ಬಹಿರಂಗ
ಬುದ್ಧನೋ..? ಕಾರ್ಲ್ ಮಾರ್ಕ್ಸೊ ..?
- ಅಂಬೇಡ್ಕರರು ಮೇಲಿನ ಹೆಸರಿನ ತಮ್ಮ ಲೇಖನದಲ್ಲಿ ಒಂದು ಮಹತ್ವದ ಸಂಶ್ಲೇಷಣೆಗೆ ಪ್ರಯತ್ನಪಟ್ಟರು. 20ನೇ-ಶತಮಾನದ ಚಾರಿತ್ರಿಕ ಸನ್ನಿವೇಶದಲ್ಲಿ ಮಾರ್ಕ್ಸ್ ವಾದ ಮತ್ತು ಬೌದ್ಧಧರ್ಮ ಪರಸ್ಪರ ವಿರುದ್ಧವೆಂಬಂತೆ ಕಾಣಿಸಿಕೊಂಡರೂ, ಅವುಗಳೊಳಗಿನ ಸಾಮ್ಯವನ್ನು ಹೊರಗೆಳೆಯಲು ಅಂಬೇಡ್ಕರ್ ಪ್ರಯತ್ನ ನಡೆಸಿದರು. ಈ ಲೇಖನದಲ್ಲಿ ವ್ಯಕ್ತಿ ಸಮಾಜಗಳೆರಡರ ಅಗತ್ಯಗಳನ್ನು ಒಳಗೊಳ್ಳುವ ಹೊಸ ವಿಚಾರಧಾರೆಯನ್ನು ನಿರ್ಮಿಸುವ ಒಳನೋಟವನ್ನು ಅಂಬೇಡ್ಕರ್ ನೀಡಲು ಪ್ರಯತ್ನಿಸುತ್ತಾರೆ. ಹೀಗಾಗಿ, ಅಂಬೇಡ್ಕರರ ಇಡೀ ವಿಚಾರಧಾರೆಯಲ್ಲಿ ಈ ಲೇಖನ ತುಂಬಾ ಮುಖ್ಯವಾದದು.
–ಅನುವಾದ : ವಿ.ಎಸ್.ಬಾಬು
ಕಾರ್ಲ್ ಮಾರ್ಕ್ಸ್ ಮತ್ತು ಬುದ್ಧರ ನಡುವಣ ಹೋಲಿಕೆಯೇ ಒಂದು ತಮಾಷೆಯಾಗಿ ಕಾಣಲು ಸಾಧ್ಯವಿದೆ. ಮಾರ್ಕ್ಸ್ ಮತ್ತು ಬುದ್ಧರ ನಡುವೆ 2381 ವರ್ಷಗಳಷ್ಟು ಅಂತರವಿದೆ. ಕ್ರಿ.ಪೂ. 563 ರಲ್ಲಿ ಬುದ್ಧ ಹುಟ್ಟದ್ದು, ಮಾರ್ಕ್ಸ್ 1818 ಎ.ಡಿ. ನಲ್ಲಿ ಹುಟ್ಟದ್ದು. ಹೊಸ ಆರ್ಥಿಕ ವ್ಯವಸ್ಥೆಯೊಂದರ ಪ್ರವಾದಿ ಮಾರ್ಕ್ಸ್. ಬುದ್ಧ ರಾಜಕೀಯ ಅಥವಾ ಅರ್ಥಶಾಸ್ತ್ರಕ್ಕೆ ಸಂಬಂಧವಿರದ ಹೊಸ ಧರ್ಮದ ಸ್ಥಾಪಕ ಎಂದು ಹೇಳಲಾಗಿದೆ. ಹೀಗಾಗಿ, ಈ ಹೋಲಿಕೆಯ ಪ್ರಯತ್ನವೇ ವಿಚಿತ್ರವಾಗಿ ಕಾಣಲು ಸಾಧ್ಯ. ಮಾರ್ಕ್ಸ್ ವಾದಿಗಳು ಈ ವಿಚಾರದ ಬಗ್ಗೆ ಗೇಲಿಮಾಡಿ ನಗಬಹುದು. ಆದರೆ, ಅವರು ತಮ್ಮ ಧೋರಣೆ ಬದಲಾಯಿಸಿ, ಗಂಭೀರವಾಗಿ ಗಮನಕೊಟ್ಟರೆ ಮಾರ್ಕ್ಸ್ ವಾದಿಗಳ ಧೋರಣೆಯೇ ಬದಲಾಗಲು ಸಾಧ್ಯವಿದೆ.
ಬುದ್ಧನ ವಿಚಾರಸಾರ
ಅಹಿಂಸೆಯ ಜೊತೆಗೆ ಬುದ್ಧನ ಹೆಸರನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ಅದೇ ಮೊದಲು ಮತ್ತು ಕೊನೆ ಎಂಬಂತೆಯೂ ಹೇಳಲಾಗಿದೆ. ಆದರೆ, ಬುದ್ಧ ಗುರುವಿನ ವಿಚಾರ ಬರೀ ಅಷ್ಟೇ ಅಲ್ಲ. ತ್ರಿಪಿಟಕ ದಲ್ಲಿನ ಬುದ್ಧನ ವಿಚಾರ ಹಾಗೂ ಮೌಲ್ಯಗಳನ್ನು ಮುಂದೆ
ಸಂಗ್ರಹಿಸಿದ್ದೇನೆ.
- ಮುಕ್ತ ಸಮಾಜದಲ್ಲಿ ಧರ್ಮದ ಅವಶ್ಯಕತೆಯಿದೆ.
- ಎಲ್ಲ ಧರ್ಮಗಳು ಅನುಸರಿಸಲು ಅರ್ಹವಲ್ಲ.
- ಧರ್ಮವೆನ್ನುವುದು ಜೀವನದ ಸತ್ಯ ಸಂಗತಿಗಳಿಗೆ ಸಂಬಂಧಿಸಿರಬೇಕು.ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವಗಳಿಗೆ ಅಲ್ಲ ; ಅಥವಾ ಆತ್ಮ ಸ್ವರ್ಗಗಳ ಬಗೆಗೂ ಅಲ್ಲ.
- ದೇವರನ್ನು ಧರ್ಮದ ಕೇಂದ್ರನೆಲೆ ಮಾಡುವುದು ಸರಿಯಲ್ಲ.
- ಪ್ರಾಣಿಬಲಿಯನ್ನು ಧರ್ಮದ ಕೇಂದ್ರವನ್ನಾಗಿ ನೋಡುವುದು ತಪ್ಪು.
- ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೇ ಶಾಸ್ತ್ರಗಳಲ್ಲ.
- ಮನುಷ್ಯ ಮತ್ತು ನೈತಿಕತೆಯೇ ಧರ್ಮದ ಕೇಂದ್ರವಾಗಿರಬೇಕು ಅದಿಲ್ಲದಿದ್ದರೆ, ಧರ್ಮ ಕ್ರೂರ ಮೂಢನಂಬಿಕೆಯಾಗಿಬಿಡುತ್ತದೆ.
- ನೈತಿಕತೆ ಎನ್ನುವುದು ಜೀವನದ ಆದರ್ಶವಾಗಿದ್ದಾರೆ ಮಾತ್ರ ಸಾಲದು. ದೇವರಿಲ್ಲದ ಕಾರಣ ಅದು ಜೀವನದ ನಿಯಮ, ಕಾನೂನು ಕೂಡ ಆಗಬೇಕು.
- ಈ ಜಗತ್ತಿನಲ್ಲಿ ದುಃಖವೆನ್ನುವುದು ವಿವಿಧ ಆಸಕ್ತಿಗಳ ಘರ್ಷಣೆಯ ಕಾರಣಕ್ಕಾಗಿ, ಅದನ್ನು ಪರಿಹರಿಸಲು ಇರುವ ದಾರಿಯೆಂದರೆ ಅಷ್ಟಾಂಗ ಮಾರ್ಗ ಮಾತ್ರ.
- ಆಸ್ತಿಯ ಕಾಸಿಗೆ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನೂ, ಇನ್ನೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ.
- ಸಮಾಜದ ಒಳಿತಿಗಾಗಿ ಈ ದುಃಖದ ಮೂಲ ಕಾರಣ ಆಸ್ತಿಯನ್ನೇ ಇಲ್ಲವಾಗಿಸಬೇಕು.
- ಎಲ್ಲ ಮಾನವರೂ ಸಮಾನರು.
- ಹುಟ್ಟಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಗುಣದಿಂದ ಆಗುತ್ತಾರೆ.
- ಒಳ್ಳೆಯ ವಂಶದ ಹುಟ್ಟು ಮುಖ್ಯವಲ್ಲ. ಉನ್ನತಾರ್ದಶಗಳು ಮುಖ್ಯ.
- ಎಲ್ಲರ ಬಗೆಗೆ ಮೈತ್ರಿಯೇ ಮುಖ್ಯ. ಶತ್ರುವಿಗೂ ಕೂಡ ಅದು ಸಲ್ಲಬೇಕು.
- ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ.
- ಚಾರಿತ್ರ್ಯವಿಲ್ಲದ ಜ್ಞಾನ ಅಪಾಯಕಾರಿ.
- ಯಾವುದೂ ಶಾಶ್ವತವಲ್ಲ. ಪ್ರತಿಯೊಂದು ಕೂಡ ವಿಮರ್ಶೆಗೆ, ವಿಶ್ಲೇಷಣೆಗೆ ಒಳಗಾಗಬೇಕು.
- ಯಾವುದೂ ಅಂತಿಮವಲ್ಲ.
- ಎಲ್ಲವೂ ಕಾರ್ಯ–ಕಾರಣ ಸಂಬಂಧಕ್ಕೆ ಬದ್ಧ.
- ಪ್ರತಿಯೊಂದು ಪರಿವರ್ತನಶೀಲವೇ.
- ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಯುದ್ಧ ತಪ್ಪು.
- ಗೆದ್ದವನಿಗೆ ಸೋತವರ ಬಗೆಗೂ ಜವಾಬ್ದಾರಿ ಇರುತ್ತದೆ.
ಇದೆ ಬುದ್ಧ ವಿಚಾರ ಸಾರ ! ಎಷ್ಟು ಹಳೆಯದಾದರೂ ಎಷ್ಟೊಂದು ಹೊಸದಾಗಿ ಕಾಣುತ್ತದೆ !
ಮಾರ್ಕ್ಸ್ ನ ವಿಚಾರಗಳ ಸಾರ
- ತತ್ವಜ್ಞಾನದ ಗುರಿ ಜಗತ್ತಿನ ಮೂಲ ಸ್ವರೂಪವನ್ನು ವಿವರಿಸುವುದಲ್ಲ, ಬದಲಾಗಿ ಜಗತ್ತನ್ನು ಪುನರ್ ರಚಿಸುವುದು.
- ಚರಿತ್ರೆಯನ್ನು ರೂಪಿಸುವ ಶಕ್ತಿಗಳು ಪ್ರಧಾನವಾಗಿ ಆರ್ಥಿಕ ಶಕ್ತಿಗಳು
- ಸಮಾಜ ಯಾವಾಗಲೂ ಮಾಲೀಕರು ಮತ್ತು ಆಳುಗಳೆಂಬ ಎರಡು ವರ್ಗಗಳಾಗಿ ವಿಭಜನೆಯಾಗಿರುತ್ತದೆ. ಅವರುಗಳ ನಡುವೆ ಯಾವಾಗಲೂ ಘರ್ಷಣೆ ಸಾಗಿರುತ್ತದೆ.
- ಕೂಲಿಗಳ ದುಡಿಮೆಗಳ ಫಲವಾದ ಹೆಚ್ಚಳ ಮೌಲ್ಯವನ್ನು ಮಾಲೀಕರು ಯಾವಾಗಲೂ ಕಬಳಿಸುತ್ತಾರೆ.
- ಖಾಸಗಿ ಆಸ್ತಿಯ ರದ್ಧತಿ ಅಥವಾ ಉತ್ಪಾದನಾ ಸಾಧನಗಳ ರಾಷ್ಟ್ರೀಕರಣದಿಂದ ಮಾತ್ರ ಈ ಶೋಷಣೆ ನಿಲ್ಲುತ್ತದೆ.
- ಈ ಬಡತನ ಕಾರ್ಮಿಕರಲ್ಲಿ ಕ್ರಾಂತಿಕಾರಿ ಚೈತನ್ಯ ತುಂಬಿ ವರ್ಗಗಳ ಘರ್ಷಣೆವರ್ಗಯುದ್ಧವಾಗಿ ಮಾರ್ಪಾಡಾಗುತ್ತದೆ.
- ಕೂಲಿಕಾರರು ಮಾಲೀಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಅವರು ಪ್ರಭುತ್ವವನ್ನು ವಶಪಡಿಸಿಕೊಂಡು ತಮ್ಮದೇ ಆದ ರಾಜ್ಯವನ್ನು ಸ್ಥಾಪಿಸುತ್ತಾರೆ. ಇದನ್ನೇ ಮಾರ್ಕ್ಸ್ ದುಡಿಮೆಗಾರರ ಸರ್ವಾಧಿಕಾರತ್ವ ಎಂದು ಕರೆಯುತ್ತಾನೆ,
ಈ ವಿದ್ಯಮಾನಗಳನ್ನು ಪಡೆಯಲಾಗುವುದಿಲ್ಲ. ಹೀಗಾಗಿ ಸಮಾಜವಾದ ಅನಿವಾರ್ಯ.
ಮಾರ್ಕ್ಸ್ ಸಿದ್ಧಾಂತದಲ್ಲಿ ಉಳಿಯುವುದೇನು..?
ಮಾರ್ಕ್ಸ್–ಬುದ್ಧರ ಹೋಲಿಕೆಗೆ ಮುಂಚೆ ಮಾರ್ಕ್ಸ್ ಸಿದ್ಧಾಂತದ ಮೂಲ ವಿಚಾರಗಳು ಎಷ್ಟರಮಟ್ಟಿಗೆ ಉಳಿದುಬಂದಿವೆ ಎಂದು ನೋಡಬೇಕು. 19ನೇ ಶತಮಾನದಲ್ಲಿ ಹುಟ್ಟಿದ ಈ ವಿಚಾರ ದಾರಿಯಲ್ಲಿ ಈಗ ಎಷ್ಟು ಉಳಿದಿದೆ ಎಂಬುದನ್ನು ನೋಡಬೇಕು. 1917 ರಲ್ಲಿ ರಷ್ಯದಲ್ಲಿ ಮಾತ್ರ ಕ್ರಾಂತಿಯಾಯಿತು. ಅಲ್ಲಿ ಸಾಕಷ್ಟು ಹಿಂಸೆ ರಕ್ತಪಾತವೂ ಆಯಿತು. ಜಗತ್ತಿನ ಇನ್ನೂ ಬಹಳಷ್ಟು ಭಾಗ ಕ್ರಾಂತಿಗಾಗಿ ಕಾಯುತ್ತಲೇ ಇದೆ. ಮಾರ್ಕ್ಸ್ ನ ವಿಚಾರಗಳಲ್ಲಿ ಸಾಕಷ್ಟನ್ನು ಚರಿತ್ರೆ ಮತ್ತು ಅನುಭವ ತಳ್ಳಿಹಾಕಿದೆ. ಆರ್ಥಿಕ ಸಿದ್ಧಾಂತವೇ ಪರಿಪೂರ್ಣ ಎಂದು ಈಗ ಯಾರೂ ಒಪ್ಪುವುದಿಲ್ಲ. ಕಾರ್ಮಿಕ ವರ್ಗ ದಿನೇ ದಿನೇ ಬಡವಾಗುತ್ತಿದೆ ಎಂಬ ಸಿದ್ಧಾಂತವನ್ನು ಕೂಡ ಈಗ ಯಾರೂ ಒಪ್ಪುವುದಿಲ್ಲ.
ಹೀಗಾಗಿ, ಮಾರ್ಕ್ಸ್ ನ ವಿಚಾರಗಳಲ್ಲಿ ಈಗ ಒಂದು ಚಿಕ್ಕ ಚಿಂತೆ ಆದರೆ ತುಂಬಾ ಪ್ರಬಲವಾದ ಚಿಂತೆ ಉಳಿದಿದೆ. ಅವು ನಾಲ್ಕು :
- ತತ್ವಜ್ಞಾನದ ಕೆಲಸ ಜಗತ್ತನ್ನು ಪುನರ್ ರಚಿಸುವುದು, ಬರೀ ವಿವರಣೆ ಅಲ್ಲ.
- ವರ್ಗಗಳ ನಡುವೆ ಆಕರ್ಷಣೆ ಇರುತ್ತದೆ.
- ಖಾಸಗಿ ಆಸ್ತಿ ಒಂದು ವರ್ಗಕ್ಕೆ ಶಕ್ತಿಯನ್ನು, ಇನ್ನೊಂದಕ್ಕೆ ದುಃಖವನ್ನು ತರುತ್ತದೆ.
- ಖಾಸಗಿ ಆಸ್ತಿಯ ನಿರ್ಮೂಲನದಿಂದ ಈ ದುಃಖ ನಿವಾರಣೆಯ ಅಗತ್ಯವಿದೆ.
ಇಲ್ಲಿಯ ಮೊದಲ ವಿಚಾರದ ಮಟ್ಟಿಗೆ ಬುದ್ಧ ಮತ್ತು ಮಾರ್ಕ್ಸ್ ರಲ್ಲಿ ಸಂಪೂರ್ಣ ಒಪ್ಪಿಗೆ ಇದೆ. ಎರಡನೆಯದರ ಬಗೆಗೂ ಒಪ್ಪಿಗೆ ಇದೆ ಎಂದೇ ಹೇಳಬೇಕು. ಬುದ್ಧನ ಅಷ್ಟಾಂಗ ಮಾರ್ಗವೇ ಇದಕ್ಕೆ ಸಾಕ್ಷಿ. ಬಳಸಿದ ಭಾಷೆ ಬೇರೆಯಾದರೂ ಅರ್ಥ ಒಂದೇ. ಖಾಸಗಿ ಆಸ್ತಿಯ ಬಗ್ಗೆಯೂ ಅಷ್ಟೇ, ಪರಸ್ಪರ ಒಪ್ಪಿಗೆ ಇದೆ. ಇನ್ನು ನಾಲ್ಕನೇ ಅಂಶದ ಬಗೆಗೆ ಬೇರೆ ಸಾಕ್ಷ್ಯದ ಅಗತ್ಯವೇ ಇಲ್ಲ. ಬಿಕ್ಷು ಸಂಘದ ನಿಯಮಗಳೇ ಅದನ್ನು ಸ್ಪಷ್ಟಪಡಿಸುತ್ತವೆ.
ಭಿಕ್ಷು ಸಂಘದ ನಿಯಮದ ಪ್ರಕಾರ ಒಬ್ಬ ಬೌದ್ಧ ಭಿಕ್ಷುಕನಿಗೆ 8 ವಸ್ತುಗಳು ಮಾತ್ರ ಇರಬೇಕು. ಅವುಗಳು ಹೀಗಿವೆ :
1,2,3,– ಮೂರು ತುಂಡುಬಟ್ಟೆ
4 – ಒಂದು ಲಂಗೋಟ
5. ಭಿಕ್ಷಾ ಪಾತ್ರೆ
6. ಒಂದು ಕತ್ತಿ
7. ಒಂದು ಸೂಜಿ
8. ನೀರಿನ ಪಾತ್ರೆ
ಚಿನ್ನ ಬೆಳ್ಳಿಯನ್ನು ಭಿಕ್ಷೆಯಾಗಿ ಸ್ವೀಕರಿಸಲೇಬಾರದು.ರಷ್ಯಾದ ನಿಯಮಗಳಿಗಿಂತ ಇವು ಹೆಚ್ಚು ನಿಷ್ಠುರ.
ಸಾಧನದ ಬಗ್ಗೆ
ತನ್ನ ಕಲ್ಪನೆಯ ಸಮತಾವಾದವನ್ನು ತರುವಲ್ಲಿ ಬುದ್ಧನ ವಿಚಾರಗಳು ನಿರ್ದಿಷ್ಟವಾಗಿ ಇದ್ದವು. ಅದನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಒಬ್ಬ ಮನುಷ್ಯನನ್ನು ನೈತಿಕ ಮಾರ್ಗ ಬಳಸಿ ಬದಲಾಯಿಸಬೇಕು. ಕಮ್ಯುನಿಸ್ಟರ ಸಾಧನ ಕೂಡ ಸ್ಪಷ್ಟ–ಹಿಂಸೆ ಮತ್ತು ಕಾರ್ಮಿಕ ವರ್ಗದ ಸರ್ವಾಧಿಕಾರತ್ವ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಬುದ್ಧ ಮತ್ತು ಮಾರ್ಕ್ಸ್ ರ ಅಂತಿಮ ಗುರಿ ಒಂದೇ ಆದರೂ, ದಾರಿಗಳು ಮಾತ್ರ ಬೇರೆ. ಬುದ್ಧ ಮಾರ್ಗದ ಪರಮಗುರಿ ಎಂದರೆ ನೈತಿಕ ಶಕ್ತಿಯನ್ನು ಯಾವುದೇ ರೀತಿಯ ಮೃಗೀಯ ಶಕ್ತಿ ತಳ್ಳಿಹಾಕಬಾರದು ಎಂದು. ಪ್ರತಿಯೊಬ್ಬ ಮನುಷ್ಯನೂ ಉತ್ತಮ ರಾಜ್ಯದ ಸಾಧನವಾಗಬೇಕು ಎಂದು.
ಪ್ರಭುತ್ವದ ನಿರ್ನಾಮದ ಪ್ರಶ್ನೆ
ತಮ್ಮ ರಾಜಕೀಯ ತತ್ವಜ್ಞಾನದ ಪ್ರಮುಖ ದೋಷವೆಂದರೆ ಕಾರ್ಮಿಕರ ಶಾಶ್ವತ ಸರ್ವಾಧಿಕಾರತ್ವದ ಪರಿಕಲ್ಪನೆ ಎಂದು ಕಮ್ಯುನಿಸ್ಟರು ಕೂಡ ಒಪ್ಪಿಕೊಳ್ಳುತ್ತಾರೆ. ಅಂತಿಮವಾಗಿ ಪ್ರಭುತ್ವ ಶಿಥಿಲವಾಗಿ ಉದುರಿಹೋಗುತ್ತದೆ ಎಂಬ ವಾದದ ಅಡಿಯಲ್ಲಿ ಅವರು ರಕ್ಷಣೆ ಪಡೆಯಲು ಯತ್ನಿಸುತ್ತಾರೆ. ಆದರೆ ಯಾವಾಗ ಅದು ನಿರ್ನಾಮವಾಗುತ್ತದೆ? ನಿರ್ದಿಷ್ಟ ಕಾಲಾವಧಿ ಕೊಡಲು ಮಾರ್ಕ್ಸ್ ವಿಫಲರಾಗುತ್ತಾರೆ. ಈ ರೀತಿಯ ಕಾರ್ಮಿಕ ಸರ್ವಾಧಿಕಾರತ್ವ ಅಲ್ಪಕಾಲಾವಧಿಗೆ ಒಳ್ಳೆಯದು; ಮತ್ತು ಅಗತ್ಯವೂ ಇರುತ್ತದೆ.
ತನ್ನ ಕೆಲಸ ಮುಗಿದ ನಂತರ ಕಾರ್ಮಿಕ ವರ್ಗದ ಸರ್ವಾಧಿಕಾರತ್ವ ಯಾಕೆ ಬೇರೆಯದಕ್ಕೆ ಮಾಡಿಕೊಳ್ಳಬಾರದು ?
ಅಶೋಕನದೇ ಸ್ವತಃ ಆ ರೀತಿಯ ಉದಾಹರಣೆ ಇದೆಯಲ್ಲ ! ಅಶೋಕ ಕಳಿಂಗ ಯುದ್ಧದ ನಂತರ ಅಪೂರ್ಣ ಅಹಿಂಸೆಯನ್ನೇ ಸ್ವೀಕರಿಸಿದನಲ್ಲ. ಈ ರೀತಿ ಪ್ರಭುತ್ವ ವಾಪಸಾದ ಮೇಲೆ ಅದರ ಜಾಗವನ್ನು ಯಾವುದು ತುಂಬುತ್ತದೆ ? ಧರ್ಮ ಮಾತ್ರ. ಆದರೆ, ಧರ್ಮ ಎಂದರೇನೆ ಕಮ್ಯುನಿಸ್ಟರಿಗೆ ಅಸಹ್ಯ.
ಸ್ವಾತಂತ್ರ್ಯ ಸಮಾನತೆ, ಸೋದರತೆಗಳ ಜತೆಗೆ ಮಾನವನ ಬೌದ್ಧಿಕ ಸುಖ, ಸಂಪತ್ತಿನ ಅಗತ್ಯವನ್ನೂ ಮೇಳೈಸಬಲ್ಲ ಏಕೈಕ ಧರ್ಮವೆಂದರೆ ಬೌದ್ಧಧರ್ಮ ಮಾತ್ರ. ಕಮ್ಯುನಿಸಂ ಒಂದನ್ನು ಮಾತ್ರ ಕೊಡಬಲ್ಲದು ಉಳಿದವನಲ್ಲ.
ಆಕರ ಗ್ರಂಥಗಳು
- ಅಂಬೇಡ್ಕರ್ ವಿಚಾರ ಸಂಗ್ರಹಮಾಲೆ 2 ಧಾರ್ಮಿಕ ಚಿಂತನೆ
- The Buddha and His Dhamma – B. R. Ambedkar
ಸುದ್ದಿದಿನ.ಕಾಂ|ವಾಟ್ಸಾಪ್|9980346243