ರಾಜಕೀಯ

ದಾರಿ ತಪ್ಪಿದ ಸರ್ಕಾರದಿಂದ ಜನರನ್ನ ದಾರಿ ತಪ್ಪಿಸುವ ಹುನ್ನಾರ : ಬಿ ಕೆ ಹರಿಪ್ರಸಾದ್ ವಾಗ್ದಾಳಿ

Published

on

ಸುದ್ದಿದಿನ, ಬೆಂಗಳೂರು : ಪಠ್ಯ ಪರಿಷ್ಕರಣಾ ಸಮಿತಿಯನ್ನ ವಿಸರ್ಜನೆ ಮಾಡಿ ಪರಿಷ್ಕೃತ ಪಾಠಗಳನ್ನು ಉಳಿಸಿಕೊಳ್ಳುವ ಮೂಲಕ ತಾಂತ್ರಿಕ ತಂತ್ರಗಾರಿಕೆಯ ಗಿಮಿಕ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿಕೆ ಹರಿಪ್ರಸಾದ್ ಅವರು ಕಿಡಿಕಾರಿದ್ದಾರೆ.

ಈ ಮೂಲಕ ಮುಖ್ಯಮಂತ್ರಿಯವರೇ ರಾಜ್ಯದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ “ಕಲೆ” ನಾಗಪುರದವರಿಂದಲೇ ಕಲಿಯುತ್ತಿರಬೇಕು. ಒಬ್ಬ ನಿಕೃಷ್ಟ ಟ್ರೋಲರ್ ಗೆ ಪಠ್ಯ ಪರಿಷ್ಕರಣೆ ಅಧ್ಯಕ್ಷರನ್ನಾಗಿ ಮಾಡಿ ಇಡೀ ಸರ್ಕಾರವೇ ಮಂಡಿಯೂರಿರುವುದಷ್ಟೇ ಅಲ್ಲ ಹೊರಳಾಡುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ.

ಈ ನೆಲದ ಅಸ್ಮಿತೆಯಾಗಿರುವ ಬಸವಣ್ಣ, ನಾರಾಯಣ ಗುರುಗಳು, ಕುವೆಂಪುರಾದಿಯಾಗಿ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರ ಬಗ್ಗೆ ತುಚ್ಛಭಾವನೆಯಿಂದ ನೋಡಿದ್ದಲ್ಲದೇ, ಪಠ್ಯ ಪುಸ್ತಕದಲ್ಲಿ ನಾಗಪುರದ ಹಿಡನ್ ಅಜೆಂಡಾಗಳನ್ನು ತುರುಕಿರುವುದು ಜಗಜ್ಜಾಹೀರಾಗುತ್ತಿದೆ. ಒಬ್ಬ ಟ್ರೋಲರ್ ಕಡೆಯಿಂದ ಇಂತಹ ಕೆಲಸ ಮಾಡಿಸಿರುವ ಸರ್ಕಾರದ ದಾರಿದ್ರ್ಯತನಕ್ಕೆ ರಾಜ್ಯದ ಸಾಕ್ಷಿ ಪ್ರಜ್ಞೆಯಂತಿರುವ ಸಾಹಿತಿಗಳು, ಸ್ವಾಮೀಜಿಗಳು, ಬರಹಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಈ ಮಟ್ಟದ ಆಕ್ರೋಶ ಎಂದೂ ಬಂದಿರಲಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಒಬ್ಬ ಟ್ರೋಲರ್ ನ ಪರವಾಗಿ ವಾದ ಮಂಡಿಸುವ ಮೂಲಕ ಸರ್ಕಾರದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದಾರೆ. ಕುವೆಂಪುರವರು ಬರೆದ ನಾಡಗೀತೆಗೆ ಅವಮಾನ ಮಾಡಿದ್ದಲ್ಲದೇ, ಬುರ್ಜ ಖಲೀಫಾ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿದ್ದಾನೆ. ಮುಖ್ಯಮಂತ್ರಿಗಳೇ, ಕ್ರೈಂ ಮಾಡಿದವನಿಗೆ ಬಹುಮಾನ ನೀಡುತ್ತೇನೆ ಎನ್ನುವುದು ಕೂಡ ಕ್ರೈಂ. ಕುವೆಂಪು ಅವಹೇಳನ ಮಾಡಿದ್ದೇ ನಿಮ್ಮ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ. ಚರ್ಚೆಗಾಗಿ ಆತನಲ್ಲ ಎಂದುಕೊಂಡರೂ ಕುವೆಂಪು ಅವಹೇಳನಕ್ಕೆ ಬಹುಮಾನ ಘೋಷಿಸಿ ಅಪರಾಧಕ್ಕೆ ಪ್ರೋತ್ಸಾಹಿಸಿದವನನ್ನು ಬಂಧಿಸಬೇಕಲ್ಲವೇ ?

ಸ್ವಾಮೀಜಿಗಳು, ಸಾಹಿತಿಗಳು, ಬರಹಗಾರರು ಲೇಖಕರು ಸೇರಿದಂತೆ ಇಡೀ ವಿದ್ಯಾರ್ಥಿ ಸಮೂಹ ಇಂದು ಸರ್ಕಾರದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನ ಗೌರವಿಸಿ ಆಗಿರುವ ಪ್ರಮಾದಕ್ಕೆ ನಾಡಿನ ಕ್ಷಮೆ ಕೋರಿ ಈ ಟ್ರೋಲರ್ ಚಕ್ರತೀರ್ಥನನ್ನ ಅರೆಸ್ಟ್ ಮಾಡಿ. ಬಸವಣ್ಣ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಸೇರಿದಂತೆ ಅನೇಕ ಮಹನೀಯರಿಗೆ ಅಪಮಾನೀಕರಿಸಿರುವ ಹೊಸ ಪಠ್ಯ ಪರಿಷ್ಕರಣೆಯನ್ನ ರದ್ದುಗೊಳಿಸಿ, ಹಿಂದೆಯಿದ್ದ ಪುಸ್ತಕಗಳನ್ನೇ ವಿದ್ಯಾರ್ಥಿಗಳಿಗೆ ಭೋದನೆ ಮಾಡಲು ಅನುವು ಮಾಡಿಕೊಡಬೇಕು.

ನಿಮ್ಮ ಸರ್ಕಾರದ ಮಂತ್ರಿ ಮಹಾಶಯರು ಸ್ವಾಮೀಜಿಗಳು, ಸಾಹಿತಿಗಳ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಕಡಿವಾಣ ಹಾಕಿ. ಶಾಲೆಗಳು ಆರಂಭವಾಗಿ ಇಪ್ಪತ್ತು ದಿನಗಳಿಗೂ ಹೆಚ್ಚಾಗಿದೆ.ಶಿಕ್ಷಣ ಸಚಿವರ ಸುಳ್ಳಿನ ಕಂತೆಗಳನ್ನ ದಿನಕ್ಕೊಂದು ಧಾರಾವಾಹಿಯಂತೆ ಬಿಚ್ಚಿಡುತ್ತಿದ್ದಾರೆ. ಈಗಲಾದರೂ ಹಾವಿನಪುರದವರ ಆದೇಶಕ್ಕಾಗಿ ಕಾಯದೇ ಆರೋಗ್ಯಕರ ಭವಿಷ್ಯತ್ತು ರೂಪಿಸಲಿರುವ ಮಕ್ಕಳ ಶಿಕ್ಷಣಕ್ಕಾಗಿ ಕಿಂಚಿತ್ತಾದರೂ ಪ್ರಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ವರ್ತಮಾನದಲ್ಲಿ ನೀವು ಮಾಡಿರುವ ಪ್ರಮಾದಕ್ಕೆ ಇತಿಹಾಸ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version