ದಿನದ ಸುದ್ದಿ
ಪತ್ರಕರ್ತರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ: ವರದಿಗಾರ ಕೂಟ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವ ಬಗ್ಗೆ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ ಮತ್ತು ಜೀವಮಾನ ಸಾಧನೆಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅದೇ ರೀತಿ ಆರೋಗ್ಯಕ್ಕೆ ಆರ್ಥಿಕ ನೆರವು ನೀಡಲು ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಹೆಸರಿನಲ್ಲಿ ಚಿಂತನೆ ನಡೆಸಲಾಗುವುದು. ಸಮಾಜವನ್ನು ತಿದ್ದುವ ಮಹತ್ತರ ಜವಾಬ್ದಾರಿ ಇರುವ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ, ಸುದ್ದಿಗಳ ವೈಭವೀಕರಣಕ್ಕೆ ಕಡಿವಾಣ ಬೀಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮವೆಂದರೇ ಜನರಿಗೆ ನಂಬಿಕೆ ಹೆಚ್ಚಿರುತ್ತದೆ. ಸಮಾಜ ತಿದ್ದುವ ಜವಾಬ್ದಾರಿಯನ್ನು ಮಾಧ್ಯಮ ಹೊಂದಿದೆ. ಸ್ವಾತಂತ್ರ್ಯ ತಂದುಕೊಡುವಲ್ಲಿ, ಮೂಢನಂಬಿಕೆಗಳನ್ನು ದೂರಾಗಿಸುವಲ್ಲಿ ಮಾಧ್ಯಮಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಇಂತಹ ಮಾಧ್ಯಮಗಳು ಸುಳ್ಳು ಸುದ್ದಿಗಳಿಗೆ ಮತ್ತು ಸುದ್ದಿಗಳ ವೈಭವೀಕರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಎಗ್ಗಿಲ್ಲದೇ ಬಿತ್ತರಗೊಳ್ಳುತ್ತಿವೆ. ಕೆಲ ಟಿವಿ ಮಾಧ್ಯಮಗಳು ತಾವೇ ಸ್ವಯಂಘೋಷಿತ ನ್ಯಾಯಾಲಯಗಳಾಗಿ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡುವಂತೆ ವರ್ತಿಸುತ್ತವೆ. ಇದೆಲ್ಲದರ ನಿಯಂತ್ರಣ ಆಗಬೇಕು ಎಂದರು.
ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ವದ್ದಾಗಿದೆ. ಮಾಧ್ಯಮಗಳು ಜನರಿಗೆ ವಿಷಯ
ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪತ್ರಕರ್ತರು ಸಮಾಜದ ఎల్ల ವರ್ಗದ ಜನರಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಪತ್ರಕರ್ತರಿಗೆ ಸಂಘಟನೆಯೇ ಧ್ವನಿಯಾಗಬೇಕು. ಈ ದಿಸೆಯಲ್ಲಿ ಜಿಲ್ಲಾ ವರದಿಗಾರರ ಕೂಟವು ಕೆಲಸ ಮಾಡಲಿ ಎಂದು ಆಶಿಸಿದರು.
ಪತ್ರಿಕೆ ಓದುವುದರಿಂದ ಜ್ಞಾನ, ಏಕಾಗ್ರತೆ ಹೆಚ್ಚಾಗುತ್ತದೆ. ಯುವಜನರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಉತ್ತೇಜಿಸುವ ಕೆಲಸವು ಮನೆ ಹಾಗೂ ಶಾಲಾ-ಕಾಲೇಜಿನಿಂದ ಶುರುವಾಗಬೇಕು ಎಂದು ಅವರು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಪತ್ರಿಕಾ ರಂಗವು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಕರ್ತರು ಸಮಾಜದ ಕನ್ನಡಿಯಂತೆ ಸರಿ-ತಪ್ಪು ತೋರುವ ಕೆಲಸ ಮಾಡುತ್ತಾರೆ. ಆದರೂ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ರಂಗ ಹಳಿ ತಪ್ಪುತ್ತಿರುವಂತೆ ಭಾಸವಾಗುತ್ತದೆ. ಸುದ್ದಿಗಳ ಅತಿಯಾದ ವೈಭವೀಕರಣ ಕಡಿಮೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಸುಮಾರು 17 ವರ್ಷಗಳ ಹಿಂದೆ ಸ್ವಾಭಿಮಾನಿ ಪತ್ರಕರ್ತರು ಸೇರಿಕೊಂಡು ಕಟ್ಟಿದ ವರದಿಗಾರರು ಕೂಟವು ಈವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪತ್ರಕರ್ತರಿಗಾಗಿ ಸಾಕಷ್ಟು ಚಟುವಟಿಕೆ ಕೈಗೊಂಡಿರುವ ಜೊತೆಗೆ 46 ಪತ್ರಕರ್ತರಿಗೆ ನಿವೇಶನ ಕೊಡಿಸಿರುವುದು ಕೂಟದ ದೊಡ್ಡ
ಸಾಧನೆಯಾಗಿದೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲಾ ಸಚಿವರು, ಶಾಸಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಪತ್ರಕರ್ತರಿಗೆ ಸಮಾಜದಲ್ಲಿ ಗೌರವವಿದ್ದರೂ, ಸಂಕಷ್ಟದಲ್ಲಿರುವ ಪತ್ರಕರ್ತರು ಕೂಡ ಇದ್ದಾರೆ. ಬೇರೆಯವರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರ ಗೋಳು ಕೇಳುವವರು ಇಲ್ಲದಂತಾಗಿದೆ. ಜೀವನ ಭದ್ರತೆ ಇಲ್ಲದ ಪತ್ರಿಕಾ ವೃತ್ತಿಯು ನೀರ ಮೇಲಿನ ಗುಳ್ಳೆ ಇದ್ದಂತೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯಪೀಡಿತ ಪತ್ರಕರ್ತರ ಚಿಕಿತ್ಸೆಗೆ ನೆರವು ಸಿಗಬೇಕು. ಈಗಲೂ ನಿವೇಶನ ಪಡೆಯದ ಸಾಕಷ್ಟು ಜನ ಪತ್ರಕರ್ತರಿದ್ದು, ಅಂತಹವರಿಗೆ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವರದಿಗಾರರ ಕೂಟಕ್ಕೆ ಸ್ವಂತ ನಿವೇಶನ ಒದಗಿಸಲು ಸ್ಥಳೀಯ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗಣೇಶ ಕಮಲಾಪುರ, ವಿನಾಯಕ ನಾಯ್ಕ ಪೂಜಾರಿ, ದೇವಿಕಾ ಸುನೀಲ್, ಕೆ.ಆರ್.ಪುನೀತ್ ಆಪ್ತಿ, ಬಿ.ಹನುಮಂತರಾವ್, ಎಚ್.ನಿಂಗರಾಜ್, ಚನ್ನಬಸವ ಶೀಲವಂತ, ಎ.ಬಿ.ರುದ್ರಮ್ಮ ಅವರುಗಳಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವಮಾನ ಸಾಧನೆಗಾಗಿ ವೀರಪ್ಪ ಎಂ.ಬಾವಿ, ಎನ್.ಆರ್.ನಟರಾಜ್, ಜಿ.ಎಂ.ಆರ್.ಆರಾಧ್ಯ, ಎಂ.ಶಶಿಕುಮಾರ್, ಎಸ್.ಎ.ಗಂಗರಾಜು, ಐ.ಗುರುಶಾಂತಪ್ಪ, ಬಸವರಾಜ್ ಐರಣಿ, ಬಕ್ಕೇಶ್ ನಾಗನೂರು ಅವರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ವರದಿಗಾರರ ಕೂಟದ ನೂತನ ವೆಬಸೈಟ್ಗೆ ಚಾಲನೆ ನೀಡಲಾಯಿತು.
ಹರಿಹರ ಶಾಸಕ ಬಿ.ಪಿ.ಹರೀಶ್, ಮಹಾನಗರಪಾಲಿಕೆ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಉಪಾಧ್ಯಕ್ಷರಾದ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ್, ಎಂ.ಬಿ.ನವೀನ್, ಎ.ಎಲ್. ತಾರಾನಾಥ, ರಾಮಪ್ರಸಾದ್, ಮಲ್ಲಿಕಾರ್ಜುನ ಕಬ್ಬರು, ಸದಾನಂದ ಹೆಗಡೆ, ಸಾರ್ವಜನಿಕ ಸಂಪರ್ಕ ಪ್ರತಿನಿಧಿ ಪಿ.ಎಸ್.ಲೋಕೇಶ, ಕಾರ್ಯದರ್ಶಿ ತೇಜಸ್ವಿನಿ ಪ್ರಕಾಶ, ಕೆ.ಜೈಮುನಿ, ಅನಿತಾ, ಬಿ.ಸಿಕಂದರ್ ಸೇರಿದಂತೆ ಕೂಟದ ನೂತನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243