ದಿನದ ಸುದ್ದಿ
ನಟಿ ಸಾಯಿ ಪಲ್ಲವಿ ವಿರುದ್ಧ ಭಜರಂಗದಳ ಪ್ರಕರಣ ದಾಖಲು
ಸುದ್ದಿದಿನ,ಹೈದರಾಬಾದ್ : ಇತ್ತೀಚೆಗೆ ಕಾಶ್ಮೀರಿ ಪಂಡಿತರ ನರಮೇಧಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್ನಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹೈದರಾಬಾದ್ನ ಭಜರಂಗ ದಳದ ಪದಾಧಿಕಾರಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತ್ತಿಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು, “ಹಿಂಸೆ ಎನ್ನುವುದು ಯಾವುದೇ ರೀತಿಯದ್ದಾಗಿರಲಿ ಅದು ತಪ್ಪು ಎಂಬುದು ನನ್ನ ಅಭಿಪ್ರಾಯ. ಆ ದೃಷ್ಟಿಯಲ್ಲಿ ಹೇಳುವುದಾದರೆ, ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಎಷ್ಟು ತಪ್ಪೋ, ಇತ್ತೀಚಿನ ವರ್ಷಗಳಲ್ಲಿ ಗೋ ಸಾಗಾಣಿಕೆ ಮಾಡುವವರನ್ನು ಹೊಡೆದು ಕೊಂದಿರುವ ಘಟನೆಗಳು ಅಷ್ಟೇ ತಪ್ಪಿನಿಂದ ಕೂಡಿವೆ” ಎಂದಿದ್ದರು.
ನಟಿ ಸಾಯಿ ಪಲ್ಲವಿ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ “ಕಾಶ್ಮೀರ ಹತ್ಯಾಕಾಂಡ ಮತ್ತು ಗೋವುಗಳ ಕಳ್ಳಸಾಗಣೆದಾರರ ಹತ್ಯೆ ಎರಡೂ ಒಂದೇ” ಎಂದು ಹೇಳಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಪರ – ವಿರೋಧದ ಚರ್ಚೆಗೆ ಕಾರಣವಾಗಿದೆ.
ಮುಂದುವರೆದು ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಪಂಡಿತರ ಹತ್ಯೆ ಕುರಿತು ಸಮಗ್ರ ಚಿತ್ರಣ ನೀಡಲಾಗಿದೆ. ಅಲ್ಲದೆ ಇತ್ತೀಚೆಗೆ ವ್ಯಕ್ತಿಯೊಬ್ಬ ಗೋವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ ಎಂಬ ಕಾರಣಕ್ಕೆ ಹತ್ಯೆಗೈಯ್ಯಲಾಗಿದೆ. ಇದಕ್ಕೆ ಕಾರಣ ಆತ ಮುಸ್ಲಿಂ ಎಂಬ ಅನುಮಾನ ಎಂದ ಸಾಯಿ ಪಲ್ಲವಿ, ದಾಳಿಕೋರರು ಈ ಹತ್ಯೆ ಬಳಿಕ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳಿಗೆ ವ್ಯತ್ಯಾಸವೇನು? ಎಂದು ಪ್ರಶ್ನಿಸಿದ್ದಾರೆ.
ನನ್ನ ಪ್ರಕಾರ ಕಾಶ್ಮೀರ ಹತ್ಯಾಕಂಡ ಹಾಗೂ ಗೋವು ಕಳ್ಳಸಾಗಾಣಿಕೆದಾರರ ಹತ್ಯೆ ಎರಡೂ ಕೂಡ ಒಂದೇ ಎಂದಿರುವ ಸಾಯಿ ಪಲ್ಲವಿ, ನನ್ನ ಕುಟುಂಬ ಸಮಾಜದಲ್ಲಿ ನಾನು ಓರ್ವ ಉತ್ತಮ ವ್ಯಕ್ತಿಯಾಗಿ ಬದುಕುವಂತೆ ನನ್ನನ್ನು ರೂಪಿಸಿದೆ. ಮಾನವೀಯ ಗುಣವುಳ್ಳ ವ್ಯಕ್ತಿಯಾಗಿ ಬದುಕಿದರೆ ಅಷ್ಟೇ ಸಾಕು ಎಂದಿದ್ದಾರೆ.
ನಟಿ ಸಾಯಿ ಪಲ್ಲವಿ, ಕಾಶ್ಮೀರ ಹತ್ಯಾಕಾಂಡವನ್ನು ಗೋವು ಕಳ್ಳಸಾಗಾಣಿಕೆದಾರರ ಹತ್ಯೆ ಜೊತೆಗೆ ಹೋಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧದ ಚರ್ಚೆಗೆ ಕಾರಣವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243