ದಿನದ ಸುದ್ದಿ
ಹಿಂದುಳಿದ ಪ್ರವರ್ಗ 3ಬಿ ಲಿಂಗಾಯತ, ಉಪಜಾತಿಗಳಿಗೆ ಕೊಳವೆ ಬಾವಿ ಸೌಲಭ್ಯ: ಅರ್ಜಿಯ ಅವಧಿ ವಿಸ್ತರಣೆ
ಸುದ್ದಿದಿನ,ಬಳ್ಳಾರಿ : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ 2021-22ನೇ ಸಾಲಿನಲ್ಲಿ ಜೀವಜಲ ಸಾಮೂಹಿಕ/ವೈಯಕ್ತಿಕ ಕೊಳವೆ ಬಾವಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು ವೆಬ್ಸೈಟ್ www.dbcdc.karnataka.gov.in ನಲ್ಲಿ ಜೀವ ಜಲ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದಿಂದ ಮೇ.10ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದುಳಿದ ಪ್ರವರ್ಗ 3ಬಿ ಲಿಂಗಾಯತ ಹಾಗೂ ಇದರ ಉಪಜಾತಿಗಳಿಗೆ ಒಳಪಡುವ ಅರ್ಹರು ಮಾತ್ರ ಅರ್ಜಿ ಸಲ್ಲಿಸಬಹುದು.
(ವಿಶ್ವಕರ್ಮ, ಉಪ್ಪಾರ ಅಂಬಿಗ, ಸವಿತಾ, ಮಡಿವಾಳ, ಕಾಡುಗೊಲ್ಲ/ಹಟ್ಟಿಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು, ಒಕ್ಕಲಿಗ, ಮರಾಠ, ಕುರುಬ, ಈಡಿಗ, ಕುಂಬಾರ, ನೇಕಾರ ಮತ್ತು ಇದರ ಉಪ ಸಮುದಾಯಗಳು ಇವುಗಳನ್ನು ಹೊರತುಪಡಿಸಿ)
ಅರ್ಹತೆಗಳು
ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು, ವಾರ್ಷಿಕ ವರಮಾನ 40ಸಾವಿರ ರೂ.ಗಳ ಮಿತಿಯಲ್ಲಿರಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕುಮಾರಸ್ವಾಮಿ ದೇವಸ್ಥಾನದ ಎದುರು, ಕ್ಲಬ್ ರೋಡ್ನ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಮತ್ತು ನಿಗಮದ ದೂ.08392-267038 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243