ದಿನದ ಸುದ್ದಿ
ಬ್ಯಾಂಕುಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಿ ; ತ್ರಿಭಾಷಾ ಸೂತ್ರ ಪಾಲನೆ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ ಕೆ ಪಾಟೀಲ
ಸುದ್ದಿದಿನ,ಧಾರವಾಡ : ಜಿಲ್ಲೆಯಾದ್ಯಂತ ಬಹುತೇಕ ಬ್ಯಾಂಕುಗಳಲ್ಲಿ ನೆರೆಯ ರಾಜ್ಯಗಳ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಕನ್ನಡವನ್ನು ಕಲಿತುಕೊಂಡು ಸ್ಥಳೀಯ ಜನರೊಂದಿಗೆ ಇಲ್ಲಿನ ಭಾಷೆಯಲ್ಲಿಯೇ ವ್ಯವಹರಿಸಿ, ಗ್ರಾಮೀಣ ಜನರನ್ನೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಳಪಡಿಸಬೇಕು.
ಇಲ್ಲದಿದ್ದರೆ ಭಾಷಾ ಸಮಸ್ಯೆಯಿಂದ ಗ್ರಾಮೀಣ ಜನರು ಬ್ಯಾಂಕಿಂಗ್ ವಲಯದಿಂದ ಹೊರಗುಳಿಯವ ಸಂಭವಗಳಿರುತ್ತವೆ. ಡಿ.ಡಿ.,ಚಲನ್ ಸೇರಿದಂತೆ ಬ್ಯಾಂಕಿನ ಎಲ್ಲ ಅರ್ಜಿ ನಮೂನೆಗಳನ್ನು ತ್ರಿಭಾಷಾ ಸೂತ್ರದಲ್ಲಿ ಪ್ರಕಟಿಸಬೇಕು. ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಬಳಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಕೆ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಇತ್ತೀಚೆಗೆ ನೆರೆಯ ರಾಜ್ಯಗಳ ಅಭ್ಯರ್ಥಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾಗಿ ನೇಮಕಗೊಂಡಿದ್ದಾರೆ.
ಅವರು ನಿತ್ಯದ ಬ್ಯಾಂಕ್ ವ್ಯವಹಾರಗಳಲ್ಲಿ ಕನ್ನಡ ಬಳಸದಿರುವ ಬಗ್ಗೆ ಗ್ರಾಮೀಣ ಪ್ರದೇಶಗಳ ಜನರಿಂದ ದೂರುಗಳು ಬರುತ್ತಿವೆ. ಸಿಬ್ಬಂದಿಯ ಈ ವರ್ತನೆಗಳಿಂದ ಗ್ರಾಮೀಣ ಜನರು ಬ್ಯಾಂಕುಗಳಿಂದ ದೂರ ಸರಿದು ಖಾಸಗಿ ಲೇವಾದೇವಿಗಾರರ ಬಳಿ ಸಾಲ ಪಡೆಯುವ ಸಾಧ್ಯತೆಗಳಿರುತ್ತವೆ. ನಂತರ ಅದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುತ್ತದೆ. ಬ್ಯಾಂಕುಗಳು ಎಲ್ಲರನ್ನೂ ಒಳಗೊಳ್ಳುವಂತೆ ತಮ್ಮ ವ್ಯವಹಾರಗಳನ್ನು ನಿರ್ವಹಿಸಬೇಕು.
ತ್ರಿಭಾಷಾ ಸೂತ್ರದ ಪಾಲನೆ, ಕನ್ನಡದ ಬಳಕೆಯನ್ನು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಈ ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಂಡು ಅದರ ಕುರಿತು ಎಲ್ಲ ಶಾಖೆಗಳಿಗೆ ಮಾಹಿತಿ ನೀಡಬೇಕು. ಹಾಗಾದಾಗ ಮಾತ್ರ ಜಾಗೃತಿ ಮೂಡುತ್ತದೆ.
ಗ್ರಾಮೀಣ ಜನರಿಗೆ ಆರ್ಥಿಕ ಸಾಕ್ಷರತೆ ಮುಖ್ಯವಾಗಿದೆ. ಅನಕ್ಷರಸ್ಥರು ಮತ್ತು ಗ್ರಾಮೀಣ ಜನರನ್ನು ಬ್ಯಾಂಕಿಗ್ ಕ್ಷೇತ್ರ ಒಳಗೊಳ್ಳದೆ ಹೋದರೆ ಒಟ್ಟು ಆರ್ಥಿಕ ರಂಗದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂದು ಜಿಲ್ಲಾಧಿಕಾರಿಗಳು ಕಾಳಜಿ ವ್ಯಕ್ತಪಡಿಸಿದರು.
ಬೆಳೆ ಹಾಗೂ ಮನೆ ಪರಿಹಾರದ ಹಣ ಸಾಲಕ್ಕೆ ಹೊಂದಾಣಿಕೆ ಬೇಡ
ಬರ,ಪ್ರವಾಹದ ಸಂದರ್ಭದಲ್ಲಿ ಬೆಳೆಹಾನಿ, ಮನೆಹಾನಿಗಳಿಂದ ಸಂಕಷ್ಟಕ್ಕೀಡಾದ ಜನರಿಗೆ ಸರ್ಕಾರ ನೀಡುವ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಂಬಂಧಿಸಿದ ರೈತರ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು.
ಮಹತ್ಮಾಗಾಂಧಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನೀಡುವ ಗೌರವ ಸಂಭಾವನೆಯ ಹಣವನ್ನು ಕೂಡ ಕೆಲವು ಬ್ಯಾಂಕುಗಳು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂಬ ದೂರುಗಳಿವೆ. ಬ್ಯಾಂಕುಗಳ ಇಂತಹ ವರ್ತನೆಗಳಿಂದ ಜನರು ನರೇಗಾ ಉದ್ಯೋಗದಿಂದಲೂ ದೂರ ಸರಿದು ಖಾಸಗಿ ಭೂ ಮಾಲೀಕರ ಬಳಿ ದುಡಿಯಲು ತೆರಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಜಿಲ್ಲಾಡಳಿತದ ಗಮನಕ್ಕೆ ಬಂದ ಕೆಲವೇ ಕೆಲವು ಪ್ರಕರಣಗಳನ್ನು ಮಾತ್ರ ನಾವು ಖುದ್ದಾಗಿ ಪರಿಹರಿಸಬಹುದು .
ಯಾರ ಗಮನಕ್ಕೂ ಬಾರದೇ ಬಹಳಷ್ಟು ಸಂದರ್ಭದಲ್ಲಿ ಗ್ರಾಮೀಣ ಜನರು ಬ್ಯಾಂಕುಗಳಿಂದ ದೂರ ಸರಿದು ಬಿಡುತ್ತಾರೆ. ಪರಿಹಾರದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ಸಭೆಗೆ ಬರುವಾಗ ತರಬೇಕು. ಇದಲ್ಲದೇ ಬಹಳಷ್ಟು ಬ್ಯಾಂಕುಗಳು ಅರ್ಹರಿಗೆ ಶೈಕ್ಷಣಿಕ ಸಾಲ ಕೊಡುತ್ತಿಲ್ಲ ಎಂಬ ಅಹವಾಲುಗಳು ಬರುತ್ತಿವೆ. ಸ್ವಸಹಾಯ ಸಂಘಗಳಿಗೆ ಖಾತೆ ತೆರೆಯಲು ಅನಗತ್ಯ ತೊಂದರೆ ನೀಡಬಾರದು.
ಕನಿಷ್ಟ ದಾಖಲೆಗಳನ್ನು ಪಡೆದು ಬೇಸಿಕ್ ಉಳಿತಾಯ ಖಾತೆ (BSB) ಅಥವಾ ಉಳಿತಾಯ ಖಾತೆ (SB) ತೆರೆದು ಕೊಡಿ ಪರ್ವನೆಂಟ್ ಅಕೌಂಟ ನಂಬರ್ (PAN) ಎಲ್ಲರಿಗೂ ಕಡ್ಡಾಯಗೊಳಿಸಬೇಡಿ ಎಂದು ಸೂಚಿಸಿದರು.
ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಬಳಸದೇ ಇರುವವರು ಮತ್ತು ಸಹಾಯ ಡೆಸ್ಕ್ ಮೂಲಕ ಅನಕ್ಷರಸ್ಥ ಗ್ರಾಹಕರಿಗೆ ನೆರವಾಗದ ಶಾಖೆಗಳು ಹಾಗೂ ಅಧಿಕಾರಿ, ಸಿಬ್ಬಂಧಿ, ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗ ಪಡಿಸುವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಮಾತನಾಡಿ, ಸರ್ಕಾರದ ಸೇವೆಯಲ್ಲಿರುವ ನಮ್ಮೆಲ್ಲರ ಮೇಲೆ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸುವ ಹೊಣೆ ಇರುತ್ತದೆ. ಉದ್ಯೋಗಾವಕಾಶಗಳಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬರುವುದು ಅನಿವಾರ್ಯ.
ವಿಶೇಷವಾಗಿ ಗ್ರಾಮೀಣ ಜನರ ಸಂಪರ್ಕಕ್ಕೆ ಬರುವಂತಹ ಸೇವೆಗಳಲ್ಲಿರುವ ಬ್ಯಾಂಕಿಂಗ್ ವಲಯದ ಅಧಿಕಾರಿ, ಸಿಬ್ಬಂದಿ, ಕನ್ನಡ ಬಳಸುವುದು ಮತ್ತು ಸ್ಥಳೀಯರೊಂದಿಗೆ ಅವರ ಮಾತೃ ಭಾಷೆಯಲ್ಲಿಯೇ ವ್ಯವಹರಿಸುವುದು ಕಡ್ಡಾಯ. ಬ್ಯಾಂಕಿಂಗ್ ನೇಮಕಾತಿ ನಿಯಮಗಳಲ್ಲಿ ಕನ್ನಡ ವ್ಯಾಸಂಗ ಕಡ್ಡಾಯವಾಗಿರದಿದ್ದರೂ ಸ್ಥಳೀಯ ಭಾಷೆ ಗೊತ್ತಿರಬೇಕು ಎಂಬ ಸರಳ ನಿಯಮವಿದೆ.
ಸೇವೆಯನ್ನು ಸಮರ್ಪಕವಾಗಿ ನೀಡಲು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವುದು ಅತ್ಯಗತ್ಯ ಆರ್ಥಿಕ ಸಾಕ್ಷರತಾ ಶಿಬಿರಗಳನ್ನು ಎಲ್ಲ ಬ್ಯಾಂಕುಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಬೆಳೆ, ಮನೆ ಹಾನಿಗೊಳಗಾದ ವ್ಯಕ್ತಿಗಳಿಗೆ ನೀಡಿದ ಪರಿಹಾರ ಹಣವನ್ನು ಅವರ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು.
ಬ್ಯಾಂಕುಗಳ ಮೂಲಕ ಅನೇಕ ಸರ್ಕಾರಿ ಸೌಲಭ್ಯಗಳು ಜನರಿಗೆ ದೊರೆಯುತ್ತಿವೆ ಅವುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ಮೂಲಕ ಸಾಮಾನ್ಯ ಗ್ರಾಹಕರಿಗೆ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್. ಅಣ್ಣಯ್ಯ ಮಾತನಾಡಿ ಬ್ಯಾಂಕುಗಳು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಕನ್ನಡದ ಬಳಕೆಗೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಕಲಿಯುವ ಅವಕಾಶ ಕಲ್ಪಿಸಬೇಕು. ಸ್ಥಳೀಯ ಎಲ್ಲಾ ಶಾಖೆಗಳಲ್ಲಿ ಸಹಾಯ ಡೆಸ್ಕ್ ತೆರೆದು ಗ್ರಾಹಕರಿಗೆ ಅಗತ್ಯ ಮಾರ್ಗದರ್ಶನ ನೆರವು ನೀಡಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೇರವುಬ ನೀಡುವ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೇಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಮತಿ ಚಕ್ರವರ್ತಿ, ನಬಾರ್ಡ ಉಪ ಪ್ರಧಾನ ವ್ಯವಸ್ಥಾಪಕ ಮಯೂರ ಕಾಂಬಳೆ ಮತ್ತಿತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243