ದಿನದ ಸುದ್ದಿ

ದಾವಣಗೆರೆ | ರಕ್ತದಾನಿಗಳು ಜೀವ ಉಳಿಸುವ ರಕ್ಷಕರು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಗೊತ್ತಿದ್ದೋ, ಗೊತ್ತಿಲ್ಲದೆಯೊ ಯಾರದೋ ಪ್ರಾಣ ಉಳಿಸಲು ಕಾರಣರಾಗಿರುವ ರಕ್ತದಾನಿಗಳು ಜೀವ ಉಳಿಸುವ ರಕ್ಷಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತಭಂಡಾರ, ಜಿಲ್ಲಾ ಚಿಗಟೇರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ.ಜಿಎಸ್.ಶಿವರುದ್ರಪ್ಪ ಸಭಾಂಗಣದಲ್ಲಿ “ಸುರಕ್ಷಿತ ರಕ್ತ ಜೀವ ರಕ್ಷಕ” ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರ ಸ್ಥಳವನ್ನಾಗಿಸಿ” ಎಂಬ ಘೋಷವಾಕ್ಯದಡಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸಬಹುದು. ಇದರಿಂದಾಗಿ ಹಲವಾರು ಜನರು ಸಾವಿನಿಂದ ಪಾರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳ ಕಾರ್ಯ ಶ್ಲಾಘನೀಯವಾಗಿದೆ. ಅವರಿಗೆ ನಾವೆಲ್ಲರೂ ಹೃದಯ ಪೂರ್ವಕ ಧನ್ಯವಾದ ಅರ್ಪಿಸಬೇಕಿದೆ ಎಂದ ಅವರು, ವಿಶ್ವ ರಕ್ತದಾನಿಗಳ ದಿನಾಚರಣೆಯ ಘೋಷವಾಕ್ಯಕ್ಕೆ ಎಲ್ಲರೂ ಕೂಡ ಬದ್ಧರಾಗುವ ಮೂಲಕ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಊರಲ್ಲಿಯೂ ಸಹ ಕೊರೊನಾ ಕೇಸ್ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಣೆ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಮ್ಮ ವೈಯಕ್ತಿಕ ರಕ್ಷಣೆ ನಮ್ಮ ಹೊಣೆಯಾಗಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ರಂಗದಲ್ಲಿಯೂ ಕೆಲಸ ಸಾಗುವುದರೊಂದಿಗೆ, ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.

ಯಾರಿಗಾದರೂ ನಿಮ್ಮ ಸಂಪರ್ಕದಲ್ಲಿರುವವರಿಗೆ ಶೀತ, ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡುಬಂದಲ್ಲಿ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಲು ಸಲಹೆ ನೀಡಬೇಕು. ಅವರಿಗೆ ಮಾಸ್ಕ್ ಹಾಕಿಕೊಳ್ಳಲು ತಿಳಿ ಹೇಳಿಬೇಕು. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವ ಮೂಲಕ ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲಿನವರರನ್ನು ರಕ್ಷಿಸಬಹುದಾಗಿದ್ದು, ನಮ್ಮಿಂದಾಗಿ ಹಲವು ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದರು.

ಆರೋಗ್ಯ ಇಲಾಖೆ ತಂಡ ರಕ್ತದಾನ ಕಾರ್ಯಕ್ರಮದಲ್ಲಿ ಬಹಳ ಕಳಕಳಿಯಿಂದ ಪಾಲ್ಗೊಂಡಿದ್ದಾರೆ. ಇವರು ಒಬ್ಬೊಬ್ಬರು ಒಂದೊಂದು ಆಸ್ತಿ ಇದ್ದ ಹಾಗೆ. ಎಲ್ಲರೂ ಸಹ ಒದೊಂದು ಕ್ಷೇತ್ರದಲ್ಲಿ ಹಗಲು ರಾತ್ರಿ ದುಡಿದಂತಹವರು. ಕೊರೊನಾ ಎಂಬ ಯುದ್ದ ಸಮಯದಲ್ಲಿ ಜಿಲ್ಲೆಗೆ ಏನಾದರೂ ಒಳ್ಳೆಯ ಹೆಸರು ಬಂದಿದ್ದರೆ ಅದು ಇವರಿಂದ ಮಾತ್ರ. ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೆನೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಸಹದಿಂದ ಕೆಲಸ ಮಾಡುತ್ತೇವೆ ಎಂದರು.

ರಕ್ತಭಂಡಾರದ ವೈದ್ಯಾಧಿಕಾರಿಗಳಾದ ಡಾ.ಡಿ.ಹೆಚ್.ಗೀತಾ ಮಾತನಾಡಿ, ರಕ್ತವನ್ನು ಯಾರೂ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತ ದೇಹದ ಜೀವನಾಡಿಯಾಗಿದೆ. ಇಂದೇ ರಕ್ತದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ವರದಾನ ನೀಡಬೇಕು ಎಂದು ಹೇಳಿದರು.

ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ಹಿಮೊಫಿಲಿಯಾ, ಸಿಕಲ್‍ಸೆಲ್, ಅನಿಮೀಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೆ ಅವಲಂಬಿಸಿರುತ್ತಾರೆ ಎಂದರು.

ಹೆಣ್ಣು ಗಂಡು ಎಂಬ ಬೇಧವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲ ಆರ್ಯೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಹಿಮೋಗ್ಲೋಬಿನ್ 12.5 ಗ್ರಾಂ. ಗಿಂತ ಜಾಸ್ತಿ ಇರುವವರು ಮತ್ತು ತೂಕ 45 ಕಿಲೋ ಗಿಂತ ಹೆಚ್ಚಾಗಿರುವವರು, ಪುರುಷರು 3 ತಿಂಗಳಿಗೊಮ್ಮೆ ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಮಂಜುನಾಥ್ ಎಸ್.ಕುರ್ಕಿ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ರಕ್ತದಾನ ಬಹಳ ಶ್ರೇಷ್ಠವಾದ ದಾನವಾಗಿದ್ದು, ಒಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕೆ ಇದ್ದು, ಇನ್ನೊಬ್ಬರ ಬದುಕು ಬೆಳಗಿಸಬಹುದಾಗಿದೆ ಎಂದು ಹೇಳಿದರು.

4 ಶಕ್ತಿಗಳು ಇಂದು ಜಗತ್ತನ್ನು ಆಳುತ್ತಿವೆ. ಪರಿಸರದ ಜೊತೆಗೆ ಒಡನಾಡಿಯಾಗಿ ಜೀವನ ಸಾಗಿಸುವ ಮತ್ತು ದೇಶಕ್ಕೆ ಅನ್ನ ನೀಡುವ ರೈತ, ತನ್ನ ಹೆತ್ತವರು ಹಾಗೂ ಮಡದಿ ಮಕ್ಕಳನ್ನು ಬಿಟ್ಟು ಗಡಿ ಕಾಯುವ ಯೋಧ, ಜೀವ ಉಳಿಸುವ ವೈದ್ಯಕೀಯ ಸಿಬ್ಬಂದಿಗಳು ಹಾಗೂ ರಕ್ತದಾನ ಮಾಡಿ ಜೀವ ಉಳಿಸುವ ರಕ್ತದಾನಿಗಳು. ಇವರು ನಾಲ್ಕು ಜನರು ಸಮಾಜದ ಬಹು ಮುಖ್ಯ ಅಂಗಗಳು ಆಗಿದ್ದಾರೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. 77 ಬಾರಿ ರಕ್ತದಾನ ಮಾಡಿರುವ ಚೌಕಿಪೇಟೆಯ ಪುಸ್ತಕ ವ್ಯಾಪಾರಿ ಮಹಡಿಮನೆ ಶಿವಕುಮಾರ್ ಸೇರಿದಂತೆ 10 ಕ್ಕಿಂತ ಹೆಚ್ಚಿನ ಬಾರಿ ರಕ್ತದಾನ ಮಾಡಿದ ರಕ್ತದಾನಿಗಳು ತುಂಬಾ ಉತ್ಸಾಹದಿಂದ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಸ್ವಾಮಿ, ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕರಾದ ಡಾ.ನಾಗರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕರಾದ ಡಾ.ಜೆ.ಬಿ.ನೀಲಕಂಠ, ಜಿಲ್ಲಾ ಏಡ್ಸ್ ಪ್ರತಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಕೆ.ಎಚ್.ನಾಗರಾಜ್, ಡಾ.ಮೀನಾಕ್ಷಿ, ಡಾ.ಮುರುಳೀಧರ್ ಮತ್ತಿತರರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version