ದಿನದ ಸುದ್ದಿ
ದೇಣಿಗೆ ರಾಜಕೀಯ: ಮೋದಿಗೆ ಕೇರಳಿಗರ ಹಿಡಿಶಾಪ
ಸುದ್ದಿದಿನ ಡೆಸ್ಕ್: ಕೇರಳ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ವಿದೇಶಗಳಿಂದ ದೇಣಿಗೆಯನ್ನು ಭಾರತ ಸರಕಾರ ಸ್ವೀಕರಿಸಲು ನಕಾರ ವ್ಯಕ್ತಪಡಿಸಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟಿಗರು ತಿರುಗಿಬಿದ್ದಿದ್ದಾರೆ.
ಮೋದಿ ಅವರು ವಿದೇಶಿ ದೇಣಿಗೆಯನ್ನು ನಿರಾಕರಿಸುವುದೇ ಆದರೆ ತಕ್ಷಣಕ್ಕೆ 2600 ಕೋಟಿ ರೂಪಾಯಿ ಪರಿಹಾರ ಧನವನ್ನು ತಕ್ಷಣವೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವಿದೇಶಿ ದೇಣಿಗೆಯನ್ನು ಸ್ವೀಕರಿಸುವಂತಿಲ್ಲ ಎಂದು ಈ ಹಿಂದಿನ ಯುಪಿಎ ಸರಕಾರವು ಕಾನೂನು ರೂಪಿಸಿದೆ ಅದೇ ಕಾನೂನನ್ನು ಈಗ ಪಾಲಿಸುತ್ತಿರುವುದಾಗಿ ಕೇಂದ್ರ ಸರಕಾರವು ಹೇಳಿದೆ. ಆದರೆ, ಈ ಕಾನೂನು ಸುನಾಮಿ ವಿಷಯದಲ್ಲಿ ಮಾತ್ರ ಅನ್ವಯವಾಗಿತ್ತು. ಆ ನಂತರ ನಡೆದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಿದೇಶಗಳಿಂದ ದೇಣಿಗೆ ಸ್ವೀಕರಿಸಲಾಗಿದೆ ಎಂಬ ಸಮರ್ಥನೆಗಳು ಕೇಳಿಬರುತ್ತಿವೆ.
ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಘಟಿಸಿದ ಭೂಕಂಪದ ಸಂದರ್ಭದಲ್ಲಿ ವಿದೇಶಗಳಿಂದ ದೇಣಿಗೆ ಸ್ವೀಕರಿಸಲಾಗಿತ್ತು ಆದರೆ, ಈಗ ಅವರ ಬುದ್ದಿಗೆ ಮಂಕು ಕವಿದಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶಿ ಹೂಡಿಕೆಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿ ಅವರಿಂದ ದೇಶದಲ್ಲಿ ಬಂಡವಾಳ ಹೂಡಿಸುವ ಸರಕಾರಕ್ಕೆ ದೇಣಿಗೆ ಪಡೆಯುವುದು ತಪ್ಪೆಂದು ಕಾಣುತ್ತಿದೆಯೇ ಎಂದು ಟ್ವಿಟ್ಟಿಗರು ತಿವಿದಿದ್ದಾರೆ.
ವಿದೇಶಿಗರು ದೇಶದ ದೇವಸ್ಥಾನಗಳಿಗೆ ನೀಡುವ ದೇಣಿಗೆಗಳನ್ನು ನಿಯಂತ್ರಿಸದ ಸರಕಾರ ಈಗ ಎನ್ಜಿಒಗಳ ಮೇಲೆ ಕಣ್ಣಿಟ್ಟಿರುವುದು ವಿಪರ್ಯಾಸ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಕೇರಳದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪಕ್ಕೆ ಯುಎಇ ಮೊದಲಾದ ದೇಶಗಳಿಂದ ಸಾವಿರಾರು ಕೋಟಿ ರೂ. ದೇಣಿಗೆ ಹರಿದುಬರುತ್ತಿದೆ. ಈಚೆಗಷ್ಟೆ ಯುಎಇ ಸರಕಾರ 700 ಕೋಟಿ ರೂ. ದೇಣಿಗೆ ನೀಡಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401