ದಿನದ ಸುದ್ದಿ
ದಾವಣಗೆರೆಯ ವಿವಿಧ ಆಸ್ಪತ್ರೆಗಳಲ್ಲಿಲ್ಲ ಬಯೋಮೆಟ್ರಿಕ್ ವ್ಯವಸ್ಥೆ | ಸಿಎಂ, ಆರೋಗ್ಯ ಸಚಿವರಿಗೆ ಪತ್ರ
ಸುದ್ದಿದಿನ ಡೆಸ್ಕ್ | ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇಲ್ಲ ಎಂದು ಜನಸಾಮಾನ್ಯರ ಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಬೆಳಕೇರಿ ಆರೋಪಿಸಿ ಸಿಎಂ, ಆರೋಗ್ಯ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಪಾರದರ್ಶಕ ನಿಯಮ ಹಾಗೂ ಸಿಬ್ಬಂದಿ ಕಡ್ಡಾಯ ಹಾಜರಾತಿ ದೃಷ್ಠಿಯಿಂದ ಸರ್ಕಾರಿ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಮತ್ತು ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿ ತರಲಾಗಿದೆ. ಆದರೆ ದಾವಣಗೆರೆ ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಪರಿಣಾಮಕಾರಿಯಾದ ರೀತಿಯಲ್ಲಿ ಇರುವುದಿಲ್ಲ. ಹಲವು ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಇದ್ದರೂ ಸಹ ಅದು ಕಾರ್ಯನಿರ್ವಹಿಸುತ್ತಿರುವುದಿಲ್ಲ. ಬಹುಮುಖ್ಯವಾಗಿ ಬಯೋಮೆಟ್ರಿಕ್ ಉಪಕರಣಗಳನ್ನು ಸಂಬಂಧಿಸಿದ ಆಸ್ಪತ್ರೆಯ ಸಿಬ್ಬಂಧಿಗಳೇ ಹಾಳುಮಾಡಿರುತ್ತಾರೆ, ಈ ಕಾರ್ಯಕ್ಕೆ ಆಸ್ಪತ್ರೆಯ ಮುಖ್ಯಸ್ಥರ ಸಹಾಯವು ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಸಿಬ್ಬಂಧಿಗಳು ಸರಿಯಾಗಿ ಆಸ್ಪತ್ರೆಗಳಿಗೆ ಹಾಜಾರಾಗದಿರುವುದು.
ದಿನನಿತ್ಯವೂ ಸಹ ಜಿಲ್ಲೆಯ ಹಲವು ಸಕರ್ಾರಿ ಆಸ್ಪತ್ರೆಗಳಾದ ಚಿಗಟೇರಿ ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆ, ಹರಿಹರ ತಾಲೂಕು ಆಸ್ಪತ್ರೆ ಹಾಗೂ ಮುಂತಾದ ಎಲ್ಲಾ ತಾಲೂಕುಗಳ ಆಸ್ಪತ್ರೆಗಳಿಗೆ ಸಿಬ್ಬಂಧಿಗಳು ಸರಿಯಾದ ಸಮಯಕ್ಕೆ ಹಾಜಾರಾಗುತ್ತಿಲ್ಲ, ಹಲವೆಡೆ ಸಿಬ್ಬಂಧಿಗಳು ಕೆಲಸಕ್ಕೆ ಬಾರದೇ ವೇತನ ಪಡೆಯುತಿದ್ದಾರೆ, ಇದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡರೋಗಿಗಳಿಗೆ ತೀವ್ರ ತೊಂದರೆಯಾಗಿರುತ್ತದೆ. ಆದ್ದರಿಂದ ಕೂಡಲೇ ಸರ್ಕಾರದ ಪ್ರಮುಖರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ಶ್ರೀಘ್ರವೇ ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಹಾಜಾರತಿ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಹಾಳಾಗಿರುವ ಬಯೋಮೆಟ್ರಿಕ್ ಉಪಕರಣಗಳನ್ನು ಸರಿಪಡಿಸಿ ಬಡರೋಗಿಗಳ ಹಿತಕಾಪಾಡುವಂತೆ ಈ ಮೂಲಕ ಮನವಿ ಮಾಡುತ್ತೇವೆ.