ದಿನದ ಸುದ್ದಿ
ಸುದ್ದಿದಿನದಲ್ಲಿ ಮಾತ್ರ | ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ..?
ಸುದ್ದಿದಿನ ವಿಶೇಷ| ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಅರ್ಜಿ ಕರೆದ ಒಂದು ಪೂರ್ಣಗೊಳ್ಳುವೊದಲೇ ನೇಮಕಾತಿ ಆದೇಶ ನೀಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ ಕೇಳಿ ಬರುತ್ತಿದೆ.
ದಾವಣಗೆರೆ ಡಿಸಿಸಿಬಿಯಲ್ಲಿ ಖಾಲಿ 31 ಹುದ್ದೆಗಳಿಗೆ ಜೂನ್ 18ರಂದು ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆಗೆ ಕನಿಷ್ಠವೆಂದರೂ ಒಂದು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಆದರೆ, ಜುಲೈ 9ರಂದು ಸಲ್ಲಿಕೆಗೆ ಕೊನೇ ದಿನಾಂಕ ನಿಗದಿ ಮಾಡಿತ್ತು. 21ದಿನ ಕಾಲಾವಕಾಶ ನೀಡಿತ್ತು. ಆನಂತರ ಪರೀಕ್ಷಾ ದಿನಾಂಕ ಘೋಷಿಸಿ ಒಂದು ತಿಂಗಳ ನಂತರ ಪರೀಕ್ಷೆ ನಡೆಸುವುದು, ಆನಂತರ ಕೀ ಆನ್ಸರ್ ಬಿಡುವುದು, ಆಯ್ಕೆ ಪಟ್ಟಿ ಹೊರಡಿಸಿ, ಆಕ್ಷೇಪಣೆಗೆ ಆಹ್ವಾನ ಮಾಡಲಾಗುತ್ತದೆ.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಹುತೇಕ ಈ ಪ್ರಕ್ರಿಯೆ ನಡೆಯುತ್ತದೆ. ಆದರೆ, ಇಲ್ಲಿ ಯಾವುದೂ ಪಾಲನೆಯಾಗಿಲ್ಲ. ದಿಢೀರನೇ ನೇಮಕಾತಿ ಆದೇಶ ಹೊರಡಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೇ ಜುಲೈ 30ರಂದು ಸಂದರ್ಶನ ನಡೆಸಲಾಗಿದೆ.
ಹುದ್ದೆಗಳು ಹರಾಜಿನಂತೆ ಬಿಕರಿ?
1 ಇಂಜಿನಿಯರ್, 19 ಕ್ಷೇತ್ರಾಧಿಕಾರಿ/ ಕಿರಿಯ ಸಹಾಯಕ, 1ಕಿರಿಯ ಬೆರಳಚ್ಚುಗಾರ, 10 ಅಟೆಂಡರ್ ಸೇರಿ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹರಾಜಿನಂತೆ ಕೂಗಲಾಯಿತು ಎಂಬುದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಗಳ ಆರೋಪ. ಇಂಜಿನಿಯರ್ ಹುದ್ದೆಗೆ 35 ಲಕ್ಷ, ಕ್ಷೇತ್ರಾಧಿಕಾರಿ/ ಕಿರಿಯ ಸಹಾಯಕ ಹುದ್ದೆಗೆ 26 ಲಕ್ಷ ರೂ. ವರೆಗೆ, ಕಿರಿಯ ಬೆರಳಚ್ಚುಗಾರ ಹುದ್ದೆಗೆ 20ಲಕ್ಷ ಹಾಗೂ ಅಟೆಂಡರ್ ಹುದ್ದೆಗೆ 15ಲಕ್ಷ ರೂ. ವರೆಗೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆದರೆ, ನೇಮಕಾತಿ ನಡೆಸುತ್ತಿರುವ ಸಮಿತಿ ಈ ಆರೋಪವನ್ನು ತಳ್ಳಿಹಾಕಿದೆ.
ಅಂಗವಿಕಲರಿಗಿಲ್ಲ ಮೀಸಲಾತಿ, ಶುಲ್ಕ ವಿನಾಯಿತಿ
ಸರ್ಕಾರದ ಯಾವುದೇ ನೇಮಕಾತಿ ನಡೆದರೂ ಶೇ. 3ರಷ್ಟು ಹುದ್ದೆಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಬೇಕು. ಆದರೆ, ಹುದ್ದೆ ಮೀಸಲಾತಿ ಬಿಡಿ, ಶುಲ್ಕ ವಿನಾತತಿಯನ್ನೂ ನೀಡಿಲ್ಲ. ಅಚ್ಚರಿಯ ವಿಷಯವೆಂದರೆ ಅಂಗವಿಕಲ ಪದವನ್ನು ನೇಮಕಾತಿ ಪ್ರಕಟಣೆಯಲ್ಲಿ ಎಲ್ಲಿಯೂ ಬಳಸಿಲ್ಲ. ಸರ್ಕಾರ ನೀಡಿದ ಮೀಸಲನ್ನು ಅರ್ಹರಿಗೆ ನೀಡದೇ ನೇಮಕಾತಿ ಪ್ರಕ್ರಿಯೆ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ತಿಳಿಯುತ್ತದೆ ಮತ್ತು ನೇಮಕಾತಿ ಪ್ರಕ್ರಿಯೆಯ ನಿಯಮಾವಳಿಗಳ ಉಲ್ಲಂಘನೆ ಸ್ಪಷ್ಟವಾಗಿ ಘೋಚರಿಸುತ್ತದೆ.
ಸಂದರ್ಶನ ದಿನದಂದೇ ನೇಮಕಾತಿ ಆಯ್ಕೆ ಪತ್ರ ವಿತರಣೆ?
ಅಭ್ಯರ್ಥಿಗಳ ಸಂದರ್ಶನ ನಡೆಸಲು ಜುಲೈ 30 ಕರೆಯಲಾಗಿತ್ತು. ಪಟ್ಟಿಯಂತೆ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಿದ್ದು, ಅಲ್ಲಿಯೇ ಅವರಿಗೆ ಸಂದರ್ಶನದ ಅಂಕ ತಿಳಿಸಿ ನೇಮಕಾತಿ ಆದೇಶ ಪತ್ರ ನೀಡುವ ಹುನ್ನಾರ ನಡರದಿತ್ತು ಎಂಬ ಅರೋಪವೂ ಕೇಳಿ ಬಂದಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಸ್ಥಳದಲ್ಲಿದ್ದ ಅಭ್ಯರ್ಥಿಗಳಿಗೆ ಸತ್ಯ.
ಈ ಆರೋಪದ ಬಗ್ಗೆ ಮಾಹಿತಿ ಪಡೆಯಲು ಡಿಸಿಸಿ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ (MD)ತಾವರ ನಾಯ್ಕ್ ಅವರ ದೂರವಾಣಿಗೆ ‘ಸುದ್ದಿದಿನ’ ಸಂಪರ್ಕಿಸಿತ್ತಾದೆರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9986715401