ದಿನದ ಸುದ್ದಿ

3 ವರ್ಷದ ಈಜುಪಟು ಮಿಥಿಲಾ ಆಸೆ ಪೂರೈಸಿದ ಡಿ ಬಾಸ್..!

Published

on

ಸುದ್ದಿದಿನ,ಸಾಗರ: ತಾಲ್ಲೂಕಿನ ಕಿಪ್ಪಡಿ ಗ್ರಾಮದ ಪುಟಾಣಿ ಈಜುಪಟು ಮಿಥಿಲಾ ಕಳೆದ ವರ್ಷ ಕಳಸವಳ್ಳಿ-ಅಂಬಾರಗೋಡ್ಲು (ಸಿಗಂದೂರು ಮಾರ್ಗ) ನಡುವೆ ಶರಾವತಿ ಹಿನ್ನೀರಿನಲ್ಲಿ 2.5 ಕಿ.ಮೀ. ಈಜುವ ಮೂಲಕ ಸುದ್ದಿ ಮಾಡಿದ್ದಳು. ಆಗ ಆಕೆಗೆ ವಯಸ್ಸು ಕೇವಲ 3ವರ್ಷ 9 ತಿಂಗಳು ಮಾತ್ರ. ಈಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಮಿಥಿಲಾ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ. ಈ ಭೇಟಿಯ ಹಿಂದೆ ಸ್ವಾರಸ್ಯಕರ ಕತೆಯೊಂದಿದೆ.

ಕಿಪ್ಪಡಿ ಗ್ರಾಮದ ಗಿರೀಶ್, ವಿನುತಾ ದಂಪತಿ ಪುತ್ರಿ ಮಿಥಿಲಾ ಚಿತ್ರನಟ ದರ್ಶನ್ ಅವರ ಅಪ್ಪಟ ಅಭಿಮಾನಿ. ಕಳೆದ ವರ್ಷ ಆಕೆಗೆ 2.5 ಕಿ.ಮೀ ದೂರ ಈಜಬೇಕು ಎಂಬ ವಿಷಯ ಬಂದಾಗ ‘ನಾನು ಯಾಕೆ ಅಷ್ಟು ದೂರ ಈಜಬೇಕು’ ಎಂಬ ಪ್ರಶ್ನೆಯನ್ನು ಪೋಷಕರಿಗೆ ಕೇಳಿದ್ದಳು.
ಮಿಥಿಲಾ ದರ್ಶನ್ ಅಭಿಯಾನಿಯಾಗಿರುವುದರಿಂದ ಪೋಷಕರು ಒಂದು ಉಪಾಯ ಮಾಡಿದ್ದರು. ‘ನೀನು 2.5 ಕಿ.ಮೀ. ದೂರ ಈಜಿದರೆ ಆಚೆಯ ದಡದಲ್ಲಿ ದರ್ಶನ್ ನಿನಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿ ನಂಬಿಸಿದ್ದರು. ಈಜಿ ದಡಕ್ಕೆ ಸೇರಿದ ನಂತರ ಮಿಥಿಲಾಗೆ ನಟ ದರ್ಶನ್ ಅವರ ದರ್ಶನವಾಗಿರಲಿಲ್ಲ.

ಅಂದಿನಿಂದ ಮಿಥಿಲಾ ದರ್ಶನ್ ಅವರನ್ನು ಭೇಟಿ ಮಾಡಿಸುವಂತೆ ಪೋಷಕರಿಗೆ ದುಂಬಾಲು ಬಿದ್ದಿದ್ದಳು. ಈ ವಿಷಯ ಹೇಗೋ ಡಿ ಬಾಸ್ ಕಿವಿಗೆ ತಲುಪಿದೆ. ಮಿಥಿಲಾರ ಪೋಷಕರಿಗೆ ಕರೆ ಮಾಡಿದ ದರ್ಶನ್ ಬೆಂಗಳೂರಿನ ತಮ್ಮ ಮನೆಗೆ ಮಿಥಿಲಾಳನ್ನು ಪೋಷಕರೊಂದಿಗೆ ಕರೆಸಿಕೊಂಡು ಆಕೆಯ ಆಸೆ ಪೂರೈಸಿದ್ದಾರೆ.

ಮಿಥಿಲಾಗೆ ಉಡುಗೊರೆಯನ್ನು ನೀಡಿದ ಡಿ ಬಾಸ್ ಆಕೆಯನ್ನು ಬೀಳ್ಕೊಟ್ಟಿದ್ದಾರೆ. ಮಿಥಿಲಾ ಜೊತೆಗೆ ಈಜು ತರಬೇತುದಾರರಾದ ಹರೀಶ್ ನವಾತೆ, ಎನ್.ಸಿ. ಗಂಗಾಧರ್ ಇದ್ದರು.

https://www.facebook.com/223631631870616/posts/732359614331146/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version