ದಿನದ ಸುದ್ದಿ

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೆಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯು ಬೆಂಗಳೂರು, ಮೈಸೂರು, ಮಡಿಕೇರಿ, ಮೂಡಬಿದ್ರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ರಾಜ್ಯದಲ್ಲಿ ತರಬೇತಿ ಸಂಸ್ಥೆಗಳನ್ನು ನಡೆಸುತ್ತಿದ್ದು, ಈ ಸಂಸ್ಥೆಯ ಮೂಲಕ 6 ತಿಂಗಳು 180 ದಿನಗಳ ಅವಧಿಯ ಡಿಪ್ಲೊಮಾ ಇನ್-ಕೋ-ಆಪರೇಟಿವ್ ಮ್ಯಾನೆಜ್‍ಮೆಂಟ್ ತರಬೇತಿಯನ್ನು 2021 ರ ಜುಲೈಯಿಂದ ಪ್ರಾರಂಭಿಸುತ್ತಿದ್ದು, ತರಬೇತಿಯನ್ನು ಪಡೆಯಬಯಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಪಡೆಯುವ ಅಭ್ಯರ್ಥಿಗಳು ಸಹಕಾರ ಸಂಘ ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತ ಅವಕಾಶವನ್ನು ಕಲ್ಪಿಸಲಾಗಿದ್ದು, ವಯೋಮಿತಿ ಕನಿಷ್ಟ 16 ವರ್ಷ ಆಗಿರಬೇಕು.

ಸಹಕಾರ ಸಂಘ ಸಂಸ್ಥೆಗಳಲ್ಲಿ ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಿರಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಹಕಾರ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.

ಇಂತಹ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಸಂಘ, ಸಂಸ್ಥೆಗಳಿಂದ ಬರುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.400 ಶಿಷ್ಯವೇತನ ನೀಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ 6 ತಿಂಗಳ ವಿಶೇಷ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್’ ತರಬೇತಿ ನೀಡಲಾಗುವುದು. ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 16 ವರ್ಷಗಳಾಗಿರಬೇಕು ಗರಿಷ್ಠ 30 ವರ್ಷಗಳು ಮೀರಿರಬಾರದು.

ಇದನ್ನೂ ಓದಿ | ವಿದ್ಯುತ್‍ಮಗ್ಗ ನೇಕಾರರಿಗೆ ಆರ್ಥಿಕ ನೆರವು : ಅರ್ಜಿ ಆಹ್ವಾನ 

ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಿಂದ ತರಿಸಿಕೊಳ್ಳಲಾಗುವುದು ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರವರು ಅಥವಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರ ಮೂಲಕ ಅರ್ಜಿಗಳನ್ನು ಜುಲೈ 2021ರ ಒಳಗಾಗಿ ಸಲ್ಲಿಸಬಹುದು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.500 ಶಿಷ್ಯವೇತನವನ್ನು ನೀಡಲಾಗುದು.

ಡಿಸಿಎಂ ತರಬೇತಿಯ ಅರ್ಜಿ ಫಾರಂ ಮತ್ತು ವಿವರಣಾ ಪುಸ್ತಕವನ್ನು ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಸಂಸ್ಥೆಯಿಂದ ಪಡೆಯಬಹುದು. ಅರ್ಜಿ ಮತ್ತು ವಿವರಣಾ ಪುಸ್ತಕದ ಶುಲ್ಕ ರೂ.100 ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆಯಲ್ಲಿ ಪಡೆಯಬಹುದು. ಅಂಚೆ ಮೂಲಕ ಪಡೆಯಲು ಇಚ್ಚಿಸುವರು ರೂ.125 ಗಳ ಡಿ.ಡಿ ಮೂಲಕ ಪಾವತಿಸಿ ಪಡೆಯಬಹುದಾಗಿದೆ.

ತರಬೇತಿಗೆ ಅರ್ಜಿಯನ್ನು ಜುಲೈ ತಿಂಗಳ ಒಳಗಾಗಿ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಆಯಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಬೇಕೆಂದು ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version