ಬಹಿರಂಗ

ಬೇಕಾದುದು- ವೈಷ್ಣವ ದೀಕ್ಷೆಯಲ್ಲ ; ತ್ರಿಜ ದೀಕ್ಷೆ

Published

on

  • ದೇವನೂರ ಮಹಾದೇವ

ಮಧ್ವ ಸಿದ್ಧಾಂತದ ಬಗ್ಗೆ ಕುವೆಂಪು ಅಸಹನೆಯನ್ನು* ಮನುಷ್ಯರಾದರೆ ಸಾಕು ಅರ್ಥ ಮಾಡಿಕೊಳ್ಳಬಹುದು. ಮಧ್ವ ಸಿದ್ಧಾಂತದ ನಿತ್ಯ ಮುಕ್ತ, ನಿತ್ಯ ಸಂಸಾರಿ, ನಿತ್ಯ ನಾರಕಿ- ಎಂಬ ಈ ದೃಷ್ಟಿಕೋನದಲ್ಲಿ -ಜಗತ್ತು, ಮನುಷ್ಯ ಬದಲಾಗುವುದಿಲ್ಲ ಎಲ್ಲವೂ ನಿತ್ಯ ಅಂದರೆ ಶಾಶ್ವತ ಎಂದು ಸಮಾಜವನ್ನು ಜಡಗೊಳಿಸಿ ಚಲನರಹಿತ ಮಾಡಿ, ನರಕವನ್ನೇ ತಾರತಮ್ಯವನ್ನೇ ಸಿದ್ಧಾಂತಗೊಳಿಸಿಬಿಟ್ಟಿದೆ.

ಇಂಥ ಕಡೆ ವಿಶ್ವೇಶ್ವರತೀರ್ಥರು ಹುಟ್ಟಿದ್ದಾರೆ. ಈ ಸಿದ್ಧಾಂತದ ಮಠಕ್ಕೆ ಶ್ರೀಗಳಾಗಿದ್ದಾರೆ. ಆದರೆ ಚಲನೆಯನ್ನು ಬಯಸುವಂತೆ ಕಾಣುತ್ತಾರೆ. ಹಾಗಾಗಿ, ತನ್ನ ಸಿದ್ಧಾಂತದ ಚೌಕಟ್ಟನ್ನು ಮೀರಲು ಇವರು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಈ ಒದ್ದಾಟ, ಬಲೆಗೆ ಸಿಕ್ಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಗುಬ್ಬಚ್ಚಿಯ ಒದ್ದಾಟದಂತಿದೆ. ಇದನ್ನು ನೋಡಿದಾಗ ಇವರು ಅಲ್ಲಿರಬೇಕಾದವರಲ್ಲ, ನಮ್ಮ ಜೊತೆ ಇರಬೇಕಾದವರು ಅಂತ ಒಂದೊಂದು ಸಲ ಅನ್ನಿಸುತ್ತದೆ.

ಆದರೆ ಇವರ ಒದ್ದಾಟವು ಆಳವಾದ ಧಾರ್ಮಿಕತೆಯಿಂದ ಬಂದುದೇ? ಅಂತರಂಗದ್ದೇ? ಎಂದು ಪ್ರಶ್ನಿಸಿಕೊಂಡಾಗ-ಧೈರ್ಯವಾಗಿ ಹೌದು ಎಂದು ಹೇಳಲು ಕಷ್ಟವಾಗುತ್ತದೆ. ‘ಕೀಳಿಂಗಲ್ಲದೆ ಹಯನು ಕರೆಯದು’ ಎಂದರೆ, ತಾನು ತನ್ನ ಅಹಂ ಅನ್ನು ಅಲ್ಪವಾಗಿಸದೆ ಮೋಕ್ಷವಿಲ್ಲ- ಎಂಬ ತುಡಿತದಿಂದಾಗಿ ಅಹಂ ಅಲ್ಪವಿರುವ, ಮೇಲರಿಮೆ ಇಲ್ಲದ ಅಸ್ಪೃಶ್ಯ ಸಮುದಾಯವನ್ನು ಶ್ರೇಷ್ಠವೆಂದು ಭಾವಿಸಿದ ವಚನಕಾರರ ನಡೆ ಕಂಡಾಗ, ಶ್ರೀಪೇಜಾವರರ ಪಾದಯಾತ್ರೆ ಧಾರ್ಮಿಕವಲ್ಲವೇನೋ ಧರ್ಮರಾಜಕಾರಣವಿರಬೇಕು ಎಂಬ ಅನುಮಾನ ಹುಟ್ಟಿಸುತ್ತದೆ. ‘ತಮ್ಮ ಮಠಕ್ಕೆ ಉತ್ತರಾಧಿಕಾರಿಯಾಗಿ ಕುರುಬರನ್ನೇನಾದರೂ ಮಾಡುತ್ತೀರಾ’ ಎಂದು ಕೇಳಿದರೆ, ‘ಬ್ರಾಹ್ಮಣರನ್ನು ಮಾತ್ರ ಕೇಳುತ್ತೀರಿ? ಕ್ರಿಶ್ಚಿಯನ್ನರನ್ನು ಕೇಳುತ್ತೀರಾ? ಲಾಮಾ ಮಾಡು ಎಂದು ಬೌದ್ಧರನ್ನು ಕೇಳುತ್ತೀರಾ?’ ಎಂದು ಪೇಜಾವರರು ಸಹನೆ ಕಳೆದು ಕೊಳ್ಳುತ್ತಾರೆ!.

‘ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಯಾಕೆ ಮಠಾಧಿಪತಿಯಾಗಬಾರದು?’ ಎಂದು ಆ ಧರ್ಮಗಳಲ್ಲಿರುವ ಯಾರೇ ಪ್ರಶ್ನಿಸಬಹುದು. ಇದಕ್ಕೆ ಆ ಧರ್ಮಗಳಲ್ಲಿ ಅವಕಾಶವಾದರೂ ಇದೆ. ಕೆಲವು ಕಡೆ ಸಾಧ್ಯವೂ ಆಗಿದೆ. ಹಿಂದೂ ಎಂದುಕೊಂಡಿರುವ ಜಾತಿಧರ್ಮದಲ್ಲಿ ಇದು ಸಾಧ್ಯವೇ? ಉಡುಪಿ ಕೃಷ್ಣನ ಗುಡಿಯ ಹೊರಗೆ ನಿಂತಿರುವ ಕನಕದಾಸನ ಕುರುಬರು ನಿಮ್ಮ ಸಮಾಜಕ್ಕೆ ಸೇರಿಲ್ಲವೇ? ಅವರ ಧರ್ಮವೇ ಬೇರೆಯೇ? ಅಥವಾ ಪ್ರತಿ ಜಾತಿಯೂ ಒಂದೊಂದು ಧರ್ಮವೇ?

ಹಾಗಾದರೆ ಧರ್ಮ ಎಂದರೇನು? ಜಾತಿಗಳ ಮೇಲು-ಕೀಳು ನಿಷಿದ್ಧಗಳ ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಅದಕ್ಕೇ ಪೇಜಾವರರನ್ನು ತಿರುಪತಿಯಲ್ಲಿ ಪೂಜೆಗೆ ಬಿಡುವುದಿಲ್ಲ ಎಂದರೆ- ನಾವೆಂಥ ಕ್ಷುದ್ರಜೀವಿಗಳು ಎಂದು ನಮಗನಿಸುವುದಿಲ್ಲ. ಈ ನಮ್ಮ ಮಠ, ದೇವಸ್ಥಾನ, ಪೂಜಾಸ್ಥಳಗಳು ಈ ಅಂಧಃತಮಸ್ಸಿನಿಂದ ಹೊರಬರಲು ಇನ್ನೆಷ್ಟ್ಟು ವರ್ಷಗಳು ಕಾಯಬೇಕು? ‘ನಿನ್ನನ್ನು ನನ್ನ ಮಠದ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ, ಮತಾಂತರ ಆಗಬೇಡ’ ಎನ್ನಲು ಬಾಯಿಬಾರದ ಮಠಾಧಿಪತಿ ‘ಮತಾಂತರ ಆಗಬಾರದು’ ಎಂದು ನೈತಿಕತೆ ಕಾಡದೆ ಹೇಳಿದರೂ ಅದರೊಳಗಿನ ನಿರ್ಲಜ್ಜತೆ ನಮಗೆ ಕಾಣಿಸುವುದಿಲ್ಲ. ‘ನೀನು ಹೊರಗಿರುವುದೇ ನಮ್ಮ ಸಂಪ್ರದಾಯ’ ಎನ್ನುವುದರ ಕ್ರೌರ್ಯವೂ ನಮಗೆ ತಟ್ಟುವುದಿಲ್ಲ.

ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ-ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಈ ದೀಕ್ಷೆ ದಲಿತರಲ್ಲಿ ಭೇದವನ್ನು ಹೆಚ್ಚಿಸಿರುವುದೇ ಹೊರತು ಐಕ್ಯತೆಯನ್ನಲ್ಲ. ಪೇಜಾವರ ಶ್ರೀಗಳ ಪಾದಯಾತ್ರೆಯಿಂದ ದಲಿತರಲ್ಲಿ ಇನ್ನಷ್ಟು ದಾಸರು ಹೆಚ್ಚಾಗಬಹುದು. ಶಂಖಜಾಗಟೆ ಬಾರಿಸಬಹುದು! ಎಷ್ಟೇ ಶಂಖ-ಜಾಗಟೆ ಬಾರಿಸಿದರೂ ಅವರ ಅಸ್ಪೃಶ್ಯ ಸ್ಥಿತಿಯಿಂದ ಚಲನೆ ಕಾಣದು. ಯಾಕೆಂದರೆ ವೈಷ್ಣವ ದೀಕ್ಷೆ ಎಂದರೆ ಸೇವಕತನದ ದಾಸ ದೀಕ್ಷೆ.

ಹೀಗಿರುವಾಗ ಶ್ರೀ ಪೇಜಾವರರು ವೈಷ್ಣವದೀಕ್ಷೆಯನ್ನು ಪುನರ್‍ಪರಿಶೀಲಿಸುವುದು ಒಳಿತೇನೋ. ಬದಲಾಗಿ ದ್ವಿಜರಿಗೆ ತ್ರಿಜ ದೀಕ್ಷೆ ಕೊಡುವುದು ನಮ್ಮ ಸಮಾಜದ ಆರೋಗ್ಯ ಐಕ್ಯತೆ ಸಮತೋಲನಕ್ಕೆ ಅಗತ್ಯವೇನೋ ಅನ್ನಿಸುತ್ತದೆ. ಹಾಲಿ ದ್ವಿಜ ದೀಕ್ಷೆಯ ಗಾಯತ್ರೀ ಮಂತ್ರದಲ್ಲಿ, ಮುಖ್ಯವಾಗಿ ಬುದ್ಧಿ ಪ್ರಚೋದನೆಯಾಗಲಿ ಎಂಬ ಆಶಯವಿದೆ. ಬುದ್ಧಿಯಿಂದ ಒಡಕು ವಂಚನೆ ಮೇಲರಿಮೆ ಕೀಳರಿಮೆ ಇತ್ಯಾದಿಗಳು ಹೆಚ್ಚಲೂಬಹುದು. ಭಾರತದ ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು- ಕರುಳು ಅಂದರೆ ಅಂತಃಕರಣ, ಅಂದರೆ ಬಂಧುತ್ವ. ಇದರ ಪ್ರಚೋದನೆಗಾಗಿ, ಅಂದರೆ ಕಾರುಣ್ಯದ ಪ್ರಚೋದನೆಯಾಗಲಿ ಎಂಬ ಆಶಯದ ತ್ರಿಜದೀಕ್ಷೆ ಅಂದರೆ ನೆತ್ತಿಗೊಂದು ಮುತ್ತು ಕೊಟ್ಟು ಮಗುತನದ ಬಂಧುತ್ವದ ಅಭೇದದೀಕ್ಷೆ ಭಾರತಕ್ಕೆ ಅರ್ಜೆಂಟಾಗಿ ಬೇಕಾಗಿದೆ.

ಭಾರತವು ಏನೇನೋ ಹುಟ್ಟುಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು. ಚಾತುರ್ವರ್ಣ ಜಾತಿಭೇದದ ತಾರತಮ್ಯದ ಕಾನೂನು ಕಟ್ಟಳೆಗಳನ್ನು ಧರ್ಮವಾಗಿಸಲು ದೇವರುಗಳನ್ನೇ ರೌಡಿಗಳನ್ನಾಗಿಸಿದ ದೇಶ ಇದು. ಇತ್ತೀಚೆಗೆ ಆಕ್ಸಿಡೆಂಟ್ ಗಣೇಶನನ್ನೂ ಹುಟ್ಟುಹಾಕಿದೆ. ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ. ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ. ಈ ಜನ್ಮದ ತರ್ಕಕ್ಕೆ- ‘ಕಳೆದ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪೃಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪೃಶ್ಯರಾಗಿ ಹುಟ್ಟುವರು’ ಎಂದು ಜನಜನಿತ ಮಾಡಿದರೆ ನಮ್ಮ ಜಡ ಸಮಾಜವು ಸ್ವಲ್ಪವಾದರೂ ಚಲಿಸಬಹುದಲ್ಲವೇ? ಜನ್ಮ ನಿಜವಿದ್ದರೆ ಆ ಜನ್ಮಾಂತರದ ಕರ್ಮಫಲವನ್ನು ಉಣ್ಣಬೇಕಾದ್ದೂ ನಿಜವಿರಬಹುದಲ್ಲವೇ?

ಏನೇನೋ ಹುಟ್ಟುಹಾಕುವವರು ಇದನ್ನೂ ಯಾಕೆ ಹುಟ್ಟುಹಾಕಬಾರದು?! ಯಾಕೆ ಮಠಾಧೀಶರುಗಳು ಇದನ್ನು ಪ್ರಚಾರ ಮಾಡಬಾರದು? ತಾರತಮ್ಯಕ್ಕಾಗಿ ತರ್ಕಿಸಿ ಸಾಯುವ ಭಾರತದ ಮನಸ್ಸು ಐಕ್ಯತೆಗಾಗಿ ಯಾಕೆ ತರ್ಕಿಸಬಾರದು? ಇದನ್ನೇ ಅಸ್ಪೃಶ್ಯರೊಳಗಿನ ತಾರತಮ್ಯಕ್ಕೂ- ಈ ಜನ್ಮದಲ್ಲಿ ಯಾರನ್ನಾದರು ಕೀಳಾಗಿ ಕಂಡಿದ್ದರೆ ಮುಂದಿನ ಜನ್ಮದಲ್ಲಿ ಕೀಳಾಗಿ ಹುಟ್ಟಿಯೇ ಕರ್ಮಫಲವನ್ನು ಕಳೆದುಕೊಳ್ಳಬೇಕಾಗುತ್ತದೆ- ಎಂಬಲ್ಲಿಯವರೆಗೂ ವ್ಯಾಪಿಸಬಹುದು.

ಸುಸ್ತಾಗುತ್ತಿದೆ. ಯಾಕೋ ಮುಗಿಯುತ್ತಿಲ್ಲ. ಪ್ರೀತಿ-ಸಮಾನತೆಯ ಆಸೆ ಇಟ್ಟುಕೊಂಡು ಇತಿಹಾಸಕಾಲದಿಂದಲೂ ಜೀವಿಸುತ್ತಿದ್ದೇವೆ. ಪೇಜಾವರಶ್ರೀಗಳ ಪಾದಯಾತ್ರೆಯಿಂದಾಗಿ ಕೆಲವರಾದರೂ ಎಳೆಯ ದ್ವಿಜರು ತ್ರಿಜರಾಗಿ ತ್ರಿಜತ್ವ ಪಡೆದು ತಮ್ಮದಲ್ಲದ ಜಾತಿಯಲ್ಲಿ ಮದುವೆಯಾಗಿ ಹೊಸ ಮನುಷ್ಯ ಸಂತಾನ ಹುಟ್ಟಲು ಶ್ರೀ ಪೇಜಾವರರ ಈ ಪಾದಯಾತ್ರೆ ಪ್ರಚೋದನೆಯನ್ನು ಉಂಟು ಮಾಡಲಿ ಎಂದು ಕನಸು ಕಾಣುವೆ. ನನ್ನ ಕನಸು ನನಸಾಗಲಿ.

“ಕುವೆಂಪು ಅವರ ಸಂದರ್ಶನವೊಂದರಲ್ಲಿ ಶ್ರೀಕೃಷ್ಣ ಆಲನಹಳ್ಳಿಯವರು ಕುವೆಂಪು ಅವರಿಗೆ ಒಂದು ಪ್ರಶ್ನೆ ಕೇಳಿದರು- ‘ಮಧ್ವಸಿದ್ಧಾಂತ ನೀಚ ಸಿದ್ಧಾಂತವೇ ಸರ್?’ ಅಂತ. ಅದಕ್ಕೆ ಕುವೆಂಪು- ‘ನೀಚ? ಪರಮ ನೀಚ’ ಅಂದರು. ಆಲನಹಳ್ಳಿ ನಕ್ಕೂ ನಕ್ಕೂ ಆ ನಗುವಿನ ಅಲೆ ನನ್ನ ಕಿವಿಯಲ್ಲಿ ಇನ್ನೂ ಇದೆ.”

(‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version