ದಿನದ ಸುದ್ದಿ
ದಾವಣಗೆರೆ | ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ : ಕೋವಿಡ್-19 ಸಾಂಕ್ರಾಮಿಕ ರೋಗವು ತೀವ್ರತರವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಸರ್ಕಾರವು ಹಲವು ರೀತಿಯ ಪ್ರಯತ್ನಗಳಲ್ಲಿ ನಿರತರಾಗಿದ್ದು, ಕಾರ್ಮಿಕರ ವಲಸೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಹಾಗೂ ಕಾರ್ಮಿಕರಿಗೆ ಈ ಸಮಯದಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲು ಪಾಲಿಕೆಯ ಪ್ರತಿ ವಾರ್ಡಿಗೆ ಒಂದರಂತೆ ಸಮುದಾಯ ಭವನ,ಕಲ್ಯಾಣ ಮಂಟಪ, ಖಾಸಗಿ ಕಲ್ಯಾಣ ಮಂಟಪಗಳನ್ನು ವಶಕ್ಕೆ ಪಡೆದು, ಕಟ್ಟಡ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಒದಗಿಸುವಂತೆ ಸರ್ಕಾರ ಆದೇಶಿಸಿದೆ.
ಪ್ರಯುಕ್ತ ಮಹಾನಗರಪಾಲಿಕೆಯ ಪ್ರತಿ ವಾರ್ಡಿಗೆ ಒಂದರಂತೆ ಹಾಗೂ ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಸಮುದಾಯ ಭವನ,ಕಲ್ಯಾಣ ಮಂಟಪ,ಖಾಸಗಿ ಕಲ್ಯಾಣ ಮಂಟಪಗಳನ್ನು ಪಾಲಿಕೆ ಆಯುಕ್ತರು ಹಾಘೂ ದಾವಣಗೆರೆ ತಹಶೀಲ್ದಾರರು ಜಂಟಿಯಾಗಿ ತಮ್ಮ ವಶಕ್ಕೆ ಪಡೆಯಬೇಕು. ತಾಲ್ಲೂಕು ವ್ಯಾಪ್ತಿಯಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರರು ತಾಲ್ಲೂಕಿಗೆ ಒಂದರಂತೆ ಕಲ್ಯಾಣ ಮಂಟಪಗಳನ್ನು ತಮ್ಮ ವಶಕ್ಕೆ ಪಡೆಯುವುದು. ಈ ಕಲ್ಯಾಣ ಮಂಟಪಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಒದಗಿಸಬೇಕೆಂದು ಆದೇಶಿಸಲಾಗಿದೆ.
ಸಮುದಾಯ ಭವನ,ಕಲ್ಯಾಣ ಮಂಟಪ,ಖಾಸಗಿ ಕಲ್ಯಾಣ ಮಂಟಪಗಳನ್ನು ವಶಕ್ಕೆ ಪಡೆಯುವ ಸಮಯದಲ್ಲಿ ಯಾರಾದರು ಅಡ್ಡಿ ಪಡಿಸಿದಲ್ಲಿ ಅವರುಗಳ ವಿರುದ್ದ ದಂಡ ಪ್ರಕ್ರಿಯೆ ಸಂಹಿತೆ ಸೆಕ್ಷನ್ 188 ರಡಿ ಕಾನೂನು ಕ್ರಮ ಜರುಗಿಸಲಾಗುವುದು.
ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗೆ ಈಗಾಗಲೇ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243