ದಿನದ ಸುದ್ದಿ
ದಾವಣಗೆರೆ | ಮಹಿಳಾ ದಿನಾಚರಣೆ : ಜಿ.ಪಂ ಸದಸ್ಯೆಯರಾದ ಮಂಜುಳಾ ಟಿ ವಿ ರಾಜು ಹಾಗೂ ಶೈಲಜಾ ಬಸವರಾಜ್ ; ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಹೇಳಿದ್ದೇನು..?
ಸುದ್ದಿದಿನ, ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ದಾವಣಗೆರೆ ತಾಲ್ಲೂಕು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಒನ್ ಸ್ಟಾಪ್ ಸೆಂಟರ್(ಸಖಿ), ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ರಲ್ಲಿ ಜಿ.ಪಂ.ಸದಸ್ಯರಾದ ಮಂಜುಳಾ ಟಿ ವಿ ರಾಜು,ಶೈಲಜಾ ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆಯನ್ನು ಕೇವಲ ಮಹಿಳೆಯರು ಆಚರಿಸುವುದಲ್ಲ. ಪುರುಷರೂ ಪಾಲ್ಗೊಳ್ಳಬೇಕು. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣಿಗೆ ದೇವಿಯ ಸ್ಥಾನ ನೀಡಿದ್ದು, ನಮ್ಮದು ವಿಭಿನ್ನ ಮತ್ತು ವಿಶಿಷ್ಟವಾದ ಸಂಸ್ಕøತಿ. ಮಹಿಳೆಯರು ಮೊದಲು ಮನೆಯನ್ನು ಗೆಲ್ಲಬೇಕು. ನಂತರ ಹೊರ ಜಗತ್ತನ್ನು ಗೆಲ್ಲಬೇಕು.
| ಮಂಜುಳಾ ಟಿ ವಿ ರಾಜು, ಜಿ.ಪಂ ಸದಸ್ಯೆ
ಶಿಕ್ಷಣ ಇಂದು ಹೆಣ್ಣಿಗೆ ಶಕ್ತಿ ತುಂಬುತ್ತಿದೆ. ನಾವೆಲ್ಲ ಮುಂದುವರೆಯುತ್ತಿದ್ದೇವೆ. ಮುಂದುವರೆಯುತ್ತಲೇ ಹೋಗುತ್ತೇವೆ. ಕೇವಲ ಹೊರಗಡೆ ಸಾಧನೆ ಮಾಡಿದ ಹೆಣ್ಣು ಯಶಸ್ವೀ ಮಹಿಳೆ ಅಲ್ಲ. ಬದಲಾಗಿ ಒಟ್ಟು ಕುಟುಂಬದ ಹಿರಿ ಸೊಸೆ ಅಥವಾ ತಾಯಿ ಯಶಸ್ವೀ ಮಹಿಳೆ. ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಬೆಳೆಸಬೇಕು. ಮಹಿಳೆಯರಿಗೆ ವೇದಿಕೆಯಲ್ಲಿ ಸನ್ಮಾನಕ್ಕಿಂತ ಸಹಕಾರ ಬೇಕಿದೆ.
| ಶೈಲಜಾ ಬಸವರಾಜ್, ಜಿ.ಪಂ ಸದಸ್ಯೆ
ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ, ಮಹಿಳೆಯರು ಸರ್ಕಾರದ ಸೌಲಭ್ಯಗಳು ಮತ್ತು ತಮಗಾಗಿ ಇರುವ ಕಾನೂನು ಕಾಯ್ದೆಗಳ ಬಳಕೆ ಮಾಡಿಕೊಳ್ಳಬೇಕು. ಭಯದಿಂದಲೇ ಶೇ.90 ರಷ್ಟು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯವನ್ನು ಹೇಳಿಕೊಳ್ಳುತ್ತಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು ಮಹಿಳೆಯರು ದೌರ್ಜನ್ಯ, ಅನ್ಯಾಯವನ್ನು ಸಹಿಸಬಾರದು. ಇದರ ವಿರುದ್ದ ಪ್ರತಿಭಟಿಸಬೇಕು ಎಂದರು.
ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿ ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಜಿ.ಪಂ ಸದಸ್ಯರಾದ ಉಮಾ ವೆಂಕಟೇಶ್, ಅರ್ಚನಾ ಬಸವರಾಜ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ.ಸಿ.ಮಂಗಳ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಲ, ಶಾರದಮ್ಮ, ಜಿಲ್ಲಾ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243