ದಿನದ ಸುದ್ದಿ

ಭಾರತ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್

Published

on

  • ಶಿವರಾಜು ಎ ಆರ್, ತುಮಕೂರು

ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರು ಪ್ರಶ್ನಾತೀತವಾಗಿ, ಕಾಲಾತೀತವಾಗಿ ಈವರೆಗೆ ಭಾರತ ಕಂಡ ಮಹಾನ್ ಮೇಧಾವಿಗಳಲ್ಲಿ ಅಗ್ರಗಣ್ಯರು.

ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಅಂಬವಾಡೆ ಎಂಬ ಗ್ರಾಮದ ಮಹರ್ ಎಂಬ ಜಾತಿಯಲ್ಲಿ ರಾಮ್ ಜಿ ಸಕ್ಪಾಲ್ ಮತ್ತು ಭೀಮಾಬಾಯಿ ದಂಪತಿಗಳ 14ನೇ ಮಗನಾಗಿ 1891ಏಪ್ರಿಲ್14ರಂದು ಜನಿಸಿದ ಅಂಬೇಡ್ಕರ್ ರವರ ಮೂಲ ಹೆಸರು ಭೀಮ ಎಂದು.  ಬಾಲ್ಯದಲ್ಲಿ ಜಾತಿಯ ಕಾರಣಕ್ಕೆ ಅನೇಕ ಅವಮಾನ, ತಿರಸ್ಕಾರ, ಭೇದವನ್ನು, ಕೀಳಿರಿಮೆಯನ್ನು ಅನುಭವಿಸಿದ ಅಂಬೇಡ್ಕರ್ ರವರು ತಮ್ಮ ಬಡತನ, ಸಂಕಷ್ಟಗಳ ನಡುವೆ ರಮಾಬಾಯಿರವರನ್ನು ಬಾಲ್ಯವಿವಾಹವಾದರೂ ಸಹ ಓದಿನ ಕಡೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

ತೀವ್ರ ಬಡತನದ ನಡುವೆ ಬರೊಡ ಮಹಾರಾಜರ ನೆರವಿನೊಂದಿಗೆ ಮುಂಬೈ ವಿಶ್ವವಿದ್ಯಾಲಯ,
ಕೊಲಂಬಿಯಾ ವಿಶ್ವವಿದ್ಯಾಲಯ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮುಂತಾದ  ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಆ ಕಾಲಘಟ್ಟದಲ್ಲಿ ಇಡೀ ಭಾರತದಲ್ಲಿಯೇ ಯಾರೂ ಸಹ ಸಂಪಾದಿಸಿರದ ವಿದ್ಯಾರ್ಹತೆಗಳನ್ನು ಸಂಪಾದಿಸಿದರು. ಈಗಲೂ ಸಹ ಜಗತ್ತಿನ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬಲ್ಲವರು. ಇಡೀ ಭಾರತದ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ಭೇದ ಭಾವವಿಲ್ಲದೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.

ಮೂಲತಃ   ಅವರೊಬ್ಬ ಅರ್ಥಶಾಸ್ತ್ರಜ್ಞರಾದರೂ ಅವರೊಬ್ಬ ಸಮಾಜಶಾಸ್ತ್ರಜ್ಞ, ಇತಿಹಾಸ ತಜ್ಞ, ಸಮಾನತೆಯ ಹೋರಾಟಗಾರ, ಒಬ್ಬ ಅದ್ಬುತ ವಕೀಲರು,
ಕಾರ್ಮಿಕರ, ಮಹಿಳೆಯರ,ಅಲ್ಪಸಂಖ್ಯಾತರ, ದೀನ ದಲಿತರ ಹಕ್ಕುಗಳ ಪರ ಧಣಿವರಿಯದ ಹೋರಾಟಗಾರ, ನೀರಾವರಿ ತಜ್ಞ ಇತ್ಯಾದಿ ಬಹುಮುಖ ಪಾಂಡಿತ್ಯ ಹೊಂದಿದ್ದವರು.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಪ್ರಪಂಚದ ಬಹುದೊಡ್ಡ, ಅತ್ಯಂತ ಶ್ರೇಷ್ಠ ಎನಿಸಿದ ಭಾರತದ ಸಂವಿಧಾನವನ್ನು ಉಳಿದ ಸದಸ್ಯರ ರಾಜೀನಾಮೆ, ಸಾವು, ತೀವ್ರ ನಿರ್ಲಕ್ಷ್ಯ ಮತ್ತು ಉದಾಸೀನಗಳ ನಡುವೆ ಏಕಾಂಗಿಯಾಗಿ  ಸಿದ್ಧಗೊಳಿಸಿದ ಪ್ರಚಂಡ ಬುದ್ಧಿವಂತ, ಮಹಾನ್ ಮೇಧಾವಿ. ಅಲ್ಲದೇ ಸಂವಿಧಾನದ ಮೇಲೆ ಸುಮಾರು ಎರಡೂವರೆ ವರ್ಷಗಳ ಕಾಲ ನಡೆದ ಚರ್ಚೆಯಲ್ಲಿ ಇಡೀ ಸಂಸತ್ತಿಗೆ ಏಕಾಂಗಿಯಾಗಿ ಉತ್ತರಿಸಿದ ಮಹಾನ್ ಜ್ಞಾನಿ.

ಪ್ರಾಬ್ಲಮ್ ಆಫ್ ರೂಪೀ, ಹೂ ವರ್ ದಿ ಶೂದ್ರಾಸ್, ಹೂ ವರ್ ದಿ ಅನ್ ಟಚಬಲ್ಸ್ ಮುಂತಾದ  ಅವರ ಬರಹಗಳು ಮಾನವಕುಲವನ್ನು ಕಣ್ತೆರೆಸುವಂತಿವೆ. ವೇದ ಉಪನಿಷತ್ತು ಇತ್ಯಾದಿಗಳನ್ನು ಓದಿಕೊಂಡು ಸಮಕಾಲೀನ ಸಾಮಾಜಿಕ ಸ್ಥಿತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದ ಸಮಾಜಮುಖಿ ಚಿಂತಕ. ಅವರ ಸಾಧನೆಗಳನ್ನು ಈ ಒಂದು ಪುಟ್ಟ ಲೇಖನದಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

ಅವರ ಎಲ್ಲಾ ಸಾಧನೆಗಳನ್ನು ಬದಿಗಿರಿಸಿ ಅವರನ್ನು ಒಬ್ಬ ದಲಿತರ ನಾಯಕ, ದಲಿತರಿಗೆ ಮೀಸಲಾತಿ ಕೊಡಿಸಿದವರು ಇತ್ಯಾದಿ ಸೀಮಿತಗೊಳಿಸಿ ಅವರಮೇಲೆ ಐತಿಹಾಸಿಕ ಅನ್ಯಾಯ ಮಾಡುತ್ತಿರುವುದು. ನಿಜವಾಗಿಯೂ ದೇಶದ್ರೋಹದ ಹಾಗೂ ಅತ್ಯಂತ ಅಮ ಅಮಾನವೀಯವಾದ ನಡವಳಿಕೆಯೇ ಸರಿ.
ಅವರ ಬಗೆಗಿನ  ಎಲ್ಲಾ ರೀತಿಯ ಪೂರ್ವಾಗ್ರಹಗಳನ್ನು  ತ್ಯಜಿಸಿ, ಅವರ ಬಗ್ಗೆ ತಿಳಿಯಬೇಕಾದರೆ ಅವರ ಪುಸ್ತಕಗಳನ್ನು ಓದುವುದು ಮತ್ತು ಅವುಗಳನ್ನು ಗ್ರಹಿಸಿ ವೈಯಕ್ತಿಕವಾಗಿ ಜೀವನದಲ್ಲಿ ಸಾರವಜನಿಕ ನೀತಿ ನಿರೂಪಣೆಯ ಸಂದರ್ಭದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರನ್ನು ಗೌರವಿಸುವ, ಅವರನ್ನು ಸತ್ಕರಿಸುವ ಹಾಗೂ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸರಿಯಾದ ಮಾರ್ಗ ಎಂಬುದು ನನ್ನ ಭಾವನೆ.. ಅವರ ಪುಸ್ತಕ ಓದುವ ಮನುಷ್ಯ ಒಬ್ಬ ಅತ್ಯುತ್ತಮ ಜ್ಞಾನಿಯಾಗಿ, ಮಾನವೀಯ ಕಾಳಜಿಯುಳ್ಳ ನಾಗರೀಕನಾಗಿ ರೂಪುಗೊಳ್ಳುತ್ತಾನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version