ದಿನದ ಸುದ್ದಿ
ಪೆಟ್ರೋಲ್ ಬೆಲೆ ಪ್ರಶ್ನಿಸಿದ ಆಟೊ ಡ್ರೈವರ್ಗೆ ಬಿಜೆಪಿ ನಾಯಕರಿಂದ ಗೂಸಾ
ಸುದ್ದಿದಿನ ಡೆಸ್ಕ್: ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕುರಿತು ಪ್ರಶ್ನಿಸಿದ ಆಟೊ ಡ್ರೈವರ್ಗೆ ಬಿಜೆಪಿ ನಾಯಕ ವಿ. ಕಾಳಿದಾಸ್ ಹಲ್ಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷೆ ತಮಿಳಿಸಾಯ್ ಸೌಂದರಾಜನ್ ಅವರು ಚೆನ್ನೈನ ಸೈದಾಪೇಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ನಾಯಕಿಯ ಹಿಂದೆ ನಿಂತಿದ್ದ ಬಿಜೆಪಿ ಮುಖಂಡರ ಜತೆ ಖಾಕಿ ಬಟ್ಟೆ ಧರಿಸಿದ್ದ ಆಟೊ ಡ್ರೈವರ್ ಕೂಡ ಜತೆಯಲ್ಲಿದ್ದರು. ಸೌಂದರಾಜನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗಲೇ ಆಟೊ ಡ್ರೈವರ್ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರು. ಇದನ್ನು ಗಮನಿಸಿದ ಕಾಳಿದಾಸ್ ಅವರು ಆತನನ್ನು ಹಿಂದಕ್ಕೆ ತಳ್ಳಿ ಕಾಪಾಳಕ್ಕೆ ಬಾರಿಸಿದ್ದಾರೆ.
ಇದನ್ನು ಕಂಡರೂ ಕಾಣದಂತೆ ಸೌಂದರಾಜನ್ ಅವರು ಮಾಧ್ಯಮಗಳ ಮುಂದೆ ನಕ್ಕು ವಿಷಯ ಮರೆಮಾಚಲು ಯತ್ನಿಸಿದರು.
“ನಾನೊಬ್ಬ ಆಟೊ ಡ್ರೈವರ್. ಪೆಟ್ರೋಲ್ ಬಲೆ ಮೇಲೆ ನನ್ನ ಬದುಕು ನಿರ್ಧಾರವಾಗುತ್ತದೆ. ಇದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲವಾ,” ಎಂದು ಅವರು ನ್ಯೂಸ್ ಮಿನಿಟ್ಗೆ ತಿಳಿಸಿದ್ದಾರೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 85 ರೂ. ದಾಟಿದೆ. ನೂರರ ಆಸುಪಾಸಿಗೆ ತಲುಪಬಹುದಾದ ಸ್ಥಿತಿ ಗಮನಿಸಿರುವ ತಮಿಳುನಾಡಿನ ನಾಗರಿಕರು ಪ್ರತಿಭಟನೆ ಕಾವನ್ನು ಹೆಚ್ಚಿಸಿದ್ದಾರೆ.