ನೆಲದನಿ
ಕಲೆಯೊಳಗೆ ಕಾಯಕ ಕಾಣುವ ಕಲಾವಿದ : ರವೀಂದ್ರ ಅರಳಗುಪ್ಪಿ ಅವರ ಕಲಾತ್ಮಕ ಬದುಕಿನ ಸುತ್ತ
ಭಾರತವು ವಿವಿಧತೆಯನ್ನು ಏಕತೆಯನ್ನು ಕಂಡ ನಾಡು. ಇಲ್ಲಿ ವಿಭಿನ್ನವಾದ ಸಂಸ್ಕøತಿ, ಆಚಾರ, ವಿಚಾರಗಳಿದ್ದರು ಕೂಡ ಈ ಎಲ್ಲಾ ಭಿನ್ನತೆಗಳು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡಿವೆ. ಇಂತಹ ಜೀವಪರ ಸಂಸ್ಕøತಿಯ ಭಾಗವಾಗಿ ಬೆಳೆದು ಬಂದಿರುವ ಕಲೆಯೂ ಕೂಡ ಸಮಕಾಲೀನ ಸಮಾಜದ ಹಲವಾರು ನೋವು, ನಲಿವುಗಳಿಗೆ ಸ್ಪಂದಿಸುತ್ತ ಬಂದಿದೆ. ಒಂದು ಕಲೆಯನ್ನು ಜೀವ ಚೈತನ್ಯದ ಪರವಾಗಿ ಸಿದ್ಧಗೊಳಿಸುವ ಜವಬ್ದಾರಿಯು ಒಬ್ಬ ಸೃಜನಶೀಲ ಕಲಾವಿದನ ಮೇಲೆ ನಿಂತಿರುತ್ತದೆ. ಆಯಾ ಕಲಾವಿದರ ಮನಸ್ಥಿತಿಗೆ ಅನುಗುಣವಾಗಿ ಕಲೆಯು ತನ್ನ ಬೆಳವಣಿಗೆಯನ್ನು ಕಂಡುಕೊಳ್ಳುತ್ತದೆ. ಕಲಾವಿದನು ತನ್ನ ಕಲೆಯನ್ನು ವ್ಯವಹಾರಿಕ ನೆಲೆಯಲ್ಲಿ ಮಾತ್ರ ಮುನ್ನಡೆಸಿದರೆ ಅದು ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವತ್ತ ಸಾಗುತ್ತದೆ. ಅದೇ ಕಲೆಯನ್ನು ಜೀವಪರವಾದ ಕಾಳಜಿಯೊಂದಿಗೆ ಬೆರೆಸಿ, ಸಮಾಜ ಸುಧಾರಣೆಗೆ ಮುಂದಾದರೆ ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದೆಡೆಗೆ ಕಲೆಯು ತನ್ನ ಯಾನವನ್ನು ಮುಂದುವರೆಸುತ್ತದೆ. ಹೀಗೆ ಕಲೆಯನ್ನು ಒಂದು ವ್ಯವಹಾರಿಕ ದೃಷ್ಟಿಕೋನಕ್ಕಷ್ಟೆ ಸೀಮಿತಗೊಳಿಸದೆ ಜೀವಜಗತ್ತಿಗೆ ಮಹತ್ತರವಾದ ಸಂದೇಶ ನೀಡುವಂತೆ ಸಿದ್ಧಗೊಳಿಸಿಕೊಂಡು ಬಂದವರಲ್ಲಿ ಶ್ರೀಯುತ ರವೀಂದ್ರ ಹೆಚ್ ಅರಳಗುಪ್ಪಿ ಅವರು ಒಬ್ಬರಾಗಿದ್ದಾರೆ. ಶ್ರೀಯುತರು ತಮ್ಮ ಕಲಾ ಬದುಕನ್ನು ಜೀವಪರವಾದ ನೆಲೆಯಲ್ಲಿ ಪ್ರತಿಸ್ಪಂದಿಸುತ್ತ ಬಂದಿರುವ ಕ್ರಮವನ್ನು ಅನಾವರಣಗೊಳಿಸುವುದೆ ಇಂದಿನ ನೆಲದನಿಯ ಪ್ರಮುಖ ಆಶಯವಾಗಿದೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರು ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟೆಯಲ್ಲಿ ಜನ್ಮತಳೆದರು ಸಹ ಬೆಳೆದದ್ದು ಮಾತ್ರ ಹಿರೆಕೇರೂರು ತಾಲ್ಲೂಕಿನ ಅಣಜಿ ಎಂಬ ಗ್ರಾಮೀಣ ಪರಿಸರದಲ್ಲಿ. ಶ್ರೀ ಹೊಳೆಬಸಪ್ಪ ಹಾಗೂ ಶ್ರೀಮತಿ ಜೀವಮ್ಮನವರ ಪುತ್ರನಾದ ರವೀಂದ್ರ ಅರಳಗುಪ್ಪಿಯವರು ತಮ್ಮ ಬಾಲ್ಯದ ದಿನಗಳಲ್ಲಿ ತಂದೆ ತಾಯಿಗಳಿಂದ ಸಾಕಷ್ಟು ನೈತಿಕ ಶಿಕ್ಷಣವನ್ನು ಪಡೆದುಕಂಡು, ಅದೇ ತಳಹದಿಯ ಮೇಲೆ ತಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಅಂತರ್ಗತ ಮಾಡಿಕೊಂಡವರು. ಇವರ ತಂದೆಯವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದು, ತಂದೆಯವರಿಂದ ಸಾಕಷ್ಟು ಬದುಕಿನ ಪಾಠಗಳನ್ನು ಕಲಿತುಕೊಂಡ ಶ್ರೀಯುತರು, ಗ್ರಾಮೀಣ ಬದುಕಿನ ಸಹಕಾರ, ಸಹಭಾಳ್ವೆಯ ತತ್ವಗಳಿಂದ ಪ್ರಭಾವಿತರಾದವರು. ತಮ್ಮ ಎಸ್.ಎಸ್.ಎಲ್.ಸಿ ಹಂತದವರೆಗಿನ ಶಿಕ್ಷಣವನ್ನು ತಾವು ನೆಲೆಸಿದ್ದ ಅಣಜಿ ಗ್ರಾಮದಲ್ಲಿ ಪಡೆದ ಇವರು, ಈ ಶಾಲಾ ಹಂತದಲ್ಲಿ ಹಲವಾರು ತೆರನಾದ ಬದುಕಿನ ಪಾಠಗಳನ್ನು ಇಲ್ಲಿ ಕರಗತ ಮಾಡಿಕೊಂಡಿದ್ದರು. ನಂತರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಲ್ಲಾಡಿಹಳ್ಳಿಯಲ್ಲಿ ಪಡೆದಿದ್ದು, ಇಲ್ಲಿಯೂ ಕೂಡ ಆಧ್ಯಾತ್ಮಿಕ ತಳಹದಿಯ ಶಿಕ್ಷಣವನ್ನು ಪಡೆದುಕೊಂಡರು. ಇದಾದ ತರುವಾಯದಲ್ಲಿ ಪದವಿ ಶಿಕ್ಷಣಕ್ಕೆ ದಾವಣಗೆರೆಗೆ ಬಂದು, ಎಂ.ಎಸ್.ಬಿ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ದಾಖಲಾದರು. ಈ ವೇಳೆಗಾಗಲೆ ಸಾಕಷ್ಟು ನಾಟಕದ ಹುಚ್ಚು ಮೈಗೂಡಿಸಿಕೊಂಡಿದ್ದ ಇವರಿಗೆ ಹಲವಾರು ಬೀದಿ ನಾಟಕಗಳನ್ನು ನೋಡಿ, ಅವುಗಳ ಪ್ರದರ್ಶನದಲ್ಲಿಯೂ ತಲ್ಲಿನರಾಗಿದ್ದರು. ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುವ ಹಂತದಲ್ಲಿ ದಾವಣಗೆರೆಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ‘ಹೆಗ್ಗಡಾಯಣ’ ಎಂಬ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂಬುದನ್ನು ತಮ್ಮ ಸ್ನೇಹಿತರಿಂದ ತಿಳಿದು, ಇಲ್ಲಿಗೆ ನಾಟಕ ನೋಡಲು ಆಗಮಿಸಿದ್ದರು. ಆಗ ಇಲ್ಲಿನ ಚಿತ್ರಕಲಾ ವಿದ್ಯಾಲಯವನ್ನು ಗಮನಿಸಿ, ನಾನು ಕೂಡ ಚಿತ್ರ ಕಲಾವಿದನಾಗಬೇಕೆಂಬ ಹಂಬಲದಿಂದ ಬಿ.ಕಾಂ ಪದವಿಗೆ ವಿದಾಯ ಹೇಳಿ, ಚಿತ್ರಕಲಾ ಶಾಲೆಗೆ ಸೇರಿಕೊಂಡು, ಇದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿಕೊಂಡು, ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರು ನಾಟಕ ಮತ್ತು ಚಿತ್ರಕಲಾ ಕ್ಷೇತ್ರಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಈ ಎರಡು ಕ್ಷೇತ್ರಗಳ ಮೂಲಕವಾಗಿ ಸಮಾಜವನ್ನು ತಿದ್ದುವ ಹಲವಾರು ಕಾರ್ಯಗಳನ್ನು ಅನುಷ್ಠಾನಗೊಳಿಸಿಕೊಂಡು ಬಂದಿದ್ದಾರೆ. ಕಲೆಗಳನ್ನು ಕೇವಲ ವ್ಯವಹಾರಿವಾಗಿ ಮಾತ್ರ ನೋಡುವಂತಹ ಕಾಲಘಟ್ಟದಲ್ಲಿ, ಕಲೆಯ ಮೂಲಕವಾಗಿ ಸಾಮಾಜಿಕ ಸೇವೆಯನ್ನು ಮಾಡಬಹುದು ಎಂಬುದನ್ನು ಶ್ರೀಯುತ ತೋರಿಸಿಕೊಟ್ಟಿದ್ದಾರೆ. ಮೊದಲನೆಯದಾಗಿ ಚಿತ್ರಕಲೆಯ ಮೂಲಕವಾಗಿ ಕೈಗೊಂಡ ಸಾಮಾಜಿಕ ಜಾಗೃತಿಯ ಕೆಲವೊಂದು ಅಂಶಗಳನ್ನು ನಿದರ್ಶನಗಳ ಮೂಲಕ ಗುರುತಿಸಲಾಗುವುದು. ಚಿತ್ರಕಲೆಯನ್ನು ಬಳಸಿಕೊಂಡು ಪರಿಸರ ಜಾಗೃತಿ, ಕಾನೂನಿನ ಅರಿವು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಇಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರಿಂದ ಆಗುವು ಅನಾವುತ, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಹಲವಾರು ಬಿತ್ತಿಚಿತ್ರಗಳ ಮೂಲಕ ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಹಾಗೆಯೇ ವಾಹನ ಸವಾರರು ಪಾಲಿಸಬೇಕಾದ ಜೀವಪರವಾದ ಅಂಶಗಳ ಕುರಿತು ಬಿತ್ತಿಚಿತ್ರಗಳ ಮೂಲಕ ಅರಿವು ಮೂಡಿಸುತ್ತ ಬಂದಿದ್ದಾರೆ. ನಗರ ಪರಿಸರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವುದರಿಂದ ಉಂಟಾಗುವ ಪರಿಣಾಮಗಳ ಕುರಿತು ಸಾಮಾಜಿಕ ಅರಿವು ಮೂಡಿಸುತ್ತ ಬಂದಿದ್ದಾರೆ. ಹೀಗೆ ಚಿತ್ರಕಲೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಚಿತ್ರಕಲೆಯಲ್ಲಿನ ಇವರ ವಿಶೇಷವಾದ ಪ್ರತಿಭೆಯಿಂದಾಗಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಹಲವಾರು ಚಿತ್ರಪಟಗಳನ್ನು ಸಿದ್ಧಪಡಿಸಿದ್ದಾರೆ. ಇವರ ಕಲಾಕುಂಚದಿಂದ ಮೂಡಿಬಂದ ಪ್ರತಿಯೊಂದು ಕಲಾಚಿತ್ರಗಳು ಸಂಶೋಧನೆಯ ಫಲಗಳಾಗಿದ್ದು, ಮಾನವನ ಬದುಕಿನ ಮೇಲೆ ಅರಿಷಡ್ವರ್ಗಗಳು ಬೀರುವ ಪ್ರಭಾವವನ್ನು ಅನಾವರಣಗೊಳಿಸುತ್ತವೆ.
ಶ್ರೀಯುತರು ನಾಟಕ ಕ್ಷೇತ್ರದಲ್ಲಿಯೂ ತನ್ನದೇ ಆದ ಸಾಧನೆ ಮಾಡಿದ್ದಾರೆ. ಇಲ್ಲಿಯೂ ಕೂಡ ಸಾಮಾಜಿಕ ಕಳಕಳಿ ಪ್ರಮುಖವಾಗಿ ಕಾರ್ಯಪ್ರವೃತ್ತವಾಗಿರುವುದು ಕಂಡುಬರುತ್ತದೆ. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಬೀದಿ ನಾಟಕಗಳನ್ನು ರಚನೆ ಮಾಡಿ, ಪ್ರದರ್ಶನ ಮಾಡುತ್ತ ಬಂದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಶ್ರೀಯುತರು ವಿಭಿನ್ನವಾದ ಆಲೋಚನಾ ಲಹರಿಯುಳ್ಳವರಾಗಿದ್ದಾರೆ. ಹೀಗಾಗಿಯೇ ಕಾರಗೃಹ ವಾಸಕ್ಕೆ ತುತ್ತಾಗಿರುವ ವಿಚಾರಣಾಧೀನ ಖೈದಿಗಳನ್ನು ಅಧ್ಯಯನ ಮಾಡಬೇಕೆಂಬ ಹಂಬಲವೊತ್ತು, ನಾಟಕ ಕಲಿಸುವ ನೆಪದಿಂದ ದಾವಣಗೆರೆಯ ಕಾರಗೃಹಕ್ಕೆ ಭೇಟಿ ನೀಡಿ, ಇಲ್ಲಿನ ಜೈಲು ಅಧಿಕಾರಿಗಳ ಮನವೊಲಿಸಿ, ಖೈದಿಗಳಿಗೆ ನಾಟಕ ಕಲಿಸುವ ಅವಕಾಶವನ್ನು ಪಡೆದುಕೊಂಡು ತಮ್ಮ ಸಂಶೋಧನೆಯ ಜೊತೆ ಜೊತೆಗೆ ನಾಟಕ ತರಬೇತಿಯನ್ನು ನೀಡಲು ಆರಂಭಿಸುತ್ತಾರೆ. ಇಲ್ಲಿಯೂ ಕೂಡ ಮಾನವನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಹರಿಷಡ್ವರ್ಗಗಳ ಪ್ರಭಾವಕ್ಕೆ ತುತ್ತಾಗಿ ಅಪರಾಧಿ ಕೃತ್ಯಗಳಲ್ಲಿ ತೊಡಗಿರುವ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ‘ಮೃತ್ಯು’ ಎಂಬ ನಾಟಕವನ್ನು, ಹಾಗೆಯೇ ಈ ಜಗತ್ತಿನ ಪ್ರತಿಯೊಂದು ಜೀವಿಗೂ ತಪ್ಪನ್ನು ತಿದ್ದಿಕೊಂಡು ಬದುಕುವುದಕ್ಕೆ ಮುಕ್ತ ಅವಕಾಶಗಳಿವೆ ಎಂಬ ಅರಿವು ಮೂಡಿಸುವ ನೆಲೆಯಲ್ಲಿ ‘ಪರಿವರ್ತನೆ’ ಎಂಬ ನಾಟಕವನ್ನು ಖೈದಿಗಳಿಂದ ಪ್ರದರ್ಶಿಸಿ ಉತ್ತಮವಾದ ಪ್ರಶಂಸೆಗೆ ಒಳಗಾಗಿದ್ದಾರೆ. ಈ ಪರಿವರ್ತನೆ ಎಂಬ ನಾಟಕದಲ್ಲಿ ಪಾತ್ರ ಮಾಡಿದ ಪ್ರತಿಯೊಬ್ಬ ಖೈದಿಯೂ ಅಪಾಧನೆಯಿಂದ ಮುಕ್ತವಾಗಿ ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿರುತ್ತಾರೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರದು ಬಹುಮುಖಿ ವ್ಯಕ್ತಿತ್ವ. ಅವರು ತಮ್ಮಲ್ಲಿ ಅಂತರ್ಗತವಾದ ಕಲೆಯನ್ನು ಎಂದಿಗೂ ವ್ಯವಹಾರಿಕ ದೃಷ್ಟಿಕೋನದಿಂದ ನೋಡಿದವರಲ್ಲ. ಆ ಕಲೆಯಿಂದ ಸಮಾಜವನ್ನು ಎಷ್ಟು ಸುಧಾರಿಸಬಹುದೆಂಬ ಆಲೋಚನೆ ಮಾಡುತ್ತ ಬಂದವರು. ಇವರ ಶ್ರೀಮತಿಯವರಾದ ಎಂ.ಜಿ ಉಷಾ ಅವರು ಕೂಡ ಚಿತ್ರಕಲಾವಿದರಾಗಿದ್ದು, ಶ್ರೀಯುತರ ಪ್ರತಿಯೊಂದು ಸಮಾಜಮುಖಿ ಕಾರ್ಯಕ್ಕೆ ಜೀವ ತುಂಬುತ್ತ ಬಂದಿದ್ದಾರೆ. ತಮ್ಮ ಶ್ರೀಮತಿಯವರ ಸಹಕಾರದಿಂದಲೇ ನಾನು ಇಷ್ಟೆಲ್ಲ ಸಾಧನೆಗೆ ಪ್ರಮುಖ ಕಾರಣ ಎಂಬುದು ರವೀಂದ್ರ ಅರಳಗುಪ್ಪಿಯವರ ಮನದಾಳದ ಮಾತಾಗಿದೆ. ಈ ಇಬ್ಬರು ದಂಪತಿಗಳ ಚಿತ್ರಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಸಾಕಷ್ಟು ಪ್ರಶಂಸೆಗೆ ಗುರಿಯಾಗಿವೆ. ಇವರ ಸಾಧನೆ ಸುದೀರ್ಘವಾಗಿದ್ದು, ಇಲ್ಲಿ ಅವುಗಳನ್ನೆಲ್ಲ ಹಂಚಿಕೊಳ್ಳುವುದಕ್ಕೆ ಜಾಗದ ಕೊರತೆಯಿದೆ. ಆದ ಕಾರಣ ಈ ಕಿರುಪರಿಚಯದೊಂದಿಗೆ ಒಂದು ಅಲ್ಪ ವಿರಾಮ ಹಾಕುತ್ತೆನೆ. ಇವರ ಒಬ್ಬಳೆ ಮಗಳು ‘ಇಂಪನ’ ಜೊತೆಗೆ ಸಾಗುತ್ತಿರುವ ಈ ದಂಪತಿಗಳಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂಬುದು ನಮ್ಮ ಹಾರೈಕೆ…