ದಿನದ ಸುದ್ದಿ

“ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ರೈತರೊಂದಿಗೊಂದು ದಿನ ಕಾರ್ಯಕ್ರಮ ಜಾರಿ” : ಕೃಷಿ ಸಚಿವ ಬಿ.ಸಿ. ಪಾಟೀಲ್

Published

on

ಸುದ್ದಿದಿನ,ವಿಜಯಪುರ: ರೈತರ ಆತ್ಮಹತ್ಯೆ ತಡೆಯಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ರೈತರ ಮನೆ ಬಾಗಿಲಿಗೆ ಸರ್ಕಾರವನ್ನು ಒಯ್ಯುವ ನಿಟ್ಟಿನಲ್ಲಿ ಸರ್ಕಾರವು ರೈತರೊಂದಿಗೆ ಒಂದು ದಿನದಂತಹ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಹೇಳಿದರು.

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಇಂದು ರೈತರಿಗೊಂದು ದಿನ ಕಾರ್ಯಕ್ರಮದ ಅಂಗವಾಗಿ ಪ್ರಗತಿಪರ ರೈತರಾದ ಪವಾಡೆಪ್ಪ ವಡ್ಡರ ಅವರ ಜಮೀನು ಭೇಟಿ ,ಪರಿಶೀಲನೆ ನಂತರ ರೈತ ಸಿದ್ಧು ಮೇಟಿ ಅವರ ತೋಟದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭ ಹಾಗೂ ಪ್ರಗತಿಪರ ರೈತ ಹೇಮರೆಡ್ಡಿ ಭೇಟಿ ತೋಟದಲ್ಲಿ ಎಲೆ ಬಳ್ಳಿ ಹಾಗೂ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಕಿಸಾನ್ ಸಮ್ಮಾನ ಯೋಜನೆಯಡಿ ನೂರಕ್ಕೆ ಶೇ.97 ರಷ್ಟು ಸಾಧನೆ ಮಾಡಿದ ಹಿನ್ನೆಲೆ ದೇಶಕ್ಕೆ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಲಭಿಸಿರುವುದು ಹೆಮ್ಮೆ ಹಾಗೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರ ಹಾಗೂ ರೈತನನ್ನು ಸ್ವಾವಲಂಬಿಯಾಗಿ ಮಾಡಲು ಸರ್ಕಾರ ಬದ್ಧವಾಗಿರುವ ಈ ನಿಟ್ಟಿನಲ್ಲಿ ಗರಿಷ್ಠ ಸಬ್ಸಿಡಿ ಸಾಲ ಯೋಜನೆಗಳನ್ನು ರೂಪಿಸಿದೆ. ರೈತರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಿಕೊಳ್ಳುವುದರೊಂದಿಗೆ ಆದರ್ಶ ರೈತ ಪ್ರಶಸ್ತಿ ಪುರಸ್ಕøತ ಪವಾಡೆಪ್ಪ ವಡ್ಡರ ರವರಂತೆ ಕೃಷಿಯಲ್ಲಿ ಪ್ರಗತಿ ಸಾಧಿಸಿ ಇತರರಿಗೂ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಥಮ ಕುಂದುಕೊರತೆ ಸಭೆ | ಸಿಂದಗಿ ತಾಲೂಕಿನ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ :‌ ಸಚಿವೆ ಶಶಿಕಲಾ ಜೊಲ್ಲೆ

ರೈತರು ಸಾವಯವ ಸಮಗ್ರ ಕೃಷಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿ ಪವಾಡೆಪ್ಪ ವಡ್ಡರ ಅವರ ಜಮೀನಿನಲ್ಲಿ ಗೋ ಪೂಜೆ ಮಾಡಿ ನಾಟಿ ಕೋಳಿ, ಆಡು ಘಟಕಗಳು ಸೇರಿದಂತೆ ಬಾಳೆ ತೋಟ, ಎರೆ ಹುಳು ಗೊಬ್ಬರ ಘಟಕ, ಬೈಕ್ ಟ್ರಾಲಿ ಅವಿಷ್ಕಾರವನ್ನು. ಹಾಗೂ ಶೇಂಗಾ ಬೆಳೆಗೆ ಡ್ರಿಪ್ ನೀರಾವರಿ ಸೌಲಭ್ಯ ವಿಕ್ಷೀಸಿದ ಅವರು ನಂತರ 12 ಎಕರೆ ಜಮೀನಿನಲ್ಲಿ ಸಿದ್ಧುಮೇಟಿ ರೈತನ ಗೋಧಿ ಕಟಾವು ಯಂತ್ರವನ್ನು ಖುದ್ದಾಗಿ ತಾವೇ ಕಟಾಯಿಸಿ ಪ್ರೋತ್ಸಾಹಿಸಿ ಅದರಂತೆ ದ್ರಾಕ್ಷಿ ಎಲೆ ತೋಟ ವಿಕ್ಷಿಸಿ ಬೆಳೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಆದರ್ಶ ರೈತ ಪ್ರಶಸ್ತಿ ಪುರಸ್ಕøತ, ಪ್ರಗತಿ ಪರ ರೈತ ಪವಾಡೆಪ್ಪ ವಡ್ಡರ ಅವರು ರೈತರೊಂದಿಗೊಂದು ದಿನ ಕಾರ್ಯಕ್ರಮದ ಅಂಗವಾಗಿ ಕೃಷಿ ಸಚಿವರ ಆಗಮನದಿಂದ ಸರ್ಕಾರವೇ ತಮ್ಮ ಮನೆ ಬಾಗಿಲಿಗೆ ಬಂದತಾಗಿದ್ದು, ತನ್ನ ಜೀವನ ಸಾರ್ಥಕವಾಯಿತು. ನನ್ನನ್ನು ಗುರುತಿಸಿ, ಪ್ರೋತ್ಸಾಹಿಸಿದ ಸರ್ಕಾರ ಹಾಗೂ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ ಸರ್ಕಾರವೇ ರೈತರ ಬಳಿ ಬಂದಿದ್ದು, ಕೃಷಿ ಸಚಿವರು ಪ್ರಗತಿಪರ ರೈತರಿಗೆ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗೆ ಇಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಪ್ರೋ ತ್ಸಾಹಿಸುತ್ತಿರುವುದು ರೈತರಲ್ಲಿ ಆತ್ಮಸ್ಥೈರ್ಯ ತುಂಬಲಿದೆ. ಅದರಂತೆ ಹತಾಶೆಗೊಂಡ ರೈತರಿಗೂ ಇಂತಹ ಸಚಿವರ ವಿಶೇಷ ಕಾರ್ಯಕ್ರಮಗಳಿಂದ ಹೆಚ್ಚಿನ ಉತ್ಸಾಹ ಮತ್ತು ಪೆÇ್ರೀತ್ಸಾಹ ದೊರೆಯಲಿದೆ. ಜಿಲ್ಲೆಯಲ್ಲಿಯೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಕುಂದುಕೊರತೆ ಸಭೆಯನ್ನು ಸಹ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕವಡಿಮಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ

ನಂತರ ಕವಡಿಮಟ್ಟಿ ಗ್ರಾಮದಲ್ಲಿ ರೈತರೊಂದಿಗೊಂದು ದಿನ ಮುಕ್ತಾಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ರೈತರ ಹೊಲಗಳಿಗೆ ರಸ್ತೆ ಸುಧಾರಣೆ, ರೈತ ಮಿತ್ರ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ ಅವರು ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು.

ಆತ ಎದೆಯುಬ್ಬಿಸಿ ನಡೆಯುವಂತೆ ಮಾಡಬೇಕು. ಕೃಷಿ ಇದ್ದರೆ ಮಾತ್ರ ಜಗತ್ತು, ಜೀವನ ಅನ್ನೋದು ಇರುತ್ತೆ. ಕೃಷಿಯಿಲ್ಲದಿದ್ದರೆ ಏನೂ ಇಲ್ಲ ಎಲ್ಲವೂ ದುರ್ಭಿಕ್ಷವಾಗುತ್ತೆ. ಇದಕ್ಕಾಗಿಯೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರೈತರೊಂದಿಗೊಂದು ದಿನ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದೇನೆ. ಎಲ್ಲಾ ಜಿಲ್ಲೆಗಳ ರೈತರ ಸ್ಥಿತಿಗತಿ ಅಧ್ಯಯನ ಮಾಡಿದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ.

ರೈತರನ್ನು ನೋವಿನಿಂದ ಮುಕ್ತಗೊಳಿಸುವ ಮಾರ್ಗೋಪಾಯ ಕಂಡುಕೊಳ್ಳುತ್ತೇನೆ. ಕೃಷಿ ನೀತಿಯಲ್ಲಿ ಸಮಗ್ರ ಬದಲಾವಣೆ ಅಗತ್ಯವಾಗಿದ್ದು ಕಡಿಮೆ ಖರ್ಚು ಹೆಚ್ಚು ಆದಾಯ ಪದ್ಧತಿ ಜಾರಿಗೆ ಬರಬೇಕಿದೆ. ಇಂದು ನಾವೆಲ್ಲ ಭೂಮಿಗೆ ವಿಷವುಣಿಸುತ್ತಿದ್ದೇವೆ, ವಿಷವನ್ನೇ ಸೇವಿಸ್ತಿದ್ದೇವೆ. ತಿನ್ನೋ ಅನ್ನ ವಿಷಪೂರಿತವಾಗಿದೆ. ನಾವೆಲ್ಲ ಸಾವಯವಕ್ಕೆ ಮಹತ್ವ ಕೊಡಬೇಕಿದೆ. ರೈತರು ನೇರವಾಗಿ ಮಾರುಕಟ್ಟೆ ಪ್ರವೇಶಿಸುವಂತಾಗಬೇಕು.

ರಾಜ್ಯದ 68 ಲಕ್ಷ ರೈತರಿಗೆ ಸ್ವಾಭಿಮಾನಿ ಕಾರ್ಡ ಕೊಡುವ ಯೋಜನೆ ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ನೀರಾವರಿ ಭೂಮಿಯಲ್ಲಿ ನಿರಂತರ ಹಣ ಬರಬೇಕಾದ್ರೆ ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ಈ ಪದ್ಧತಿ ಕೋಲಾರದಲ್ಲಿದೆ. 1200 ವರ್ಷಗಳ ಹಿಂದೆ ಬಸವಣ್ಣ ಕೃಷಿ, ಕೃಷಿಕರಿಗೆ ಕೊಟ್ಟಿದ್ದ ಮಹತ್ವವನ್ನು ನಾವಿಂದು ಅನುಸರಿಸಬೇಕಾಗಿದೆ.

ಈ ದೇಶದಲ್ಲಿ ಶೇ.60ರಷ್ಟು ಉದ್ಯೋಗ ಕೊಡ್ತಿರೋದು ರೈತರು. ಶೇ.18ರಷ್ಟು ಜಿಎಸ್ಟಿ ರೈತರಿಂದಲೇ ಬರುತ್ತದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 8 ಎಫ್ಪಿಓಗಳನ್ನು ಮಂಜೂರು ಮಾಡಿದೆ. ಕೃಷಿಗೆ ಒಂದು ಲಕ್ಷ ಕೋಟಿ ರೂ ಮೀಸಲಿಟ್ಟಿದೆ ಎಂದು ಹೇಳಿದರು.

ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಮಾತನಾಡಿ ಮುದ್ದೇಬಿಹಾಳ ತಾಲೂಕಿನಲ್ಲಿ ಸಮಗ್ರ ಕೃಷಿ ಪದ್ಧತಿ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ಇದೆ. ಕಾರಣ ಕೃಷಿ ಸಂಶೋಧನಾ ಮತ್ತು ಕೌಶಲ್ಯ ಕೇಂದ್ರವನ್ನು ಮತ್ತು ಕೃಷಿ ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಲು ಕೃಷಿ ಸಚಿವರಲ್ಲಿ ಮನವಿ ಮಾಡಿ ಸರ್ಕಾರಿ ಜಮೀನಿನ ಲಭ್ಯತೆಯೂ ಸಹ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷಿ ಸಚಿವರು ಹಾಗೂ ಗಣ್ಯರು ಜಲಪುರ ಕೆರೆಗೆ ಬಾಗಿನ ಅರ್ಪಣೆ ಮಾಡಿದರು. ರೈತರ ಮೆರವಣಿಗೆ, ಕೃಷಿ ವಸ್ತು ಪ್ರದರ್ಶನ ವೀಕ್ಷಣೆ, ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಆತ್ಮಾ ಯೋಜನೆಯಡಿ ಪ್ರಶಸ್ತಿ ವಿಜೇತ ರೈತರಿಗೆ ಸನ್ಮಾನಿಸುವ ಮೂಲಕ ಅತ್ಯಂತ ಯಶಸ್ವಿ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಕ್ತಾಯಗೊಳಿಸಲಾಯಿತು.

ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಮಾತನಾಡಿ ಕೃಷಿ ಸಚಿವರ ಆಸಕ್ತಿಯಿಂದ ರೈತರ ಮನೆಬಾಗಿಲಿಗೆ ತೆರಳಿ ಹೊಲಗಳ ಮಣ್ಣು ಪರೀಕ್ಷೆಗೆ ಮೊಬೈಲ್ ವಾಹನ ಯೋಜನೆ ಜಾರಿಗೊಳಿಸಲಾಗಿದೆ. ರೈತರ ಮನೆಬಾಗಿಲಿಗೆ ಸರ್ಕಾರ ಬಂದಿದ್ದು, ರೈತರಿಗೆ ನೆರವು ನೀಡಲಾಗುತ್ತಿದೆ. ಈಗಾಗಲೇ ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ ಪರಿಹಾರ ವಿತರಿಸಲಾಗಿದೆ. ಫಸಲ್ ಬಿಮಾ ಯೋಜನೆ ಸಮಸ್ಯೆಗಳನ್ನು ಯಾವುದೇ ಅವಧಿಯಲ್ಲಿ ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಒ ಗೋವಿಂದ ರೆಡ್ಡಿ, ತಹಶೀಲ್ದಾರರು ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version