ದಿನದ ಸುದ್ದಿ
ಖಂಡ್ರೆ ಸೂತ್ರಕ್ಕೆ ಮಣಿದ ಬೆಳಗಾವಿ ಲಕ್ಷ್ಮೀ; ಪಿಎಲ್ಡಿ ಬ್ಯಾಂಕ್ ಸೀಟ್ ಹಂಚಿಕೆ ಫೈನಲ್
ಸುದ್ದಿದಿನ ಡೆಸ್ಕ್: ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಬೆಳಗಾವಿ ರಾಜಕೀಯ ವಲಯದಲ್ಲಿ ಎದ್ದಿದ್ದ ಭಿನ್ನಮತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಧ್ಯಸ್ಥಿಕೆಯಿಂದ ಶಮನವಾಗಿದ್ದು, ಪಿಎಲ್ಡಿ ಬ್ಯಾಂಕ್ ಚುನಾವಣೆ ಪ್ರಕ್ರಿಯೆ ನಡೆಸದೇ ಅವಿರೋಧ ಆಯ್ಕೆ ಮಾಡುವ ಸೂತ್ರಕ್ಕೆ ಮಣಿ ಹಾಕಿದ್ದಾರೆ ಎನ್ನಲಾಗಿದೆ. ಮರಾಠಾ ಸಮಾಜಕ್ಕೆ ಅಧ್ಯಕ್ಷಗಿರಿ ಮತ್ತು ಲಿಂಗಾಯತ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ಚಿಂತನೆ ನಡೆಸಿದ್ದಾರೆ.
ಪಿಎಲ್ಡಿ ಬ್ಯಾಂಕ್ನ ಒಂಭತ್ತು ನಿರ್ದೇಶಕರ ಜತೆ ಲಕ್ಷ್ಮೀ ಹೆಬ್ಬಾಳ್ಕರ ನಿರಂತರ ಸರದಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಚುನಾವಣೆ ಸಮಯಕ್ಕೆ ಸರಿಯಾಗಿ ಬ್ಯಾಂಕ್ಗೆ ಹೋಗಲಿರುವ ನಿರ್ದೇಶಕರು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಅನೇಕ ಕಾಂಗ್ರೆಸ್ ಮುಖಂಡರು ಹೆಬ್ಬಾಳ್ಕರ್ಗೆ ನಿರಂತರ ಫೋನ್ ಕರೆ ಮಾಡಿ ಬಂಡಾಯ ಶಮನಗೊಳಿಸುವ ಕಸರತ್ತ ಮುಂದುವರಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಚರ್ಚಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜಿ ಸೂತ್ರ ಹೆಣೆದಿದ್ದು, ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳಕರ ಇಬ್ಬರ ವರ್ಚಸ್ಸಿಗೂ ಧಕ್ಕೆಯಾಗದಂತೆ ಕಾಂಗ್ರೆಸ್ ಹೈಕಮಾಂಡ್ ಸಂಧಾನದ ಸೂತ್ರ ಬಳಸಲಾಗುತ್ತಿದೆ. ಇಬ್ಬರೂ ಸೂಚಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ಪರ್ಯಾಯ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡುವ ತಂತ್ರಗಾರಿಕೆಯನ್ನು ಹೈಕಮಾಂಡ್ ಹೆಣೆದಿದ್ದು, ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಲಹಕ್ಕೆ ಬ್ರೇಕ್ ಹಾಕಲಿದೆ.
ಮರಾಠಾ ಸಮಾಜಕ್ಕೆ ಅಧ್ಯಕ್ಷ ಸ್ಥಾನ ಮತ್ತು ಲಿಂಗಾಯತ ಸಮಾಜಕ್ಕೆ ಉಪಾಧ್ಯಕ್ಷ ಸ್ಥಾನ ನೀಡುವ ಸೂತ್ರಕ್ಕೆ ಬ್ಯಾಂಕಿನ 14 ನಿರ್ದೇಶಕರು ಒಪ್ಪಿಕೊಂಡಿದ್ದಾರೆ. 14 ಜನ ನಿರ್ದೇಶಕರು ಒಟ್ಟಿಗೆ ಬ್ಯಾಂಕಿಗೆ ಬಂದು ಒಗ್ಗಟ್ಟು ಪ್ರದರ್ಶನ ಮಾಡುವ ಸಾಧ್ಯತೆ ಇದೆ.