ದಿನದ ಸುದ್ದಿ
ಜಗಳೂರು ಪಂಚಾಯಿತಿ ಗದ್ದುಗೆ ಬಿಜೆಪಿ ಪಾಲು
ಸುದ್ದಿದಿನ ದಾವಣಗೆರೆ: ಜಗಳೂರು ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ ಆ. 31ರಂದು ನಡೆದ ಚುನಾವಣೆ ಫಲಿತಾಂಶ
ಸೋಮವಾರ ಹೊರಬಿದ್ದಿದ್ದು, ಬಿಜೆಪಿ 11, ಕಾಂಗ್ರೆಸ್ 5, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಗದ್ದುಗೆ ಏರುವುದು ಖಚಿತವಾಗಿದೆ.
ಕಳೆದ ಬಾರಿ 11 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಈ ಸಲ ಕೇವಲ 5 ವಾರ್ಡ್ಗಳಲ್ಲಿ ಗೆದ್ದು ಅಧಿಕಾರ ಕೈತಪ್ಪಿಸಿಕೊಂಡಿದೆ. ಇನ್ನು 3 ಸ್ಥಾನ
ಪಡೆದಿದ್ದ ಜೆಡಿಎಸ್ 2 ಸ್ಥಾನಗಳಿಗೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ.
ತಿಪ್ಪೇಸ್ವಾಮಿಗೆ ಹ್ಯಾಟ್ರಿಕ್ ಗೆಲುವು:
ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ತಿಪ್ಪೇಸ್ವಾಮಿ ಹ್ಯಾಟಿಕ್ ಗೆಲುವು ಸಾಧಿಸಿದ್ದಾರೆ. 2017ರಲ್ಲಿ 9ನೇ ವಾರ್ಡಿನ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಗೆದ್ದಿದ್ದರು. 2013 ಮತ್ತು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಅಣ್ಣ- ತಂಗಿ ಗೆಲುವು
ಪ.ಜಾತಿ ಮಹಿಳೆ ಮೀಸಲಾದ ಜೆಸಿಆರ್ ಬಡಾವಣೆ- 1ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿರ್ಮಲಾ ಕುಮಾರಿ ಹಾಗೂ ಸಾಮಾನ್ಯ ಮೀಸಲು ಕ್ಷೇತ್ರವಾದ ಇಂದಿರಾ ಬಡಾವಣೆ ಪಶ್ಚಿಮದಲ್ಲಿ ಬಿಜೆಪಿಯಿಂದ ದೇವರಾಜ ಸ್ಪರ್ಧಿಸಿದ್ದು, ಅಣ್ಣ-ತಂಗಿ
ಇಬ್ಬರೂ ಗೆಲುವು ಪಡೆದಿದ್ದಾರೆ.
ಅಳಿಯ- ಮಾವ ಪರಾಜಯ
ಇಮಾಂ ಬಡಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಟಿ ರಾಘವೇಂದ್ರ, ಇಂದಿರಾ ಬಡಾವಣೆ ಪಶ್ಚಿಮದ ಕಾಂಗ್ರೆಸ್ ಅಭ್ಯರ್ಥಿ ಆರ್. ಅಕ್ಷಯ್ ಕುಮಾರ್ ಅಳಿಯ ಮತ್ತು ಮಾವ ಇಬ್ಬರು ಸೋಲು ಕಂಡಿದ್ದಾರೆ.