ದಿನದ ಸುದ್ದಿ

ರಂಗಕರ್ಮಿ ಮೋಹನಚಂದ್ರ ಅವರಿಗೆ ‘ಸಿಜಿಕೆ ರಂಗ ಪುರಸ್ಕಾರ’

Published

on

ಸುದ್ದಿದಿನ,ಮಂಗಳೂರು : ಸಿಜಿಕೆ ಬೀದಿ ರಂಗ ದಿನದ ನೆನಪಿನಲ್ಲಿ ಪ್ರತೀ ಜಿಲ್ಲೆಯಲ್ಲಿ ನೀಡುವ ರಂಗ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರಂಗಕರ್ಮಿ ಮೋಹನಚಂದ್ರ ಯು. ಇವರು ಆಯ್ಕೆಯಾಗಿದ್ದಾರೆ. ಮೋಹನಚಂದ್ರ ಯು. ಅವರು, ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ರಂಗಕರ್ಮಿ, ಪ್ರೊಸೀನಿಯಮ್ ಹಾಗೂ ಬೀದಿನಾಟಕದಲ್ಲಿ ಸತತವಾಗಿ ಕೆಲಸ ಮಾಡುತ್ತಿರುವ ಒಬ್ಬ ಪ್ರತಿಭಾವಂತ ನಿರ್ದೇಶಕ.

ತೃತೀಯ ರಂಗಭೂಮಿಯ ಜನಕ ಶ್ರೀ. ಬಾದಲ್ ಸರ್ಕಾರ್ ಜೊತೆ ನಿಕಟವಾಗಿ ಕೆಲಸ ಮಾಡಿರುವ ಇವರು ಕರ್ನಾಟಕದ ಉದ್ದಗಲದಲ್ಲಿ ಸಂಚರಿಸಿ ಬೀದಿ ನಾಟಕ ತಂಡಗಳನ್ನು ಕಟ್ಟಿ ಪರಿಣಾಮಕಾರಿ ನಾಟಕಗಳನ್ನು ಮಾಡಿಸಿದವರು. ‘ಸಮುದಾಯ’ದಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ರಾಜ್ಯಮಟ್ಟದ ಜಾಥಾಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

‘ನೀನಾಸಂ’ನಲ್ಲಿ ನಾಟಕ ಪದವಿಯನ್ನು ಪಡೆದು ಜನಜಾಗೃತಿಗಾಗಿ ನಾಟಕ ಮಾಧ್ಯಮವನ್ನು ವಿವಿಧ ರೀತಿಯಲ್ಲಿ ಬಳಸಿ ಕೆಲವು ಹೊಸ ಪ್ರಕಾರಗಳನ್ನು ಯಶಸ್ವಿಯಾಗಿ ಹುಟ್ಟುಹಾಕಿದ್ದಾರೆ. ತೀಕ್ಷ್ಣವಾದ ವಿಚಾರಧಾರೆ, ನಿಷ್ಠುರವಾದ ಮಾತು, ಖಚಿತವಾದ ನಿಲುವಿನ, ಗಂಭೀರವಾದ ವ್ಯಕ್ತಿತ್ವದ ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ‘ತಾಯಿ’, ‘ಕತ್ತಲೆ ದಾರಿ ದೂರ’, ‘ಗ್ರಾಮಚಾವಡಿ’, ‘ಬಸ್ತಿ’, ‘ನೆಮ್ಮದಿ ಅಪಾರ್ಟ್ಮೆಂಟ್’, ‘ಜ್ಯೂಲಿಯಸ್ ಸೀಝರ್’, ‘ದಂಗೆಯ ಮುಂಚಿನ ದಿನಗಳು’ ಹಾಗೂ ‘ಸಂಪಿಗೆ ನಗರ ಪೋಲೀಸ್ ಸ್ಟೇಶನ್’.’ಕರ್ನಾಟಕ ಬೀದಿ ನಾಟಕ ಅಕಾಡೆಮಿ’ ನೀಡುವ ಈ ಪುರಸ್ಕಾರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದುವ ಕೊಲೇಜ್ ಆಫ್ ಕೊಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ನಾಟಕ ತಂಡವಾದ ‘ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ(ರಿ.) ಮಂಗಳೂರು ಹಾಗೂ ಅರೆಹೊಳೆ ಪ್ರತಿಷ್ಠಾನ ಇವರು ಜಂಟಿಯಾಗಿ ಪುರಸ್ಕ್ರತರಿಗೆ ನೀಡುತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version