ದಿನದ ಸುದ್ದಿ
ಬಿರುಕು ಬಿಡ್ತಿದೆ ಶಿರಡಿ ಬಾಬಾ ಮಂದಿರ
ಸುದ್ದಿ ದಿನ ಡೆಸ್ಕ್: ಮಹಾರಾಷ್ಟ್ರದ ಶಿರಡಿಯಲ್ಲಿರುವ ಶ್ರೀ ಸಾಯಿ ಬಾಬ ಮಂದಿರದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದನ್ನು ರಿಪೇರಿ ಮಾಡುವ ಸಲುವಾಗಿ ಭುವನೇಶ್ವರ ಮೂಲದ ಎಂಜಿನಿಯರ್ ಒಬ್ಬರನ್ನು ನೇಮಿಸಲಾಗಿದೆ.
ಎಂಜಿನಿಯರ್ ಸುರೇಶ್ ಸಾಹು ಅವರು ಕಳೆದ ಹನ್ನೆರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಇದು ತಮಗೆ ದೊರೆತಿರುವ ಅಪೂರ್ವ ಅವಕಾಶ ಎಂದು ಹೆಮ್ಮೆ ಪಟ್ಟಿದ್ದಾರೆ.
ಪ್ರತಿ ದಿನ 80 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುವ ಬಾಬಾ ಮಂದಿರದ ಚಾವಣಿ, ಗೋಡೆಗಳು, ವಾಡಾ ಮೊದಲಾದ ಕಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುರೇಶ್ ನೇತೃತ್ವದ ತಂಡವೊಂದು ಅದನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ.
ಬಾಬಾ ಮಂದಿರದಲ್ಲಿ ಕಂಡುಬಂದಿರುವ ಬಿರುಕುಗಳ ಕುರಿತು ವ್ಯಕ್ತವಾಗಿರುವ ಭಾರಿ ಆತಂಕಗಳನ್ನು ತಳ್ಳಿಹಾಕಿರುವ ಅವರು, ಚಿಕ್ಕ ಪುಟ್ಟ ರಿಪೇರಿ ಕಾರ್ಯಗಳಷ್ಟೆ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ತಂಡ ದೇಗುಲವನ್ನು ಪರಿಶೀಲಿಸಿದರೆ. ಆದರೆ, ಅಲ್ಲಿ ಯಾವುದೇ ದೊಡ್ಡ ಮಟ್ಟದ ಬಿರುಕುಗಳು ಕಾಣಿಸಿಕೊಂಡಿಲ್ಲ. ಸಣ್ಣ ರಿಪೇರಿ ಕಾರ್ಯಗಳಿವೆ ಎಂದು ತಿಳಿಸಿದ್ದಾರೆ.
ಮಳೆಗಾಲದ ಭೀತಿ
ಮುಂಗಾರು ಮಾರುತಗಳು ದಕ್ಷಿಣ ಭಾರತವನ್ನು ಆವರಿಸಿದ್ದು ಈ ಬಾರಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯಿಂದಾಗಿ ಬಾಬಾ ಮಂದಿರಕ್ಕೆ ತೊಂದರೆಯಾಗಕೂಡದೆಂಬ ಕಾರಣಕ್ಕೆ ರಿಪೇರಿ ಕಾರ್ಯ ನಡೆಸಲಾಗುತ್ತಿದೆ.
ರಾಸಾಯನಿಕ ಸಿಂಪಡಣೆ
ಮಂದಿರದ ಬಿರುಕುಗಳನ್ನು ಮುಚ್ಚುವ ಸಲುವಾಗಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೂರು ವರ್ಷ ಹಳೆಯ ದೇಗುಲ
ಶಿರಡಿ ಸಾಯಿ ಬಾಬಾ ಮಂದಿರ ನೂರು ವರ್ಷಕ್ಕೂ ಹಳೆಯದು. ಮನೆಯಂತಿದ್ದ ಈ ಪುರಾತನ ಮಂದಿರವನ್ನು ಬಾಬಾರ ಭಕ್ತರೊಬ್ಬರು ಕಟ್ಟಿಸಿದ್ದರು.