ನೆಲದನಿ

ರಂಗಭೂಮಿ ಕ್ಷೇತ್ರದ ಯುವ ಕಲಾವಿದ : ನಾಗರಾಜ್ ಅವರ ಕಲಾ ನಂಟಿನ ಕಥನ

Published

on

ಭಾರತವು ವಿವಿಧ ಸಂಸ್ಕøತಿ ಮತ್ತು ಕಲೆಗಳ ತೊಟ್ಟಿಲು ಎಂಬುದು ಈಗಾಗಲೆ ಮನೆ ಮಾತಾಗಿದೆ. ಇಂತಹ ಸಾಂಸ್ಕøತಿಕ ಸೊಬಗುಗಳಲ್ಲಿ ರಂಗಭೂಮಿ ಕ್ಷೇತ್ರವು ಒಂದು. ಇಂದಿನ ಆಧುನಿಕ ಸಂದರ್ಭದ ಟಿ.ವಿ ಹಾಗೂ ಇತರ ಮಾಧ್ಯಮ ಲೋಕದ ಮೂಲನೆಲೆ ರಂಗಭೂಮಿ ಎಂದರೆ ತಪ್ಪಾಗಲಾರದೇನೊ. ಆದರೆ ಆಧುನಿಕತೆಯ ಸಿನಿಮಾ, ಧಾರವಾಹಿ ಹಾಗೂ ಇತರ ಪ್ರಕಾರಗಳೆದುರು ರಂಗಭೂಮಿ ಮತ್ತು ರಂಗಕಲಾವಿದರು ಸಮಾಜದ ಮುಂಚೂಣಿಯಿಂದ ದೂರಸರಿಯುತ್ತಿದ್ದು, ರಂಗಭೂಮಿ ಹಾಗೂ ರಂಗಕಲಾವಿದರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಇಂತಹ ರಂಗಭೂಮಿ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲವೊತ್ತು, ಆ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಹಲವು ರಂಗಾಸಕ್ತರು ನಮ್ಮ ಮುಂದಿದ್ದಾರೆ. ಅಂತಹ ಯುವ ರಂಗಕಲಾವಿದರಲ್ಲಿ ಮಾಡ್ಲಾಕನಹಳ್ಳಿ ನಾಗರಾಜ್ ಅವರು ಒಬ್ಬರಾಗಿದ್ದಾರೆ. ಕಾಡುವ ಬಡತನವನ್ನು ಮೆಟ್ಟಿನಿಂತು, ರಂಗಕಲೆಗಾಗಿ ತನ್ನನ್ನು ಸಮರ್ಪಿಸಿಕೊಂಡು ಮುನ್ನಡೆಯುತ್ತಿರುವ ಶ್ರೀಯುತ ನಾಗರಾಜ್ ಅವರ ಬದುಕು ಹಾಗೂ ಅವರ ಕಲಾ ಸಾಧನೆಯನ್ನು ಪರಿಚಯಿಸುವುದು ಇಂದಿನ ನೆಲದನಿಯ ಮೂಲ ಆಶಯವಾಗಿದೆ.

ಶ್ರೀಯುತ ನಾಗರಾಜ್ ಅವರು ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಮಾಡ್ಲಾಕನಹಳ್ಳಿ ಗ್ರಾಮದಲ್ಲಿ ಶ್ರೀ ತಿಪ್ಪಣ್ಣ, ಶ್ರೀಮತಿ ಕಾಳಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಶ್ರೀಯುತರ ಕುಟುಂಬವು ವ್ಯವಸಾಯವನ್ನೆ ಆಶ್ರಯಿಸಿದ ಕಾರಣ ಬಾಲ್ಯದ ದಿನಗಳಿಂದಲೂ ಬಡತನದೊಳಗೆ ಬೆಳೆದು ಬಂದ ಇವರು, ನಾಟಕದ ಮೇಲೆ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಯಾವುದೇ ಗ್ರಾಮದಲ್ಲಿ ನಾಟಕಗಳು ನಡೆಯುತ್ತಿದ್ದರೂ ತಪ್ಪದೆ ಹಾಜರಾಗಿ ಬೆಳಗಿನ ತನಕ ನಾಟಕವನ್ನು ವೀಕ್ಷಿಸುತ್ತಿದ್ದರು. ನಾಗರಾಜ್ ಅವರು ಮೂರನೇ ತರಗತಿಯನ್ನು ಓದುತ್ತಿರುವ ಸಮಯದಲ್ಲಿ ತಮ್ಮ ಊರಿಗೆ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ ಮಾಡಲು ನಾಟಕ ಕಂಪನಿಯೊಂದು ಬಂದು ತಂಗಿತ್ತು. ಆಗ ವಯಸ್ಕರರಿಗೆ ಮೂರು ರೂಪಾಯಿ ಹಾಗೂ ಮಕ್ಕಳಿಗೆ ಎರಡು ರೂಪಾಯಿ ಟಿಕೇಟ್ ನಿಗದಿ ಮಾಡಿದ್ದರು. ಆದರೆ ಇವರ ಬಳಿ ಎರಡು ರೂಪಾಯಿಗಳು ಇಲ್ಲದೆ ಸುಮಾರು ಮೂರರಿಂದ ನಾಲ್ಕು ದಿನಗಳ ಕಾಲ ಟೆಂಟಿನ ಹೊರಗಡೆಯೇ ನಿಂತು ನಾಟಕವನ್ನು ವೀಕ್ಷಿಸಿದರು. ಹೇಗಾದರು ಮಾಡಿ ನಾಟಕವನ್ನು ನೋಡಬೇಕು ಎಂಬ ಕಾತುರ ಹೆಚ್ಚಾಗಿ ಸತ್ಯಹರಿಶ್ಚಂದ್ರನ ಹೆಂಡತಿಯ ಪಾತ್ರ ನಿರ್ವಹಿಸುತಿದ್ದ ಮಹಿಳೆಗೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹಜವಾಗಿಯೇ ಬೆಳೆದಿರುವಂತಹ ಸೀತಾಫಲ (ಪುಟಲೇಸಿ) ಹಣ್ಣುಗಳನ್ನು ನೀಡುವ ಮೂಲಕ ಅವರ ಆಪ್ತತೆಯನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಿದರು. ಹಣ್ಣು ತಿಂದ ಆ ಹೆಣ್ಣು ಮಗಳು ಕೂಡ ಇವರಿಗೆ ನಾಟಕದ ಪ್ರದರ್ಶನ ಭಾಗ್ಯವನ್ನು ನೀಡಲಿಲ್ಲ. ಕೊನೆಗೆ ಹೇಗಾದರು ಮಾಡಿ ಈ ನಾಟಕವನ್ನು ನೋಡಲೇಬೇಕೆಂಬ ಉತ್ಕಟತೆಯಿಂದ ಬ್ಲೇಡಿನಿಂದ ಪರದೆಯನ್ನು ಕತ್ತರಿಸಿ ನುಸುಳಿಕೊಂಡು ಪ್ರವೇಶ ಮಾಡಿದರು. ಈ ವಿಷಯ ತಿಳಿದು ಇವರನ್ನು ಹಿಡಿದು ಹೊಡೆಯುವ ಪ್ರಯತ್ನ ಮಾಡಿದರು. ಆದರೆ ಇಲ್ಲಿಂದ ತಪ್ಪಸಿಕೊಂಡ ನಾಗರಾಜ್ ಅವರು ಸುಮಾರು ಒಂದು ವಾರದ ತನಕ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಹೀಗಾದರೂ ನಾಟಕವನ್ನು ನೋಡುವ ಹುಚ್ಚು ಇವರ ತಲೆಯಿಂದ ದೂರವಾಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಊಟಕ್ಕೆಂದು ಇಟ್ಟುಕೊಂಡಿದ್ದ ಜೋಳವನ್ನು ಅಂಗಡಿಗೆ ಹಾಕಿ ನಾಟಕವನ್ನು ನೋಡಿಬಂದು ಬಂದಿದ್ದರು. ಇದು ತಿಳಿದು ಮತ್ತೂ ಮನೆಯವರಿಂದ ಹೊಡೆತ ತಿಂದಿದ್ದರು.

ನಟ ಮಂಡ್ಯರಮೇಶ್ ಜೊತೆ ಕಲಾವಿದ ನಾಗರಾಜ್

ನಾಟಕದ ಹುಚ್ಚನ್ನು ಬಾಲ್ಯದ ದಿನಗಳಿಂದಲೂ ಮೈಗೂಡಿಸಿಕೊಂಡು ಬಂದಿದ್ದ ನಾಗರಾಜ್ ಅವರಿಗೆ ತಾನು ಒಬ್ಬ ನಾಟಕ ಕಲಾವಿದನಾಗಬೇಕೆಂಬ ಉತ್ಕಟತೆಯೂ ಒಡಮೂಡಿತ್ತು. ನಾಗರಾಜ್ ಅವರು ನಾಲ್ಕನೇ ತರಗತಿ ಓದುತ್ತಿರುವಾಗ ಆ ಗ್ರಾಮದ ಹಿರಿಯ ಕಲಾವಿದರಾದ ವೀರೇಶ್ ಎಂಬುವವರು ಆ ಗ್ರಾಮದ ಯುವಕರನ್ನು ಸೇರಿಸಿಕೊಂಡು ‘ಜಯಗೌರಿ’ ಎಂಬ ನಾಟಕಕ್ಕೆ ಸಿದ್ಧತೆಯನ್ನು ನಡೆಸಿದ್ದರು. ಈ ನಾಟಕದಲ್ಲಿ ಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಂಡ ಇವರು ಜನರಿಂದ ಉತ್ತಮವಾದ ಪ್ರಶಂಗೆಗೂ ಪಾತ್ರರಾಗಿದ್ದರು. ಹೀಗೆ ಬಣ್ಣದ ಲೋಕದ ಜೊತೆಗೆ ನಿರಂತರವಾದ ನಂಟನ್ನು ಬೆಳೆಸಿಕೊಂಡು ಬಂದರು. ಇವರು ಎಂಟನೇ ತರಗತಿಯನ್ನು ಓದುತ್ತಿರುವಾಗ ‘ಮಲತಾಯಿ’ ಎಂಬ ನಾಟಕವನ್ನು ಪ್ರದರ್ಶನ ಮಾಡಲು ಹೆಸರಾಂತ ರಂಗಕಲಾವಿದೆಯರಾದ ಕೂಡ್ಲಗಿಯ ಶಿವಕುಮಾರಿ ಹಾಗೂ ಇತರೆ ಹಿರಿಯ ಕಲಾವಿದರು ಇವರ ಗ್ರಾಮಕ್ಕೆ ತೆರಳಿದ್ದರು. ಈ ಕಲಾವಿದರನ್ನು ಪರಿಚಯ ಮಾಡಿಕೊಳ್ಳಬೇಕೆಂಬ ಹಂಬಲದಿಂದಾಗಿ ಈ ಕಲಾವಿದರಿಗೆ ಟೀ, ತಿಂಡಿ, ಹಣ್ಣು ಹಂಪಲು ತಂದುಕೊಡುವ ಮೂಲಕ ಅವರ ಸ್ನೇಹ ಹಾಗೂ ವಿಶ್ವಾಸವನ್ನು ಗಳಿಸಿದರು. ಹೀಗೆ ಪರಿಚಯವಾದ ಶಿವಕುಮಾರಿ ಹಾಗೂ ನಾಗರಾಜ್ ಅವರ ಸಂಬಂಧವು ಇಂದಿಗೂ ಸ್ವಂತ ಅಕ್ಕ ತಮ್ಮನಾಗಿ ತಮ್ಮ ಬಂಧವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಶ್ರೀಯುತ ನಾಗರಾಜ್ ಅವರು ಒಂದರಿಂದ ನಾಲ್ಕನೇ ತರಗತಿಯನ್ನು ತಮ್ಮ ಸ್ವಾಗ್ರಾಮದಲ್ಲಿ ಪೂರೈಸಿ, ಐದರಿಂದ ಏಳನೇ ತರಗತಿಯನ್ನು ಪಕ್ಕದ ಬಣವಿಕಲ್ಲು ಗ್ರಾಮದಲ್ಲಿ ಪೂರೈಸಿದರು. ನಂತರ ಪ್ರೌಢ ಶಿಕ್ಷಣವನ್ನು ಕೊಟ್ಟೂರಿನಲ್ಲಿ ಮುಂದುವರೆಸಿದರು. ಕೊಟ್ಟೂರು ಸಾಂಸ್ಕøತಿಕ ಕಲೆಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವಂತದ್ದು. ಇಲ್ಲಿ ಹಲವಾರು ನಾಟಕ ಕಂಪನಿಗಳು ಜಾತ್ರೆಯ ಸಮಯದಲ್ಲಿ ತಿಂಗಳುಗಟ್ಟಲೆ ಪ್ರದರ್ಶನ ನಡೆಸುತಿದ್ದವು. ಈ ಸಂದರ್ಭವು ನಾಗರಾಜ್ ಅವರಲ್ಲಿ ಮತ್ತಷ್ಟು ಕಲಾಸಕ್ತಿಗೆ ಪ್ರಚೋದಕ ಶಕ್ತಿಯಾಗಿ ಕಾರ್ಯನಿರ್ವಹಿಸಿತು. ಇವರು ಎಸ್.ಎಸ್.ಎಲ್.ಸಿ ಓದುತ್ತಿರುವ ಸಮಯದಲ್ಲಿ ಇವರ ಊರಿನಲ್ಲಿ ‘ಸರ್ಪ ಸಾಮ್ರಾಜ್ಯ’ ಎಂಬ ನಾಟಕದ ಸಿದ್ಧತೆಯು ನಡೆದಿತ್ತು. ಈ ನಾಟಕದಲ್ಲಿ ಹೇಗಾದರೂ ಮಾಡಿ ಕಥಾ ನಾಯಕನ ಪಾತ್ರ ಮಾಡಬೇಕೆಂದು ಮನೆಯಲ್ಲಿ ಹಠ ಹಿಡಿದು ಕೂತರು. ಮನೆಯಲ್ಲಿ ಇದಕ್ಕೆ ಯಾರೂ ಸಹಮತವನ್ನು ಸೂಚಿಸಲಿಲ್ಲ. ಈ ನಾಟಕದಲ್ಲಿ ಪಾತ್ರ ಮಾಡುವುದಕ್ಕೆ ಆರ್ಥಿಕ ಸಹಕಾರವು ಯಾರಿಂದಲೂ ಸಿಗುವ ನಿರೀಕ್ಷೆಗಳು ಕಾಣದೆ ಹೋದಾಗ ಶನಿವಾರ ಮತ್ತು ಭಾನುವಾರದಂದು ಕೂಲಿ ಕೆಲಸ ಮಾಡುವ ಮೂಲಕ ನಾಟಕಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿಕೊಂಡು ‘ಸರ್ಪ ಸಾಮ್ರಾಜ್ಯ’ ನಾಟಕದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿ ಜನರಿಂದ ಉತ್ತಮ ಪ್ರಶಂಸೆ ಹಾಗೂ ಮೆಚ್ಚಿಗೆಗೂ ಪಾತ್ರರಾಗಿದ್ದರು.

ಹೀಗೆ ಮುಂದುವರೆದ ಇವರ ನಾಟಕ ಯಾತ್ರೆಯು ಪಿ.ಯು.ಸಿ ಶಿಕ್ಷಣದ ಹಂತಕ್ಕೆ ಬರುವ ವೇಳೆಗೆ ಹಲವಾರು ಕಡೆಗಳಲ್ಲಿ ಗುರುತಿಸಿಕೊಂಡು, ತಮ್ಮ ಭಾಗದಲ್ಲಿ ಎಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತದೆಯೋ ಅಲ್ಲಿ ನಾಟಕ ಕಲಾವಿದರಿಗೆ ಹಿನ್ನೆಲೆಯಲ್ಲಿ ಮಾತುಗಳನ್ನು ಹೇಳಿಕೊಡುವ ಹಾಗೂ ನಾಟಕಗಳಲ್ಲಿ ಗಂಡು ಮತು ಹೆಣ್ಣಿನ ದನಿಯಲ್ಲಿ ಹಾಡುಗಳನ್ನು ಹಾಡುತ್ತ ತಮ್ಮ ರಂಗಭೂಮಿಯ ನಂಟನ್ನು ಸುದೀರ್ಘವಾಗಿ ಮುಂದುವರೆಸಿಕೊಂಡು ಬಂದರು. ಪಿ.ಯು.ಸಿ ಶಿಕ್ಷಣ ಮುಕ್ತಾಯವಾದ ತರುವಾಯದಲ್ಲಿ ಜೀವನ ನಡೆಸುವುದಕ್ಕೆ ಕೆಲಸ ಅನಿವಾರ್ಯವಾದಾಗ ತಮಗೆ ದೊರಕಿದ ನರ್ಸಿಂಗ್ ಕೋರ್ಸನ್ನು ಬಿಟ್ಟು, ಆರ್.ಎಂ.ಪಿ ವೈದ್ಯ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ತರಬೇತಿಯನ್ನು ಪಡೆದ ತರುವಾಯದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿ 2010 ರಲ್ಲಿ ಮರಿಯಮ್ಮನಹಳ್ಳಿ ಸಮೀಪದ ‘ಗೊಲ್ಲರಹಳ್ಳಿ’ ಗ್ರಾಮದಲ್ಲಿ ಒಂದು ನೆಲೆಸುತ್ತಾರೆ. ಇಲ್ಲಿಯೂ ಕೂಡ ವೈದ್ಯ ವೃತ್ತಿಯ ಜೊತೆಯಲ್ಲಿ ನಾಟಕ ಕಲೆಯನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಶ್ರೀಯುತರ ನಾಗರಾಜ್ ಅವರು ಈವರೆಗೂ ಕೇವಲ ಸಾಮಾಜಿಕ ನಾಟಕಗಳಲ್ಲಿ ಮಾತ್ರ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದರು. ಆದರೆ ಪೌರಾಣಿಕ ನಾಟಕಗಳಲ್ಲಿ ಪ್ರದರ್ಶಸಬೇಕೆಂಬ ಇವರ ಕನಸು ಕನಸಾಗಿಯೇ ಉಳಿದುಕೊಂಡಿತ್ತು. ಆದರೆ ನಾನು ಕೂಡ ಪೌರಾಣಿಕ ಪಾತ್ರಗಳಲ್ಲಿ ಪ್ರದರ್ಶಿಸಬೇಕೆಂದು ಹಿರಿಯ ಕಲಾವಿದರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದಾಗ ಕೆಲವರು ಇದಕ್ಕೆ ಪ್ರೋತ್ಸಾಹ ನೀಡಿರಲಿಲ್ಲ. ಹಲವಾರು ಪೌರಾಣಿಕ ನಾಟಕಗಳನ್ನು ನೋಡುವ ಮೂಲಕ ಪಾತ್ರ ಹಾಗೂ ಸಂಭಾಷಣೆಗಳನ್ನು ಮನನ ಮಾಡಿಕೊಂಡಿದ್ದ ಶ್ರೀಯುತರು ಉಜ್ಜಯಿನಿ ನಾಗರಾಜ್ ಅವರ ಆಶಿರ್ವಾದ ಪಡೆದು ಗುರುವಿಲ್ಲದೆ ವಿದ್ಯೆ ಪಡೆದು ಉಜ್ಜಯಿನಿಯ ಮರುಳಸಿದ್ಧನ ಸನ್ನಿದಿಯಲ್ಲಿ ದಿನಾಂಕ 18 ಡಿಸೆಂಬರ್ 2010 ರಂದು ಪ್ರಥಮ ಬಾರಿಗೆ ‘ರಕ್ತರಾತ್ರಿ’ ನಾಟಕದಲ್ಲಿ ಧರ್ಮರಾಯನ ಪಾತ್ರವನ್ನು ಪ್ರದರ್ಶಿಸುತ್ತಾರೆ. ಇಲ್ಲಿ ಪ್ರಥಮ ಪ್ರಯೋಗವಾದ ಕಾರಣದಿಂದ ಅಂಜಿಕೆ ಮತ್ತು ಅಳುಕಿನಿಂದ ಕೆಲವು ತಪ್ಪುಗಳ ನಡೆವೆಯೂ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಹೀಗೆ ಮುಂದುವರೆದ ಈ ಪ್ರಯತ್ನವು ಹಲವಾರು ಪೌರಾಣಿಕ ನಾಟಕಗಳಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ನೂರಾರು ಪ್ರದರ್ಶನಗಳನ್ನು ನಡೆಸಿಕೊಟ್ಟಿರುತ್ತಾರೆ. ಈ ರಕ್ತರಾತ್ರಿ ನಾಟಕವೊಂದರಲ್ಲಿಯೇ ಸುಮಾರು 93 ಪ್ರದರ್ಶನಗಳನ್ನು ಧರ್ಮರಾಯನ ಪಾತ್ರದಲ್ಲಿ, ಕಲಿಶಿವನ ಪಾತ್ರದಲ್ಲಿ 10 ಪ್ರದರ್ಶನ, ಕರ್ಣನ ಪಾತ್ರದಲ್ಲಿ 4, ಅರ್ಜುನ ಪಾತ್ರದಲ್ಲಿ 10 ಪ್ರದರ್ಶನಗಳನ್ನು ನೆರವೇರಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇಷ್ಟೆ ಅಲ್ಲದೆ ನಿನಾಸಂ ನಾಟಕ ತಂಡದೊಂದಿಗೆ ‘ಸಾಹೇಬ್ರು ಬರ್ತಾರಂತೆ’ ಹಾಗೂ ರಂಗಕರ್ಮಿಗಳಾದ ಕೆ.ಶಿವರುದ್ರಪ್ಪ ಅವರ ನಿರ್ದೇಶನದ ‘ಬೆಳ್ಳಕ್ಕಿ ಹಿಂಡು ಬೆದರ್ಯಾವೊ’ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿಯು ಇವರದಾಗಿದೆ. ಒಂದು ಕಾಲದಲ್ಲಿ ಮನೆಯವರಿಂದ ನಿಂದನೆಗೆ ಒಳಗಾಗಿದ್ದ ಇವರ ಈ ಕಾರ್ಯವನ್ನು ಇಂದು ಮನೆಯವರೆಲ್ಲ ಘನತೆಯಿಂದ ಹೇಳಿಕೊಳ್ಳುವಂತಹ ಹಂತವನ್ನು ತಲುಪಿದ್ದಾರೆ. ಕೂಡ್ಲಿಗಿಯಲ್ಲಿ ಧರ್ಮರಾಯನ ಪಾತ್ರ ಮಾಡುವ ಸಮಯದಲ್ಲಿ ಇವರ ತಂದೆ ತಾಯಿಗಳು ಇವರಿಗೆ ಗೊತ್ತಿಲ್ಲದಂತೆ ಬಂದು ಮಗನ ಪಾತ್ರಾಭಿನಯವನ್ನು ನೋಡಿ ಕೊಂಡಾಡಿದ್ದಾರೆ. ನಾಟಕಾಭಿನಯದ ಇವರ ಈ ಆಸಕ್ತಿಗೆ ಇವರ ಶ್ರೀಮತಿಯವರು ಕೂಡ ಸಂಪೂರ್ಣವಾದ ಬೆಂಬಲವನ್ನು ಸೂಚಿಸಿದ್ದಾರೆ.

ಶ್ರೀಯುತ ನಾಗರಾಜ್ ಅವರು ನಾಟಕ ಮತ್ತು ರಂಗಭೂಮಿಯ ಸೇವೆಯ ಜೊತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದು, ಸಾಹಿತ್ಯ ಸೇವೆಯೊಂದಿಗೆ ಸಾಧಕರ ಸಾಧನೆಯನ್ನು ಬೀದಿ ಬೀದಿಗೂ ತಲುಪಿಸುವ ಕಾರ್ಯವನ್ನು ನಡೆಸಿಕೊಂಡು ಬಂದಿರುತ್ತಾರೆ. ಶ್ರೀ ಪುಟ್ಟರಾಜ ಗವಾಯಿ ಸಾಂಸ್ಕøತಿಕ ಸಂಘದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ರಂಗಭೂಮಿ ಹಾಗೂ ಸಾಹಿತ್ಯ ಸೇವೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾತ್ರವಲ್ಲದೆ ‘ಸಂಗೀತ ಭಾರತಿ’ಯಂತಹ ಪ್ರಶಸ್ತಿಗಳನ್ನು ನೀಡಿ ಇವರ ಸಾಧನೆಯನ್ನು ಗೌರವಿಸಲಾಗಿದೆ. ಇವರ ಈ ಸಾಧನೆಯು ರಂಗಭೂಮಿಯನ್ನು ಉಳಿಸಿ, ಬೆಳೆಸುವತ್ತ ಸಾಗಲಿ. ಕಣ್ಮರೆಯಾಗುತ್ತಿರುವ ರಂಗಕಲೆಗಳು ಇಂತಹ ಸಾಧಕರಿಂದ ಮುಂದಿನ ಪೀಳಿಗೆಗೆ ಉಳಿಯುವಂತಾಗಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version