ದಿನದ ಸುದ್ದಿ
ಭಿಕ್ಷಾಟಣೆಯಲ್ಲಿ ತೊಡಗಿದ್ದ ಮಕ್ಕಳಿಗೆ ಪುನರ್ವಸತಿ
ಸುದ್ದಿದಿನ,ದಾವಣಗೆರೆ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ರಚಿಸಲಾದ ತಂಡವು ನಗರದಲ್ಲಿ ಭಿಕ್ಷಾಟಣೆಯಲ್ಲಿ ತೊಡಗಿದ್ದ 6 ಮಕ್ಕಳು ಹಾಗೂ ಒಂದೇ ಕುಟುಂಬದ 7 ಜನರನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಕಾಶ್.ಬಿ.ಎಸ್., ಹಾಲೇಶ್.ಕೆ.ಹೆಚ್, ವೀರೇಶ್.ಕೆ, ಚಂದ್ರಶೇಖರ್.ಎನ್.ಕೆ, ಕಿರಣಕುಮಾರ್.ವೈ.ಆರ್ ಇವರೊಂದಿಗೆ ಅಜಾದ್ ನಗರ ಮತ್ತು ಬಸವನಗರ ಪೊಲೀಸ್ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲಾ ತೆರೆದ ತಂಗುದಾಣದ ಸಿಬ್ಬಂದಿ ವರ್ಗದವರೊಂದಿಗೆ ನಗರದ ವಾಣಿ ಹೊಂಡ ಶೋರೂಂ ಪಕ್ಕ, ಬಾತಿ ದರ್ಗಾದಲ್ಲಿ ಹಾಗೂ ಕೆಲವು ಮುಖ್ಯ ಜಾಗಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 6 ಮಕ್ಕಳು ಮತ್ತು ಒಂದೇ ಕುಟುಂಬದ ಒಟ್ಟು 7 ಜನರನ್ನು ರಕ್ಷಿಸಿದ್ದು ಇದರಲ್ಲಿ 6 ಜನ ಮಕ್ಕಳನ್ನು ಕಲ್ಯಾಣ ಸಮಿತಿಗೆ ಹಾಜರುಪಡಿಸುವ ಮೂಲಕ ಪುನರ್ವಸತಿ ಕಲ್ಪಿಸಲಾಗಿದೆ. ಉಳಿದ ಒಂದು ಮಗುವನ್ನು ಪೋಷಕರ ವಶಕ್ಕೆ ನೀಡಲಾಗಿದೆ.
ಒಂದು ಹೆಣ್ಣು ಮಗುವನ್ನು ಬಾಲಕಿಯರ ಸರ್ಕಾರಿ ಮಂದಿರದಲ್ಲಿ ಹಾಗೂ ಐದು ಗಂಡು ಮಕ್ಕಳನ್ನು ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಈ ಕಾರ್ಯಾಚರಣೆ ಮುಂದುವರೆಸಿ ಭಿಕ್ಷಾಟಣೆಗೆ ಕಡಿವಾಣ ಹಾಕಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243