ದಿನದ ಸುದ್ದಿ

ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ, ಮಂಗಳೂರು : ಜಾತ್ಯತೀತತೆ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರಮುಖ ಆಶಯಗಳಲ್ಲೊಂದು. ಕೋಮುವಾದ ಸಂವಿಧಾನ ವಿರೋಧಿಯಾದುದು. ಸಮಾಜದಲ್ಲಿ ಕೋಮುವಾದ ಜೀವಂತವಾಗಿರುವ ವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮನುಷ್ಯ – ಮನುಷ್ಯನನ್ನು ದ್ವೇಷಿಸುವ ಕಡೆ ಪ್ರೀತಿ ಹುಟ್ಟಲು ಸಾಧ್ಯವೇ? ಸೌಹಾರ್ದ ಸಮಾಜ ನಿರ್ಮಾಣಕ್ಕೆ ವಿಶ್ವಮಾನವತ್ವವೇ ದಾರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಮಂಗಳೂರಿನಲ್ಲಿ ಸೋಮವಾರ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್.ಎಸ್.ಎಸ್ ದೇಶಪ್ರೇಮಿ ಸಂಘಟನೆಯಲ್ಲ, ಅದೊಂದು ಕೋಮು ಸಂಘಟನೆ. ತನ್ನನ್ನು ತಾನು ದೇಶಪ್ರೇಮಿ ಸಂಘಟನೆ ಎಂದು ಜನರಿಗೆ ಸುಳ್ಳು ಹೇಳುತ್ತಿದೆ. ಅದು ದೇಶಪ್ರೇಮಿ ಸಂಘಟನೆ ಎಂಬುದು ನಿಜವೇ ಆಗಿದ್ದರೆ ಸ್ವಾತಂತ್ರ್ಯ ಚಳವಳಿಗೆ ತನ್ನ ಕೊಡುಗೆ ಏನು ಎಂದು ಹೇಳಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ | ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ

ಎಸ್‌.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ಪರೋಕ್ಷವಾಗಿ ಬಿಜೆಪಿಗೆ ಬೆಂಬಲವಾಗಿ ನಿಂತಿವೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮುಸ್ಲಿಮರ ಮತ ಒಡೆದು, ಬಿಜೆಪಿಯ ಗೆಲುವಿಗೆ ನೆರವಾಯಿತು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‌ಡಿಪಿಐ ಮತ್ತು ಪಿ.ಎಫ್.ಐ ಕೈವಾಡವಿದೆ ಅಂತ ಮುಖ್ಯಮಂತ್ರಿಗಳಾದಿಯಾಗಿ ಹಲವು ಸಚಿವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ವಿಚಾರ ಸತ್ಯವಾಗಿದ್ದು, ಸರ್ಕಾರದ ಬಳಿ ಪುರಾವೆಗಳಿದ್ದರೆ ಆ ಸಂಘಟನೆಗಳನ್ನು ನಿಷೇಧಿಸಬೇಕಿತ್ತು. ಇದುವರೆಗೆ ಯಾಕೆ ನಿಷೇಧಿಸಿಲ್ಲ? ಎಂದು ಪ್ರಶ್ನಿಸಿದರು

ಗೋಮಾಂಸ ಸೇವೆನೆಗೆ ಸಂಬಂಧಿಸಿದ ಬಿಜೆಪಿಯ ನಿಲುವುಗಳೇ ದ್ವಂದ್ವದಿಂದ ಕೂಡಿವೆ. ಅವರ ಪ್ರಕಾರ ಇಲ್ಲಿಂದ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಿಂದ ಬರುವ ಗೋಮಾಂಸವನ್ನು ಇಲ್ಲಿ ತಿನ್ನಬಹುದಂತೆ. ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು? ಎಂದು ಮತ್ತೊಮ್ಮೆ ಬಿಜೆಪಿಗರಿಗೆ ಪ್ರಶ್ನೆಯಿಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version