ದಿನದ ಸುದ್ದಿ

ದಾವಣಗೆರೆ | ಮಸೀದಿ ದರ್ಗಾಗಳು ಅನುಸರಿಸಬೇಕಾದ ಮಾರ್ಗಸೂಚಿಗಳು

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಸರ್ಕಾರದ ಆದೇಶದನ್ವಯ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯಲು ಎಲ್ಲಾ ಮಸೀದಿ ಹಾಗೂ ದರ್ಗಾಗಳು ಕಡ್ಡಾಯವಾಗಿ ಕೆಳಕಂಡಂತೆ ಮಾರ್ಗಸೂಚಿಗಳನ್ನು ಅಳವಡಿಸಲು ಸೂಚಿಸಿರುತ್ತಾರೆ.

ಅದರಂತೆ, ದಾವಣಗೆರೆ ಜಿಲ್ಲೆಯ ಎಲ್ಲಾ ಮಸೀದಿ ಹಾಗೂ ದರ್ಗಾಗಳಿಗೆ ಭೇಟಿ ನೀಡುವ ನಮಾಜಿಗಳು ಹಾಗೂ ಭಕ್ತಾದಿಗಳು ಈ ಕೆಳಗಿರುವ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್ ಇವರು ಮನವಿ ಮಾಡಿಕೊಂಡಿರುತ್ತಾರೆ.

ಜುಮ್ಮಾ ನಮಾಜ್ ಗೆ ಪ್ರತ್ಯೇಕವಾಗಿ 03 ಜಮಾತ್‍ನ್ನು ಅರ್ಧ ಗಂಟೆಗೆ ಒಮ್ಮೆ ಅಂದರೆ 12:45 ರಿಂದ 01:15, 01:30 ರಿಂದ 02:00 ಹಾಗೂ 02:15 ರಿಂದ 02:45 ಜನಸಂದಣಿ ಹಾಗೂ ಗೊಂದಲ ಆಗದಂತೆ ನಿರ್ವಹಿಸಬೇಕು ಹಾಗೂ ಪ್ರತಿ ದಿನ ರಾತ್ರಿ ಇಷಾ ನಮಾಜ್ ನಂತರ ಮಸೀದಿ ಹಾಗೂ ಮಸೀದಿಯ ಆವರಣವನ್ನು ಸ್ಯಾನಿಟೈಜರ್ ಬಳಸಿ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು.

10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಸೀದಿಯಲ್ಲಿ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿರುತ್ತದೆ. ಕೋವಿಡ್-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆ ಇರುವವರು ಮಸೀದಿಯನ್ನು ಪ್ರವೇಶಿಸಬಾರದು.

ಮಸೀದಿಯ ಶೌಚಾಲಯ ಹಾಗೂ ವಜೂಖಾನಾಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಹಾಗೂ ನಮಾಜಿಗಳು ಮನೆಯಿಂದಲೇ ವಜೂ ಮಾಡಿಕೊಂಡು ಮಸೀದಿಗೆ ಬರಬೇಕು. ನಮಾಜ್ ತಮ್ಮ ಪಾದರಕ್ಷೆಗಳನ್ನು ಕಡ್ಡಾಯವಾಗಿ ಮಸೀದಿಯ ಗೇಟ್ ಹೊರಗೆ ಬಿಡತಕ್ಕದ್ದು.

ನಮಾಜಿಗಳು ಮಸೀದಿ ಒಳಗೆ ಪ್ರವೇಶಿಸುವಾಗ ಕಡ್ಡಾಯವಾಗಿ ದೇಹದ ಉಷ್ಣಾಂಶ ಪರಿಶೀಲನೆ ಮಾಡಿಸಿಕೊಂಡು ಬರಬೇಕು. ಪರಿಶೀಲನೆ ವೇಳೆ ಕೋವಿಡ್-19 ರೋಗಲಕ್ಷಣಗಳು ಕಂಡು ಬಂದರೆ ತ್ವರಿತವಾಗಿ “ಆಪ್ತಮಿತ್ರ” ಸಹಾಯವಾಣಿ 14410 ಈ ನಂಬರ್‍ಗೆ ಕರೆ ಮಾಡಬೇಕು.

ಮಸೀದಿಗೆ ಪ್ರವೇಶ ಮಾಡುವಾಗ ನಮಾಜಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಬೇಕು. ಮಸೀದಿಯ ಆವರಣದಲ್ಲಿ ಕಡ್ಡಾಯವಾಗಿ ಟವೆಲ್ ಹಾಗೂ ಟೋಪಿಗಳನ್ನು ತೆರವುಗೊಳಿಸಬೇಕು.

ನಮಾಜಿಗಳು ಮನೆಯಿಂದಲೇ ಜಾನಿಮಾ (ಕಾರ್ಪೆಟ್) ಅಥವಾ ಚಾಪೆಯನ್ನು ತೆಗೆದುಕೊಂಡು ಬರಬೇಕು. ಮಸೀದಿಗಳಲ್ಲಿ ಐದು (05) ಹೊತ್ತಿನ ನಮಾಜ್ ಅನ್ನು ಮಾತ್ರ ಪ್ರಾರ್ಥಿಸಬಹುದಾಗಿದೆ ಹಾಗೂ ಸುನ್ನತ್ ಮತ್ತು ನಫೀಲ್ ಪ್ರಾರ್ಥನೆಯನ್ನು ಮನೆಯಲ್ಲಿಯೆ ಸಲ್ಲಿಸಬೇಕು.

ಮಸೀದಿಯಲ್ಲಿ ನಮಾಜ್ ಮಾಡುವ ಜಾಗದಲ್ಲಿ ಪೇಂಟ್ ಅಥವಾ ಟೇಪ್‍ನಲ್ಲಿ 02 ಮೀಟರ್ (06 ಅಡಿ) ಅಂತರದಲ್ಲಿ ಕಡ್ಡಾಯವಾಗಿ ಗುರುತು ಮಾಡಬೇಕು.

ಮಸೀದಿಯಲ್ಲಿ ಪ್ರತಿಯೊಬ್ಬರೂ ಬೇರೆಯವರಿಂದ ಕನಿಷ್ಟ 02 ಮೀಟರ್ (06 ಅಡಿ) ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ಸಲ್ಲಿಸಬೇಕು. ನಮಾಜಿಗಳು ನಮಾಜ್ ಮುಗಿದ ನಂತರ ತಡಮಾಡದೇ ತಮ್ಮ ತಮ್ಮ ಮನೆಗಳಿಗೆ ಹೋಗಬೇಕು ಹಾಗೂ ಯಾವುದೇ ಕಾರಣಕ್ಕೂ ನಮಾಜಿನ ನಂತರ ಬಯಾನ್, ಖುರಾನ್-ಹದೀಸ್ ಪ್ರವಚನವನ್ನು ಮಸೀದಿಗಳಲ್ಲಿ ಮಾಡಬಾರದು.

ಜವಾಬ್ದಾರಿ ನಾಗರೀಕರಾಗಿ ಕೋವಿಡ್-19 ತಡೆಯಲು ನಮ್ಮೊಂದಿಗೆ ಕೈಜೋಡಿಸಿ ಮೇಲ್ಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಹಮ್ಮದ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version