ದಿನದ ಸುದ್ದಿ
ಚಿತ್ರದುರ್ಗ ಅಂಚೆ ವಿಭಾಗಕ್ಕೆ ಪ್ರಥಮ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ: ದಕ್ಷಿಣ ಕರ್ನಾಟಕ ಪ್ರಾದೇಶಿಕ ಅಂಚೆ ಇಲಾಖೆಯ ವ್ಯಾಪ್ತಿಯಲ್ಲಿ 2019-20 ರ ಹಲವು ವಿಭಾಗಗಳಲ್ಲಿ ಚಿತ್ರದುರ್ಗ ಅಂಚೆ ವಿಭಾಗವು 12 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಪ್ರಥಮ ವಿಭಾಗವೆಂದು ಪ್ರಾದೇಶಿಕ ವಿಭಾಗದ ಮುಖ್ಯಸ್ಥರು, ಪೋಸ್ಟ್ ಮಾಸ್ಟರ್ ಜನರಲ್ ಎಸ್.ಆರ್ ಮೂರ್ತಿಯವರು ವೀಡಿಯೋ ಕಾನ್ಪರೆನ್ಸ್ ಮುಖಾಂತರ ಘೋಷಿಸಿದರು.
ಈ ಪ್ರಯುಕ್ತ ಗುರುವಾರದಂದು ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ವಿರುಪಾಕ್ಷಪ್ಪ.ಓ, ಚಿತ್ರದುರ್ಗ ಹಾಗೂ ದಾವಣಗೆರೆ ಪ್ರಧಾನ ಅಂಚೆ ಕಚೇರಿಗಳು ಕ್ರಮವಾಗಿ ಪ್ರಥಮ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದರ ಮೂಲಕ 2019-20ರ ಸಾಲಿನ ಉತ್ತಮ ವಹಿವಾಟುಗಳನ್ನು ನಡೆಸಿ ಸಾರ್ವಜನಿಕರಿಗೆ ಗರಿಷ್ಠ ಸೇವೆಯನ್ನು ನೀಡಿರುವ ಹಿರಿಮೆಗೆ ಪಾತ್ರವಾಗಿವೆ.
ಪ್ರತೀ ವರ್ಷವು ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ವರ್ಷವು ಕೋವಿಡ್ ಕಾರಣದಿಂದಾಗಿ ಚಿತ್ರದುರ್ಗ ಅಂಚೆ ವಿಭಾಗೀಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಅಂಚೆಇಲಾಖೆಯ ರಾಯಬಾರಿಗಳನ್ನು ಅಂಚೆಪೇದೆಗಳು ಮತ್ತು ಗ್ರಾಮೀಣ ಭಾಗದ ಅಂಚೆ ನೌಕರರ ಸೇವೆಯನ್ನು ಹಾಗೂ ವಿಭಾಗದ ಸಾಧನೆಗೆ ಹಿಂದಿನ ಅಧಿಕಾರಿಗಳ ಕೊಡುಗೆಗಳನ್ನು ಸ್ಮರಿಸಿದರು.
ಚಿತ್ರದುರ್ಗ ವಿಭಾಗವು 2019-20 ನೇ ಎಲ್ಲಾ ವಿಭಾಗಗಳಲ್ಲಿ ಅಂಚೆ ಗ್ರಾಹಕರಿಗೆ ಉತ್ಕøಷ್ಟವಾದ ಸೇವೆಯನ್ನು ನೀಡುತ್ತಿದೆ. ಅಂಚೆ ಉಳಿತಾಯ ಖಾತೆಗಳು ಸ್ಪೀಡ್ ಪೋಸ್ಟ್, ಅಂಚೆ ಚೀಟಿ ವಿಮೆ, ಗೋಲ್ಡ್ ಬಾಂಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೇವೆಗಳು, ಮೀಡಿಯಾ ಪೋಸ್ಟ್ ಮತ್ತು ಇತರ ಅಂಚೆ ಸೇವೆಗಳಲ್ಲಿ ಹೆಚ್ಚಿನ ವಹಿವಾಟುಗಳನ್ನು ನಡೆಸುವುದರ ಮುಖಾಂತರ ಪ್ರಥಮ ಸ್ಥಾನ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಅನಿಲ್ ಕುಮಾರ್, ಅಂಚೆ ನಿರೀಕ್ಷಕರಾದ ಅಶೋಕ್.ಆರ್, ಮಾರುಕಟ್ಟೆ ಅಧಿಕಾರಿಗಳು, ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರು ಮತ್ತು 12 ಪ್ರಶಸ್ತಿಗಳನ್ನು ಪಡೆದುಕೊಂಡ ಸಾಧಕರು, ವಿಭಾಗೀಯ ಕಚೇರಿಯ ಎಲ್ಲಾ ಅಂಚೆ ಸಿಬ್ಬಂದಿಗಳು ಉಪಸ್ಥಿತಿರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243