ದಿನದ ಸುದ್ದಿ
ರಾಜ್ಯಪಾಲರಿಗೆ ತಪ್ಪು ಮಾಹಿತಿ; ತನ್ನ ವೈಫಲ್ಯ ಮುಚ್ಚಲು ಬಿಜೆಪಿ ಸುಳ್ಳು ಹೇಳಿಸಿದೆ : ಸಿದ್ದರಾಮಯ್ಯ
ಸುದ್ದಿದಿನ, ಬೆಂಗಳೂರು : ಒಂದಷ್ಟು ಸುಳ್ಳು, ಇನ್ನೊಂದಿಷ್ಟು ತಪ್ಪು ಮಾಹಿತಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹತಾಶ ಪ್ರಯತ್ನ ನಡೆಸಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ವಿಧಾನ ಮಂಡಲ ಅಧಿವೇಶನ ಗುರುವಾರ ಆರಂಭವಾಗಿದ್ದು, ಅಧಿವೇಶನದಲ್ಲಿ ಮಾತನಾಡಿದ ಅವರು, ಕೊರೊನಾದಂತಹ ಮಾರಕ ರೋಗವನ್ನು ಬ್ರಹ್ಮಾಂಡ ಭ್ರಷ್ಟಚಾರವೆಸಗಲು ದುರುಪಯೋಗ ಪಡಿಸಿಕೊಂಡ ಯಡಿಯೂರಪ್ಪ ಸರ್ಕಾರ, ರೋಗ ನಿಯಂತ್ರಣದಲ್ಲಿನ ವೈಫಲ್ಯಗಳನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಮರೆಮಾಚಲು ಪ್ರಯತ್ನಿಸಿದೆ ಎಂದರು.
ತೆರಿಗೆಯಲ್ಲಿ ಪಾಲು, 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿವರವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದರೆ ಯಡಿಯೂರಪ್ಪನವರ ಸರ್ಕಾರದ ಬಣ್ಣ ಸಂಪೂರ್ಣ ಬಯಲಾಗುತ್ತಿತ್ತು ಎಂದು ಕಿಡಿಕಾರಿದರು.
ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶವೂ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ರಾಜ್ಯ ಸರ್ಕಾರ, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.24,941 ಕೋಟಿ ಪರಿಹಾರವನ್ನಷ್ಟೇ ಕೇಳಿ ರಾಜ್ಯಕ್ಕೆ ದ್ರೋಹ ಬಗೆದಿದೆ.
ಕಳೆದ ವರ್ಷ 25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರದಿಂದ ಕೇಳಿದರೂ ಸಿಕ್ಕಿರುವುದು ಮಾತ್ರ 1,634 ಕೋಟಿ ರೂಪಾಯಿ ಮಾತ್ರ. ರಾಜ್ಯ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ.
ಮಳೆ ಮತ್ತು ಪ್ರವಾಹದ ನಷ್ಟಕ್ಕೆ ರಾಜ್ಯ ಸರ್ಕಾರ ಇಲ್ಲಿಯ ವರೆಗೆ ನೀಡಿರುವ ಪರಿಹಾರ ಕೇವಲ ರೂ.36.57 ಕೋಟಿ ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ ಸಂತ್ರಸ್ತರಲ್ಲಿ ಯಾರೊಬ್ಬರಿಗೂ ಸೂಕ್ತ ಪರಿಹಾರಧನ ಈ ವರೆಗೆ ತಲುಪಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
https://twitter.com/siddaramaiah/status/1354723493061955592?s=19
ಸುದ್ದಿದಿನ.ಕಾಂ|ವಾಟ್ಸಾಪ್|9980346243