ದಿನದ ಸುದ್ದಿ
ಚಂದನ ನಾಡಿನ ಹೊಸ ಬೆಳಗು ಚೈತ್ರಾ ಭವಾನಿಗೆ ‘ರಂಗ ಸಂಸ್ಕೃತಿ ಸಿರಿ’ ಪ್ರಶಸ್ತಿ
ಸುದ್ದಿದಿನ ವಿಶೇಷ : ಬಹುಮುಖ ಪ್ರತಿಭೆ ಚೈತ್ರಾ ಭವಾನಿ ಅವರಿಗೆ ಇತ್ತೀಚೆಗೆ ರಂಗ ಸಂಸ್ಕೃತಿ ಸಂಸ್ಥೆಯಿಂದ 2018ನೇ ಸಾಲಿನ “ರಂಗ ಸಂಸ್ಕೃತಿ ಸಿರಿ” ಪ್ರಶಸ್ತಿನೀಡಿ ಗೌರವಿಸಲಾಯಿತು.
ಬೆಂಗಳೂರಿನ ಉದಯ ಭಾನು ಕಲಾಸಂಘದ ಸಭಾಂಗಣದಲ್ಲಿ ಆಯೋಜಸಿದ್ದ ರಂಗಸಂಸ್ಕøತಿ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೈತ್ರಾ ಭವಾನಿ ಅವರ ರಂಗಭೂಮಿ, ಮಾಧ್ಯಮ ಮತ್ತು ಅವರ ಸಾಮಾಜಿಕ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಅಂದಹಾಗೆ ಈ ಚೈತ್ರಾ ಭವಾನಿ ಅವರು ಮೂಲತಃ ಮೈಸೂರು ಜಿಲ್ಲೆಯ ತಿರುಮಕೊಡಲು ನರಸೀಪುರ ಗ್ರಾಮದವರು. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಮೈಸೂರು ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (ಎಂ.ಎ) ಪದವೀಧರೆ. ಚೈತ್ರಾ ಭವಾನಿ ವಿದ್ಯಾರ್ಥಿದೆಸೆಯಿಂದಲೇ ಸ್ಥಳೀಯ ಟಿ.ವಿ ಮತ್ತು ಪತ್ರಿಕೆಯಲ್ಲಿ ಹಾಗೇ ರೆಡ್ ಎಫ್.ಎಂ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಾ, ಸ್ವಾವಲಂಬಿಯಾಗಿ ; ಸ್ವಾಭಿಮಾನದ ಸೀಮೆಯಲ್ಲಿ ಜೀವನ ನಿರ್ವಹಿಸುತ್ತಾ ಬಂದಿದ್ದಾರೆ.
ನಂತರ ಕರ್ನಾಟಕದ ಮೊದಲ ಕನ್ನಡ ನ್ಯೂಸ್ ಚಾನೆಲ್ ಟಿ.ವಿ 9 ನಲ್ಲಿ ಇವರ ‘ಹಳ್ಳಿ ಕಟ್ಟೆ’ ಎಂಬ ರಾಜಕೀಯ ವಿಡಂಬನಾತ್ಮ ಕಾರ್ಯಕ್ರಮದಲ್ಲಿ ಚೈತ್ರಾ ಭವಾನಿ ನಿರ್ವಹಿಸಿದ ‘ನಿಂಗಿ’ ಎಂಬ ಪಾತ್ರದ ಮೂಲಕ ಕರ್ನಾಟಕದ ಪ್ರೇಕ್ಷಕರ ಮನ-ಮನೆ ಗೆಲ್ಲುವುದರಲ್ಲಿ ಯಶಸ್ವಿಯಾದರು . ಅಷ್ಟೇ ಅಲ್ಲದೆ ಹಳ್ಳಿ ಕಟ್ಟೆ ಕಾರ್ಯಕ್ರಮವನ್ನು ವಿದೇಶಗಳಲ್ಲಿಯೂ ಕೂಡ ಪ್ರದರ್ಶನ ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ. ಹಾಗೇನೆ ಚೈತ್ರಾ ಭವಾನಿ ಟೈಮ್ಸ್ ಗ್ರೂಪ್ ನ ವಿಜಯ ನೆಕ್ಸ್ಟ್, ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ಅಂಕಣಕಾರರಾಗಿ ತಮ್ಮ ವಿಶಿಷ್ಟ ಬರಹದ ಮೂಲಕ ಬರಹಗಾರ್ತಿಯಾಗಿಯೂ ತಮ್ಮನ್ನು ಗುರುತಿಸಿಕೊಡಿದ್ದಾರೆ. ಇಷ್ಟಕ್ಕೆ ಇವರ ಪ್ರತಿಭೆ ಮೊಟಕು ಗೊಳ್ಳುವುದಿಲ್ಲ, ಚೈತ್ರಾ ಭವಾನಿ ಗಾಯಕಿ,ಭಾಷಣಗಾರ್ತಿ, ವಿವಿಧ ವೇಶಗಳ ಸ್ಫರ್ಧೆ, ಮಿಮಿಕ್ರಿ ಮತ್ತು ರಂಗಕರ್ಮಿಯಾಗಿ, ಉಪನ್ಯಾಸಕರಾಗಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಚೈತ್ರಾ ಭವಾನಿ ದೂರದರ್ಶನ ಚಂದನವಾಹಿನಿಯಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧಕರೊಂದಿಗಿನ ಸಂದರ್ಶನ ಕಾರ್ಯಕ್ರಮವಾದ’ ಬೆಳಗು’ ವಿನಲ್ಲಿ ನಿರೂಪಕಿಯಾಗಿ, ಹಾಗೂ 2008ರಲ್ಲಿ ಮೈಸೂರಿನ ಯುವರಂಗೋತ್ಸವದ ಮೂಲಕ ಹಲವು ನಾಟಕಗಳಲ್ಲಿ ನಟಿಸಿರುವ ಇವರು ಪುಟ್ಟ ದೇವರ ಹೂಗಳು, ಬದುಕಲು ಕಲಿಯಿರಿ, ನಾಟ್ಯರಾಣಿ ಶಾಂತಲಾ, ಟೀ ಹೌಸ್, ರೋಮಿಯೋ-ಜೂಲಿಯೆಟ್ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ರಂಗ ಭೂಮಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹೊರ ರಾಜ್ಯಗಳಲ್ಲಿಯೂ ಸಹ ತಮ್ಮ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಾಟಕದ ಜೊತೆಗೆ ಸಿನೆಮಾದ ನಂಟನ್ನೂ ಬೆಳೆಸಿ ಕೊಂಡಿರುವ ಇವರು ಕನ್ನಡದ ಸಿನೆಮಾಗಳಲ್ಲಿಯ್ಯೂ ಕೂಡ ಅಭಿನಯಿಸಿದ್ದಾರೆ.
ಪ್ರಸ್ತುತ ಚೈತ್ರಾ ಭವಾನಿ ‘ದಿಗ್ವಿಜಯಾ 24*7 ನ್ಯೂಸ್ ಚಾನೆಲ್’ ನ ಕಾರ್ಯಕ್ರಮ ನಿರ್ಮಾಪಕಿ( ಪ್ರೋಗ್ರಾಂ ಪ್ರೋಡ್ಯೂಸರ್) ಯಾಗಿ ಹಾಗೂ ಇದೇ ಚಾನೆಲ್ ನಲ್ಲಿ ‘ಊರ ಉಸಾಬರಿ’ ಎಂಬ ರಾಜಕೀಯ ವಿಡಂಬನಾತ್ಮಕ ಕಾರ್ಯಕ್ರಮದಲ್ಲಿ ಅಭಿನಯಿಸುವುದರ ಜೊತೆಗೆ ಸ್ಕ್ರಿಪ್ಟ್ ರೈಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಕಲೆಗಳನ್ನು ಅವಾಹಿಸಿಕೊಂಡಿರುವ ಚೈತ್ರಾ ಭವಾನಿಯವರನ್ನು ‘ಬಹುಮುಖ ಪ್ರತಿಭೆ’; ‘ಸಕಲಕಲಾವಲ್ಲಭೆ’ ಎಂದರೆ ತಪ್ಪಾಗಲಾರದು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401