ದಿನದ ಸುದ್ದಿ
ಕೋವಿಡ್-19 : ದಾವಣಗೆರೆ ವಿವಿಯಿಂದ ರೂ. 1.5 ಲಕ್ಷ ನೆರವು
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ವೈರಾಣು ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕಾರ್ಯ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಜಿಲ್ಲಾಡಳಿತಕ್ಕೆ ರೂ. 1.5 ಲಕ್ಷಗಳನ್ನು ಮಂಗಳವಾರ ಕೊಡುಗೆಯಾಗಿ ನೀಡಿತು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮತ್ತು ಕುಲಸಚಿವ ಪ್ರೊ. ಬಸವರಾಜ ಬಣಕಾರ ಅವರು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ಚೆಕ್ ನೀಡಿದರು.
ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ಕೊವಿಡ್-19 ತಡೆಗೆ ನೆರವಿನ ಹಸ್ತ ಚಾಚುವ ಜನರಿಗೆ, ಸಂಘ ಸಂಸ್ಥೆಗಳಿಗೆ ಜಿಲ್ಲಾಡಳಿತ ಆಭಾರಿಯಾಗಿದೆ. ಆಹಾರದ ಕಿಟ್, ಮಾಸ್ಕ್ ಹಾಗೂ ಇನ್ನಿತರ ಸಾಮಗ್ರಿಗಳ ಸಂಗ್ರಹ ಸಾಕಷ್ಟಿದ್ದು, ರೋಗದ ತಪಾಸಣೆ ಮತ್ತು ವೈದ್ಯರ ಸುರಕ್ಷತೆಗೆ ವೈದ್ಯಕೀಯ ಉಪಕರಣಗಳ ಅಗತ್ಯವಾಗಿದ್ದು, ಅವುಗಳ ಖರೀದಿಗೆ ವಿಶ್ವವಿದ್ಯಾನಿಲಯ ನೀಡಿದ ಕೊಡುಗೆಯನನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯವು ಶಿಕ್ಷಣಕ್ಕೆ ಸೀಮಿತವಾಗದೆ ಸಮುದಾಯ ಕಾಳಜಿ ವಹಿಸಿರುವುದು ಶ್ಲಾಘನೀಯ. ಇದು ಎಲ್ಲರಿಗೂ ಮಾದರಿಯಾಗಿದೆ. ವಿಶ್ವವಿದ್ಯಾನಿಲಯ ನೀಡಿದ ಕೊಡುಗೆಯಲ್ಲಿ ವೈದ್ಯರ ಸುರಕ್ಷತಾ ಕಿಟ್, ಕಿಯೊಸ್ಕ್, ಆಕ್ಸಿ ಪಲ್ಸ್ ಮೀಟರ್ ಹಾಗೂ ಇನ್ನಿತರ ಸಲಕರಣೆಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು, ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳ ಹಿತಕ್ಕಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಉನ್ನತ ಶಿಕ್ಷಣದ ಜೊತೆಗೆ ಸಮಾಜದ ಹಿತ ಕಾಪಾಡುವುದೂ ವಿಶ್ವವಿದ್ಯಾನಿಲಯದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಕೊವಿಡ್-19 ತಡೆಗೆ ತಮ್ಮ ಕೈಲಾದ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ವಾರ್ತಾಧಿಕಾರಿ ಧನಂಜಯಪ್ಪ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243