ದಿನದ ಸುದ್ದಿ
ಸೌಗಂಧಿಕ ಉದ್ಯಾನವನದಲ್ಲಿ ‘ಮನೆ ಮನೆ ಯೋಗ ದಸರಾ’ಗೆ ಚಾಲನೆ
ಸುದ್ದಿದಿನ,ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಯೋಗ ದಸರಾ ಉದ್ಘಾಟನೆ ಹಾಗೂ ಮನೆ ಮನೆ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ನಗರದಲ್ಲಿರುವ ಸೌಗಂಧಿಕ ಉದ್ಯಾನವನದಲ್ಲಿ ಆಯೋಜಿಸಿದ್ದ ಮನೆ ಮನೆ ಯೋಗ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಹಾಗೂ ವೇದಿಕೆಯ ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಜಿ.ಟಿ.ದೇವೇಗೌಡ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಯೋಗ ದಸರೆಗೆ ಚಾಲನೆ ದೊರೆತಿದೆ.ಯೋಗ ದಸರಾ ಉಪ ಸಮಿತಿಯ ಅಧಿಕಾರಿಗಳು ವಿಶೇಷವಾಗಿ ಯೋಗ ಪಟುಗಳನ್ನು ಒಂದೆಡೆ ಸೇರಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿನಂಧನೆ ಸಲ್ಲಿಸುತ್ತೇನೆ.
ಮನುಷ್ಯನಿಗೆ ಯೋಗ ಅತ್ಯವಶ್ಯಕ.ಯೋಗ ಇಲ್ಲದೇ ಆರೋಗ್ಯ ಇಲ್ಲ.ಆರೋಗ್ಯ ಇಲ್ಲದೇ ಆಯುಷ್ಯ ಇಲ್ಲ. ಕಂಪ್ಯೂಟರ್,
ಟೆಕ್ನಾಲಜಿ ಬಂದಿರೋದರಿಂದ ನಾವು ಸೋಂಬೇರಿಯಾಗುತ್ತೇವೆ.ಆದಕ್ಕಾಗಿಯಾಗಿಯಾದರೂ ಯೋಗ ಮಾಡಬೇಕು. ವಿದ್ಯಾರ್ಥಿಗಳಿಗೆ
ಕಡ್ಡಾಯವಾಗಿ ಯೋಗ ಶಿಕ್ಷಣ ಕೊಡಬೇಕು ಎಂದು ನಿರ್ಧಾರ ಮಾಡಿದ್ದೇವೆ.ಯೋಗದಿಂದ ಆರೋಗ್ಯ ಭಾಗ್ಯ ಸಿಗುತ್ತದೆ.ಯಾವ ಅಧಿಕಾರ ಇದ್ದರೇನು ಮೊದಲು ಆರೋಗ್ಯ ಮುಖ್ಯ. ಹಿಂದೆ ದೇಶದ ಬೆನ್ನೆಲುಬು ರೈತರು 5 ಗಂಟೆಗೆ ಎದ್ದು ಗದ್ದೆಯಲ್ಲಿ ಕೆಲಸಮಾಡುತ್ತಿದ್ದರು. ಎಲ್ಲರು ಯೋಗ ಮಾಡಬೇಕು. ನಿಮ್ಮ ಸ್ನೇಹಿತರಿಗೂ ಯೋಗ ಮಾಡುವಂತೆ ತಿಳಿಸಿ ಎಂದರು.
ಮೈಸೂರಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕು. ಪ್ರಥಮ ಬಾರಿಗೆ ದಸರಾ ಪ್ರಯುಕ್ತ ಅ.14 ರಂದು ಮಧ್ಯಾಹ್ನ 2 ಗಂಟೆಗೆ ಜಂಬೂ ಸವಾರಿಯ ಮೆರವಣಿಗೆಯಂತೆ ಸಾಂಸ್ಕೃತಿಕ ಜಾನಪದ ಕಲಾ ತಂಡಗಳಿಂದ ಕಾರ್ಯಕ್ರಮ ಜರುಗಲಿದೆ ಎಂದರು. ಶಾಸಕರಾದ ಎಸ್.ಎ ರಾಮದಾಸ್,ಯೋಗ ಪಟು ಖುಷಿ ಸೇರಿದಂತೆ ಗಣ್ಯರು ಯೋಗ ಪ್ರದರ್ಶಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401