ದಿನದ ಸುದ್ದಿ
ದಾವಣಗೆರೆ | ಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ : ಕೇವಲ ಪಾರ್ಸಲ್ ಮಾತ್ರ
ಸುದ್ದಿದಿನ,ದಾವಣಗೆರೆ : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಂದು ಜಾರಿ ಮಾಡಲಾಗಿದ್ದ ಮದ್ಯ ನಿಷೇಧ ಆದೇಶವನ್ನು ಹಿಂಪಡೆಯಲಾಗಿರುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಬಕಾರಿ ಆಯುಕ್ತಾಲಯದ ಆದೇಶದಂತೆ ಹಾಲಿ ಮುಚ್ಚಲಾಗಿರುವ ಸಿಎಲ್-4, ಸಿಎಲ್-7 ಮತ್ತು ಸಿಎಲ್-9 ಸನ್ನದುಗಳನ್ನು ಸಿಎಲ್-2 ಸನ್ನದುಗಳ ರೀತಿಯಲ್ಲಿ ಮೇ 17 ರವರೆಗೆ ಹಾಲಿ ಇರುವ ಮದ್ಯ/ಬಿಯರ್ ದಾಸ್ತಾನು ಖಾಲಿ ಆಗುವವರೆಗೆ ಅಥವಾ ಮೇ17 ರವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಆದೇಶವು ಜಿಲ್ಲಾಡಳಿತವು ಘೋಷಿಸಿರುವ ಕಂಟೈನ್ಮೆಂಟ್ ಝೋನ್ಗಳಲ್ಲಿ ಇರುವಂತಹ ಸನ್ನದುಗಳಿಗೆ ಅನ್ವಯವಾಗುವುದಿಲ್ಲ ಮತ್ತು ಕಂಟೈನ್ಮೆಂಟ್ ಝೋನ್ಗಳಲ್ಲಿ ಮದ್ಯ ಮಾರಾಟ ಸನ್ನದುಗಳು ಕಾರ್ಯ ನಿರ್ವಹಿಸುವಂತಿಲ್ಲ.
ಕಾರ್ಯನಿರ್ವಹಿಸುವ ಸನ್ನದುಗಳು ಆದೇಶಿತ ಅವಧಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮಾತ್ರವೇ ಮದ್ಯ ಮಹಿವಾಟನ್ನು ನಡೆಸುವುದು. ಉಳಿದಂತೆ ರೆಸ್ಟೋರೆಂಟ್ನಲ್ಲಿ ಕೇವಲ ಪಾರ್ಸಲ್ ರೂಪದಲ್ಲಿ ಮಾತ್ರ ನೀಡಲು ಅನುಮತಿ ನೀಡಲಾಗಿದೆ.
ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆಯು ಹಾಗೂ ಅವರುಗಳು ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು ಸೇರಿದಂತೆ ಇತರೆ ಷರತ್ತುಗಳನ್ನು ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243