ದಿನದ ಸುದ್ದಿ
ದಾವಣಗೆರೆ : ಕವಿ ಸಿ.ಕೃಷ್ಣ ನಾಯಕ್ರ ‘ನುಡಿಯ ಬೆರಗು’ ಕೃತಿ ಲೋಕಾರ್ಪಣೆ
ಸುದ್ದಿ್ದಿನ,ದಾವಣಗೆರೆ : ಲೇಖನ, ಬರಹಗಳು ಓದುಗರನ್ನು ಚಿಂತನೆಗೆ ಹಚ್ಚುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕಾವ್ಯಶ್ರೀ ಆಶಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನವಜ್ಯೋತಿ ಸಾಂಸ್ಕೃತಿಕ ಸೇವಾಸಂಸ್ಥೆ, ಹರಪನಹಳ್ಳಿ, ಪ್ರಗತಿಪರ ಸಾಹಿತ್ಯ ಪರಿಷತ್ತು ಹಾಗೂ ಕಾವ್ಯ ಮಂಡಳ, ದಾವಣಗೆರೆ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕವಿ ಸಿ.ಕೃಷ್ಣ ನಾಯಕ್ರ ನುಡಿಯ ಬೆರಗು ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ಕೃತಿಗಳು ಓದುಗರೊಂದಿಗೆ ಸಂವಾದ ಮಾಡಬೇಕು. ಓದುಗರ ಮನಸ್ಸಿನಲ್ಲಿ ಚರ್ಚೆ, ಚಿಂತನೆ, ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಓದುಗರ ಮನಸ್ಸಿನ ಮೇಲೆ ಪ್ರಭಾವ ಬೀರುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬೇಕು. ಅಂತಹ ಕೃತಿಗಳು ಮಾತ್ರವೇ ಸಮಾಜದಲ್ಲಿ ಗೌರವ, ಮಹತ್ವ ಪಡೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕವಿ ಸಿ.ಕೃಷ್ಣ ನಾಯಕ್ ಹೊರತಂದಿರುವ ನುಡಿಯ ಬೆರಗು ಕೃತಿಯಲ್ಲಿರುವ 12 ಲೇಖನಗಳು ವೈವಿಧ್ಯಮಯ ಬರಹವನ್ನು ಹೊಂದಿವೆ. ಸಾರ್ವಕಾಲಿಕವಾದ ಜ್ವಲಂತ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತವೆ. ಬರಹಗಳಲ್ಲಿ ನಿಸರ್ಗದ ಬಗ್ಗೆ ಒಲವು, ಬದುಕಿನ ಬಗ್ಗೆ ಪ್ರೀತಿ, ನವಿರಾದ ಹಾಸ್ಯ, ಗದ್ಯಶೈಲಿಯಲ್ಲಿ ಸ್ಪಷ್ಟತೆ ಎದ್ದು ಕಾಣುತ್ತದೆ. ಓದುಗರನ್ನು ಚಿಂತನೆಗೆ ಹಚ್ಚುವ ಹಪಾಹಪಿ ಇದೆ. ಕಲ್ಪನೆಗೆ ಅವಕಾಶ ಕೊಡದೆ, ಸಮಾಜದ ಸತ್ಯದರ್ಶನವನ್ನು ಲೇಖಕರು ಪ್ರಾಮಾಣಿಕ ಅನುಭವದ ಹಿನ್ನೆಲೆಯಲ್ಲಿ ವ್ಯಕ್ತಗೊಳಿಸಿದ್ದಾರೆ ಎಂದು ಅವರು ವಿಮರ್ಶಿಸಿದರು.
ಕೃತಿ ಕುರಿತು ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಮೊಬೈಲ್, ಇಂಟರ್ನೆಟ್ ಹಾವಳಿಯಿಂದಾಗಿ ಸಾಹಿತ್ಯ ಓದುಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸುಳ್ಳನ್ನು ನಂಬಿ, ಸುಲಭವಾಗಿ ದಕ್ಕುವುದನ್ನು ಆಯ್ಕೆ ಮಾಡುವ ಮನಃಸ್ಥಿತಿ ಯುವಜನತೆಯಲ್ಲಿ ಬೇರೂರಿದೆ. ಇಂತಹ ಯುವಜನರನ್ನು ಮತ್ತೆ ಸಾಹಿತ್ಯದ ಕಡೆಗೆ ಆಕರ್ಷಿಸುವ ಕೃತಿಗಳು ಹೊರಬರಬೇಕಿದೆ ಎಂದರು.
ಕನ್ನಡ ಭಾಷೆಯು ಕವಿರಾಜಮಾರ್ಗದಿಂದ ಹಿಡಿದು ಇತ್ತೀಚಿನ ಆಧುನಿಕ ಸಾಹಿತ್ಯದವರೆಗೆ ಸಮಾಜಕ್ಕೆ ಸತ್ವ ಕೊಟ್ಟಿರುವ ಭಾಷೆಯಾಗಿದೆ. ಪಂಪ, ರನ್ನ ಆದಿಯಾಗಿ ವಚನಕಾರರು, ದಾಸ ಪರಂಪರೆಯವರು, ಕುವೆಂಪು, ದ.ರಾ.ಬೇಂದ್ರೆಯಂತಹವರು ಸಹ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದ್ದರು. ಆದರೆ ಇಂದು ಎಲ್ಲಾ ವಿಷಯಕ್ಕೂ ತಣ್ಣನೆಯ ಪ್ರತಿಕ್ರಿಯೆ ನೀಡುವ ಬೌದ್ಧಿಕ ದಾರಿದ್ರ್ಯ ನಮ್ಮನ್ನು ಆವರಿಸಿದೆ. ಇಂತಹ ಸಂದರ್ಭದಲ್ಲಿ ಲೇಖಕರು ಓದುಗರನ್ನು ಯಾವ ದಿಕ್ಕಿಗೆ ಕೊಂಡೊಯ್ಯಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆಯಾಗಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಡಾ.ನಾ.ಲೋಕೇಶ ಒಡೆಯರ್ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಕೃತಿಕಾರ ಸಿ.ಕೃಷ್ಣ ನಾಯಕ್, ಉಪನ್ಯಾಸಕ ಹರಪನಹಳ್ಳಿಯ ಹೆಚ್.ಮಲ್ಲಿಕಾರ್ಜುನ, ಪ್ರಗತಿಪರ ಸಾಹಿತ್ಯ ಪರಿಷತ್ತಿನ ಜಿ.ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳದ ನಾಗರಾಜ ಸಿರಿಗೆರೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243