ದಿನದ ಸುದ್ದಿ

ದಾವಣಗೆರೆ ಲಾಕ್‍ಡೌನ್ ಸಡಿಲಿಕೆ | ಏನಿರುತ್ತೆ ; ಏನಿರಲ್ಲ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ , ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಸೋಂಕಿನ ಮೂರು ಪ್ರಕರಣದಿಂದಾಗಿ ಆರೇಂಜ್ ಜೋನ್‍ನಲ್ಲಿದ್ದ ದಾವಣಗೆರೆ ಜಿಲ್ಲೆ ಸೋಮವಾರ ಗ್ರೀನ್ ಜೋನ್‍ಗೆ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಇಲಾಖೆಗಳಿಗೆ ಮತ್ತು ಆಯ್ದ ಕೆಲವು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಕೆಲ ನಿಬಂಧನೆ ಹಾಗೂ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೀನ್ ಜೋನ್ ಘೋಷಣೆಯ ಉದ್ದೇಶ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆಯಲು ಅವಕಾಶ ಕಲ್ಪಿಸುವುದಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹವಾನಿಯಂತ್ರಿತ ಸಲಕರಣೆ ಉಪಯೋಗಿಸದೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಬಹುದಾಗಿದೆ ಎಂದರು.

ನಿಯಮದ ಪ್ರಕಾರ ಕೊನೆಯ ಪಾಸಿಟಿವ್ ಪ್ರಕರಣ ವರದಿ ನಂತರದ 28 ದಿನಗಳ ಅವಧಿಯಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೆ ಅದನ್ನು ಗ್ರೀನ್ ಜೋನ್‍ಗೆ ಸೇರಿಸಲಾಗುತ್ತದೆ. ಮಾ.27ರ ನಂತರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಜಿಲ್ಲೆಯೂ ಗ್ರೀನ್ ಜೋನ್ ಎಂದು ಘೋಷಿಸಲಾಗಿದೆ ಎಂದರು.

ಏನಿರುತ್ತೆ

  1. ಮುನ್ಸಿಪಲ್ ಕಾರ್ಪೋರೇಷನ್ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿನ ಕೈಗಾರಿಕೆಗಳು ಕಾರ್ಯ ಆರಂಭಿಸಬಹುದಾಗಿದೆ. ಎಸ್‍ಇಝಡ್ ನಿರ್ಮಾಣದ ಏರಿಯಾದಲ್ಲಿನ ಎಲ್ಲಾ ಕೈಗಾರಿಕೆ ಅವಕಾಶ ನೀಡಲಾಗಿದೆ.
  2. ಪಸ್ತಕ-ಲೇಖನ ಸಾಮಗ್ರಿ ಅಂಗಡಿ, ಕನ್ನಡಕದ ಅಂಗಡಿ, ಜೆರಾಕ್ಸ್, ಹಾರ್ಡ್‍ವೇರ್, ಸ್ಟೀಲ್, ಫ್ಲೈವುಡ್, ಪೈಂಟ್, ಇಟ್ಟಂಗಿಭಟ್ಟಿ, ರೈಸ್ ಮಿಲ್, ಫೋಟೊ ಸ್ಟುಡಿಯೋ, ಆಯಿಲ್ ಮಿಲ್, ಚಪ್ಪಲಿ ಅಂಗಡಿ, ಮರಳು ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಪ್ಲಾಸಿಕ್, ಟಾರ್ಪಲ್ ಅಂಗಡಿ ಹಾಗೂ ಆಟೋ ಮೊಬೈಲ್ಸ್ ಅಂಗಡಿ, ಪ್ರಿಟಿಂಗ್ ಪ್ರೆಸ್‍ಗಳಿಗೆ ಅವಕಾಶವಿದೆ.
  3. ಮದುವೆ ಸಮಾರಂಭ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳನ್ನು ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು, ಗರಿಷ್ಠ 20 ಜನ ಮೀರದಂತೆ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ.
  4. ಕೃಷಿ, ಮಾರುಕಟ್ಟೆ, ಸಬ್ ರಿಜಿಸ್ಟಾರ್ ಆಫೀಸ್, ಎಪಿಎಂಸಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲೆಯಲ್ಲಿ ವಿವಿಧ ರೀತಿಯ ಅಂಗಡಿಗಳು ಸೇರಿದಂತೆ ಒಟ್ಟು 13 ಸಾವಿರ ಅಂಗಡಿಗಳು ನೊಂದಣಿ ಮಾಡಿವೆ. ಇನ್ನಿಳಿದ 3 ಸಾವಿರ ಅಂಗಡಿಗಳು ನೊಂದಣಿ ಆಗಬೇಕಿದೆ ಎಂದರು.

ಏನಿರಲ್ಲ

  1. ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆಟೋ, ಟ್ಯಾಕ್ಸಿ, ಬಸ್‍ಗಳ ಯಾವುದೇ ಓಡಾಟ ನಿಷೇಧಿಸಲಾಗಿದೆ. ಜನರು ಗುಂಪು ಗುಂಪಾಗಿ ಜನರು ಸೇರುವಂತಿಲ್ಲ. ಸಡಿಲಿಕೆಯ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು.
  2. ಇಲ್ಲದಿದ್ದರೆ ಅವಘಡ ನಿರ್ಮಾಣವಾಗುತ್ತೆ ಎನ್ನುವ ಸೂಚನೆ ಕಂಡುಬಂದರೆ ಅಂಗಡಿಗಳನ್ನು ನಿರ್ದಿಷ್ಟ ಅವಧಿಯವರೆಗೆ ಸೀಲ್ ಮಾಡಲಾಗುವುದು. ಜೊತೆಗೆ ಬಿಗ್ ಬಜಾರ್ ಇನ್ನುಳಿದ ಇಂಡಸ್ಟ್ರೀಯಲ್ ಉದ್ಯಮಗಳಲ್ಲಿ ಎಸಿ ಬಳಸುವಂತಿಲ್ಲ. ಎಸಿ ಬಳಸಿದರೆ ಅವರ ಉದ್ದಿಮೆ ಪರವಾನಗಿ ರದ್ದು ಮಾಡಲಾಗುವುದು ಎಂದರು.ಬೀಡಿ, ಸಿಗರೇಟ್, ತಂಬಾಕು ಉತ್ಪನ್ನ, ಮದ್ಯವನ್ನು ಮೇ 3 ರವರೆಗೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. 
  3. ಜನರಿಗೆ ಆರ್ಥಿಕ ವ್ಯವಸ್ಥೆಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕವಾಗಿ ಮೇ 3 ರವರೆಗೆ ಗುಂಪು ಸೇರುವಂತಿಲ್ಲ. ನಗರದಲ್ಲಿ ಯಾವುದೆ ಜವಳಿ ಹಾಗೂ ಜ್ಯುವೆಲ್ಲರಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ.
  4. ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ, ತಂಬಾಕು ಉಗುಳಿದರೆ ಕರ್ನಾಟಕ ಪೊಲೀಸ್ ಆಕ್ಟ್ ಕಾಯ್ದೆ ಅನ್ವಯ ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಅಪರಾಧಗಳಿಗೆ ದಂಡ ವಿಧಿಸಲಾಗುವುದು.
  5. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಪಾನಿಪುರಿ, ಎಗ್‍ರೈಸ್, ಗೋಬಿ ಅಂಗಡಿಗಳನ್ನು ತೆರೆಯಲು ಅವಕಾಶವಿರುವುದಿಲ್ಲ.
  6. ಸಾರ್ವಜನಿಕ ಸ್ಥಳಗಳಲ್ಲಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹಾರ ಮಾಡುವುದು ಕಂಡು ಬಂದಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಿ, ಶಿಸ್ತು ಕ್ರಮ ಜರುಗಿಸಲಾಗುವುದು.

ಈ ವ್ಯಕ್ತಿಗಳ ಸಂಚಾರಕ್ಕೆ ಅನುಮತಿ ಇದೆ

ವೈದ್ಯಕೀಯ ಮತ್ತು ಪಶು ವೈದ್ಯಕೀಯ ಸೇರಿದಂತೆ ತುರ್ತು ಸೇವೆಯ ಖಾಸಗಿ ವಾಹನಗಳು ಮತ್ತು ಅಗತ್ಯ ಸೇವೆಗಳು, ಸಾಮಗ್ರಿಗಳನ್ನು ಒದಗಿಸುವ ಹಾಗೂ ಕರ್ತವ್ಯಕ್ಕೆ ತೆರಳುವವರಿಗೆ ಸಂಬಂಧಿಸಿದಂತೆ ದ್ವಿಚಕ್ರ ವಾಹನದಲ್ಲಿ ಒಬ್ಬ ಸವಾರರು ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ವಾಹನ ಚಾಲಕರೊಂದಿಗೆ ಒಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ನಿಮ್ಮ ಆರೋಗ್ಯದ ಕೀಲಿ ಕೈ ನಿಮ್ಮ ಕೈಯಲ್ಲಿದೆ

ಜಿಲ್ಲೆಯೂ ಸ್ಮಾರ್ಟ್ ಸಿಟಿಯಾಗಿರುವುದರಿಂದ ಜಿಲ್ಲೆಯ ಜನರು ಸ್ಮಾಟ್ ಆಗಿ ವರ್ತಿಸಬೇಕು. ಅಂಗಡಿಗಳಲ್ಲಿ ಗದ್ದಲ ಇರುವ ಸಮಯದಲ್ಲಿ ಹೋಗದೆ, ಅನುಕೂಲ ಮಾಡಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಹೋಗಬೇಕು. ಆ ಮೂಲಕ “ನಿಮ್ಮ ಆರೋಗ್ಯದ ಕೀಲಿ ಕೈ ನಿಮ್ಮ ಕೈಯಲ್ಲಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.

144 ಸೆಕ್ಷನ್ ಮುಂದುವರೆಯಲಿದೆ

ಗ್ರೀನ್ ಜೋನ್‍ನಿಂದ ಸಾರ್ವಜನಿಕರು ಮೈಮರೆಯುಂತಿಲ್ಲ. ಮುಂದೇನಾದರೂ ಹೊಸ ಪ್ರಕರಣ ವರದಿಯಾದಲ್ಲಿ ಮತ್ತೆ ವಲಯ ವ್ಯತ್ಯಾಸವಾಗಲಿದೆ. ಸೇಫ್ ಜೋನ್‍ಗೆ ಬಂದಿರುವ ಸ್ಥಿತಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೇಲ್ಲರ ಮೇಲಿದೆ. ಹಾಗಾಗಿ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version