟಿ ಕಾಲೇಜ್ ಬಳಿ ಕುಂದವಾಡ ಕೆರೆಗೆ ಕೂಡಿಕೊಳ್ಳುವ ಜಾಗವೊಂದರಲ್ಲಿ ಬೃಹತ್ ಸ್ವರೂಪ ತಾಳಿ ನಿಂತು ಅನೇಕ ಬಡ ಹೆಣ್ಣು ಮಕ್ಕಳ ಬಾಳನ್ನು ಬೆಳಗುತ್ತಿದೆ. ಆರಂಭದಿಂದ ಈವರೆಗೂ ಇದರ ನಿರ್ವಹಣೆಯ ಬಹುಪಾಲು ಜವಬ್ದಾರಿಯನ್ನು ಹೊತ್ತು ಅಲ್ಲಿಯ ಮಕ್ಕಳನ್ನು ತಾಯಿಯಂತೆ ಸಲಹುತಿದ್ದಾರೆ ಪ್ರೇಮಾ ಮೇಡಂ.

ಅನಾಥ ಮಕ್ಕಳ ಆಶ್ರಯ ತಾಣ – ರಶ್ಮಿ ಶಾಲೆ

ಅತ್ಯಂತ ಕಡು ಬಡವರು, ನಿರ್ಗತಿಕರು, ಅನಾಥರು, ತಂದೆ ಇದ್ದು ತಾಯಿ ಇಲ್ಲದ ಅಥವಾ ತಾಯಿ ಇದ್ದು ತಂದೆ ಇಲ್ಲದ ಏಕ ಪೋಷಕ ಬಡ ಹೆಣ್ಣು ಮಕ್ಕಳು ರಶ್ಮಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 250-300ಕ್ಕೂ ಅಧಿಕ ಹೆಣ್ಣು ಮಕ್ಕಳಿರುವ ಈ ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ವರ್ಷ 25 ಅರ್ಹ ಕಡು ಬಡ ಮಕ್ಕಳಿಗೆ 1ನೇ ತರಗತಿಗೆ ಪ್ರವೇಶಾತಿ ನೀಡುತ್ತಿದ್ದು, ಕಾರಣಾಂತರದಿಂದ ಖಾಲಿ ಉಳಿದಿದ್ದಲ್ಲಿ ಬಡ ಮಕ್ಕಳಿಗೆ ಇತರೆ ತರಗತಿಗಳಿಗೂ ಪ್ರವೇಶವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಪ್ರಸ್ತುತ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಬ್ಬ ವಿದ್ಯಾರ್ಥಿನಿ 79% ಕ್ಕೂ ಅಧಿಕ, 7 ಮಕ್ಕಳು 70% ಕ್ಕೂ ಅಧಿಕ ಹಾಗೂ 16 ಮಕ್ಕಳು 75 ಕ್ಕೂ ಅಧಿಕ ಶೇಕಡವಾರು ಅಂಕ ಗಳಿಸುವ ಮೂಲಕ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಮುಂದುವರೆಯಲಿ ಎಂಬ ಕಾರಣಕ್ಕಾಗಿ ಈ ಬಾರಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಪಿಯುಸಿ ಶಿಕ್ಷಣಕ್ಕೂ ಸಹ ನೆರವು ನೀಡಿದೆ ಈ ಶಾಲೆ. ಹಸಿರ ಹಾಸಿಗೆಯೊಳಗೆ ಆವೃತವಾಗಿರುವ ಸುಸಜ್ಜಿತ ಶಾಲಾ ಕಟ್ಟಡ, ಪ್ರತಿ ತರಗತಿಗೂ ಪ್ರತ್ಯೇಕ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್, ನಿರ್ಮಲ ಗಾಳಿ, ಬೆಳಕಿನಿಂದ ಕೂಡಿದ ಪ್ರಶಾಂತ ವಾತಾವರಣ, ಎಲ್ಲಾ ವಿದ್ಯಾರ್ಥಿನಿಯರ ಬಗ್ಗೆಯೂ ವೈಯಕ್ತಿಕ ಕಾಳಜಿ, ಸಿಸಿ ಟಿವಿಯ ಕಣ್ಗಾವಲು ಸೇರಿದಂತೆ ಅಕ್ಷರಶಃ ಹೈಟೆಕ್ ಮಾದರಿಯ ಸಕಲ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ಸಿಗುವ ಜೊತೆ ಪ್ರೇಮಾ ಅವರ ತಾಯ್ತನದ ಮಮತೆ, ನಾಗರಾಜ್ ಅವರ ತಂದೆಯ ಹಾರೈಕೆ – ಪ್ರೀತಿಯ ಪೋಷಣೆ ಸೇರಿದಂತೆ ಎಲ್ಲವೂ ಒಂದೇ ಸೂರಿನಡಿ ಸಿಗುತ್ತಿರುವಾಗ ಇಲ್ಲಿನ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡುವ ಮಾತಾದರೂ ಎಲ್ಲಿ ! ತಾವು ಅನಾಥರು ಅಥವಾ ಬಡವರೆಂಬ ಭಾವನೆ ಕೂಡ ಇಲ್ಲಿನ ಮಕ್ಕಳ ಮನಸಿನಲ್ಲಿ ಎಂದಿಗೂ ಸುಳಿಯದಂತೆ ಸದಾ ಜಾಗೃತಿ ವಹಿಸಿರುವುದರ ಹಿಂದೆ ಪ್ರೇಮಾ ಅವರ ಅಪಾರ ಕಾಳಜಿ ಮತ್ತು ಪರಿಶ್ರಮವಿದೆ.

ಅನಾಥರಿಗೆ ದಯೆ ಬದಲು ಸಹಕಾರ ನೀಡಬೇಕು

ಅನಾಥರು, ಬಡವರು, ಮತ್ತು ನಿರ್ಗತಿಕರಿಗೆ ದಯೆ, ಅನುಕಂಪ ತೋರಿದರೆ ಸಾಲದು. ಉಳ್ಳವರು ಅವರ ಜೀವನೋನ್ನತಿಗೆ ಕೈಲಾದ ಸಹಾಯ, ಸಹಕಾರದ ಹಸ್ತ ಚಾಚಬೇಕು. ಅವರ ಬದುಕಿನ ಸ್ಥಿತಿ ಸುಧಾರಣೆಗೆ ಸಲಹೆ, ಮಾರ್ಗದರ್ಶನವನ್ನು ಸಹ ನೀಡಿ ಅವರನ್ನು ಅಸಹಾಯಕ ಪರಿಸ್ಥಿತಿಯಿಂದ ಹೊರ ತರಬೇಕು ಎಂಬ ಉದಾತ್ತ ಚಿಂತನೆ – ದ್ಯೇಯೋದ್ದೇಶಗಳನ್ನು ಹೊಂದಿರುವ ಪ್ರೇಮಾ ನಾಗರಾಜ್ ದಂಪತಿಗಳು ಈ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸ್ವಾವಲಂಬಿ ಬದುಕಿನ ತರಬೇತಿಯ ವ್ಯವಸ್ಥೆ ಕೂಡ ಮಾಡಿದ್ದಾರೆ. ಆಟ – ಪಾಠ, ಯೋಗ, ಧ್ಯಾನ, ಸಾಂಸ್ಕøತಿಕ ಕಾರ್ಯಕ್ರಮಗಳು, ಉತ್ತಮ ಸಂಸ್ಕಾರ – ಸಂಸ್ಕøತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾದ ವಿವಿಧ ಕಾರ್ಯಾಗಾರಗಳು ಹಾಗೂ ಚಟುವಟಿಕೆಗಳ ಆಯೋಜನೆ ಜೊತೆ ಟೈಲರಿಂಗ್, ಎಂಬ್ರಾಯಿಡರಿ, ಕಸೂತಿಯಂತಹ ಸ್ವಾವಲಂಬಿತನ ರೂಢಿಸುವ ಚಟುವಟಿಕೆಗಳನ್ನು ಸಹ ಕಲಿಸಲಾಗುತ್ತಿದೆ.

ದುಡಿಮೆಯ ಹಣವೆಲ್ಲವೂ ಸೇವೆಗೆ ಮೀಸಲು

ಕುಕ್ಕವಾಡ ಗ್ರಾಮದ ಡಾ.ಡಿ ಪರ್ವತಪ್ಪ ಮತ್ತು ನಂಜಮ್ಮ ದಂಪತಿಗಳ ಕುಟುಂಬ ಹಿಂದಿನಿಂದಲೂ ಸದಾ ಸೇವೆಗೆ ಹೆಸರಾದ ಮನೆತನ. ತಾವು ದುಡಿದ ದುಡ್ಡಿನಲ್ಲಿ ಸಂತೃಪ್ತಿಯ ಜೀವನಕ್ಕೆ ಎಷ್ಟು ಬಳಸಬೇಕೋ ಅಷ್ಟನ್ನು ಹಿತ ಮಿತವಾಗಿ ಬಳಸಿ ಉಳಿದ ಹಣವನ್ನು ದಾನ – ಧರ್ಮ ಮತ್ತು ಸತ್ಕಾರ್ಯಕ್ಕೆ ಮೀಸಲಿಡಬೇಕು ಎಂಬ ಚಿಂತನೆ ನಂಜಪ್ಪನವರದಾಗಿತ್ತು. ಅಂತೆಯೇ ಅವರ ಮಕ್ಕಳಾದ ಡಾ.ಸುರೇಂದ್ರ, ಡಾ.ನಾಗರಾಜ್ ಹಾಗೂ ಅವರ ಸಹೋದರಿಯರು ಸೇರಿದಂತೆ ಕುಟುಂಬದ ಸರ್ವ ಸದಸ್ಯರು ಸಹ ಅದೇ ನಿಯಮವನ್ನು ಪಾಲಿಸುತ್ತಾ ರಶ್ಮಿ ಶಾಲೆಯನ್ನು ಇಂದಿಗೂ ಅದೇ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಒಮ್ಮೆ ಯೋಚಿಸೋಣ

ಈ ದುಬಾರಿ ಕಾಲದಲ್ಲಿ ಒಂದು ಕುಟುಂಬದ ಜವಬ್ದಾರಿ ನಿರ್ವಹಿಸುವುದೇ ಕಷ್ಟ. ಅಂಥದ್ರಲ್ಲಿ 250-300 ಮಕ್ಕಳ ಸಂಪೂರ್ಣ ಜವಬ್ದಾರಿ ಹೊತ್ತು ಶಿಕ್ಷಣ, ಊಟ – ಬಟ್ಟೆ, ವಸತಿಯ ಜೊತೆ ಎಲ್ಲವನ್ನೂ ಉಚಿತವಾಗಿಯೇ ನೀಡುತ್ತಾ ಸಾಕಿ ಸಲುಹುವುದೆಂದರೆ ಸುಲಭದ ಮಾತೇನು.., ನಿಜಕ್ಕೂ ಅದು ಅಚ್ಚರಿಯ ಸಾಹಸ ಮತ್ತು ಸಾಧನೆಯೇ ಸರಿ!. ಇದರ ಹಿಂದಿರುವ ಪ್ರೇಮಾ ಅವರ ಧೀ ಶಕ್ತಿ, ನಿರ್ವಹಣೆಯ ಕೌಶಲ್ಯ ಹಾಗೂ ಏನೇ ಸಂಕಷ್ಟಗಳು ಎದುರಾದರೂ ಸಹ ಧೈರ್ಯಗುಂದದೆ ಅಣ್ಣನಿಗೆ ಕೊಟ್ಟ ಮಾತನ್ನು ಪಾಲಿಸಲು ಆ ಸಂಸ್ಥೆಯನ್ನು ಕಟ್ಟಿ, ಬೆಳೆಸಿ ಅದರ ಅಸ್ತಿತ್ವ ಕಾಪಾಡುತ್ತಿರುವ ಅವರ ಪತಿ ಡಾ.ನಾಗರಾಜ್ ಅವರ ಆ ಕೆಚ್ಚೆದೆ ಔದಾರ್ಯ – ಆದರ್ಶಗಳು ಸಮಾಜಕ್ಕೆ ಮಾದರಿಯಲ್ಲದೇ ಮತ್ತೇನು…?

ಗೌರವ ಪುರಸ್ಕಾರ

ಶ್ರೀಮತಿ ಪ್ರೇಮಾ ಅವರ ನಿಸ್ವಾರ್ಥ ಸೇವೆ, ಹೆಣ್ಣು ಮಕ್ಕಳ ಬಗೆಗಿನ ಕಳಕಳಿ ಹಾಗೂ ಸ್ವಾವಲಂಬಿ ಬದುಕಿಗೆ ಆಸರೆಯಾಗಿರುವ ಅವರ ಸೇವೆಯ ತುಡಿತವನ್ನು ಗುರುತಿಸಿ ದಾವಣಗೆರೆ ಜಿಲ್ಲಾ ಸಮಾಚಾರ್ ಪತ್ರಿಕೆಯು ಅವರಿಗೆ “ 2017 ರ ವರ್ಷದ ವ್ಯಕ್ತಿ ” ಎಂಬ ಪುರಸ್ಕಾರ ನೀಡಿ ಗೌರವಿಸಿರುವ ಸ್ತುತ್ಯಾರ್ಹ ಕಾರ್ಯವನ್ನು ಇಲ್ಲಿ ಸ್ಮರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version