ದಿನದ ಸುದ್ದಿ
ಬಿ.ವೈ ರಾಘವೇಂದ್ರ ಡಮ್ಮಿ ಕ್ಯಾಂಡಿಡೇಟ್; ಸಿದ್ದರಾಮಯ್ಯ ಟೀಕೆ
ಸುದ್ದಿದಿನ ಬಾಗಲಕೋಟೆ: ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಚಿಕ್ಕಲಕಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿ, ಮತ ಯಾಚಿಸಿದರು.
ಮರು ಚುನಾವಣೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ. ಶಿವಮೊಗ್ಗದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಜಿಲ್ಲೆಯಲ್ಲಿ ಮಧು ಬಂಗಾರಪ್ಪ ಪರವಾಗಿ ಕಂಡುಬರುತ್ತಿರುವ ಜನಸ್ಪಂದನೆ ಗಮನಿಸಿದರೆ, ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಅವರೇ ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟ್ ಎಂದು ಅನಿಸುತ್ತಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪನವರು ಈ ಹಿಂದೆ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿ ನಮ್ಮಪ್ಪನಾಣೆ ಬಿಜೆಪಿ ಸೇರಲ್ಲ ಎಂದಿದ್ದರು, ಯಡಿಯೂರಪ್ಪ ಪಕ್ಷ ತೊರೆದಾಗ ಪಕ್ಷದಿಂದ ಶನಿ ಹೋಯಿತು ಎಂದು ಈಶ್ವರಪ್ಪನವರು ಹೇಳಿರಲಿಲ್ಲವೇ? ಈಗವರು ಒಂದಾಗಿಲ್ಲವೇ? ಎಂದು ಪ್ರಶ್ನಿಸಿದರು.